ಚಿತ್ರ 'ಲೋಕಃ' ಗೆದ್ದ ಸುಂದರಿಗೆ ರತ್ನಗಂಬಳಿ ಹಾಕಿದ ಬಾಲಿವುಡ್, ರಣ್ವೀರ್ ಸಿಂಗ್ಗೆ ನಾಯಕಿಯಾದ ಕಲ್ಯಾಣಿ ಪ್ರಿಯದರ್ಶನ್
ಕೇವಲ ಒಂದೇ ಒಂದು ಚಿತ್ರದಲ್ಲಿ ಅಭಿನಯಿಸಿದರೆ ಸಾಕು, ಕೆಲ ನಾಯಕಿಯರಿಗೆ ಅವಕಾಶಗಳ ಹೆಬ್ಬಾಗಿಲೇ ತೆರೆದು ಬಿಡುತ್ತೆ. ಬೇಡ ಬೇಡ ಅಂದರೂ ಅವಕಾಶಗಳು ಹುಡುಕಿಕೊಂಡು ಬರುತ್ತಾವೆ. ನೋಡ .. ನೋಡುತ್ತಲೇ .. ಇವರು ತಮ್ಮ ಭಾಷೆಯ ಚಿತ್ರರಂಗದಿಂದಲೇ ಮರೆಯಾಗಿ ಬೇರೆ ಭಾಷೆಗಳಿಗೆ ಹಾರಿ ಅಲ್ಲಿ ಮಿರ ಮಿರ ಮಿಂಚಲು ಶುರು ಮಾಡುತ್ತಾರೆ. ಖ್ಯಾತಿಯ ಉತ್ತುಂಗಕ್ಕೇರುತ್ತಾರೆ.
ಇದಕ್ಕೆ ನಮ್ಮ ಕನ್ನಡದಲ್ಲಿಯೇ ರಶ್ಮಿಕಾ ಮಂದಣ್ಣ .. ಶ್ರೀಲೀಲಾ .. ರುಕ್ಮಿಣಿ ವಸಂತ್ .. ಸೇರಿ ಹಲವಾರು ಉದಾಹರಣೆಗಳಿವೆ. ಇನ್ನೂ ಅಕ್ಕ-ಪಕ್ಕದ ರಾಜ್ಯದಲ್ಲಿ ಕೂಡ ಹಲವರು ತಮ್ಮ ಭಾಷೆಯಿಂದ ಬೇರೆ ಭಾಷೆಗೆ ವಲಸೆ ಹೋಗಿ ಗೆದ್ದಿದ್ದಾರೆ. ಸದ್ಯ ಇದೇ ಸಾಲಿಗೆ ಕಲ್ಯಾಣಿ ಪ್ರಿಯದರ್ಶನ್ ಕೂಡ ಸೇರಿಕೊಂಡಿದ್ದಾರೆ.

ಹೌದು, ಕಲ್ಯಾಣಿ ಪ್ರಿಯದರ್ಶನ್.. ಪುರುಷ ಪ್ರಧಾನ ಚಿತ್ರರಂಗದಲ್ಲಿ ಮಹಿಳಾ ಕಥೆಯನ್ನಾಧರಿಸಿದ ''ಲೋಕ : ಚಾಪ್ಟರ್ 1'' ಚಿತ್ರದ ಮೂಲಕ ಎಲ್ಲರನ್ನು ನಿಬ್ಬೇರಗಾಗಿಸಿದ ಚೆಲುವೆ. ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿಯೇ 300 ಕೋಟಿ ಹಣವನ್ನು ಕೊಳ್ಳೆ ಹೊಡೆದ ಮೊದಲ ಚಿತ್ರ ಎನ್ನುವ ಹೆಗ್ಗಳಿಕೆ ಈ ಚಿತ್ರಕ್ಕಿದೆ.
2017ರಲ್ಲಿ ''ಹಲೋ'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಕಲ್ಯಾಣಿ ಇಲ್ಲಿಯವರೆಗೆ 3 ಬ್ಲಾಕ್ಬಸ್ಟರ್ ಚಿತ್ರಗಳನ್ನು ನೀಡಿದ್ದಾರೆ. 2 ಸೂಪರ್ ಹಿಟ್ ಮತ್ತೊಂದು ಹಿಟ್ ಚಿತ್ರಗಳನ್ನು ಕೂಡ ನೀಡಿದ್ದಾರೆ. ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಮಿಂಚಿದ್ದಾರೆ.
ಇಂಥಾ ಕಲ್ಯಾಣಿ ಪ್ರಿಯದರ್ಶನ್ ಅವರಿಗೆ ಸದ್ಯ ಹಿಂದಿ ಚಿತ್ರರಂಗ ರತ್ನಗಂಬಳಿಯನ್ನು ಹಾಕಿದೆ. ''ಧುರಂಧರ್'' ಗೆಲುವಿನ ಅಲೆಯಲ್ಲಿ ತೇಲುತ್ತಿರುವ ರಣವೀರ್ ಸಿಂಗ್ಗೆ ನಾಯಕಿಯಾಗುವ ಸುವರ್ಣ ಅವಕಾಶ ಕಲ್ಯಾಣಿಗೆ ಸಿಕ್ಕಿದೆ. ಹೌದು, ದೀಪಿಕಾ ಪಡುಕೋಣೆಯ ಗಂಡ ರಣ್ವೀರ್ ಸಿಂಗ್ ಕಳೆದ ಕೆಲ ವರ್ಷಗಳಿಂದ ಮಂಕಾಗಿದ್ದರು. ಹೊಸಬರ ಹಾವಳಿ.. ಹಳಬರ ಗುಂಪುಗಾರಿಕೆ.. ರಣವೀರ್ ಸಿಂಗ್ ಹೈರಾಣಾಗಿದ್ದರು. ರಣ್ವೀರ್ ಅಭಿನಯದ ಸಾಲು ಸಾಲು ಸಿನಿಮಾಗಳು ಶುರುವಾದಷ್ಟೇ ಬೇಗ ನಿಂತು ಹೋಗುತ್ತಿದ್ದವು.
ಕರಣ್ ಜೋಹರ್ ನಿರ್ಮಾಣದ ''ತಖ್ತ್''.. ಶಂಕರ್ ನಿರ್ದೇಶನದಲ್ಲಿ ಬರಬೇಕಿದ್ದ ''ಅನ್ನಿಯನ್'' ಚಿತ್ರದ ರಿಮೇಕ್.. ಹನುಮಾನ ನಿರ್ದೇಶಕ ಪ್ರಶಾಂತ್ ವರ್ಮಾ ನಿರ್ದೇಶನದ ''ರಾಕ್ಷಸ್''.. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ''ಬೈಜೂ ಬವರಾ''.. , ಹೀಗೆ ಅನೇಕ ಸಿನಿಮಾಗಳು ಇನ್ನೇನು ಪ್ರಾರಂಭವಾಗಬೇಕು ಎನ್ನುವಷ್ಟರಲ್ಲಿ ಒಂದಿಲ್ಲೊಂದು ವಿಘ್ನಗಳಿಂದಾಗಿ ನಿಂತು ಹೋದವು.

ಆದರೆ ಈಗ ವರ್ಷಗಳ ನಂತರ ರಣವೀರ್ ಸಿಂಗ್ ಮತ್ತೆ ಮೈಕೊಡವಿ ಎದ್ದು ನಿಂತಿದ್ದಾರೆ. ''ಧುರಂಧರ್'' ಮೂಲಕ ಕೇವಲ ಭಾರತದಲ್ಲಿಯೇ 800 ಕೋಟಿಯನ್ನು ದೋಚಿ ರಣ ಕೇಕೆ ಹಾಕಿದ್ದಾರೆ. ''ಧುರಂಧರ್'' ಚಿತ್ರದ ಈ ಅದ್ಭುತ-ಅತ್ಯಮೋಘ ಗೆಲುವು ರಣ್ವೀರ್ ಸಿಂಗ್ ಬೆಲೆಯನ್ನು ಹೆಚ್ಚಿಸಿದೆ. ಹೀಗಾಗಿಯೇ ''ಧುರಂಧರ್'' ಪ್ರಭೆಯಲ್ಲಿಯೇ ರಣ್ವೀರ್ ತಾವು ಹಿಂದೆ ಒಪ್ಪಿಕೊಂಡಿದ್ದ ಚಿತ್ರವೊಂದರ ಚಿತ್ರೀಕರಣವನ್ನು ಶುರು ಮಾಡಲು ಅಣಿಯಾಗಿದ್ದಾರೆ. ಆ ಚಿತ್ರದ ಹೆಸರು ''ಪ್ರಳಯ್''.
ಜೋಂಬಿಗಳ ಸುತ್ತ ಸುತ್ತುವ ಈ ಚಿತ್ರವನ್ನು ಬ್ಲಾಕ್ಬಸ್ಟರ್ ವೆಬ್ ಸರಣಿ ಸ್ಕ್ಯಾಮ್ 1992ದ ಮೂರು ನಿರ್ದೇಶಕರಲ್ಲಿ ಒಬ್ಬರಾದ ಜೈ ಮೆಹ್ತಾ ನಿರ್ದೇಶನ ಮಾಡುತ್ತಿದ್ದಾರೆ. ರಣ್ವೀರ್ ಅಭಿನಯದ ಅತ್ಯಂತ ದುಬಾರಿ ಬಜೆಟ್ನ ಚಿತ್ರ ಇದು ಎಂದು ಕೂಡ ಹೇಳಲಾಗುತ್ತಿದೆ. ಸದ್ಯ ಇದೇ ಚಿತ್ರಕ್ಕೆ ಕಲ್ಯಾಣಿ ಪ್ರಿಯದರ್ಶನ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿಯನ್ನು ಪ್ರಸಿದ್ಧ ಪತ್ರಕರ್ತ ರಾಹುಲ್ ರೌತ್ ಸುದ್ದಿಯನ್ನು ಹೊರಗೆಡವಿದ್ದಾರೆ.
ಆ ಪ್ರಕಾರ ಮಾರ್ಚ್ 19ರಂದು ''ಧುರಂಧರ್ 2'' ಬಿಡುಗಡೆಯಾದ ಬೆನ್ನಲ್ಲಿಯೇ ರಣ್ವೀರ್ ಸಿಂಗ್ ಏಪ್ರಿಲ್ ನಿಂದ ಪ್ರಳಯ್ ಚಿತ್ರದ ಚಿತ್ರೀಕರಣವನ್ನು ಶುರು ಮಾಡಲಿದ್ದಾರೆ. ಸದ್ಯ ಕಲ್ಯಾಣಿ ಬಾಲಿವುಡ್ಗೆ ಕಾಲಿಡುತ್ತಿರುವ ಸುದ್ದಿಯನ್ನು ಕೇಳಿ ಇವರ ಅಭಿಮಾನಿಗಳು ಸಂಭ್ರಮ ಪಡುತ್ತಿದ್ದಾರೆ. ಪ್ರಳಯ್ ಹೇಗಿರುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











