ಶಿಲ್ಪಾ ಶೆಟ್ಟಿ ಮೇಲೆ 'ಅಶ್ಲೀಲ' ನೆರಳು, ನನ್ನ ಪತ್ನಿ ಹೆಸರು ಎಳೆದು ತರಬೇಡಿ ಎಂದ ರಾಜ್ ಕುಂದ್ರಾ...!
ಈಗೀಗ ಸೆಲೆಬ್ರೆಟಿಗಳ ಮೇಲೆ ವಂಚನೆ, ದ್ರೋಹ, ಚೆಕ್ ಬೌನ್ಸ್ ಆರೋಪಗಳು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಇನ್ನೊಂದು ಉದಾಹರಣೆ ಎಂಬಂತೆ ಮಂಗ್ಳೂರಿನ ಮೀನು ಶಿಲ್ಪಾ ಶೆಟ್ಟಿ ಅವರ ಗಂಡ ರಾಜ್ ಕುಂದ್ರಾ ಮನೆ ಮತ್ತು ಆಫೀಸ್ ಮೇಲೆ ನಿನ್ನೆ ಮತ್ತೊಮ್ಮೆ ಜಾರಿ ನಿರ್ದೇಶನಾಲಯ ದಾಳಿ ಮಾಡಿದೆ. ಅಶ್ಲೀಲ ಚಿತ್ರ ತಯಾರಿಕೆ ಪ್ರಕರಣದಲ್ಲಿ ಹಿಂದೊಮ್ಮೆ ರಾಜ್ ಕುಂದ್ರಾ ಅವರನ್ನು ಕಂಬಿ ಹಿಂದೆ ಕಳುಹಿಸಿದ್ದ ಅಧಿಕಾರಿಗಳು ಈಗ ಅಶ್ಲೀಲ ಚಿತ್ರಗಳ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆಯ ಭಾಗವಾಗಿ ತನಿಖೆ ನಡೆಸುತ್ತಿದೆ.
ಇನ್ನೂ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು 2021ರಲ್ಲಿ ಬಂಧಿಸಿದ್ದರು. 63 ದಿನ ಜೈಲು ವಾಸ ಅನುಭವಿಸಿ ಆ ನಂತರ ರಾಜ್ ಕುಂದ್ರಾ ಜಾಮೀನು ಪಡೆದು ಹೊರ ಬಂದಿದ್ದರು. ಹೊರ ಬಂದ ನಂತರ ತಮ್ಮ ಜೈಲುವಾಸದ ಅನುಭವವನ್ನು ಬೆಳ್ಳಿ ತೆರೆಗೆ ತಂದಿದ್ದ ರಾಜ್ ಕುಂದ್ರಾ 'UT 69' ಹೆಸರಿನಲ್ಲಿ ಚಿತ್ರವನ್ನು ಮಾಡಿದ್ದರು. ತಮ್ಮ ಪಾತ್ರಕ್ಕೆ ತಾವೇ ಬಣ್ಣ ಹಚ್ಚಿದ್ದರು.

ಆದರೆ ಈಗ ರಾಜ್ ಕುಂದ್ರಾ ಇನ್ನೊಮ್ಮೆ ಅಶ್ಲೀಲ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಇನ್ನೂ.. ಬಾಲಿವುಡ್ನಲ್ಲಿ ರಾಜ್ ಕುಂದ್ರಾ ಅವರಿಗಿಂತ ಅವರ ಪತ್ನಿ ಶಿಲ್ಪಾ ಶೆಟ್ಟಿಯ ಹೆಸರಿಗೆ ಬೆಲೆ ಇದೆ. ಹೀಗಾಗಿಯೇ ಶಿಲ್ಪಾ ಅವರ ಹೆಸರನ್ನು ಕೂಡ ಈ ಪ್ರಕರಣದಲ್ಲಿ ಎಳೆದು ತರಲಾಗುತ್ತಿದೆ. ಶಿಲ್ಪಾ ಶೆಟ್ಟಿ ಮೇಲೆ ಕೂಡ ಅಶ್ಲೀಲ ಛಾಯೆ ಇನ್ನೊಮ್ಮೆ ಬೀಳುತ್ತಿದೆ. ಈ ಕಾರಣಕ್ಕೆ ಸದ್ಯ ಕೆರಳಿ ಕೆಂಡವಾಗಿರುವ ರಾಜ್ ಕುಂದ್ರಾ ನನ್ನ ಪತ್ನಿಯನ್ನು ಇದೆಲ್ಲದರಿಂದ ದೂರವಿಡಿ ಎಂದು ಕಿಡಿ ಕಾರಿದ್ದಾರೆ. ಮಾಧ್ಯಮಗಳ ವಿರುದ್ಧ ಗುಡುಗಿದ್ದಾರೆ.
ಅನಗತ್ಯವಾಗಿ ನನ್ನ ಪತ್ನಿ ಹೆಸರನ್ನು ಮಾಧ್ಯಮಗಳು ಎಳೆದು ತರುತ್ತಿವೆ ಎಂದಿರುವ ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ ಅವರ ಹೆಸರನ್ನು ಈ ಪ್ರಕರಣದಿಂದ ದೂರವಿಡಿ. ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಅವರ ಹೆಸರನ್ನು ಎಳೆದು ತರಲಾಗುತ್ತಿರುವುದು ತಮಗೆ ಬೇಸರ ತಂದಿದೆ ಎಂದು ಹೇಳಿದ್ದಾರೆ.
ಇನ್ನೂ ಇದು ಯಾರಿಗೆಲ್ಲ ಸಂಬಂಧಿಸಿದೆಯೋ ಅವರಿಗೆ ನೇರವಾಗಿ ಹೇಳುತ್ತಿದ್ದೇನೆ ಎಂದಿರುವ ರಾಜ್ ಕುಂದ್ರಾ ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ತನಿಖೆಗೆ ನಾನು ಸಹಕರಿಸುತ್ತಿದ್ದೇನೆ. ತಮ್ಮ ವಿರುದ್ಧ ಬಂದಿರುವ ಆರೋಪ ಸುಳ್ಳು ಎಂಬುದು ಮುಂದೊಂದು ದಿನ ಸಾಬೀತಾಗುತ್ತದೆ ಎಂದಿದ್ದಾರೆ. ಹಣ ವರ್ಗಾವಣೆ, ಅಶ್ಲೀಲ ಸಿನಿಮಾ ನಿರ್ಮಾಣ ಮತ್ತಿತ್ಯಾದಿ ಪ್ರಕರಣಗಳನ್ನು ಇದು ಒಳಗೊಂಡಿದೆ. ಯಾವುದನ್ನು ಸೆನ್ಸೇಷನ್ ಮಾಡಿದರೂ ಸತ್ಯ ಮರೆ ಆಗುವುದಿಲ್ಲ. ಕೊನೆಯಲ್ಲಿ ಸತ್ಯ ಹೊರಬರಲೇಬೇಕು. ಸಂಬಂಧಿಸದೇ ಇಲ್ಲದ ವಿಚಾರಗಳಲ್ಲಿ ನನ್ನ ಪತ್ನಿಯ ಹೆಸರನ್ನು ಎಳೆದು ತರಬೇಡಿ ಎಂದು ರಾಜ್ ಕುಂದ್ರಾ ಹೇಳಿದ್ದಾರೆ. ನನ್ನ ಪತ್ನಿಯ ಹೆಸರನ್ನಾಗಲಿ ಭಾವಚಿತ್ರವನ್ನಾಗಲಿ ಬಳಸಬೇಡಿ ಎಂದಿದ್ದಾರೆ.
ಅಂದ್ಹಾಗೇ ಹನ್ನೆರಡು ಘಂಟೆಗಳ ಕಾಲ ರಾಜ್ ಕುಂದ್ರಾ ಅವರ ವಿಚಾರಣೆಯನ್ನು ನಡೆಸಿದ ಇಡಿ ಕೆಲವು ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದೆ ಎನ್ನುವ ಸುದ್ದಿ ಸದ್ಯ ಕೇಳಿ ಬರುತ್ತಿದೆ. ಇನ್ನು ಮುಂದೆ ಈ ಖಾತೆಗಳಿಂದ ಹಣ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ ಎನ್ನುವ ಮಾತು ಕೂಡ ಕೇಳಿ ಬರುತ್ತಿದ್ದು ಮುಂಬೈ, ಲಕ್ನೋ ಮತ್ತು ಪ್ರಯಾಗ್ರಾಜ್ನಿಂದ ಇಡಿ ತಂಡಗಳು ಜಂಟಿ ದಾಳಿ ನಡೆಸಿವೆ.


Click it and Unblock the Notifications











