ಸಲ್ಮಾನ್ ಖಾನ್ಗೆ ನಿರ್ದೇಶನ ಮಾಡಲು ನಿರಾಕರಿಸಿದ್ದೇಕೆ ರಾಜಮೌಳಿ?
ಟಾಲಿವುಡ್ ನ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಜೊತೆ ಕೆಲಸ ಮಾಡಲು ಯಾರಿಗೆ ತಾನೆ ಇಷ್ಟ ಇರಲ್ಲ. ಸ್ಟಾರ್ ಕಲಾವಿದರು ಸಹ ರಾಜಮೌಳಿ ಜೊತೆ ಸಿನಿಮಾ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಕೇವಲ ಟಾಲಿವುಡ್ ಸ್ಟಾರ್ಸ್ ಮಾತ್ರವಲ್ಲದೆ ಭಾರತದ ಎಲ್ಲಾ ಕಲಾವಿದರು ರಾಜಮೌಳಿ ನಿರ್ದೇಶನದಲ್ಲಿ ನಟಿಸಲು ಕಾಯುತ್ತಿರುತ್ತಾರೆ.
ರಾಜಮೌಳಿ ಸಹ ಅಳೆದು ತೂಗಿ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಮತ್ತು ಕಲಾವಿದರ ಆಯ್ಕೆಯಲ್ಲೂ ಅಷ್ಟೆ ಕಾಳಜಿ ವಹಿಸುತ್ತಾರೆ. ಒಮ್ಮೆ ರಾಜಮೌಳಿಗೆ ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಗೆ ಆಕ್ಷನ್ ಕಟ್ ಹೇಳುವ ಅವಕಾಶ ಬಂದಿತ್ತು. ಆದರೆ ರಾಜಮೌಳಿ ಆ ಅವಕಾಶವನ್ನು ತಿರಸ್ಕರಿಸಿದ್ದರಂತೆ. ಈ ಬಗ್ಗೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಬಹಿರಂಗ ಪಡಿಸಿದ್ದಾರೆ.
ರಾಜಮೌಳಿ ಸಲ್ಮಾನ್ ಖಾನ್ಗೆ ಆಕ್ಷನ್ ಕಟ್ ಹೇಳಬೇಕಾಗಿದ್ದು 2015ರಲ್ಲಿ ಬಿಡುಗಡೆಯಾಗಿದ್ದ ಸೂಪರ್ ಹಿಟ್ ಭಜರಂಗಿ ಭೈಜಾನ್ ಸಿನಿಮಾಗೆ. ಭಜರಂಗಿ ಭೈಜಾನ್ ಸಲ್ಮಾನ್ ವೃತ್ತಿಬದುಕಿನ ಅದ್ಭುತ ಸಿನಿಮಾಗಳಲ್ಲಿ ಒಂದು. ಬಾಕ್ಸ್ ಆಫೀಸ್ ನಲ್ಲೂ ಈ ಚಿತ್ರ ಭರ್ಜರಿ ಕಮಾಯಿ ಮಾಡಿತ್ತು. ಈ ಚಿತ್ರದ ಯಶಸ್ಸಿನ ಹಿಂದೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಇದ್ದರು. ಈ ಸಿನಿಮಾದ ಕಥೆ ಬರೆದಿದ್ದು ವಿಜಯೇಂದ್ರ ಪ್ರಸಾದ್.

ಕಬೀರ್ ಖಾನ್ ನಿರ್ದೇಶನ ಕೂಡ ವಿಮರ್ಶಕರಿಂದ ಮೆಚ್ಚುಗೆ ಗಳಿಸಿತ್ತು. ಆದರೆ ಸಿನಿಮಾವನ್ನು ರಾಜಮೌಳಿ ನಿರ್ದೇಶನ ಮಾಡಬೇಕು ಎನ್ನುವ ಬಯಕೆ ಹೊಂದಿದ್ದರು ವಿಜಯೇಂದ್ರ ಪ್ರಸಾದ್. ಆದರೆ ಅದೇ ಸಮಯದಲ್ಲಿ ರಾಜಮೌಳಿ ಬಾಹುಬಲಿ ಚಿತ್ರದ ಚಿತ್ರೀಕರಣದಲ್ಲಿದ್ದರು. ಆಗ ವಿಜಯೇಂದ್ರ ಪ್ರಸಾದ್ ಭಜರಂಗಿ ಭೈಜಾನ್ ಕಥೆಯನ್ನು ರಾಜಮೌಳಿ ಬಳಿ ವಿವರಿಸಿದ್ದರು. ಆದರೆ ಈ ಸಿನಿಮಾ ಮಾಡಲು ರಾಜಮೌಳಿ ಹಿಂದೇಟು ಹಾಕಿದ್ದರು.
ಈ ಬಗ್ಗೆ ಸ್ವತಃ ವಿಜಯೇಂದ್ರ ಪ್ರಸಾದ್ ಅವರೇ ಬಹಿರಂಗ ಪಡಿಸಿದ್ದಾರೆ. "ಬಾಹುಬಲಿ ಚಿತ್ರದ ಯುದ್ಧ ಸನ್ನಿವೇಶಗಳ ಚಿತ್ರೀಕರಣ ನಡೆಯುತ್ತಿತ್ತು. ಆ ಸಮಯದಲ್ಲಿ ಕಥೆ ವಿವರಿಸದೆ. ಅದು ಸರಿಯಾದ ಸಮಯವಾಗಿರಲಿಲ್ಲ. ರಾಜಮೌಳಿ ಬಾಹುಬಲಿ ಚಿತ್ರೀಕರಣ ಕಡೆ ಗಮನ ಹರಿಸಿದ್ದರು. ನಾನು ಸರಿಯಾದ ಸಮಯದಲ್ಲಿ ಹೇಳಬೇಕಿತ್ತು" ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.
Recommended Video
ಇನ್ನು ವಿಜಯೇಂದ್ರ ಪ್ರಸಾದ್ ಇತ್ತೀಚಿಗಷ್ಟೆ ಭಜರಂಗಿ ಭೈಜಾನ್-2 ಸಿನಿಮಾದ ಬಗ್ಗೆ ಸುಳಿವು ನೀಡಿದ್ದಾರೆ. ಈ ಬಗ್ಗೆ ಸಲ್ಮಾನ್ ಖಾನ್ ಜೊತೆಯೂ ಮಾತನಾಡಿರುವುದಾಗಿ ಹೇಳಿದ್ದಾರೆ. ಅಲ್ಲದೆ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ ಎಂದು ಹೇಳಿದ್ದಾರೆ. ಸದ್ಯದಲ್ಲೇ ಭಜರಂಗಿ ಭೈಜಾನ್-2 ಕೂಡ ಸೆಟ್ಟೇರುವ ಸಾಧ್ಯತೆ ಇದೆ. ಈ ಸಿನಿಮಾಗಾದರೂ ರಾಜಮೌಳಿ ಆಕ್ಷನ್ ಕಟ್ ಹೇಳುತ್ತಾರಾ ಎಂದು ಕಾದು ನೋಡಬೇಕು.


Click it and Unblock the Notifications











