ಕತ್ರೀನಾ ಜೊತೆ ನಿಶ್ಚಿತಾರ್ಥ, ಏನಿದು ರಣ್ಬೀರ್ ಮಾತಿನಾರ್ಥ?
ರಣ್ಬೀರ್ ಕಪೂರ್-ಕತ್ರೀನಾ ಕೈಫ್ ನಿಶ್ಚಿತಾರ್ಥವಾಗಿದೆಯಂತೆ. ಲಂಡನ್ ನಲ್ಲಿ ಇಬ್ಬರು ಉಂಗುರ ಬದಲಾಯಿಸಿಕೊಂಡಿದ್ದಾರಂತೆ. ಮದುವೆಗೆ ಮುಹೂರ್ತ ನಿಗದಿಯಾಗಿದೆಯಂತೆ. ಇಷ್ಟೆಲ್ಲಾ ಅಂತೆ ಕಂತೆಗಳು ಹೊಸ ವರ್ಷದ ಹಿಂದೆ ಮುಂದೆ ಬಾಲಿವುಡ್ ಅಂಗಳದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತ್ತು.
ಅಸಲಿಗೆ ಹೊಸ ವರ್ಷವನ್ನ ಈ ಬಾರಿ ಲಂಡನ್ ನಲ್ಲಿ ಬರಮಾಡಿಕೊಂಡ ಈ ಪ್ರಣಯ ಪಕ್ಷಿಗಳು ಎಂಗೇಜ್ ಆಗಿರುವುದು ನಿಜವೇ? ಈ ಪ್ರಶ್ನೆಗೆ ಖುದ್ದು ರಣ್ಬೀರ್ ಕಪೂರ್ ಉತ್ತರ ಕೊಟ್ಟಿದ್ದಾರೆ.
ಇಲ್ಲಿಯವರೆಗೂ ಗಪ್-ಚುಪ್ ಅಂತಿದ್ದ ರಣ್ಬೀರ್, ಜನಪ್ರಿಯ ದಿನಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಎಂಗೇಜ್ಮೆಂಟ್ ಸುದ್ದಿಯನ್ನ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. [ಲಂಡನ್ ನಲ್ಲಿ ಉಂಗುರ ಬದಲಾಯಿಸಿಕೊಂಡ ಕತ್ರೀನಾ-ರಣ್ಬೀರ್]

''ನಾವಿಬ್ಬರು ಮದುವೆಯಾಗುವುದಕ್ಕೆ ಸಿದ್ಧರಿದ್ದೀವಿ ಅಂತ ಗಂಡು-ಹೆಣ್ಣು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವುದೇ ಎಂಗೇಜ್ಮೆಂಟ್. ಬದುಕಿನ ಆ ಹಂತಕ್ಕೆ ನಾನಿನ್ನೂ ತಲುಪಿಲ್ಲ'' ಅಂತ ಸಂದರ್ಶನದಲ್ಲಿ ರಣ್ಬೀರ್ ಕಪೂರ್ ಹೇಳಿಕೆ ನೀಡಿದ್ದಾರೆ.
''ಸದ್ಯಕ್ಕೆ ಮದುವೆ ಬಗ್ಗೆ ಯಾವುದೇ ಪ್ಲಾನ್ ಇಲ್ಲ. ಆಗುವಾಗ ಖಂಡಿತ ಅನೌನ್ಸ್ ಮಾಡುತ್ತೀನಿ'' ಅಂತಲೂ ರಣ್ಬೀರ್ ಹೇಳಿದ್ದಾರೆ. ಅಲ್ಲಿಗೆ, ಇಷ್ಟು ದಿನ ಗುಲ್ಲೆದ್ದಿದ್ದ ಗಾಸಿಪ್ ಗೆ ಈಗ ಮುಕ್ತಿ ಸಿಕ್ಕಿದೆ. ರಣ್ಬೀರ್ ಎಂಗೇಜ್ ಆದ ಸುದ್ದಿ ಕೇಳಿ ಹಾರ್ಟ್ ಬ್ರೇಕ್ ಮಾಡಿಕೊಂಡಿದ್ದ ಹುಡುಗಿಯರು ನಿಟ್ಟುಸಿರು ಬಿಡುವಂತಾಗಿದೆ. [ತಾಳಿ ಕಟ್ಟುವ ಶುಭ ವೇಳೆಗೆ ರಣ್ಬೀರ್ ಕಪೂರ್ ರೆಡಿ]
ಅಂದ್ಹಾಗೆ, ಕತ್ರೀನಾ ಜೊತೆ ಒಂದೇ ಮನೆಯಲ್ಲಿ ವಾಸವಿರುವ ರಣ್ಬೀರ್, ''ಬದುಕಿನ ಆ ಹಂತಕ್ಕೆ ತಲುಪಿಲ್ಲ'' ಅನ್ನುವ ಮಾತಿನ ಅರ್ಥವೇನು ಅಂತ ನಮಗೆ ಕೇಳಬೇಡಿ. (ಏಜೆನ್ಸೀಸ್)


Click it and Unblock the Notifications











