''ರಾಜಕೀಯ ಕಾರಣಗಳಿಂದ ಸಾವರ್ಕರ್ಗೆ ಸಿಗಬೇಕಾದ ಮನ್ನಣೆ ಸಿಗಲಿಲ್ಲ'' - ರಣ್ದೀಪ್ ಹೂಡ...!
ಸಿನಿಮಾಗಾಗಿ 'ಬೆವರು' ಅಷ್ಟೇ ಅಲ್ಲ ಕೆಲವರು 'ರಕ್ತ' ಬಸಿದು ಕೆಲಸ ಮಾಡುತ್ತಾರೆ. ಆ ಪೈಕಿ 'ರಣ್ದೀಪ್ ಹೂಡ' ಕೂಡ ಒಬ್ಬರು. ಪಾತ್ರಕ್ಕಾಗಿ 'ತನು-ಮನ'ವನ್ನೇ ಅರ್ಪಿಸುವ ರಣ್ದೀಪ್ ಹೂಡ ತಮ್ಮ ನಿರ್ದೇಶನದ 'ಸ್ವಾತಂತ್ರ್ಯ ವೀರ ಸಾವರ್ಕರ್' ಚಿತ್ರಕ್ಕೆ ತಮ್ಮ 'ಪ್ರಾಣ'ವನ್ನೇ ಪಣಕ್ಕಿಟ್ಟಿದ್ದರು. ಪಾತ್ರಕ್ಕೆ ನ್ಯಾಯ ಸಲ್ಲಿಸಲು '30 ಕೆ.ಜಿ' ತೂಕವನ್ನೂ ಇಳಿಸಿಕೊಂಡಿದ್ದರು.
ಆದರೆ 'ಸ್ವಾತಂತ್ರ ವೀರ್ ಸಾವರ್ಕರ್' ಚಿತ್ರಕ್ಕೆ ರಣದೀಪ್ ಹೂಡಾ 30 ಕೆಜಿ ತೂಕ ಇಳಿಸಿಕೊಂಡಿದ್ದಷ್ಟೇ ಬಂತು, ಮೊದಲ ದಿನ ಚಿತ್ರ ಚಮೂರು ಕೋಟಿಯನ್ನ ಕೂಡ ಗಳಿಸಿರಲಿಲ್ಲ. ಹೀಗಾಗಿಯೇ ಚಿತ್ರ ಬಿಡುಗಡೆಯಾದ ನಂತರ ತಮ್ಮ ಮನದ ನೋವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದ ರಣ್ದೀಪ್ ಹೂಡಾ ನಿರೀಕ್ಷಿತ ಬೆಂಬಲ ಹಾಗೂ ಪ್ರೋತ್ಸಾಹ ನನ್ನ ಚಿತ್ರಕ್ಕೆ ಸಿಕ್ಕಿಲ್ಲ ಎಂದು ಬೇಸರ ಮಾಡಿಕೊಂಡಿದ್ದರು. ಆ ನಂತರ ನಮ್ಮ ಸ್ವಾತಂತ್ರ್ಯ ವೀರ್ ಸಾವರ್ಕರ್ ಚಿತ್ರ ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಆಸ್ಕರ್ಗೆ ಆಯ್ಕೆಯಾಗಿದೆ ಎಂದು ಸುಳ್ಳು ಹೇಳಿದರು. ಅನವಶ್ಯಕ ಗೊಂದಲವನ್ನು ಸೃಷ್ಟಿಸಿ ನಗೆಪಾಟಲಿಗೆ ಕೂಡ ಈಡಾದರು.

ಇಂಥಾ ರಣ್ದೀಪ್ ಹೂಡ ಈಗ ಗೋವಾದಲ್ಲಿ ನಡೆಯುತ್ತಿರುವ 55ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ಭಾಗಿಯಾಗಿದ್ದಾರೆ. ಭಾರತೀಯ ಪನೋರಾಮ ವಿಭಾಗದಲ್ಲಿ ಚಿತ್ರ ಪ್ರದರ್ಶನಗೊಂಡ ನಂತರ ಸಂವಾದದಲ್ಲಿ ಭಾಗಿಯಾಗಿ ಚಿತ್ರದ ಕುರಿತು ಮತ್ತು ಸಾವರ್ಕರ್ ಅವರ ಕುರಿತು ಕೆಲ ವಿಚಾರ ಹಂಚಿಕೊಂಡಿದ್ದಾರೆ. ಭಾರತವನ್ನು ಬಲಿಷ್ಠವಾಗಿ ಕಾಣಬೇಕೆಂದು ಸಾವರ್ಕರ್ ಬಯಸಿದ್ದರು ಅದ್ರಂತೆ ಇಂದು ಭಾರತದ ಪ್ರಭಾವ ಜಾಗತಿಕ ಮಟ್ಟದಲ್ಲಿ ಹಿಂದೆಂದಿಗಿಂತ ಹೆಚ್ಚಿದೆ ಎಂದಿರುವ ರಣ್ದೀಪ್ ಹೂಡ ರಾಜಕೀಯದ ಕಾರಣಗಳಿಂದಾಗಿ ಸ್ವಾತಂತ್ರ್ಯ ಸೇನಾನಿ ವೀರ್ ಸಾವರ್ಕರ್ ಅವರಿಗೆ ಸಿಗಬೇಕಾದ ಮನ್ನಣೆ ಸಿಗಲಿಲ್ಲ ಎಂದಿದ್ದಾರೆ. ಸಾವರ್ಕರ್ ಅವರಂತೆ ತೆರೆ ಮರೆಗೆ ಸರಿದ ಅನೇಕ ಸ್ವಾತಂತ್ರ್ಯ ಯೋಧರ ಕಥೆಗಳನ್ನು ಹೇಳಬೇಕಿದೆ ಎಂದಿದ್ದಾರೆ.
ಸಾವರ್ಕರ್ ಅವರಿಗೆ ಸಂಬಂಧಿಸಿದ ಚರ್ಚೆಯನ್ನು ನಾನು ಮೊದಲಿಂದ ಮಾಡುತ್ತಿದ್ದೆ ಎಂದಿರುವ ರಣ್ದೀಪ್ ಹೂಡ, ಸಾವರ್ಕರ್ ಕುರಿತು ಚಿತ್ರ ಮಾಡಬೇಕೆಂಬ ಆಸೆ ಇತ್ತು. ಅದೃಷ್ಟವಶಾತ್ ಆ ಪಾತ್ರಕ್ಕೆ ನಾನೇ ಆಯ್ಕೆಯಾದೆ, ಪಾತ್ರಕ್ಕೆ ನ್ಯಾಯ ಸಲ್ಲಿಸಲು ಅವರ ಕುರಿತು ಹೆಚ್ಚೆಚ್ಚು ಕೃತಿಗಳನ್ನು ಓದುತ್ತಾ ಹೋದಂತೆ ನಾನೇ ನಿರ್ದೇಶನವನ್ನು ಮಾಡಲು ನಿರ್ಧಾರ ಮಾಡಿದೆ ಎಂದಿದ್ದಾರೆ. ತೆರೆ ಮರೆಯಲ್ಲಿದ್ದ ನಾಯಕನ ಕುರಿತು ಸಾಕಷ್ಟು ವಿಚಾರ ಹೇಳುವ ಅವಕಾಶ ನನಗೆ ಸಿಕ್ಕಿದ್ದಕ್ಕೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.
ಇನ್ನೂ ಕೇವಲ ಅಹಿಂಸೆಯಿಂದ ನಾವು ಸ್ವಾತಂತ್ರ್ಯ ಪಡೆದೆವು ಎಂದು ಹೇಳುವುದು ಸರಿ ಅಲ್ಲ ಎನ್ನುವುದು ನನ್ನ ಭಾವನೆ ಯಾಕೆಂದರೆ ಭಗತ್ ಸಿಂಗ್ ರಿಂದ ಹಿಡಿದು ವೀರ ಸಾವರ್ಕರ್ ವರೆಗೂ ಸಾಕಷ್ಟು ಕ್ರಾಂತಿಕಾರಿಗಳು ಈ ಮಾರ್ಗದಲ್ಲಿ ತಮ್ಮ ಬಲಿದಾನವನ್ನು ಮಾಡಿದ್ದಾರೆ ಎಂದಿರುವ ರಣ್ದೀಪ್ ಹೂಡ ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ವೀರರ ಬಗ್ಗೆ ಸಿನಿಮಾ ಮಾಡಬೇಕೆಂಬ ಆಲೋಚನೆ ಇದೆ ಎಂದಿದ್ದಾರೆ. ಸಾವರ್ಕರ್ ಅವರ ಬದುಕಿನ ಕಥೆಯಲ್ಲಿ ಬಹಳ ಪ್ರಮುಖ ಅಧ್ಯಾಯವಾದ ಅಂಡಮಾನ್ ನ ಸೆಲ್ಯುಲಾರ್ ಜೈಲಿನ ಬಗ್ಗೆ ವಿವರಿಸುತ್ತಾ, ಚಿತ್ರದ ಆ ಭಾಗವನ್ನು ಅಲ್ಲಿಯೇ ಚಿತ್ರೀಕರಿಸಿದ್ದೇವೆ ಎಂದು ಹೇಳಿದ್ದಾರೆ. ಹೊರ ದೇಶಗಳಲ್ಲಿ ಓಟಿಟಿ ಮೂಲಕ ನನ್ನ ಅನೇಕ ಸ್ನೇಹಿತರು ಮತ್ತು ಅಭಿಮಾನಿಗಳು ಈ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ, ಇಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದಲ್ಲಿ ಚಿತ್ರ ಪ್ರದರ್ಶನ ಕಂಡಿದೆ. ಖುಷಿ ಪಡಲು ಇದಕ್ಕಿಂತ ಇನ್ನೇನು ಬೇಕು ಎಂದು ಕೂಡ ರಣ್ ದೀಪ್ ಹೂಡ ಹೇಳಿದ್ದಾರೆ.


Click it and Unblock the Notifications











