'ಧುರಂಧರ್'- 2 ಚಿತ್ರದಲ್ಲಿ ಎಡವಟ್ಟು; ನಿರ್ದೇಶಕ ಆದಿತ್ಯಧರ್ ಇದನ್ನು ನೋಡ್ಲಿಲ್ವಾ?
ರಣ್ವೀರ್ ಸಿಂಗ್ ನಟನೆಯ 'ಧುರಂಧರ್'- 2 ಚಿತ್ರ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. 4 ದಿನಕ್ಕೆ 400 ಕೋಟಿ ರೂ. ಕಲೆಕ್ಷನ್ ಮಾಡಿದ ಹೊಸ ದಾಖಲೆ ಬರೆದಿದೆ. ಸೋಮವಾರ ಕೂಡ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಚಿತ್ರದ ಪ್ರತಿ ದೃಶ್ಯದ ಬಗ್ಗೆ ಜನ ಮಾತನಾಡುತ್ತಿದ್ದಾರೆ. ಆದರೆ ಚಿತ್ರದ ಒಂದೆರಡು ಸನ್ನಿವೇಶಗಳಲ್ಲಿ ಅಚಾತುರ್ಯ ನಡೆದಿದೆ. ಅದನ್ನು ಹುಡುಕಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಎಷ್ಟೆ ಎಚ್ಚರಿಕೆಯಿಂದ ಸಿನಿಮಾ ನಿರ್ಮಿಸಿದರೂ ಸಣ್ಣಪುಟ್ಟ ತಪ್ಪುಗಳಾಗಿಬಿಡುತ್ತದೆ. ಚಿತ್ರತಂಡದ ಕಣ್ತಪ್ಪಿಸಿ ಕೆಲವೊಮ್ಮೆ ತಪ್ಪಾಗಿ ಬಿಡುತ್ತದೆ. ಈಗ ತಂತ್ರಜ್ಞಾನ ಬಹಳ ಮುಂದುವರೆದಿದೆ. ಚಿತ್ರೀಕರಣದ ವೇಳೆ ಆಗುವ ತಪ್ಪುಗಳನ್ನು ಎಡಿಟಿಂಗ್, ಪೋಸ್ಟ್ ಪ್ರೊಡಕ್ಷನ್ ಸಮಯದಲ್ಲಿ ಸರಿಪಡಿಸಿಕೊಳ್ಳಬಹುದು. ಎಡಿಟಿಂಗ್, ರೆಕಾರ್ಡಿಂಗ್ ವೇಳೆ ಸಾಕಷ್ಟು ಬಾರಿ ಚಿತ್ರತಂಡ ಸಿನಿಮಾ ನೋಡಿರುತ್ತದೆ. ಆದರೂ ಕಣ್ತಪ್ಪಿಸಿ ಕೆಲ ತಪ್ಪುಗಳು ಉಳಿದುಬಿಡುತ್ತದೆ. ಸಿನಿಮಾ ತೆರೆಕಂಡ ಬಳಿಕ ಅದು ಗೊತ್ತಾಗುತ್ತದೆ.

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ- 1' ಚಿತ್ರದಲ್ಲಿ ವಾಟರ್ ಕ್ಯಾನ್ ಅನ್ನು ಸಿನಿರಸಿಕರು ಹುಡುಕಿಬಿಟ್ಟಿದ್ದರು/ 800, 900 ವರ್ಷಗಳ ಹಿಂದಿನ ಕಥೆಯಲ್ಲಿ ಪ್ಲಾಸ್ಟಿಕ್ ವಾಟರ್ ಕ್ಯಾನ್ ಹೇಗೆ ಬಂದು ಎಂದು ಕೆಲವರು ಟೀಕಿಸಿದ್ದರು. ಉತ್ತರ ಭಾರತದ ನೆಟ್ಟಿಗರು ಈ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಿದ್ದರು. ಹಾಲಿವುಡ್ ಸಿನಿಮಾಗಳಲ್ಲಿ ಕೂಡ ಇಂತಹ ಸಾಕಷ್ಟು ತಪ್ಪುಗಳು ಕಂಡುಬಂದಿದೆ. 'ಬಾಹುಬಲಿ' ಚಿತ್ರದಲ್ಲಿದ ತಪ್ಪುಗಳನ್ನು ಸಿನಿರಸಿಕರು ಹುಡುಕಿದ್ದರು. ಈಗ 'ಧುರಂಧರ್- 2' ಚಿತ್ರದ ಒಂದು ಫ್ರೇಮ್ನಲ್ಲಿ ಕ್ಯಾಮರಾಮನ್ ಕಂಡಿರುವುದು ವೈರಲ್ ಆಗ್ತಿದೆ.
ಸಾಮಾನ್ಯವಾಗಿ ಕ್ಯಾಮರಾ ಹಿಂದೆ ನಿಂತು ಕ್ಯಾಮರಾಮನ್ ಸಿನಿಮಾ ಸೆರೆ ಹಿಡಿಯುತ್ತಾನೆ. ಯಾವುದೇ ಕಾರಣಕ್ಕೂ ಆತ ಫ್ರೇಮ್ ಒಳಗೆ ಬರುವುದಿಲ್ಲ. ಆದರೆ 'ಧುರಂಧರ್' ಚಿತ್ರದ ಆಕ್ಷನ್ ಸನ್ನಿವೇಶದಲ್ಲಿ ಕ್ಯಾಮರಾಮನ್ ಕಂಡಿದ್ದಾರೆ. ಅದು ಕೂಡ ನೇರವಾಗಿ ಅಲ್ಲ. ಕನ್ನಡಿಯಲ್ಲಿ ಪ್ರತಿಬಿಂಬ ಕಂಡಿರುವುದು. ಹೌದು ಚಿತ್ರದ ಆಕ್ಷನ್ ಸನ್ನಿವೇಶದಲ್ಲಿ ಈ ಫ್ರೇಮ್ ಕಂಡುಬಂದಿದೆ. ಕೂಲಂಕುಷವಾಗಿ ದೃಶ್ಯವನ್ನು ಗಮನಿಸಿದರೆ ಇದು ಗೊತ್ತಾಗುತ್ತದೆ. 'ದಿ ಡಾರ್ಕ್ ನೈಟ್' (2008) ಚಿತ್ರದಲ್ಲಿ ಇದೇ ರೀತಿ ಎಡವಟ್ಟಾಗಿತ್ತು.
ಇದೊಂದೇ ಅಲ್ಲ. ಚಿತ್ರದಲ್ಲಿರುವ ಮತ್ತೊಂದು ತಪ್ಪನ್ನು ಸಿನಿರಸಿಕರು ಗಮನಿಸಿದ್ದಾರೆ. ದೃಶ್ಯವೊಂದರಲ್ಲಿ ಟ್ಯಾಂಕರ್ ಮೇಲಿನ ಡೇಟ್ ತಪ್ಪಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅಂದು 'ಕಾಂತಾರ- 1' ಚಿತ್ರದ ವಾಟರ್ ಕ್ಯಾನ್ ಬಗ್ಗೆ ಅಷ್ಟೆಲ್ಲಾ ಟ್ರೋಲ್ ಮಾಡಿದವರು ಈಗ ಯಾಕೆ ಸುಮ್ಮನಿದ್ದಾರೆ ಎಂದು ಕನ್ನಡ ಸಿನಿರಸಿಕರು ಸೋಶಿಯಲ್ ಮೀಡಿಯಾದಲ್ಲಿ ತಿರುಗೇಟು ಕೊಡುತ್ತಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳನ್ನು ಮಾಡುವಾಗ ಇಂತಹ ತಪ್ಪುಗಳು ಸಹಜ. ಎಷ್ಟೇ ಗಮನ ಹರಿಸಿದ್ರು, ಕೆಲವೊಮ್ಮೆ ಕಣ್ತಪ್ಪಿ ಹೀಗೆ ಆಗಿಬಿಡುತ್ತದೆ. ಅದೆಲ್ಲಾ ಏನೇ ಇದ್ದರೂ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದೆ.
'ಉರಿ' ಹಾಗೂ 'ಧುರಂಧರ್' ಸರಣಿ ಸಿನಿಮಾಗಳ ಮೂಲಕ ಆದಿತ್ಯಧರ್ ಸಂಚಲನ ಸೃಷ್ಟಿಸಿದ್ದಾರೆ. ಬ್ಲಾಕ್ಬಸ್ಟರ್ ಸಿನಿಮಾಗಳ ಸರದಾರ ಎನಿಸಿಕೊಂಡಿದ್ದಾರೆ. ತಮ್ಮ ಸಿನಿಮಾ ಮೇಕಿಂಗ್ ಪ್ರತಿಭೆಯಿಂದ ಗಮನ ಸೆಳೆದಿದ್ದಾರೆ. ಮುಂದೆ 'ಅಶ್ವತ್ಥಾಮ' ಕಥೆಯನ್ನು ತೆರೆಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ. 'ಧುರಂಧರ್'-2 ಚಿತ್ರದ ಬಗ್ಗೆ ತದ್ವಿರುದ್ಧ ಚರ್ಚೆ ನಡೀತಿದೆ. ಕೆಲವರು ಟೀಕಿಸುತ್ತಿದ್ದಾರೆ. ಅದನ್ನೆಲ್ಲಾ ಮೀರಿ ಸಿನಿಮಾ ಅದ್ಭುತ ಪ್ರದರ್ಶನ ಕಾಣುತ್ತಿದೆ. 2000 ಕೋಟಿ ರೂ. ಕಲೆಕ್ಷನ್ ಮಾಡುವ ಸುಳಿವು ಸಿಕ್ತಿದೆ.
ಎರಡು ತಿಂಗಳ ಬಳಿಕ 'ಧುರಂಧರ್-2' ಸಿನಿಮಾ ಓಟಿಟಿಗೆ ಬರುವ ನಿರೀಕ್ಷೆಯಿದೆ. 150 ಕೋಟಿ ರೂ.ಗೆ ಜಿಯೋ ಹಾಟ್ಸ್ಟರ್ ಚಿತ್ರದ ಓಟಿಟಿ ರೈಟ್ಸ್ ಕೊಂಡುಕೊಂಡಿದೆ. ಸಿನಿಮಾ ಕರ್ನಾಟಕದಲ್ಲಿ ಕೂಡ ಭರ್ಜರಿ ಪ್ರದರ್ಶನ ಮುಂದುವರೆಸಿದೆ.


Click it and Unblock the Notifications











