ಗೋಮಾಂಸ ತಿನ್ನುವವನು ಶ್ರೀರಾಮನ ಪಾತ್ರ ಮಾಡ್ತಾನೆ; ಟ್ರೋಲಿಗರಿಗೆ ಚಿನ್ಮಯಿ ತಿರುಗೇಟು
ನಿಮಿತ್ ಮಲ್ಹೋತ್ರಾ ನಿರ್ಮಾಣದ 'ರಾಮಾಯಣ' ಸಿನಿಮಾ ಬಿಗ್ ಅಪ್ಡೇಟ್ ಬಂದಿದೆ. ಚಿತ್ರದ ಇಂಟ್ರಡಕ್ಷನ್ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಶ್ರೀರಾಮನಾಗಿ ರಣ್ಬೀರ್ ಕಪೂರ್ ಹಾಗೂ ರಾವಣನಾಗಿ ಯಶ್ ಝಲಕ್ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ. ಇದೆಲ್ಲದರ ನಡುವೆ ಕೆಲವರು ಪದೇ ಪದೆ ಚಿತ್ರವನ್ನು ಟ್ರೋಲ್ ಮಾಡುತ್ತಿದ್ದಾರೆ.
ಈ ಹಿಂದೆ ಬಾಲಿವುಡ್ ನಟ ರಣ್ಬೀರ್ ಕಪೂರ್ ನನಗೆ ಗೋಮಾಂಸ ಇಷ್ಟ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಆಗ ಅದು ಭಾರೀ ಚರ್ಚೆ ಹುಟ್ಟಾಕ್ಕಿತ್ತು. ರಾಮಾಯಣ ಚಿತ್ರದಲ್ಲಿ ಶ್ರೀರಾಮನ ಪಾತ್ರದಲ್ಲಿ ರಣ್ಬೀರ್ ನಟಿಸುತ್ತಾರೆ ಎಂದಾಗಲೇ ಕೆಲವರು ಆ ವಿಚಾರ ವಿಚಾರ ಪ್ರಸ್ತಾಪಿಸಿ ಕಾಮೆಂಟ್ಸ್ ಮಾಡಿದ್ದರು. ಇದೀಗ ಚಿತ್ರದ ಟೀಸರ್ ರಿಲೀಸ್ ಆಗುತ್ತಿದ್ದಂತೆ ಮತ್ತೆ ಅದೇ ವಿಚಾರವನ್ನು ಎಳೆದು ತರುತ್ತಿದ್ದಾರೆ. ನೆಟ್ಟಿಗನೊಬ್ಬನ ವ್ಯಂಗ್ಯಭರಿತ ಪೋಸ್ಟ್ಗೆ ಗಾಯಕಿ ಚಿನ್ಮಯಿ ಶ್ರೀಪಾದ ರಿಪ್ಲೇ ಮಾಡಿ ತಿರುಗೇಟು ನೀಡಿದ್ದಾರೆ. ಹಾಗಾಗಿ ಮತ್ತೆ ಈ ವಿವಾದ ಚರ್ಚೆಗೆ ಬಂದಿದೆ.

ನಿತೇಶ್ ತಿವಾರಿ ನಿರ್ದೇಶನದಲ್ಲಿ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ 'ರಾಮಾಯಣ' ಸಿನಿಮಾ ಸಿದ್ಧವಾಗುತ್ತಿದೆ. 800 ಕೋಟಿ ರೂ. ಬಜೆಟ್ನಲ್ಲಿ ಚಿತ್ರ ಮೂಡಿ ಬರ್ತಿದೆ. ಹಾಲಿವುಡ್ ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಭಾರತೀಯ ಚಿತ್ರರಂಗದಲ್ಲೇ ಬಹಳ ದುಬಾರಿ ಸಿನಿಮಾ ಇದಾಗಿದೆ. ಸಂಪೂರ್ಣ ಐಮ್ಯಾಕ್ಸ್ ಫಾರ್ಮೆಟ್ನಲ್ಲಿ ಸಿನಿಮಾ ಚಿತ್ರೀಕರಣವಾಗಿದೆ. ಸೀತೆಯಾಗಿ ಸಾಯಿ ಪಲ್ಲವಿ, ಲಕ್ಷ್ಮಣನಾಗಿ ರವಿದುಬೆ, ಹನುಮಂತನಾಗಿ ಸನ್ನಿ ಡಿಯೋಲ್, ಮಂಡೋದರಿಯಾಗಿ ಕಾಜಲ್ ಅಗರ್ವಾಲ್ ನಟಿಸುತ್ತಿದ್ದಾರೆ.
ಚಿತ್ರಕ್ಕೆ ಹ್ಯಾನ್ಸ್ ಜಿಮ್ಮರ್ ಹಾಗೂ ಎ. ಆರ್ ರಹಮಾನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. DNEG ಸಂಸ್ಥೆ ವಿಎಫ್ಎಕ್ಸ್ ಕೆಲಸಗಳನ್ನು ನೋಡಿಕೊಳ್ತಿದೆ. ಹಾಗಾಗಿ ಚಿತ್ರದ ಬಗ್ಗೆ ನಿರೀಕ್ಷೆ ದುಪ್ಪಟ್ಟಾಗಿದೆ. ಹಾಲಿವುಡ್ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಮಾಡುತ್ತಿರುವ ಭಾರತದ ಸಿನಿಮಾ ಇದು. ದೇಶ ವಿದೇಶದ ಭಾಷೆಗಳಿಗೆ ಸಿನಿಮಾ ಡಬ್ ಆಗಿ ರಿಲೀಸ್ ಆಗಲಿದೆ. ಇದೆಲ್ಲದರ ನಡುವೆ ಚಿತ್ರವನ್ನು ಕೆಲವರು ವಿನಾಕಾರಣ ಟ್ರೋಲ್ ಮಾಡುತ್ತಿದ್ದಾರೆ.
ಈ ಹಿಂದೆ ರಣ್ಬೀರ್ ಕಪೂರ್ ನಟನೆಯ 'ಬ್ರಹ್ಮಾಸ್ತ್ರ' ಚಿತ್ರವನ್ನು ಬಾಯ್ಕಾಟ್ ಮಾಡಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಆಗ್ರಹಿಸಿದ್ದರು. ಇದೀಗ 'ರಾಮಾಯಣ' ಸಿನಿಮಾ ವಿಚಾರವಾಗಿ ಕಾಮೆಂಟ್ಸ್ ಮಾಡಲು ಶುರು ಮಾಡಿದ್ದಾರೆ. ಅದರಲ್ಲೂ ರಣ್ಬೀರ್ ಗೋಮಾಂಸ ಸೇವನೆ ವಿಚಾರ ಪ್ರಸ್ತಾಪಿಸುತ್ತಿರುವವರಿಗೆ ಗಾಯಕಿ ಚಿನ್ಮಯಿ ತಿರುಗೇಟು ನೀಡಿದ್ದಾರೆ. ದೇವರ ಹೆಸರಿನಲ್ಲಿ ನಾನಾ ಅನಾಚಾರ ಮಾಡುವವರು ನಮ್ಮ ನಡುವೆ ಓಡಾಡಿಕೊಂಡಿದ್ದಾರೆ. ಹಾಗಿರುವಾಗ ಯಾರಾದರೂ ಏನಾದರೂ ತಿನ್ನುವುದು ದೊಡ್ಡ ಸಮಸ್ಯೆಯೇ ಎಂದು ಪ್ರಶ್ನಿಸಿದ್ದಾರೆ.
'ರಾಮಾಯಣ' ಟೀಸರ್ ರಿಲೀಸ್ ಬೆನ್ನಲ್ಲೇ ಶ್ರೀರಾಮನಾಗಿ ರಣ್ಬೀರ್ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಆದರೆ ನೆಟ್ಟಿಗನೊಬ್ಬ ಟ್ವೀಟ್ ಮಾಡಿ "ಗೋಮಾಂಸ ತಿನ್ನುವವನು ಶ್ರೀರಾಮನ ಪಾತ್ರ ಮಾಡ್ತಿದ್ದಾನೆ. ಈ ಬಾಲಿವುಡ್ಗೆ ಏನಾಗಿದೆ?" ಎಂದು ಬರೆದುಕೊಂಡಿದ್ದಾನೆ. ಈ ಟ್ವೀಟ್ ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ಗಾಯಕಿ ಚಿನ್ಮಯಿ ಶ್ರೀಪಾದ "ದೇವರ ಹೆಸರನ್ನು ಬಳಸಿಕೊಳ್ಳುವ ಬಾಬಾಜಿ ಅತ್ಯಾಚಾರಿಯಾಗಬಹುದು ಮತ್ತು ಆತನಿಗೆ ಪೆರೋಲ್ ಸಿಗುತ್ತಲೇ ಇರುತ್ತದೆ. ಆದರೆ ಯಾರೋ ಏನೋ ತಿನ್ನುತ್ತಾರೆ ಎನ್ನುವುದು ಇಲ್ಲಿ ದೊಡ್ಡ ಸಮಸ್ಯೆಯಾಗಿದೆ" ಎಂದು ಬರೆದುಕೊಂಡಿದ್ದಾರೆ.
ಇನ್ನು ಚಿನ್ಮಯಿ ಟ್ವೀಟ್ ಬಗ್ಗೆಯೂ ಕಾಮೆಂಟ್ ಬಾಕ್ಸ್ನಲ್ಲಿ ಪರ ವಿರೋಧ ಚರ್ಚೆಯಾಗಿದೆ. ತಮ್ಮ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡುತ್ತಿರುವವರಿಗೆ ರಿಪ್ಲೇ ಮಾಡಿ ಚಿನ್ಮಯಿ ತಕ್ಕ ಉತ್ತರ ನೀಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದು ಮತ್ತೆ ದೊಡ್ಡ ಚರ್ಚೆ ಹುಟ್ಟಾಕ್ಕುವ ಸುಳಿವು ಸಿಗುತ್ತಿದೆ.
ಬಹಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟ ರಣ್ಬೀರ್ ಕಪೂರ್ "ನಮ್ಮದು ಮಾಂಸಹಾರ ಪ್ರಿಯ ಕುಟುಂಬ. ಗೋಮಾಂಸ ಸೇರಿ ಕೆಲ ನಾನ್ ವೆಜ್ ತಿನ್ನುತ್ತೇನೆ. ಅದರಲ್ಲೂ ನನಗೆ ಗೋಮಾಂಸ ಬಹಳ ಇಷ್ಟ" ಎಂದಿದ್ದರು.


Click it and Unblock the Notifications











