ರಣ್ವೀರ್ ಸಿಂಗ್ನ ಬಿಡುತ್ತಿಲ್ಲ 'ಬೆತ್ತಲೆ ಚಿತ್ರ' ಪ್ರಕರಣ: ವಿಚಾರಣೆಗೆ ಕಾಲಾವಕಾಶ ಕೇಳಿದ ನಟ
ಬಾಲಿವುಡ್ ನಟ ರಣ್ವೀರ್ ಸಿಂಗ್ ಬೆತ್ತಲಾಗಿ ನೀಡಿದ ಫೋಸು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಪ್ರಚಾರವನ್ನೂ ತಂದುಕೊಟ್ಟಿತ್ತು. ಆದರೀಗ ಅದೇ ಚಿತ್ರ ಸಂಕಷ್ಟಕ್ಕೆ ಸಹ ಕಾರಣವಾಗಿದೆ.
ರಣ್ವೀರ್ ಸಿಂಗ್ರ ಬೆತ್ತಲೆ ಚಿತ್ರದ ವಿರುದ್ಧ ಹಲವು ಮಂದಿ ದೂರು ದಾಖಲಿಸಿದ್ದರು. ಮುಂಬೈನಲ್ಲಿ ಎನ್ಜಿಓ ಒಂದಕ್ಕೆ ಸೇರಿದ ವಕೀಲೆಯೊಬ್ಬರು ದೂರು ನೀಡಿದ್ದರು. ಇದರ ಆಧಾರದ ಮೇಲೆ ಆಗಸ್ಟ್ 12 ರಂದು ಮುಂಬೈ ಪೊಲೀಸರು ರಣ್ವೀರ್ ಸಿಂಗ್ಗೆ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.
ಸಮನ್ಸ್ನಲ್ಲಿರುವಂತೆ ಇಂದು (ಆಗಸ್ಟ್ 22) ರಂದು ರಣ್ವೀರ್ ಸಿಂಗ್ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಇಂದು ವಿಚಾರಣೆಗೆ ಗೈರಾಗಿರುವ ರಣ್ವೀರ್ ಸಿಂಗ್ ವಿಚಾರಣೆಗೆ ಹಾಜರಾಗಲು ಇನ್ನಷ್ಟು ಕಾಲಾವಕಾಶ ಬೇಕೆಂದು ಕೇಳಿದ್ದಾರೆ.

ಈ ಬಗ್ಗೆ ಸಂಬಂಧಿತ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದಿರುವ ನಟ ರಣ್ವೀರ್ ಸಿಂಗ್, ಬೆತ್ತಲೆ ಫೋಸು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಕನಿಷ್ಟ ಎರಡು ವಾರಗಳ ಕಾಲಾವಕಾಶ ಬೇಕೆಂದು ಕೇಳಿದ್ದಾರೆ. ಸತತ ಚಿತ್ರೀಕರಣಗಳು ಇರುವ ಕಾರಣ, ಬಿಡುವಾಗುತ್ತಿಲ್ಲವೆಂದು, ಎರಡು ವಾರಗಳ ಬಳಿಕವಷ್ಟೆ ವಿಚಾರಣೆಗೆ ಹಾಜರಾಗಲು ಸಾಧ್ಯ ಎಂದು ರಣ್ವೀರ್ ಸಿಂಗ್ ಪೊಲೀಸರ ಬಳಿ ಹೇಳಿದ್ದಾರೆ.
ಚೆಂಬೂರ್ ಪೊಲೀಸ್ ಠಾಣೆಯಿಂದ ಈ ಸಮನ್ಸ್ ಜಾರಿಯಾಗಿತ್ತು. ಇದೀಗ ರಣ್ವೀರ್ ಸಿಂಗ್ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಚೆಂಬೂರ್ ಠಾಣೆಯ ಪೊಲೀಸ್ ಅಧಿಕಾರಿಗಳು ಹೊಸ ಸಮನ್ಸ್ ಜಾರಿ ಮಾಡಲಿದ್ದಾರೆ.
ಪೇಪರ್ ಹೆಸರಿನ ಮ್ಯಾಗಜಿನ್ಗಾಗಿ ಬೆತ್ತಲಾಗಿ ಫೋಸು ನೀಡಿದ್ದರು ರಣ್ವೀರ್ ಸಿಂಗ್. ಬೆತ್ತಲಾಗಿದ್ದರೂ ಸಹ ಅವರ ಖಾಸಗಿ ಅಂಗಗಳು ಕಾಣದಂತೆ ಚಿತ್ರ ತೆಗೆಯಲಾಗಿತ್ತು. ಆ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಸೃಷ್ಟಿಸಿತ್ತು. ನಾನು ಇರೋದೇ ಹೀಗೆ, ಸಾವಿರ ಜನರ ನಡುವೆ ಬೇಕಾದರೂ ಬೆತ್ತಲಾಗಿ ಇರುತ್ತೀನಿ' ಅಂತೆಲ್ಲಾ ಹೇಳಿದ್ದ ರಣ್ವೀರ್ ಸಿಂಗ್, ನಾನು ಹಾಲಿವುಡ್ನ ಖ್ಯಾತ ಮಾಡೆಲ್, ನಟ ಬರ್ಟ್ ರೆನಾಲ್ಡ್ಸ್ ಅನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಅವರ ಗೌರವಾರ್ಥ ಹೀಗೆ ಬೆತ್ತಲಾಗಿ ಫೋಸು ನೀಡಿದ್ದೆ ಎಂದಿದ್ದರು.
ರಣ್ವೀರ್ ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 292, 293, 509 ಹಾಗೂ ಐಟಿ ಕಾಯ್ದೆಯ ಸೆಕ್ಷನ್ 67A ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ರಣವೀರ್ ಬೆತ್ತಲಾಗುವ ಮೂಲಕ ಮಹಿಳೆಯರ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಮುಂಬೈನ ಎನ್ಜಿಓ ಒಂದರ ವಕೀಲೆಯೊಬ್ಬರು ರಣ್ವೀರ್ ಸಿಂಗ್ ವಿರುದ್ಧ ಚೆಂಬೂರ್ ಪೊಲೀಸ್ ಠಾಣೆಯಲ್ಲಿ ಲಿಖಿತ ರೂಪದಲ್ಲಿ ದೂರು ನೀಡಿದ್ದರು.ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆಂಬೂರ್ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.


Click it and Unblock the Notifications











