ಈ ಷರತ್ತಿಗೆ ಓಕೆ ಅಂದ್ರೆ 'ಅರ್ಜುನ್ ರೆಡ್ಡಿ' ನಿರ್ದೇಶಕನ ಜೊತೆ ರಣ್ಬೀರ್ ಚಿತ್ರ!
ಅರ್ಜುನ್ ರೆಡ್ಡಿ ನಿರ್ದೇಶಕ ಸಂದಿಪ್ ವಂಗಾ ರೆಡ್ಡಿ ಮತ್ತು ಬಾಲಿವುಡ್ ನಟ ರಣ್ಬೀರ್ ಕಪೂರ್ ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾ ಬರಲಿದೆ ಎಂಬ ಚರ್ಚೆ ಸದ್ದು ಮಾಡ್ತಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಸದ್ಯದ ಮಾಹಿತಿ ಪ್ರಕಾರ, ಸಂದೀಪ್ ವಂಗಾ ರೆಡ್ಡಿ ಜೊತೆ ಸಿನಿಮಾ ಮಾಡಲು ರಣ್ಬೀರ್ ಕಪೂರ್ ಮನಸ್ಸು ಮಾಡಿದ್ದಾರೆ ಎಂದು ಹೇಳಲಾಗ್ತಿದೆ. ಆದರೆ, ನಿರ್ದೇಶಕರಿಗೆ ಒಂದು ಷರತ್ತು ಹಾಕಿದ್ದಾರೆ ಎನ್ನಲಾಗಿದೆ.
ಸಂದಿಪ್ ವಂಗಾ ರೆಡ್ಡಿ ಅವರು ಮಾಡಲಿರುವ ಸ್ಕ್ರಿಪ್ಟ್ ಬಗ್ಗೆ ಹೆಚ್ಚು ಗಮನ ಹರಿಸಲು ನಿರ್ಧರಿಸಿರುವ ರಣ್ಬೀರ್ ಕಪೂರ್, ''ಸ್ಕ್ರಿಪ್ಟ್ ಮುಗಿದ ಮೇಲೆ ಕಂಪ್ಲೀಟ್ ಆಗಿ ನನಗೆ ವಿವರಿಸಬೇಕು. ಆಮೇಲೆ ನಾನು ಪಕ್ಕಾ ಹೇಳುತ್ತೇನೆ'' ಎಂದು ತಿಳಿಸಿದ್ದಾರಂತೆ.

ಹಾಗಾಗಿ, ಅರ್ಜುನ್ ರೆಡ್ಡಿ ನಿರ್ದೇಶಕರು ಸ್ಕ್ರಿಪ್ಟ್ ಕೆಲಸದಲ್ಲಿ ತೊಡಗಿಕೊಂಡಿದ್ದು ಅದಕ್ಕಾಗಿ ಹೆಚ್ಚು ಫೋಕಸ್ ಮಾಡುತ್ತಿದ್ದಾರಂತೆ. ಮೂಲಗಳ ಪ್ರಕಾರ ಈ ಚಿತ್ರಕ್ಕೆ ಈಗಾಗಲೇ 'ಡೆವಿಲ್' ಎಂದು ಹೆಸರಿಡಲಾಗಿದೆಯಂತೆ.
ಹತ್ತು ಹದಿನೈದು ದಿನಗಳಲ್ಲಿ ಸ್ಕ್ರಿಪ್ಟ್ ಕೆಲಸ ಮುಗಿಯಲಿದ್ದು, ಬಳಿಕ ಅಧಿಕೃತವಾಗಿ ಸಿನಿಮಾ ಘೋಷಿಸಲು ನಿರ್ಧರಿಸಿದ್ದಾರಂತೆ. ಇದಕ್ಕೂ ಮುಂಚೆ ಈ ಚಿತ್ರಕ್ಕೆ ಮಹೇಶ್ ಬಾಬು ಅವರನ್ನು ಸಂಪರ್ಕಿಸಲಾಗಿತ್ತಂತೆ. ಆದರೆ, ಪ್ರಿನ್ಸ್ ಬ್ಯುಸಿ ಇದ್ದ ಕಾರಣ ಒಪ್ಪಿಕೊಂಡಿಲ್ಲ ಎಂದು ತಿಳಿದು ಬಂದಿದೆ.
ಸಂಜು ಸಿನಿಮಾದ ಸೂಪರ್ ಸಕ್ಸಸ್ ಬಳಿಕ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ನಟಿಸಿರುವ ರಣ್ಬೀರ್ ಕಪೂರ್, ಯಶ್ ರಾಜ್ ಬ್ಯಾನರ್ ನಲ್ಲೊಂದು ಸಿನಿಮಾ ಮಾಡಲಿದ್ದಾರೆ. ಈ ಚಿತ್ರದಲ್ಲಿ ವಾಣಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ.


Click it and Unblock the Notifications











