'ರಾಮಾಯಣ' ಚಿತ್ರದಲ್ಲಿ ಒಂದಲ್ಲ ಎರಡಲ್ಲ ಮೂರು ಪಾತ್ರಗಳಲ್ಲಿ ರಣ್ಬೀರ್ ಕಪೂರ್ ನಟನೆ
ನಿತೇಶ್ ತಿವಾರಿ ಸಾರಥ್ಯದ 'ರಾಮಾಯಣ' ಚಿತ್ರದಲ್ಲಿ ಪಾತ್ರಗಳ ಆಯ್ಕೆ ಬಹಳ ವಿಶೇಷವಾಗಿದೆ. ಬಾಲಿವುಡ್ ಕಲಾವಿದರ ಜೊತೆಗೆ ದಕ್ಷಿಣದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಶ್ರೀರಾಮನಾಗಿ ರಣ್ಬೀರ್ ಕಪೂರ್, ರಾವಣನಾಗಿ ಯಶ್, ಸೀತೆಯಾಗಿ ಸಾಯಿ ಪಲ್ಲವಿ, ಹನುಮಂತನಾಗಿ ಸನ್ನಿ ಡಿಯೋಲ್, ಲಕ್ಷ್ಮಣನಾಗಿ ರವಿ ದುಬೆ ಹೀಗೆ ಘಟಾನುಘಟಿ ಕಲಾವಿದರು ಬಣ್ಣ ಹಚ್ಚಿದ್ದಾರೆ.
ಚಿತ್ರದಲ್ಲಿ ಶ್ರೀರಾಮನಾಗಿ ರಣ್ಬೀರ್ ಕಪೂರ್ ಹೇಗೆ ಕಾಣುತ್ತಾರೆ ಎನ್ನುವುದು ಗೊತ್ತಾಗಿದೆ. ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಇನ್ನುಳಿದಂತೆ ಪೌರಾಣಿಕ ಪಾತ್ರಗಳಲ್ಲಿ ಯಶ್, ಸಾಯಿಪಲ್ಲವಿ ಹಾಗೂ ಸನ್ನಿ ಡಿಯೋಲ್ ಲುಕ್ ಹೇಗಿರುತ್ತದೆ ಎಂದು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಂದಹಾಗೆ ಚಿತ್ರದಲ್ಲಿ ರಣ್ಬೀರ್ ಕಪೂರ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ವಿಚಾರವನ್ನು ಸ್ವತಃ ಬಹಿರಂಗಪಡಿಸಿದ್ದಾರೆ. ಶ್ರೀರಾಮನ ಜೊತೆಗೆ ಪರಶುರಾಮನಾಗಿ ಕೂಡ ಕಾಣಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.

ರಾಮ ಸೀತೆಯನ್ನು ಮದುವೆಯಾಗಿ ಮರಳಿ ಅಯೋಧ್ಯೆಗೆ ಬರುವ ಹಾದಿಯಲ್ಲಿ ಪರಶುರಾಮನಿಗೆ ಮುಖಾಮುಖಿ ಆಗುವ ಸನ್ನಿವೇಶ ಇದೆ. ವಾಲ್ಮೀಕಿ ರಾಮಾಯಣದಲ್ಲಿ ಇದನ್ನು ಬಣ್ಣಿಸಲಾಗಿದೆ. ಇಬ್ಬರ ನಡುವೆ ಸಣ್ಣ ಕಾಳಗ ಕೂಡ ನಡೆಯುತ್ತಾರೆ. ಚಿಕ್ಕದಾಗಿ ರಾಮಾಯಣ ಕಥೆ ಹೇಳುವಾಗ ಈ ಸನ್ನಿವೇಶವನ್ನು ತೋರಿಸುವುದಿಲ್ಲ. ಹಾಗಾಗಿ ಸಾಕಷ್ಟು ಜನರಿಗೆ ಈ ಬಗ್ಗೆ ಗೊತ್ತಿಲ್ಲ. ಆದರೆ 'ರಾಮಾಯಣ' ಚಿತ್ರದಲ್ಲಿ ಈ ದೃಶ್ಯವನ್ನು ಹೈಲೆಟ್ ಮಾಡಲಾಗಿದೆ. ಎರಡು ಭಾಗಗಳಾಗಿ ಕಥೆ ಹೇಳುತ್ತಿರುವುದರಿಂದ ಇಂತಹ ಸನ್ನಿವೇಶಗಳನ್ನು ಸೇರಿಸಿಕೊಂಡಿದ್ದಾರೆ.
ಈಗಾಗಲೇ ಟೀಸರ್ನಲ್ಲಿ ಕೂಡ ಶ್ರೀರಾಮ ಹಾಗೂ ಪರುಶುರಾಮನ ನಡುವಿನ ಯುದ್ಧದ ಸಣ್ಣ ಝಲಕ್ ತೋರಿಸಿದ್ದಾರೆ. ಶ್ರೀರಾಮನ ಮೇಲೆ ಪರುಶುರಾಮ ತನ್ನ ಆಯುಧವನ್ನು ಪ್ರಯೋಗಿಸುವುದು, ಅದನ್ನು ಶ್ರೀರಾಮ ಅನಾಯಾಸವಾಗಿ ತಡೆಯುವುದನ್ನು ನೋಡಬಹುದು. ಇತ್ತೀಚೆಗೆ ಲಾಸ್ ಏಂಜಲೀಸ್ನಲ್ಲಿ 'ರಾಮಾಯಣ' ಟೀಸರ್ ಬಿಡುಗಡೆ ಮಾಡಿ ಅಲ್ಲಿನ ಮಾಧ್ಯಮಗಳ ಜೊತೆ ಚಿತ್ರತಂಡ ಮಾತನಾಡಿತ್ತು. ಇದೇ ವೇಳೆ ಪರಶುರಾಮನ ಪಾತ್ರ ಮಾಡುತ್ತಿರುವ ಬಗ್ಗೆ ರಣ್ಬೀರ್ ಕಪೂರ್ ಮಾತನಾಡಿರುವುದು ವೈರಲ್ ಆಗ್ತಿದೆ.
ರಣ್ಬೀರ್ ಮಾತನಾಡಿ "ಭಗವಾನ್ ವಿಷ್ಣು ಬೇರೆ ಬೇರೆ ಅವತಾರ ತಾಳಿದ್ದರು. ಅದರಲ್ಲಿ ಶ್ರೀರಾಮ ಒಂದು ಅವತಾರ. ಅದಕ್ಕೂ ಮುನ್ನ ಪರಶುರಾಮನ ಅವತಾರ ಕೂಡ ತಾಳಿದ್ದರು. ಆ ಎರಡೂ ಪಾತ್ರಗಳನ್ನು ಮಾಡುವ ಅವಕಾಶ ಸಿಕ್ಕಿದ್ದು ಅದ್ಭುತ" ಎಂದು ಹೇಳಿದ್ದಾರೆ. ಇನ್ನು ವಿಷ್ಣು ಅವತಾರದಲ್ಲಿ ಕೂಡ ಕೆಲ ಸೆಕೆಂಡ್ಗಳ ಕಾಲ ರಣ್ಬೀರ್ ಕಪೂರ್ ಕಾಣಿಸಿಕೊಳ್ಳುತ್ತಾರೆ ಎನ್ನಲಾಗ್ತಿದೆ. ಹಾಗಾಗಿ ಒಟ್ಟು 3 ಪಾತ್ರಗಳಲ್ಲಿ ರಣ್ಬೀರ್ ದರ್ಶನ ಕೊಡಲಿದ್ದಾರೆ.
ಈ ಹಿಂದೆ 'ಶಂಶೇರಾ' ಚಿತ್ರದಲ್ಲಿ ರಣ್ಬೀರ್ ದ್ವಿಪಾತ್ರದಲ್ಲಿ ನಟಿಸಿದ್ದರು. 'ರಾಮಾಯಣ' ಚಿತ್ರದ 2 ಪಾತ್ರಗಳನ್ನು ನಿಭಾಯಿಸುವ ಬಗ್ಗೆ ಅವರು ಮಾತನಾಡಿದ್ದಾರೆ. "ಒಬ್ಬ ನಟನಾಗಿ, ಬಾಡಿ ಲಾಂಗ್ವೇಜ್ ಹೊರತುಪಡಿಸಿ, ನೀವು ಪಾತ್ರಗಳ ಆಧ್ಯಾತ್ಮಿಕತೆ, ಭಾವನಾತ್ಮಕತೆಯನ್ನು ಆಳವಾಗಿ ಅರ್ಥಮಾಡಿಕೊಂಡರೆ, ನಟಿಸುವುದು ಸುಲಭ. ಇವರೆಲ್ಲಾ ಯಾರು, ಈ ಪಾತ್ರಗಳ ಹಿನ್ನೆಲೆ ಏನು, ಆ ಪಾತ್ರಗಳು ಏನನ್ನು ಪ್ರತಿನಿಧಿಸುತ್ತಾರೆ, ಅವರ ಉದ್ದೇಶಗಳು ಏನೇನು ಎಂಬುದನ್ನು ಅರ್ಥಮಾಡಿಕೊಂಡೆ, ಹಾಗಾಗಿ ಎಲ್ಲವೂ ಸುಲಭವಾಯಿತು" ಎಂದಿದ್ದಾರೆ.
ಶ್ರೀರಾಮನ ಪಾತ್ರ ಮಾಡುವ ಬಗ್ಗೆ ಮಾತನಾಡಿ "ಇದು ದೊಡ್ಡ ಜವಾಬ್ದಾರಿ. ನಿಜವಾಗಿಯೂ ರಾಮನ ಪಾತ್ರದಲ್ಲಿ ನಟಿಸುವುದು ಸಾಧ್ಯವಿಲ್ಲ, ಇಲ್ಲಿ ನಮ್ಮ ಹೇಳಿಕೆ, ಭಗವಂತ ರಾಮನ ಆವೃತ್ತಿಯನ್ನು ಪ್ರತಿನಿಧಿಸಬೇಕು. ಒಬ್ಬ ನಟನಾಗಿ ಮತ್ತು ಭಾರತೀಯನಾಗಿ ನಾನು ಹೊಂದಿರುವ ಜವಾಬ್ದಾರಿ, ಉದ್ದೇಶ, ನಂಬಿಕೆಯೇ ಈ ಕಥೆ.. ಅಲ್ಲಿಂದ ಎಲ್ಲವೂ ಪ್ರಾರಂಭವಾಗುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ವಿವರಿಸಿದ್ದಾರೆ.


Click it and Unblock the Notifications











