Ranbir Kapoor: ಬೆಟ್ಟಿಂಗ್ ಆಪ್ ಪ್ರಕರಣ: ನಟ ರಣ್ಬೀರ್ ಕಪೂರ್ಗೆ ಇಡಿ ಸಮನ್ಸ್ ಜಾರಿ
ಮಹದೇವ್ ಆನ್ಲೈನ್ ಬೆಟ್ಟಿಂಗ್ ಆಪ್ ಪ್ರಕರಣದಲ್ಲಿ ಬಾಲಿವುಡ್ ಸ್ಟಾರ್ ಹೀರೋ ರಣಬೀರ್ ಕಪೂರ್ಗೆ ಜಾರಿ ನಿರ್ದೇಶನಾಲಯ (ಇಡಿ) ನೋಟಿಸ್ ನೀಡಿದೆ. ಇದೇ ತಿಂಗಳ 6ರಂದು ವಿಚಾರಣೆಗೆ ಹಾಜರಾಗಬೇಕು ಎಂದು ತಿಳಿಸಲಾಗಿದೆ. ಇತ್ತೀಚೆಗೆ ಮಹದೇವ್ ಆನ್ಲೈನ್ ಬೆಟ್ಟಿಂಗ್ ಆಪ್ ಪ್ರಕರಣದ ತನಿಖೆ ನಡೆಸಿ ರೂ.417 ಕೋಟಿ ಮೌಲ್ಯದ ಆಸ್ತಿಯನ್ನು ಸೀಜ್ ಮಾಡಿದ್ದಾರೆ.
ಬೆಟ್ಟಿಂಗ್ ಆಪ್ ಹೆಸರನಲ್ಲಿ ನಡೆಯುತ್ತಿರುವ ಭಾರೀ ಅವ್ಯವಹಾರವನ್ನು ಇಡಿ ಬಯಲು ಮಾಡಿತ್ತು. ಆನ್ಲೈನ್ ಬೆಟ್ಟಿಂಗ್ ನಡೆಸುವ ಮಹದೇವ್ ಆಪ್ ಅನ್ನು ರಣಬೀರ್ ಕಪೂರ್ ಪ್ರಮೋಟ್ ಮಾಡುತ್ತಿದ್ದಾರೆ ಎಂದು ಇಡಿ ಹೇಳಿದೆ. ಆ್ಯಪ್ ಪ್ರಚಾರಕ್ಕಾಗಿ ರಣಬೀರ್ ಹಣ ತೆಗೆದುಕೊಂಡಿದ್ದಾರೆ ಎಂದು ಇಡಿ ಮೂಲಗಳು ತಿಳಿಸಿವೆ. ಇಡಿ ಜೊತೆಗೆ ಹಲವು ರಾಜ್ಯಗಳ ಪೊಲೀಸರು ಈ ಆಪ್ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಸೌರಭ್ ಚಂದ್ರಖರ್ ಮತ್ತು ರವಿ ಉಪ್ಪಲ್ ಛತ್ತೀಸ್ಗಢದವರು. ಇವರಿಬ್ಬರು ಮಹದೇವ್ ಬೆಟ್ಟಿಂಗ್ ಆಪ್ ಪ್ರಮೋಟರ್ ಆಗಿದ್ದಾರೆ. ದುಬೈನ ಕೇಂದ್ರವಾಗಿಟ್ಟುಕೊಂಡು ಭಾರತದಲ್ಲಿ ಮಹಾದೇವ ಬೆಟ್ಟಿಂಗ್ ಆಪ್ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಆದರೆ ಬೆಟ್ಟಿಂಗ್ ಹೆಸರಿನಲ್ಲಿ ಅಕ್ರಮ ಹಣ ವರ್ಗಾವಣೆ ಮಾಡುತ್ತಿರುವುದನ್ನು ಇಡಿ ಪತ್ತೆ ಹಚ್ಚಿದೆ. ಬೆಟ್ಟಿಂಗ್ನಿಂದ ಬರುವ ಆದಾಯವನ್ನು ವರ್ಗಾಯಿಸಲು ಹವಾಲಾ ಮಾರ್ಗ ಅನುಸರಿಸುತ್ತಿರುವುದು ಇಡಿ ತನಿಖೆಯಿಂದ ತಿಳಿದುಬಂದಿದೆ. ಈ ಜಾಲದೊಂದಿಗೆ ಸಂಪರ್ಕ ಹೊಂದಿರುವ ಕೋಲ್ಕತ್ತಾ, ಭೋಪಾಲ್ ಮತ್ತು ಮುಂಬೈನಂತಹ ನಗರಗಳಲ್ಲಿ ಇಡಿ ಶೋಧ ನಡೆಸಿ ಭಾರೀ ಮೊತ್ತವನ್ನು ವಶಪಡಿಸಿಕೊಂಡಿದೆ.
ಮಹಾದೇವ್ ಬೆಟ್ಟಿಂಗ್ ಆ್ಯಪ್ನ ಪ್ರಮೋಟರ್ಗಳಲ್ಲಿ ಒಬ್ಬರಾದ ಸೌರಭ್ ಚಂದ್ರಕರ್ ಈ ವರ್ಷ ಫೆಬ್ರವರಿಯಲ್ಲಿ ಯುಎಇಯಲ್ಲಿ ಅದ್ಧೂರಿಯಾಗಿ ವಿವಾಹವಾದರು. ಈ ಮದುವೆಗೆ ರೂ.200 ಕೋಟಿ ಖರ್ಚು ಮಾಡಲಾಗಿದೆಯಂತೆ. ಬಾಲಿವುಡ್ ಸೆಲೆಬ್ರಿಟಿಗಳಾದ ಅತೀಫ್ ಅಸ್ಲಾಂ, ರಾಹತ್ ಫತೇಹ್ ಅಲಿ ಖಾನ್, ಅಲಿ ಅಜ್ಗರ್, ವಿಶಾಲ್ ದದ್ಲಾನಿ, ಟೈಗರ್ ಶ್ರಾಫ್, ನೇಹಾ ಕಕ್ಕರ್, ಎಲ್ಲಿ ಅವ್ರಾಮ್, ಭಾರತಿ ಸಿಂಗ್, ಸನ್ನಿ ಲಿಯೋನ್, ಭಾಗ್ಯಶ್ರೀ, ಪುಲ್ಕಿತ್, ಕೀರ್ತಿ ಖಬಂದಾ, ನುಶ್ರತ್ ಭರುಚಾ, ಕೃಷ್ಣ ಅಭಿಷೇಕ್ ಭಾಗಿ ಆಗಿದ್ದರು ಎನ್ನಲಾಗಿತ್ತು.
ಸೌರಭ್ ಚಂದ್ರಕರ್ ಮದುವೆಯಲ್ಲಿ ಪಾಲ್ಗೊಂಡಿದ್ದ ಸೆಲೆಬ್ರೆಟಿಗಳ ಮೇಲೆ ಇಡಿ ಗಮನ ಹರಿಸಿದೆ. ಈ ಕಾರಣಕ್ಕೆ ನಟ ರಣಬೀರ್ ಕಪೂರ್ಗೆ ನೋಟಿಸ್ ಜಾರಿಯಾಗಿದೆ. ಇನ್ನು 17 ಮಂದಿ ಕಲಾವಿದರಿಗೆ ಶೀಘ್ರದಲ್ಲೇ ನೋಟಿಸ್ ನೀಡಲು ಇಡಿ ಮುಂದಾಗಿದೆಯಂತೆ. ಒಟ್ನಲ್ಲಿ ಈ ವಿಚಾರ ಈಗ ಬಾಲಿವುಡ್ನಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ.
ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ ನಟ ರಣ್ಬೀರ್ ನಟನೆಯ 'ಅನಿಮಲ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇತ್ತೀಚೆಗೆ ಚಿತ್ರದ ಟೀಸರ್ ರಿಲೀಸ್ ಆಗಿ ಸದ್ದು ಮಾಡಡಿತ್ತು. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಮಿಂಚಿದ್ದಾರೆ. 2 ವಿಭಿನ್ನ ಶೇಡ್ಗಳಿರುವ ಪಾತ್ರದಲ್ಲಿ ರಣ್ಬೀರ್ ಅಬ್ಬರಿಸಲು ಬರ್ತಿದ್ದಾರೆ. ಡಿಸೆಂಬರ್ ಮೊದಲ ವಾರದಲ್ಲಿ 'ಅನಿಮಲ್' ಸಿನಿಮಾ ತೆರೆಗೆ ಬರಲಿದೆ.
ರಾಮಾಯಣ ಕಾವ್ಯ ಆಧರಿಸಿ ಬಾಲಿವುಡ್ನಲ್ಲಿ ಅದ್ಧೂರಿ ಚಿತ್ರವೊಂದಕ್ಕೆ ಸಿದ್ಧತೆ ನಡೀತಿದೆ. ನಿತೇಶ್ ತಿವಾರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು ಶ್ರೀರಾಮನ ಪಾತ್ರದಲ್ಲಿ ರಣ್ಬೀರ್ ಕಪೂರ್ ನಟಿಸುವ ಬಗ್ಗೆ ಚರ್ಚೆ ನಡೀತಿದೆ. ಸೀತೆಯಾಗಿ ಸಾಯಿಪಲ್ಲವಿ ಹಾಗೂ ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ನಟಿಸುವ ಬಗ್ಗೆ ಮಾತುಗಳು ಕೇಳಿಬರ್ತಿದೆ. ಆದರೆ ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಸಿಗಬೇಕಿದೆ.


Click it and Unblock the Notifications











