'ರಾಮಾಯಣ' ಚಿತ್ರವನ್ನು ಬೇರೆ ಭಾಷೆಗಳಿಗೆ ಡಬ್ ಮಾಡಲ್ಲ, ತಮ್ಮ ಕನಸು ಬಿಚ್ಚಿಟ್ಟ ನಿರ್ಮಾಪಕ
ಬಹುನಿರೀಕ್ಷಿತ 'ರಾಮಾಯಣ' ಸಿನಿಮಾ ಟೀಸರ್ ಬಿಡುಗಡೆಗೆ ವೇದಿಕೆ ಸಿದ್ಧವಾಗಿದೆ. ಶ್ರೀರಾಮನಾಗಿ ರಣ್ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ರಾವಣನಾಗಿ ಯಶ್ ನಟಿಸಿರುವ ಸಿನಿಮಾ ಇದು. ನಿತೇಶ್ ತಿವಾರಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. WAVES ವೇದಿಕೆಯಲ್ಲಿ ಟೀಸರ್ ಅನಾವರಣ ಆಗಲಿದೆ.
ವಾಲ್ಮೀಕಿ ರಾಮಾಯಣ ಕಾವ್ಯ ಆಧರಿಸಿ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗುತ್ತಿದೆ. ಎರಡು ಭಾಗಗಳಾಗಿ ಸಿನಿಮಾ ಕಟ್ಟಿಕೊಡುವ ಪ್ರಯತ್ನ ನಡೀತಿದೆ. ಮೊದಲ ಭಾಗ ಮುಂದಿನ ವರ್ಷ ದೀಪಾವಳಿಗೆ ತೆರೆಗೆ ಬರಲಿದೆ. ಎರಡನೇ ಭಾಗ 2027ರ ದೀಪಾವಳಿ ಪ್ರೇಕ್ಷಕರನ್ನು ರಂಜಿಸಲಿದೆ. ಬಹುಕೋಟಿ ವೆಚ್ಚದಲ್ಲಿ ಈ ಪೌರಾಣಿಕ ಚಿತ್ರವನ್ನು ತೆರೆಗೆ ತರಲಾಗ್ತಿದೆ. ಸದ್ಯ ಮುಂಬೈನಲ್ಲಿ ಸಿನಿಮಾ ಚಿತ್ರೀಕರಣ ನಡೀತಿದೆ.

ಮೊದಲ ವಿಶ್ವ ಆಡಿಯೋ ವಿಷುವಲ್ & ಎಂಟರ್ಟೈನ್ಮೆಂಟ್ ಶೃಂಗಸಭೆ (WAVES) ಮುಂಬೈನಲ್ಲಿ ನಡೀತಿದೆ. ಚಿತ್ರರಂಗದ ದಿಗ್ಗಜರು ಈ ವೇದಿಕೆಯಲ್ಲಿ ಭಾಗವಹಿಸುತ್ತಿದ್ದಾರೆ. ಅಲ್ಲೇ 'ರಾಮಾಯಣ' ಫಸ್ಟ್ ಗ್ಲಿಂಪ್ಸ್ ಪ್ರದರ್ಶನವಾಗಲಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಸದ್ಯಕ್ಕೆ ಬಿಡುಗಡೆ ಆಗುತ್ತಿಲ್ಲ. ಇದು ಸಹಜವಾಗಿಯೇ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ರಾವಣನಾಗಿ ನಟಿಸೋದು ಮಾತ್ರವಲ್ಲದೇ ಯಶ್ ಚಿತ್ರ ನಿರ್ಮಾಣಕ್ಕೂ ಕೈ ಜೋಡಿಸಿದ್ದಾರೆ.
"ನಾವು 'ರಾಮಾಯಣ' ಚಿತ್ರವನ್ನು ಜಾಗತಿಕ ಪ್ರೇಕ್ಷಕರಿಗಾಗಿ ಮಾಡಲು ಪ್ರಯತ್ನಿಸುತ್ತಿದ್ದೇವೆ. ತಂತ್ರಜ್ಞಾನದ ಸಹಾಯದಿಂದ, ನಾವು ಅದನ್ನು ವಿವಿಧ ಭಾಷೆಗಳಲ್ಲಿ ಡಬ್ ಮಾಡದೇ, ಸಬ್ಟೈಟಲ್ ಇಲ್ಲದೇ ಲಿಪ್ ಸಿಂಕ್ ಮಾಡಿ ಅದೇ ಭಾಷೆಯಲ್ಲಿ ಸಿನಿಮಾ ಮೂಡಿ ಬರುವಂತೆ ಮಾಡುತ್ತಿದ್ದೇವೆ" ಎಂದು ನಿರ್ಮಾಪಕ ನಿಮಿತ್ ಮಲ್ಹೋತ್ರಾ WAVES ಸಮಿಟ್ನಲ್ಲಿ ಹೇಳಿದ್ದಾರೆ.
ಘಟಾನುಘಟಿ ಕಲಾವಿದರು ರಾಮಾಯಣದ ವಿವಿಧ ಪಾತ್ರಗಳಿಗೆ ಜೀವ ತುಂಬುತ್ತಿದ್ದಾರೆ. ಹನುಮಂತನಾಗಿ ಸನ್ನಿ ಡಿಯೋಲ್, ಇಂದ್ರದೇವನಾಗಿ ಕುನಾಲ್ ಕಪೂರ್, ಲಕ್ಷ್ಮಣನಾಗಿ ರವಿ ದುಬೆ, ಶೂರ್ಪನಖಿಯಾಗಿ ರಕುಲ್ ಪ್ರೀತ್ಸಿಂಗ್, ಮಂಡೋದರಿಯಾಗಿ ಶಿಬಾ ಚಡ್ಡಾ, ದಶರಥನಾಗಿ ಅರುಣ್ ಗೋವಿಲ್ ಬಣ್ಣ ಹಚ್ಚಿದ್ದಾರೆ.
ಇವತ್ತಿನ ತಂತ್ರಜ್ಞಾನ ಬಳಸಿ ಬಹಳ ರೋಚಕವಾಗಿ ರಾಮಾಯಣ ಚಿತ್ರವನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗುತ್ತಿದೆ. ನಿತೇಶ್ ತಿವಾರಿ ಸಾರಥ್ಯ ವಹಿಸಿಕೊಂಡಿರುವುದು ಸಹಜವಾಗಿಯೇ ನಿರೀಕ್ಷೆ ಹುಟ್ಟಾಕ್ಕಿದೆ. ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಸಾಕಷ್ಟು ಟೀಕೆ ಎದುರಿಸಿದ ಸಿನಿಮಾ ಚಿತ್ರಮಂದಿರಗಳಲ್ಲಿ ತಕ್ಕಮಟ್ಟಿಗೆ ಸದ್ದು ಮಾಡಿದ್ದು ಸುಳ್ಳಲ್ಲ.
'ಆದಿಪುರುಷ್' ತಂಡ ಮಾಡಿದ ತಪ್ಪುಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ 'ರಾಮಾಯಣ' ಚಿತ್ರವನ್ನು ಕಟ್ಟಿಕೊಡಲಾಗುತ್ತಿದೆ. 2D ಹಾಗೂ 3D ಜೊತೆಗೆ ಐಮ್ಯಾಕ್ಸ್ ಪಾರ್ಮೆಟ್ನಲ್ಲಿ ಕೂಡ ಸಿನಿಮಾ ತೆರೆಗೆ ಬರಲಿದೆ. ನಿಮಿತ್ ಮಲ್ಹೋತ್ರಾ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ನಟ ಯಶ್ ಕೂಡ ಅವರೊಟ್ಟಿಗೆ ಕೈ ಜೋಡಿಸಿದ್ದಾರೆ. ಚಿತ್ರದಲ್ಲಿ ಸೀತೆ ಪಾತ್ರಕ್ಕೆ ಕನ್ನಡ ನಟಿ ಶ್ರೀನಿಧಿ ಶೆಟ್ಟಿ ಕೂಡ ಸ್ಕ್ರೀನ್ ಟೆಸ್ಟ್ ಕೊಟ್ಟಿದ್ದರು. ಬಳಿಕ ಯಶ್ ರಾವಣನಾಗಿ ನಟಿಸುವಾಗ ತಾವು ಸೀತೆ ಪಾತ್ರದಲ್ಲಿ ನಟಿಸೋದು ಬೇಡ ಎನಿಸಿ ಆಗಿ ಹಿಂದೆ ಸರಿದಿದ್ದರು. ಈ ಬಗ್ಗೆ ಸ್ವತಃ ಶ್ರೀನಿಧಿ ಇತ್ತೀಚೆಗೆ ಮಾಹಿತಿ ನೀಡಿದ್ದಾರೆ.
ಸದ್ಯ ರಾವಣನ ವೇಷದಲ್ಲಿ ನಟ ಯಶ್ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಮುಂಬೈನಲ್ಲಿ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗುತ್ತಿದೆ. ಇಂದ್ರದೇವ(ಕುನಾಲ್ ಕಪೂರ್) ಜೊತೆಗೆ ರಾವಣನ ಸೆಣಸಾಟದ ದೃಶ್ಯಗಳನ್ನು ಸೆರೆ ಹಿಡಿಯಲಾಗುತ್ತಿದೆ. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ದೇಶ ವಿದೇಶದ ಭಾಷೆಗಳಿಗೆ 'ರಾಮಾಯಣ' ಸಿನಿಮಾ ಡಬ್ ಆಗಿ ತೆರೆಗೆ ಬರಲಿದೆ. ಈಗಾಗಲೇ ರಣ್ಬೀರ್ ಕಪೂರ್ ಮೊದಲ ಭಾಗದ ಚಿತ್ರದಲ್ಲಿ ತಮ್ಮ ಚಿತ್ರೀಕರಣ ಮುಗಿಸಿದ್ದಾರೆ. ಶೀಘ್ರದಲ್ಲೇ ಎರಡನೇ ಭಾಗದ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ.
ಅಂದಹಾಗೆ ಸೀತಾಪಹರಣದ ಸನ್ನಿವೇಶದವರೆಗೆ ಮಾತ್ರ ಮೊದಲ ಭಾಗದ ಸಿನಿಮಾ ಇರಲಿದೆ. ರಾಮ ಹಾಗೂ ರಾವಣ ಭೇಟಿಯ ಸನ್ನಿವೇಶಗಳು ಬಹಳ ಕಮ್ಮಿ ಇರುತ್ತದೆ. 2ನೇ ಭಾಗದಲ್ಲಿ ಸುಂದರ ಕಾಂಡ, ಯುದ್ಧಕಾಂಡದ ಸನ್ನಿವೇಶಗಳು ಇರಲಿದೆ. ಹಾಗಾಗಿ ಮೊದಲ ಭಾಗದಲ್ಲಿ ಯಶ್ ಸ್ಕ್ರೀನ್ ಸ್ಪೇಸ್ ಕಮ್ಮಿ ಇರಲಿದೆ.


Click it and Unblock the Notifications











