‘ಧುರಂಧರ್ 2’ ನಟಿ ಸಾರಾ ಅರ್ಜುನ್ನ ಮುತ್ತಿಕೊಂಡ ಫ್ಯಾನ್ಸ್ ; ಗುಂಪಿನಿಂದ ಮಗಳನ್ನು ರಕ್ಷಿಸಿದ ತಂದೆ
ಕೇವಲ ಒಂದೇ ಒಂದು ಚಿತ್ರದಲ್ಲಿ ಅಭಿನಯಿಸಿದರೆ ಸಾಕು, ಕೆಲ ನಾಯಕಿಯರಿಗೆ ಅವಕಾಶಗಳ ಹೆಬ್ಬಾಗಿಲೇ ತೆರೆದು ಬಿಡುತ್ತೆ. ನೋಡ ..ನೋಡುತ್ತಲೇ .. ಇವರು ತಮ್ಮ ಭಾಷೆಯ ಚಿತ್ರರಂಗದಿಂದಲೇ ಮರೆಯಾಗಿ ಬೇರೆ ಭಾಷೆಗಳಿಗೆ ಹಾರಿ ಅಲ್ಲಿ ಮಿರ ಮಿರ ಮಿಂಚಲು ಶುರು ಮಾಡುತ್ತಾರೆ. ಖ್ಯಾತಿಯ ಉತ್ತುಂಗಕ್ಕೇರುತ್ತಾರೆ. ಇದಕ್ಕೆ ರಶ್ಮಿಕಾ ಮಂದಣ್ಣ.. ಶ್ರೀಲೀಲಾ.. ರುಕ್ಮಿಣಿ ವಸಂತ್.. ಸೇರಿ ಹಲವಾರು ಉದಾಹರಣೆಗಳಿವೆ. ಆ ಪೈಕಿ ಸಾರಾ ಅರ್ಜುನ್ ಕೂಡ ಒಬ್ಬರು.
ಹೌದು, ಸಾರಾ ಅರ್ಜುನ್ .. ''ಧುರಂಧರ್''ನ ಸೆನ್ಸೇಶನ್. ಹಾಗೇ ನೋಡಿದರೆ ''ಧುರಂಧರ್'' ಚಿತ್ರಕ್ಕೂ ಮುನ್ನ ಚೈಲ್ಡ್ ಆರ್ಟಿಸ್ಟ್ ಆಗಿ ಹಲವರ ಮನಸ್ಸು ಸಾರಾ ಗೆದ್ದಿದ್ದರು. ''ದೈವ ತಿರುಮಗಳ್'' .. ''ಜೈಹೋ'' .. ''ಜಜ್ಬಾ'' .. ''ಪೊನ್ನಿಯನ್ ಸೆಲ್ವನ್''.. ''ಸೈವ''.. ಚಿತ್ರಗಳಲ್ಲಿ ಅಭಿನಯಿಸಿದ್ದರು. ತಮ್ಮ ಅಭಿನಯದಿಂದ ಗಮನ ಸೆಳೆದಿದ್ದರು. ಆದರೆ.. ''ಧುರಂಧರ್'' ಇವರ ಬದುಕಿನ ಪಥವನ್ನೇ ಬದಲಿಸಿತು.

ನಾಯಕಿಯಾಗಿ ''ಧುರಂಧರ್'' ಸಾರಾ ಅಭಿನಯದ ಮೊದಲ ಸಿನಿಮಾ. ಆದರೆ, ಇವರಿಗೆ ಸಿಕ್ತಿರುವ ಜನರ ಪ್ರೀತಿ ಅನನ್ಯವಾದದ್ದು. ಇದಕ್ಕೆ ಕೈಗನ್ನಡಿಯೇ ಮುಂಬೈನ ವಾಂಖೆಡೆ ಎದುರು ಕಂಡ ಜನಸಾಗರ.
ಹೌದು, ಭಾನುವಾರ (ಮಾರ್ಚ್ 29) ಸಾರಾ ಅರ್ಜುನ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ವಾಂಖೆಡೆ ಕ್ರೀಡಾಂಗಣಕ್ಕೆ ಬಂದಿದ್ದರು. ಮುಂಬೈ ಇಂಡಿಯನ್ಸ್ ಪರ ಬೆಂಬಲದ ಧ್ವಜ ಹಾರಿಸಿದರು.
ಆದರೆ ನಿಮಗೆ ಗೊತ್ತು. ನಮ್ಮ ದೇಶದಲ್ಲಿ ಸೆಲೆಬ್ರೆಟಿಗಳು ಸಾರ್ವಜನಿಕವಾಗಿ ಓಡಾಡುತ್ತಿದ್ದಾರೆ ಅಂದರೆ ಅಭಿಮಾನಿಗಳು ಅವರನ್ನು ಹಿಂಬಾಲಿಸೋದು, ಸೆಲ್ಪಿ ಕೇಳೋದು, ಮಾತನಾಡಲು ಹವಣಿಸೋದು ಕಾಮನ್ನು. ಬೆಲ್ಲಕ್ಕೆ ಇರುವೆ ಮುತ್ತಿಕೊಂಡಂತೆ ಜನ ಎಲ್ಲಾ ಭದ್ರ ಕೋಟೆಯನ್ನು ದಾಟಿ ಈ ಸೆಲೆಬ್ರಿಟಿಗಳನ್ನು ಮುತ್ತಿಕೊಳ್ಳುತ್ತಾರೆ.
ಅದರಲ್ಲಿಯೂ ನಾಯಕಿಯರ ಪಾಡು ಹೇಳಲು ಅಸಾಧ್ಯ. ಅಭಿಮಾನದ ನೆಪದಲ್ಲಿ ಕೊಡಬಾರದ ಟಾರ್ಚರ್ನ ಕೊಡಲು ಕೆಲವರು ಕೊಡುತ್ತಾರೆ. ಅಂಧಾಭಿಮಾನದ ಪ್ರದರ್ಶನ ಮಾಡ್ತಾರೆ. ತಮ್ಮ ನೆಚ್ಚಿನ ನಟಿಗೆ ನರಕ ದರ್ಶನವನ್ನೂ ಕೂಡ ಮಾಡಿಸುತ್ತಾರೆ. ಸಾರಾ ಅರ್ಜುನ್ ವಿಚಾರದಲ್ಲಿ ಕೂಡ ಆಗಿದ್ದು ಇದೇ.

ಪಂದ್ಯ ಮುಕ್ತಾಯವಾದ ನಂತರ ಸಾರಾ ಅರ್ಜುನ್ ಕ್ರೀಡಾಂಗಣದಿಂದ ಹೊರ ಬಂದಿದ್ದೇ ತಡ ಹಲವರು ಸಾರಾ ಅರ್ಜುನ್ ಅವರನ್ನು ಸುತ್ತುವರೆದರು. ಸೆಲ್ಫಿಗಾಗಿ ಮುಗಿಬಿದ್ದರು. ಈ ಸಮಯದಲ್ಲಿ ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಸಾರಾ ಅವರ ತಂದೆ ರಾಜ್ ಅರ್ಜುನ್ ಮಗಳ ರಕ್ಷಣೆಗೆ ಧಾವಿಸಿದರು. ಮಗಳಿಗೆ ತಾವೇ ಬಾಡಿಗಾರ್ಡ್ ಆದರು. ಅಭಿಮಾನದ ಗುಂಪಿನಿಂದ ಮಗಳನ್ನು ರಕ್ಷಿಸಿ ಸುರಕ್ಷಿತವಾಗಿ ಕಾರಿನತ್ತ ಕರೆದೊಯ್ದರು.
ಸದ್ಯ ಸಾರಾ ಮತ್ತು ಅವರ ತಂದೆಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಲವರು ತಂದೆ ಮತ್ತು ಮಗಳ ಈ ಬಾಂಧವ್ಯಕ್ಕೆ ಮನ ಸೋತಿದ್ದಾರೆ. ತಂದೆಯೇ ಮೊದಲ ಗುರು.. ಮೊದಲ ರಕ್ಷಕ.. ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸಾರಾ ಅರ್ಜುನ್ ಇಡೀ ದೇಶದ ಪಾಲಿಗೆ ''ಧುರಂಧರ್'' ಆಗಿರಬಹುದು, ಆದರೆ ವಾಂಖೆಡೆಯಲ್ಲಿ ಅವರು ಕೇವಲ ಒಬ್ಬ ತಂದೆಯ ಪ್ರೀತಿಯ ಪುತ್ರಿಯಾಗಿದ್ದರು ಎನ್ನುತ್ತಿರುವ ಹಲವರು ಸಾರಾ ಅವರ ಪಾಲಿಗೆ ಅವರ ತಂದೆಯೇ ನಿಜವಾದ ''ಧುರಂಧರ್'' ಎನ್ನುತ್ತಿದ್ದಾರೆ. ಇದೇ ವೇಳೆ ಸಾರಾ ಅವರನ್ನು ಸುತ್ತುವರೆದವರ ವಿರುದ್ಧ ಕಿಡಿಯನ್ನು ಕೂಡ ಕಾರುತ್ತಿದ್ದಾರೆ.
ಅಂದ್ಹಾಗೇ ಸಾರಾ ಅವರ ತಂದೆ ಅರ್ಜುನ್ ಭಾರತೀಯ ಚಿತ್ರರಂಗದ ವರ್ಸಟೈಲ್ ನಟರಲ್ಲಿ ಒಬ್ಬರು. ''ಸೀಕ್ರೆಟ್ ಸೂಪರ್ಸ್ಟಾರ್''.. ''ಶೇರ್ಷಾ''.. ''ತಲೈವಿ''.. ''ರೌಡಿ ರಾಥೋಡ್''.. ''ರಯೀಸ್''.. ಇವರ ಕೆಲ ಪ್ರಖ್ಯಾತ ಸಿನಿಮಾಗಳು. ಕೇವಲ ಹಿಂದಿ ಮಾತ್ರವಲ್ಲ ತೆಲುಗು, ತಮಿಳು ಭಾಷೆಯಲ್ಲಿ ಕೂಡ ಅಭಿನಯಿಸಿದ್ದಾರೆ ಅರ್ಜುನ್.


Click it and Unblock the Notifications











