ಸ್ವಾಮೀಜಿಗೆ ಕಿಡ್ನಿ ದಾನ ಮಾಡಲು ಮುಂದಾದ ಪತಿ; ನಟಿ ಶಿಲ್ಪಾ ಶೆಟ್ಟಿ ಶಾಕ್
ವೃಂದಾವನದ ಪ್ರೇಮಾನಂದ ಮಹಾರಾಜ್ಗೆ ಸಾಕಷ್ಟು ಜನ ಅನುಯಾಯಿಗಳಿದ್ದಾರೆ. ವಿರಾಟ್ ಕೊಹ್ಲಿ, ಅನುಷ್ಕಾ ಶೆಟ್ಟಿ ದಂಪತಿ ಸೇರಿ ಸಾಕಷ್ಟು ಸೆಲೆಬ್ರೆಟಿಗಳು ಆಗಾಗ್ಗೆ ಅವರ ಆಶ್ರಮಕ್ಕೆ ಭೇಟಿ ನೀಡುತ್ತಿದ್ದಾರೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಉದ್ಯಮಿ ರಾಜ್ ಕುಂದ್ರಾ ದಂಪತಿ ಕೂಡ ಪ್ರೇಮಾನಂದ ಮಹಾರಾಜ್ ಅವರ ಅನುಯಾಯಿಗಳಾಗಿದ್ದಾರೆ.
ಇತ್ತೀಚೆಗೆ ಪತ್ನಿ ಸಮೇತ ರಾಜ್ ಕುಂದ್ರಾ ವೃಂದಾವನ ಬ್ರಿಜ್ ಧಾಮ್ ಶ್ರೀ ಕೃಷ್ಣ ಮಥುರಾ ವೃಂದಾವನಕ್ಕೆ ಹೋಗಿ ಸ್ವಾಮೀಜಿ ಭೇಟಿ ಮಾಡಿದ್ದಾರೆ. ಈ ವೇಳೆ ನನ್ನ ಒಂದು ಕಿಡ್ನಿಯನ್ನು ನಿಮಗೆ ದಾನ ಮಾಡಲು ಸಿದ್ಧ ಎಂದು ರಾಜ್ ಹೇಳಿದ್ದಾರೆ. ಇದನ್ನು ಕೇಳಿ ಪಕ್ಕದಲ್ಲೇ ಇದ್ದ ಶಿಲ್ಪಾ ಶೆಟ್ಟಿ ಅವಕ್ಕಾಗಿದ್ದಾರೆ. ದಿಢೀರನೆ ಪತಿ ಹೀಗೆ ಹೇಳಿದ್ದು ಆಕೆಗೆ ಅಚ್ಚರಿ ಮೂಡಿಸಿದೆ. ಪ್ರೇಮಾನಂದ ಮಹಾರಾಜ್ ಸ್ವಾಮಿಜಿ ಎರಡೂ ಕಿಡ್ನಿಗಳು ವಿಫಲವಾಗಿದೆ. ಹಲವು ವರ್ಷಗಳಿಂದ ಅವರು ಡಯಾಲಿಸಿಸ್ನಲ್ಲಿದ್ದಾರೆ.

ಆಶ್ರಮ ಭೇಟಿ ವೇಳೆ ರಾಜ್- ಶಿಲ್ಪಾ ದಂಪತಿ ಪ್ರೇಮಾನಂದ ಮಹಾರಾಜ್ ಪ್ರವಚನ ಕೇಳುತ್ತಿದ್ದರು. ಈ ವೇಳೆ ಪ್ರತಿಕ್ರಿಯಿಸಿರುವ ರಾಜ್ "ನಾನು ಕಳೆದ 2 ವರ್ಷಗಳಿಂದ ನಿಮ್ಮನ್ನು ಫಾಲೋ ಮಾಡ್ತಿದ್ದೀನಿ. ಈಗ ನನಗೆ ಯಾವುದೇ ಪ್ರಶ್ನೆಗಳಿಲ್ಲ. ನಿಮ್ಮ ಮಾತುಗಳು ಯಾವಾಗಲೂ ನನ್ನಲ್ಲಿರುವ ಯಾವುದೇ ಅನುಮಾನ ಅಥವಾ ಆತಂಕಕ್ಕೆ ಉತ್ತರಿಸುತ್ತವೆ. ನೀವು ಎಲ್ಲರಿಗೂ ಸ್ಫೂರ್ತಿ. ನಿಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ನನಗೆ ಗೊತ್ತು. ನಾನು ಒಂದು ಕಿಡ್ನಿ ನಿಮಗೆ ದಾನ ಮಾಡುವ ಮೂಲಕ ಸಹಾಯ ಮಾಡಲು ಬಯಸುತ್ತೇನೆ" ಎಂದಿದ್ದಾರೆ. ಈ ಮಾತು ಕೇಳಿ ಒಂದು ಕ್ಷಣ ಶಿಲ್ಪಾ ಶೆಟ್ಟಿ ಶಾಕ್ ಆಗಿದ್ದಾರೆ.
ರಾಜ್ ಮಾತಿಗೆ ಪ್ರತಿಕ್ರಿಯಿಸಿರುವ ಪ್ರೇಮಾನಂದ ಮಹಾರಾಜ್ "ನೀವು ಸಂತೋಷವಾಗಿದ್ದರೆ ಅಷ್ಟೇ ಸಾಕು. ದೇವರ ಆಜ್ಞೆ ಬರುವವರೆಗೂ, ಕಿಡ್ನಿ ಕಾರಣಕ್ಕೆ ನಾನು ಈ ಲೋಕವನ್ನು ಬಿಡುವುದಿಲ್ಲ. ನಿಮ್ಮ ಒಳ್ಳೆ ಮನಸ್ಸಿಗೆ ಧನ್ಯವಾದ" ಎಂದಿದ್ದಾರೆ. ಸದ್ಯ ಈ ವೀಡಿಯೋ ಸಖತ್ ವೈರಲ್ ಆಗುತ್ತಿದೆ.
ಇನ್ನು ರಾಜ್ ಕುಂದ್ರಾ ವಿರುದ್ಧ 60 ಕೋಟಿ ರೂ. ವಂಚನೆ ಆರೋಪ ಕೇಳಿಬಂದಿದೆ. ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್ಗಾಗಿ ಸಾಲ ಮತ್ತು ಹೂಡಿಕೆ ಒಪ್ಪಂದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಈ ವಂಚನೆ ನಡೆದಿದೆ ಎನ್ನಲಾಗ್ತಿದೆ. ದೂರು ಸಹ ದಾಖಲಾಗಿದೆ. ಆದರೆ ಈ ಆರೋಪವನ್ನು ರಾಜ್ ಪರ ವಕೀಲರು ನಿರಾಕರಿಸಿದ್ದಾರೆ.
"ನನ್ನ ಕಕ್ಷಿದಾರರು ಪ್ರಕರಣದಲ್ಲಿ ಯಾವುದೇ ಕ್ರಿಮಿನಲ್ ಕೃತ್ಯ ಎಸಗಿಲ್ಲ. ವಿಚಾರಣೆ ವೇಳೆ ಪೊಲೀಸರು ಕೇಳಿದ ಎಲ್ಲಾ ದಾಖಲೆ ಕೊಟ್ಟಿದ್ದಾರೆ. ಎಲ್ಲಾ ಮಾಹಿತಿ ಹಂಚಿಕೊಂಡಿದ್ದಾರೆ. ಇದು ಆಧಾರ ರಹಿತ ಆರೋಪ. ನನ್ನ ಕಕ್ಷಿದಾರರ ವಿರುದ್ಧ ಸುಳ್ಳು ಆರೋಪ ಹೊರಿಸುವವರ ವಿರುದ್ಧ ದೂರು ದಾಖಲಿಸುವುದಾಗಿ" ರಾಜ್ ಕುಂದ್ರಾ ಪರ ವಕೀಲ ಪ್ರಶಾಂತ್ ಪಾಟೀಲ್ ಹೇಳಿದ್ದಾರೆ.
ಶಿಲ್ಪಾ ಶೆಟ್ಟಿ ಒಂದು ಪರ್ಫ್ಯೂಮ್ ಬ್ರ್ಯಾಂಡ್ ಹೊಂದಿದ್ದರು. ಅದಕ್ಕೆ ಉದ್ಯಮಿ ರಾಜ್ ಸಹಾಯ ಮಾಡುತ್ತಿದ್ದರು. ಮೊದಲ ನೋಟದಲ್ಲೇ ಇಬ್ಬರ ನಡುವೆ ಲವ್ ಆಗಿತ್ತು. ಬಳಿಕ ಇಬ್ಬರೂ ಮತ್ತಷ್ಟು ಹತ್ತಿರವಾಗಿದ್ದರು. 2009ರಲ್ಲಿ ಜೋಡಿ ಹಸೆಮಣೆ ಏರಿದ್ದರು. ದಂಪತಿಗೆ ಇಬ್ಬರೂ ಮಕ್ಕಳು ಇದ್ದಾರೆ. ಇನ್ನು ಪದೇ ಪದೆ ಉದ್ಯಮಿ ರಾಜ್ ಒಂದಿಲ್ಲೊಂದು ಸಮಸ್ಯೆಯಲ್ಲಿ ಸಿಲುಕುತ್ತಲೇ ಇರುತ್ತಾರೆ. ಶಿಲ್ಪಾ ಶೆಟ್ಟಿ ಇತ್ತೀಚೆಗೆ ದಕ್ಷಿಣದ ಸಿನಿಮಾಗಳಲ್ಲಿ ಹೆಚ್ಚು ನಟಿಸುತ್ತಿದ್ದಾರೆ. ಜೋಗಿ ಪ್ರೇಮ್ ನಿರ್ದೇಶನದ 'ಕೆಡಿ' ಚಿತ್ರದಲ್ಲಿ ಕೂಡ ಮಿಂಚಿದ್ದಾರೆ.


Click it and Unblock the Notifications











