'ಆದಿಪುರುಷ್' ಟೀಸರ್ ನೋಡಿ ಟೀಕಿಸಿದ್ದ ದಿಪಿಕಾ ಚಿಖ್ಲಿಯಾ 'ರಾಮಾಯಣ' ಝಲಕ್ ನೋಡಿ ಹೇಳಿದ್ದಿಷ್ಟು
ನಮಿತ್ ಮಲ್ಹೋತ್ರಾ ಹಾಗೂ ಯಶ್ ನಿರ್ಮಾಣದ 'ರಾಮಾಯಣ' ಸಿನಿಮಾ ಭಾರೀ ಚರ್ಚೆ ಹುಟ್ಟಾಕ್ಕಿದೆ. ಅದಕ್ಕೆ ಕಾರಣ ಸದ್ಉ ಹೊರ ಬಂದಿರುವ ಟೀಸರ್.. ನಿತೇಶ್ ತಿವಾರಿ ನಿರ್ದೇಶನದ ಈ ಪೌರಾಣಿಕ ಕಥಾಹಂದರ ಸಿನಿಮಾ ದೀಪಾವಳಿಗೆ ತೆರೆಗೆ ಬರಲಿದೆ. ಸದ್ಯ ಶ್ರೀರಾಮನ ಪಾತ್ರ ಪರಿಚಯಿಸುವ ಟೀಸರ್ ಬಿಡುಗಡೆ ಆಗಿ ಸದ್ದು ಮಾಡ್ತಿದೆ.
ರಾಮ ಟೀಸರ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಒಂದಷ್ಟು ಸನ್ನಿವೇಶಗಳು ವಾಹ್ ಎನ್ನುವಂತಿದ್ದರೆ ಮತ್ತೆ ಕೆಲವು ಕಡೆ ನಿರಾಸೆ ಮೂಡಿಸುತ್ತದೆ. 4000 ಕೋಟಿ ರೂ. ಬಜೆಟ್ ಸಿನಿಮಾ ಎನ್ನುತ್ತಾರೆ ಹಿಂದಿ ಪೌರಾಣಿಕ ಧಾರಾವಾಹಿಗಳಿಗಿಂತ ಕಳಪೆಯಾಗಿ ಕಾಣುತ್ತಿದೆ ಎಂದು ಅಭಿಮಾನಿಗಳು ಅಸಮಾಧಾನ ಹೊರ ಹಾಕಿದ್ದಾರೆ. ದೂರದರ್ಶನದ ರಾಮಾಯಣ ಧಾರಾವಾಹಿಗೆ ಹೋಲಿಸಿ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ರಮಾನಂದ ಸಾಗರ್ ಸಾರಥ್ಯದ ರಾಮಾಯಣ ಧಾರಾವಾಹಿ ಈ ಬಹುಕೋಟಿ ವೆಚ್ಚದ ಸಿನಿಮಾಗಿಂತ ಚೆನ್ನಾಗಿತ್ತು ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅದೇ ಧಾರಾವಾಹಿಯಲ್ಲಿ ಸೀತೆಯ ಪಾತ್ರದಲ್ಲಿ ನಟಿಸಿದ್ದ ನಟಿ ದಿಪಿಕಾ ಚಿಖ್ಲಿಯಾ ಈಗ 'ರಾಮಾಯಣ' ಸಿನಿಮಾ ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ. ಅಂದಹಾಗೆ 3 ವರ್ಷಗಳ ಹಿಂದೆ ಪ್ರಭಾಸ್ ನಟನೆಯ 'ಆದಿಪುರುಷ್' ಚಿತ್ರವನ್ನು ದಿಪಿಕಾ ಟೀಕಿಸಿದ್ದರು. ಟೀಸರ್ ನೋಡಿ "ರಾವಣನನ್ನು ಬೀದಿ ರೌಡಿ ತರ ತೋರಿಸಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇಂತಹ ಸಿನಿಮಾಗಳನ್ನು ಮಕ್ಕಳಿಗೆ ತೋರಿಸಿದರೆ ಅವರು ದೊಡ್ಡವರಾದ ಮೇಲೆ ರಾಮಾಯಣ ಅಂದರೆ ಇದೇ ಚಿತ್ರಣ ಬರುತ್ತದೆ ಎಂದಿದ್ದರು.
'ರಾಮಾಯಣ' ಸಿನಿಮಾ ಟೀಸರ್ ಬಗ್ಗೆ ನಟಿ ದಿಪಿಕಾ ಚಿಖ್ಲಿಯಾ ಇಂಡಿಯಾ ಟುಡೇ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ. " ನಾನು ಟೀಸರ್ ನೋಡಿದೆ. ಬಹಳ ಅದ್ಧೂರಿಯಾಗಿದೆ. ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ನಾನು ಸಿನಿಮಾ ನೋಡಲು ಉತ್ಸುಕಳಾಗಿದ್ದೀನಿ. ಬಹಳ ಚೆನ್ನಾಗಿರುತ್ತದೆ.. ಅದರಲ್ಲಿ ಅನುಮಾನವೇ ಇಲ್ಲ." ಎಂದಿದ್ದಾರೆ.
ಎರಡು ವರ್ಷಗಳ ಹಿಂದೆ ನಟಿ ದಿಪಿಕಾ 'ರಾಮಾಯಣ' ಸಿನಿಮಾ ಮಾಡುವ ಬಗ್ಗೆ ಮಾತನಾಡಿದ್ದರು. ನಮಿತ್ ಮಲ್ಹೋತ್ರಾ ಸಿನಿಮಾ ಘೋಷಿಸಿದಾಗ ಈ ಬಗ್ಗೆ ಆಕೆ ಪ್ರತಿಕ್ರಿಯಿಸಿದ್ದರು. "ನಿಜ ಹೇಳಬೇಕೆಂದರೆ, ಜನರು ರಾಮಾಯಣವನ್ನು ಮತ್ತೆ ಮತ್ತೆ ತೆರೆಗೆ ತರುವುದು ನೋಡಿ ನನಗೆ ತುಂಬಾ ನಿರಾಶೆಯಾಗಿದೆ. ಆರೀತಿ ಮಾಡುವುದು ಸರಿಯಲ್ಲ ಎಂದು ನಾನು ಭಾವಿಸುತ್ತೇನೆ. ಜನರು ಅದನ್ನು ಹಾಳು ಮಾಡುತ್ತಿದ್ದಾರೆ. ಪ್ರತಿ ಬಾರಿ ರಾಮಾಯಣ ಸಿನಿಮಾಮಾಡಿದಾಗ, ಅವರು ಹೊಸದನ್ನು ತರಲು ಪ್ರಯತ್ನಿಸುತ್ತಾರೆ.. ಹೊಸ ಕಥೆ, ಹೊಸ ಕೋನ, ಹೊಸ ನೋಟ" ಎಂದಿದ್ದರು.
'ಆದಿಪುರುಷ್' ಸಿನಿಮಾ ಬಗ್ಗೆ ಮಾತನಾಡಿ ಸೀತಾ ಪಾತ್ರಧಾರಿ ಕೃತಿ ಸನೂನ್ ಕಾಸ್ಟ್ಯೂಮ್, ರಾವಣನಾಗಿ ಸೈಫ್ ಅಲಿಖಾನ್ ಲುಕ್ಸ್ ಬಗ್ಗೆ ದಿಪಿಕಾ ಬೇಸರ ವ್ಯಕ್ತಪಡಿಸಿದ್ದರು. ವಿಭಿನ್ನವಾಗಿ ತೋರಿಸಬೇಕು ಎನ್ನುವ ಕಾರಣಕ್ಕೆ ಈ ರೀತಿ ಮಾಡಿದ್ದರು. "ಧಾರ್ಮಿಕ ಗ್ರಂಥಗಳನ್ನು ಹಾಳು ಮಾಡಬಾರದು. ರಾಮಾಯಣವನ್ನ ಬಿಟ್ಟು ಬೇರೆ ಸಾಕಷ್ಟು ಕಥೆಗಳಿವೆ. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಸಿನಿಮಾ ಮಾಡಿ.. ಇತಿಹಾಸದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರು ಇದ್ದಾರೆ. ಅವರ ಕಥೆ ಹೇಳಿ, ಎಲ್ಲಾ ಬಿಟ್ಟು ರಾಮಾಯಣ ಮಾತ್ರ ಏಕೆ?" ಎಂದು ದಿಪಿಕಾ ಪ್ರಶ್ನಿಸಿದ್ದರು.
ಎರಡು ಭಾಗಗಳಾಗಿ ನಿತೇಶ್ ತಿವಾರಿ 'ರಾಮಾಯಣ' ಕಥೆ ಹೇಳುತ್ತಿದ್ದಾರೆ. ಮೊದಲ ಭಾಗ ಈ ವರ್ಷ ದೀಪಾವಳಿಗೆ ತೆರೆಗೆ ಬರಲಿದೆ. ಎರಡನೇ ಭಾಗ ಮುಂದಿನ ವರ್ಷ ಬಿಡುಗಡೆ ಆಗಲಿದೆ. ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಲಕ್ಷ್ಮಣನಾಗಿ ರವಿ ದುಬೆ, ದಶರಥನಾಗಿ ಅರುಣ್ ಗೋವಿಲ್, ಹನುಮಂತನಾಗಿ ಸನ್ನಿ ಡಿಯೋಲ್, ಮಂಡೋದರಿಯಾಗಿ ಕಾಜಲ್ ಅಗರ್ವಾಲ್ ನಟಿಸಿರುವುದು ವಿಶೇಷ.


Click it and Unblock the Notifications











