ಹಣ, ಚಿನ್ನ ದೋಚಿದ್ದಾನೆ: ಪತಿಯ ವಿರುದ್ಧ ರಾಖಿ ಸಾವಂತ್ ದೂರು
ವಿವಾದಗಳಿಂದಲೇ ಜನಪ್ರಿಯವಾಗಿರುವ ನಟಿ ರಾಖಿ ಸಾವಂತ್ ಕೆಲ ವಾರದ ಹಿಂದಷ್ಟೆ ತಾವು ಮೈಸೂರಿನ ಆದಿಲ್ ಎಂಬುವರನ್ನು ವಿವಾಹವಾಗಿರುವುದಾಗಿ ಹೇಳಿದ್ದರು. ಆದಿಲ್ ತಮಗೆ ಐಶಾರಾಮಿ ಕಾರನ್ನು ಉಡುಗೊರೆಯಾಗಿ ಕೊಟ್ಟಿರುವ ವಿಷಯವನ್ನೂ ಹೇಳಿದ್ದರು. ಆದರೆ ಇದೆಲ್ಲ ಆದ ಕೆಲವೇ ದಿನಗಳಲ್ಲಿ ಇಬ್ಬರ ದಾಂಪತ್ಯದಲ್ಲಿ ದೊಡ್ಡ ಬಿರುಕು ಮೂಡಿದೆ.
ಕೆಲ ದಿನಗಳ ಹಿಂದಷ್ಟೆ ಮಾಧ್ಯಮಗಳ ಮುಂದೆ ಬಂದು ಕಣ್ಣೀರು ಹಾಕಿದ್ದ ನಟಿ ರಾಖಿ ಸಾವಂತ್, ಆದಿಲ್ ನನಗೆ ಮೋಸ ಮಾಡುತ್ತಿದ್ದಾನೆ ಎಂದಿದ್ದರು. ಆತನಿಗೆ ಅನೈತಿಕ ಸಂಬಂಧ ಇದ್ದು, ಅದರ ವಿಡಿಯೋ, ಚಿತ್ರಗಳೆಲ್ಲ ನನ್ನ ಬಳಿ ಇವೆ, ಅವನ ಮೋಸದಾಟವನ್ನು ಬಹಿರಂಗ ಮಾಡುತ್ತೇನೆ ಎಂದು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದರು.
ಆದರೆ ಇದೀಗ ನೇರವಾಗಿ ಪತಿ ಆದಿಲ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ರಾಖಿ, ತನ್ನ ಚಿನ್ನದ ಆಭರಣ ಹಾಗೂ ನಗದನ್ನು ಕದ್ದಿರುವುದಾಗಿ ಆದಿಲ್ ವಿರುದ್ಧ ಆರೋಪ ಮಾಡಿದ್ದಾರೆ. ಮಾತ್ರವಲ್ಲದೆ ಆದಿಲ್ ಹಾಗೂ ಆತನ ಗರ್ಲ್ಫ್ರೆಂಡ್ ತನು ಸೇರಿಕೊಂಡು ತನ್ನ ಮೇಲೆ ಹಲ್ಲೆ ಮಾಡಿರುವುದಾಗಿಯೂ ರಾಖಿ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನ ಆಧಾರದಲ್ಲಿ ಪೊಲೀಸರು ಇಂದು (ಫೆಬ್ರವರಿ 07) ಬೆಳಿಗ್ಗೆ ಆದಿಲ್ ಅನ್ನು ಬಂಧಿಸಿದ್ದು, ಒಶಿವಾರಾ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದೆ.
ಪ್ರಚಾರ ಪ್ರಿಯೆ ರಾಖಿ ಸಾವಂತ್, ಎರಡು ದಿನದ ಹಿಂದಷ್ಟೆ ಪತಿ ಆದಿಲ್ ಜೊತೆ ಹೋಟೆಲ್ನಲ್ಲಿ ಕುಳಿತು ಒಟ್ಟಿಗೆ ಊಟ ಮಾಡಿದ್ದರು. ಆ ವಿಡಿಯೋಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಆ ಭೇಟಿಯ ಬಳಿಕ ಹೋಟೆಲ್ನಿಂದ ಹೊರಬಂದು, ಆದಿಲ್ ಅನ್ನು ಬೀಳ್ಕೊಟ್ಟ ನಂತರ ಮತ್ತೆ ಮಾಧ್ಯಮಗಳಲ್ಲಿ ಗಂಡ ಆದಿಲ್ ಬಗ್ಗೆ ಸರಣಿ ದೂರು ಹೇಳಿದ್ದರು.
''ಆದಿಲ್ನಿಂದಾಗಿಯೇ ನನ್ನ ತಾಯಿ ನಿಧನ ಹೊಂದಿದರು. ನಾನು ಬಿಗ್ಬಾಸ್ ಮರಾಠಿಗೆ ಹೋಗುವ ಮುನ್ನ ಆದಿಲ್ಗೆ ತಾಯಿಯನ್ನು ನೋಡಿಕೊಳ್ಳುವಂತೆ ಹೇಳಿದ್ದೆ. ಆದರೆ ಆತ ಅದನ್ನು ನಿರ್ಲಕ್ಷಿಸಿದ. ನನ್ನ ತಾಯಿಯ ಶಸ್ತ್ರಚಿಕಿತ್ಸೆಗೂ ಹಣ ನೀಡಲಿಲ್ಲ. ಆತ ಸರಿಯಾಗಿ ನೋಡಿಕೊಂಡಿದ್ದಿದ್ದರೆ ನನ್ನ ತಾಯಿ ಸಾಯುತ್ತಿರಲಿಲ್ಲ'' ಎಂದಿದ್ದಾರೆ ರಾಖಿ.
ನಾನು ಬಿಗ್ಬಾಸ್ ಮರಾಠಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ನನ್ನ ಚಿನ್ನದ ಆಭರಣ ಹಾಗೂ ಹಣವನ್ನೆಲ್ಲ ಆತನ ಸುಪರ್ಧಿಗೆ ಕೊಟ್ಟಿದ್ದೆ. ಆದರೆ ಈಗ ಅದನ್ನು ಆತ ವಾಪಸ್ ನೀಡುತ್ತಿಲ್ಲ ಎಂದಿರುವ ರಾಖಿ, ಆದಿಲ್ ಹಾಗೂ ಆತನ ಗರ್ಲ್ಫ್ರೆಂಡ್ ತನು ನನ್ನ ಮೇಲೆ ಹಲ್ಲೆ ಸಹ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಆದಿಲ್ ಮೂಲತಃ ಮೈಸೂರಿನವರಾಗಿದ್ದು, ಮೈಸೂರಿನಲ್ಲಿ ಉದ್ಯಮ ನಡೆಸುತ್ತಿದ್ದಾರೆ. ಮೈಸೂರಿನಲ್ಲಿ ಡೆಜರ್ಟ್ ಲ್ಯಾಬ್ ಹೆಸರಿನ ಐಸ್ಕ್ರೀಂ ಪಾರ್ಲರ್ ಸಹ ಹೊಂದಿದ್ದಾರೆ ಆದಿಲ್.


Click it and Unblock the Notifications











