ಸಿನಿಮಾಗಾಗಿ ಮಾಂಸ, ಮದ್ಯ ಸೇವನೆ ಬಿಟ್ಟ ರಣಬೀರ್ ಕಪೂರ್: ಪಿಆರ್ ಸ್ಟಂಟ್ ಎಂದ ಫ್ಯಾನ್ಸ್!
ನೆನಪಿದೆಯಾ ನಿಮಗೆ ಹಿಂದೂ ಮಹಾಕಾವ್ಯ ರಾಮಾಯಣವನ್ನು ತುಂಬಾ ಚೆನ್ನಾಗಿ ತೋರಿಸುತ್ತೇವೆ ಎಂದು ಆದಿಪುರುಷ್ ಎಂಬ ಸಿನಿಮಾವನ್ನು ಬಾಲಿವುಡ್ನಲ್ಲಿ ಮಾಡಲಾಗಿತ್ತು. ಬಾಹುಬಲಿ ಖ್ಯಾತಿಯ ಪ್ರಭಾಸ್, ಕೃತಿ ಸನನ್ ಮತ್ತು ಸೈಫ್ ಅಲಿ ಖಾನ್ ನಟಿಸಿದ ಈ ಸಿನಿಮಾಗೆ ಕೆಟ್ಟ ಪ್ರತಿಕ್ರಿಯೆ ಮತ್ತು ಆಕ್ರೋಶ ವ್ಯಕ್ತವಾಗಿತ್ತು. ಗಲ್ಲಾ ಪೆಟ್ಟಿಗೆಯಲ್ಲಿಯೂ ಕುಸಿದಿತ್ತು. ಈಗ ಮತ್ತೊಂದು ರಾಮಾಯಣಕ್ಕೆ ಬಾಲಿವುಡ್ ತಯಾರಾಗಿದೆ.
ಆದಿಪುರುಷ್ ಸಿನಿಮಾಗೆ ವ್ಯಕ್ತವಾಗಿದ್ದ ಟೀಕೆಯನ್ನು ಕಂಡಿರುವ ನಿತೇಶ್ ತಿವಾರಿಯವರು ತಮ್ಮ ಮುಂಬರುವ ರಾಮಾಯಣ ಸಿನಿಮಾವನ್ನು ಅಚ್ಚುಕಟ್ಟಾಗಿ ಮಾಡುವುದಾಗಿ ಹೇಳಿದ್ದಾರೆ. ಚಿತ್ರದ ಪಾತ್ರವರ್ಗ, ಸೆಟ್, ಚಿತ್ರಕಥೆ ಎಲ್ಲದರ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಲಾಗುತ್ತಿದೆ. ಯಾವುದೇ ಒಂದು ತಪ್ಪಾಗಬಾರದು ಎಂದುಕೊಂಡಿದ್ದಾರೆ. ಈಗ ಮತ್ತೊಂದು ವಿಷಯ ಹೊರಬಂದಿದೆ.

ಮದ್ಯ, ಮಾಂಸ ಬಿಟ್ಟ ನಟ ರಣಬೀರ್ ಕಪೂರ್!
ನಿತೇಶ್ ತಿವಾರಿ ಅವರ ರಾಮಾಯಣದಲ್ಲಿ ರಾಮನ ಪಾತ್ರದಲ್ಲಿ ರಣಬೀರ್ ಕಪೂರ್, ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದು, ರಾವಣನಾಗಿ ಯಶ್ ಬಾಲಿವುಡ್ಗೆ ಕಾಲಿಡಲಿದ್ದಾರೆ ಎಂದು ವರದಿಯಾಗಿದೆ. ಇತ್ತೀಚಿನ ವರದಿಗಳ ಪ್ರಕಾರ ರಾಮಾಯಣದ ಚಿತ್ರೀಕರಣದ ಸಮಯದಲ್ಲಿ 'ಸ್ವಯಂ ಸಂಯಮದ ಜೀವನಶೈಲಿಯನ್ನು' ಅನುಸರಿಸಬೇಕು ಎಂದು ಪಾತ್ರವರ್ಗಕ್ಕೆ ತಿಳಿಸಲಾಗಿದೆಯಂತೆ.
ರಣಬೀರ್ ಕಪೂರ್ ರಾಮನ ಪಾತ್ರ ಕಾಣಿಸಿಕೊಳ್ಳುತ್ತಿರುವುದಕ್ಕೆ ಈಗಾಗಲೇ ಹಲವು ವಿರೋಧಗಳಿವೆ. ಅವರ ಜೀವನ ಶೈಲಿಗೂ ಭಗವಾನ್ ರಾಮನಿಗೂ ಸಾಕಷ್ಟು ವ್ಯತ್ಯಾಸವಿದೆ ಎಂದು ಭಕ್ತರು ಹೇಳುತ್ತಿದ್ದಾರೆ. ಹೀಗಾಗಿ ತಮ್ಮ ಇಮೇಜ್ ಸರಿ ಮಾಡಿಕೊಳ್ಳಲು ನಟ ನಿರ್ಧರಿಸಿದ್ದು, ತಮ್ಮ ಆಹಾರ ಪದ್ಧತಿ ಬದಲಾಯಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.
ಹೀಗಾಗಿ ರಾಮಾಯಣದ ಚಿತ್ರೀಕರಣದ ಸಮಯದಲ್ಲಿ ರಣಬೀರ್ ಕಪೂರ್ ಮದ್ಯ ಮತ್ತು ಮಾಂಸದಿಂದ ದೂರವಿರುತ್ತಾರೆ ಎಂದು ಮೂಲಗಳು ತಿಳಿಸಿವೆ. "ಇವು ಕೇವಲ ತಮ್ಮ ಇಮೇಜ್ಗಾಗಿ ಮಾಡುತ್ತಿರುವ ಕೆಲಸವಲ್ಲ. ಆದರೆ ಸಿನಿಮಾಗಾಗಿ ನಟ ರಣಬೀರ್ ಶ್ರೀರಾಮನಂತೆ ಪರಿಶುದ್ಧವಾಗಿರಲು ಬಯಸುತ್ತಾರೆ. ಅದೇನೇ ಇರಲಿ, ರಣಬೀರ್ ತಡರಾತ್ರಿ ಮತ್ತು ವೈಲ್ಡ್ ಪಾರ್ಟಿಗಳಿಗೆ ಹೋಗುವುದಿಲ್ಲ" ಎನ್ನಲಾಗಿದೆ.

ಸಿನಿಮಾದಲ್ಲಿ ಸೀತಾ ಪಾತ್ರದಲ್ಲಿ ನಟಿಸಲಿರುವ ಸೌತ್ ಬ್ಯೂಟಿ ಸಾಯಿ ಪಲ್ಲವಿ ತುಂಬಾ ಕ್ಲೀನ್. ಅವರ ಸುತ್ತ ಯಾವುದೇ ವಿವಾದವಿಲ್ಲ. ಆದರೆ, ರಣಬೀರ್ ಕಪೂರ್ ಹಾಗಲ್ಲ. ಅವರ ಜೀವನ ಸಕತ್ ಕಲರ್ ಫುಲ್ ಆಗಿದೆ ಎಂದಿದ್ದಾರೆ.
ಇದು ಪಬ್ಲಿಸಿಟಿ ಸ್ಟಂಟ್ ಎಂದ ನೆಟ್ಟಿಗರು
ಈ ಸುದ್ದಿ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದ್ದ ಹಾಗೆಯೇ ರಣಬೀರ್ ಕಪೂರ್ ಅಭಿಮಾನಿಗಳು ಅವರನ್ನು ಹೊಗಳುತ್ತಿದ್ದರೇ, ಮತ್ತೆ ಕೆಲವರು ಇದು ಕೇವಲ 'ಪಿಆರ್ ಸ್ಟಂಟ್' ಎಂದು ಕರೆಯುತ್ತಿದ್ದಾರೆ. ನೆಟ್ಟಿಗರೊಬ್ಬರು, "ಧನ್ಯವಾದಗಳು. ನನ್ನ ಕಣ್ಣಲ್ಲಿ ನೀರು ಬರತೊಡಗಿದೆ. ರಾಮನಿಗೆ ಅರ್ಪಿಸುವ ಮೊದಲು ಶಬರಿಯು ಸೋಯಾ ಮಿಲ್ಕ್ಶೇಕ್ ಅನ್ನು ಸವಿಯುವ ದೃಶ್ಯವನ್ನು ಕಲ್ಪಿಸಿಕೊಂಡೆ" ಎಂದು ವ್ಯಂಗ್ಯವಾಡಿದ್ದಾರೆ.
ರಾಮಾಯಣ
ನಿರ್ದೇಶಕ ನಿತೇಶ್ ತಿವಾರಿಯವರ ರಾಮಾಯಣ ಸಿನಿಮಾವನ್ನು ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲ. ಆದರೆ ವರದಿಗಳ ಪ್ರಕಾರ, ಚಿತ್ರವು ಈಗಾಗಲೇ ಪ್ರಿ-ಪ್ರೊಡಕ್ಷನ್ ಹಂತದಲ್ಲಿದೆ. ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನಾಗಿ ನಟಿಸಿಲಿದ್ದಾರೆ. ಆದರೆ, ನಟ ಯಶ್ ಈ ಸಿನಿಮಾದಲ್ಲಿ ರಾವಣನಾಗಿ ನಟಿಸಲು ಒಪ್ಪಿಕೊಂಡಿದ್ದಾರೋ ಇಲ್ಲವೋ ಎನ್ನುವ ಬಗ್ಗೆ ಇನ್ನು ಅಧಿಕೃತ ಮಾಹಿತಿ ಸಿಕ್ಕಿಲ್ಲ.


Click it and Unblock the Notifications











