ಯಶ್ ಅನುಪಸ್ಥಿತಿಯಲ್ಲಿ 'ರಾಮಾಯಣ' ಪ್ರಚಾರ; ಶ್ರೀರಾಮನ ಪಾತ್ರದ ಬಗ್ಗೆ ರಣ್ಬೀರ್ ಮೊದಲ ಮಾತು
ನಿತೇಶ್ ತಿವಾರಿ ನಿರ್ದೇಶನದಲ್ಲಿ 'ರಾಮಾಯಣ' ಸರಣಿ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಚಿತ್ರದ ಟೀಸರ್ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ ವಿದೇಶದಲ್ಲಿ ಸಿನಿಮಾ ಪ್ರಚಾರ ಆರಂಭವಾಗಿದೆ. ಯಶ್ ಅನುಪಸ್ಥಿತಿಯಲ್ಲಿ ರಣ್ಬೀರ್ ಕಪೂರ್, ನಿತೇಶ್ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
ಅಮೆರಿಕಾದ ಲಾಸ್ ಏಂಜಲೀಸ್ನಲ್ಲಿ 'ರಾಮಾಯಣ' ಚಿತ್ರದ ಟೀಸರ್ ಪ್ರದರ್ಶನ ಮಾಡಲಾಗಿದೆ. ಅಲ್ಲಿನ ಮಾಧ್ಯಮಗಳ ಜೊತೆಗೆ ಚಿತ್ರತಂಡ ಮಾತನಾಡಿದೆ. ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ವೇಳೆ ಶ್ರೀರಾಮನ ಪಾತ್ರವನ್ನು ನಿಭಾಯಿಸುತ್ತಿರುವ ಬಗ್ಗೆ ನಟ ರಣ್ಬೀರ್ ಕಪೂರ್ ಮಾತನಾಡಿದ್ದಾರೆ. "ಶತಮಾನಗಳಿಂದ ಶ್ರೀರಾಮ ಕೋಟ್ಯಂತರ ಜನರ ಆತ್ಮಸಾಕ್ಷಿಯ ಸಂರಕ್ಷಕನಾಗಿದ್ದಾನೆ. ನಾವು ಹೋದ ನಂತರವೂ ಅವನು ಬಹಳ ಕಾಲ ಹಾಗೆಯೇ ಇರುತ್ತಾನೆ" ಎಂದಿದ್ದಾರೆ.

ಏಪ್ರಿಲ್ 2ರಂದು ಹನುಮ ಜಯಂತಿಯಂದು 'ರಾಮಾಯಣ' ಚಿತ್ರದ ಟೀಸರ್ ಬಿಡುಗಡೆ ಆಗಲಿದೆ. ಅದಕ್ಕಿಂತ ಮುನ್ನ ಅಮೆರಿಕಾದ ಪ್ರೇಕ್ಷಕರ ಮುಂದೆ ಪ್ರದರ್ಶನ ಮಾಡಲಾಗಿದೆ. ರಣ್ಬೀರ್ ಕಪೂರ್ ನೋಡಿ ಅಲ್ಲಿನ ಅಭಿಮಾನಿಗಳು ಫಿದಾ ಆಗಿದ್ದಾರೆ. ಇನ್ನು ಶ್ರೀರಾಮನ ಪಾತ್ರದ ಬಗ್ಗೆ ಮಾತು ಮುಂದುವರೆಸಿರುವ ರಣ್ಬೀರ್ "ಕಷ್ಟದ ಸಮಯದಲ್ಲಿ ಮಾನವ ಚೈತನ್ಯದ ಬಗ್ಗೆ ಶ್ರೀರಾಮ ನಮಗೆ ಮಾರ್ಗದರ್ಶನ ನೀಡುತ್ತಾರೆ. ಅವರು ಕರುಣೆ, ಧೈರ್ಯ, ಸದಾಚಾರ ಮತ್ತು ಕ್ಷಮೆಯ ಸಂಕೇತವಾಗಿ ನಿಲ್ಲುತ್ತಾರೆ. ಅವರನ್ನು ಮರ್ಯಾದಾ ಪುರುಷೋತ್ತಮ ಎಂದು ಕರೆಯಲಾಗುತ್ತದೆ, ಅಂದರೆ ಆದರ್ಶ ಪುರುಷ" ಎಂದು ವಿವರಿಸಿದ್ದಾರೆ.
ಅಂದಾಜು 4000 ಕೋಟಿ ರೂ. ವೆಚ್ಚದಲ್ಲಿ 'ರಾಮಾಯಣ' ಸಿನಿಮಾ ನಿರ್ಮಾಣವಾಗುತ್ತಿದೆ. ಸದ್ಯ 2 ನಿಮಿಷ 38 ಸೆಕೆಂಡ್ಗಳ ಟೀಸರ್ ಬಿಡುಗಡೆಗೆ ಸಿದ್ಧತೆ ನಡೆದಿದೆ. ದೇಶಾದ್ಯಂತ ಕೆಲ ಚಿತ್ರಮಂದಿರಗಳಲ್ಲಿ ಟೀಸರ್ ಪ್ರದರ್ಶನಕ್ಕೆ ಪ್ರಯತ್ನಿಸಲಾಗುತ್ತಿದೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಹಾಗಾಗಿ ವಿದೇಶಗಳಲ್ಲಿ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ವಿದೇಶಗಳ ಭಾಷೆಗೆ ಸಿನಿಮಾ ಡಬ್ ಆಗಲಿದೆ. ಈ ವರ್ಷ ದೀಪಾವಳಿ ಸಂಭ್ರಮದಲ್ಲಿ ಮೊದಲ ಭಾಗವನ್ನು ತೆರೆಗೆ ತರಲಾಗ್ತಿದೆ.
ಶ್ರೀರಾಮನಾಗಿ ರಣ್ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ರಾವಣನಾಗಿ ಯಶ್ ನಟಿಸುತ್ತಿರುವುದು ವಿಶೇಷ. ಇನ್ನುಳಿದಂತೆ ಲಕ್ಷ್ಮಣನಾಗಿ ರವಿ ದುಬೆ ಹಾಗೂ ಹನುಮಂತನಾಗಿ ಸನ್ನಿ ಡಿಯೋಲ್ ಕಾಣಿಸಿಕೊಳ್ಳುತ್ತಿದ್ದಾರೆ. ದಶರಥನಾಗಿ ಅರುಣ್ ಗೋವಿಲ್, ಕೈಕೇಯಿ ಆಗಿ ಲಾರಾದತ್ತಾ, ಶೂರ್ಪನಖಿಯಾಗಿ ರಕುಲ್ ಪ್ರೀತ್ಸಿಂಗ್, ಮಂಡೋದರಿಯಾಗಿ ಕಾಜಲ್ ಅಗರ್ವಾಲ್ ಬಣ್ಣ ಹಚ್ಚಿದ್ದಾರೆ. ಹಾಲಿವುಡ್ ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ.
ಏಪ್ರಿಲ್ 2ರಂದು ಬಿಡುಗಡೆ ಆಗುವ 'ರಾಮಾಯಣ' ಚಿತ್ರದ ಟೀಸರ್ ಸೆನ್ಸಾರ್ ಮುಗಿಸಿದೆ. ಆ ಸರ್ಟಿಫಿಕೇಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಈ ಹಿಂದೆ ಬಂದಿದ್ದ ಗ್ಲಿಂಪ್ಸ್ ವೀಡಿಯೋದಲ್ಲಿ ಶ್ರೀರಾಮನಾಗಿ ರಣ್ಬೀರ್, ರಾವಣನಾಗಿ ಯಶ್ ಲುಕ್ ಸಂಪೂರ್ಣವಾಗಿ ರಿವೀಲ್ ಆಗಿರಲಿಲ್ಲ. ಆದರೆ ಈ ಬಾರಿ ಬಹುತೇಕ ಪಾತ್ರಗಳ ಝಲಕ್ ಹೊರಬರುವ ಸಾಧ್ಯತೆಯಿದೆ. ಇದೇ ಕಾರಣಕ್ಕೆ ಟೀಸರ್ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.
ಅಂದಹಾಗೆ ಈಗಾಗಲೇ 'ರಾಮಾಯಣ' ಸಿನಿಮಾ ಮೊದಲ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳು ಭರದಿಂದ ಸಾಗುತ್ತಿದೆ. ಐಮ್ಯಾಕ್ಸ್ ಸ್ಕ್ರೀನ್ಗಳಿಗಾಗಿ ಚಿತ್ರವನ್ನು ಕಟ್ಟಿಕೊಡಲಾಗುತ್ತಿದೆ. ಹಾಗಾಗಿ ತೆರೆಮೇಲೆ ಪ್ರೇಕ್ಷಕರಿಗೆ ಅದ್ಭುತ ಅನುಭವ ಸಿಗಲಿದೆ. ನಮ್ಮ ಕಥೆಯನ್ನು ಪ್ರಪಂಚದ ಮೂಲೆ ಮೂಲೆಗೆ ತೆಗೆದುಕೊಂಡು ಹೋಗಬೇಕು ಎನ್ನುವ ಕಾರಣಕ್ಕೆ ಸಿನಿಮಾ ಮಾಡುತ್ತಿರುವುದಾಗಿ ನಿರ್ಮಾಪಕರು ಹೇಳುತ್ತಾ ಬರ್ತಿದ್ದಾರೆ. ಯಶ್ ಕೂಡ ಸಿನಿಮಾ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ.


Click it and Unblock the Notifications











