ಶ್ರೀಲೀಲಾಗೆ ಮತ್ತೊಂದು ಬಂಪರ್ ಲಾಟರಿ, ಬಾಲಿವುಡ್ ಸ್ಟಾರ್ ಜೊತೆ ಸಿನಿಮಾ ?
ಲಕ್ ಅಂದ್ರೆ ಇದೇ ಇರಬೇಕು. ಅಭಿನಯಿಸಿದ ಸಿನಿಮಾವೊಂದು ಸಕ್ಸಸ್ ಆಗಿಬಿಟ್ಟರೆ ಸಾಕು ಅವಕಾಶಗಳು ಬೇಡವೆಂದರೂ ಬರುತ್ತಲೇ ಇರುತ್ತವೆ ಎಂಬುದಕ್ಕೆ ಶ್ರೀಲೀಲಾನೇ ಸಾಕ್ಷಿ. ಹೌದು.. 2019ರ ಕೆಲವೇ ಸೂಪರ್ ಹಿಟ್ ಚಿತ್ರಗಳಲ್ಲಿ 'ಕಿಸ್' ಸಿನಿಮಾ ಕೂಡಾ ಒಂದು. ಶ್ರೀಲೀಲಾ ಅವರ ಬಣ್ಣದ ಕನಸು ಆರಂಭವಾಗಿದ್ದು ಇದೇ ಚಿತ್ರದಿಂದ. ಹೀರೋ ಹೀರೋಯಿನ್ ಇಬ್ಬರೂ ಹೊಸಬರಾಗಿದ್ದರೂ ಕೂಡ ಆ ಕಾಲದಲ್ಲಿ..
ಹತ್ ಹತ್ರ 90 ಚಿತ್ರಮಂದಿರದಲ್ಲಿ 25 ದಿನ ಪೂರೈಸಿದ್ದ 'ಕಿಸ್' ಚಿತ್ರದಿಂದ ಶ್ರೀಲೀಲಾ ಅದೃಷ್ಟದ ಬಾಗಿಲು ತೆರೆಯಿತು. ಅಲ್ಲಿಂದಾಚೆ ಭರಾಟೆ.. ಬೈ ಟು ಲವ್.. ಚಿತ್ರಗಳನ್ನು ಮಾಡಿದ ಶ್ರೀಲೀಲಾ ಆ ನಂತರ ಸೀದಾ ಹೋಗಿದ್ದು ಆಂಧ್ರ ಪ್ರದೇಶಕ್ಕೆ.

ಅಲ್ಲಿ ಧಮಾಕಾ.. ಭಗವಂತ್ ಕೇಸರಿ.. ಆದಿಕೇಶವ.. ಎಕ್ಸ್ಟ್ರಾ ಆರ್ಡಿನರಿ ಮ್ಯಾನ್.. ಸ್ಕಂದ.. ಗುಂಟೂರು ಖಾರಂ..ಹೀಗೆ ಒಂದಾದ ಮೇಲೊಂದರಂತೆ ಸಿನಿಮಾ ಮಾಡಿದ ಶ್ರೀಲೀಲಾ ಸದ್ಯ ರಶ್ಮಿಕಾ ಮಂದಣ್ಣ ಅವರಂತೆಯೇ ಬಾಲಿವುಡ್ ನಲ್ಲಿ ಬಿಡಾರ ಹೂಡಿದ್ದಾರೆ. ಕಾರ್ತಿಕ್ ಆರ್ಯನ್ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದಾರೆ. ಸೈಫ್ ಅಲಿ ಖಾನ್ ಮಗ ಇಬ್ರಾಹಿಂ ಅಲಿ ಖಾನ್, ವರುಣ್ ಧವನ್ ಜೊತೆ ಕೂಡ ಸಿನಿಮಾ ಮಾಡ್ತಿದ್ದಾರೆ ಎನ್ನುವ ಸುದ್ದಿ ಇದೆ.
ಹೀಗಿರುವಾಗ ಇದೀಗ ರಣ್ವೀರ್ ಸಿಂಗ್ ಜೊತೆ ಶ್ರೀಲೀಲಾ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಸದ್ಯ ಸಖತ್ ಸದ್ದು ಮಾಡುತ್ತಿದೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಆಟ್ಲೀ ಆಕ್ಷನ್ ಕಟ್ ಹೇಳಲಿದ್ದಾರೆ ಎಂದು ಕೂಡ ಸುದ್ದಿ ಓಡಾಡುತ್ತಿದೆ. ಆದರೆ.. ವಾಸ್ತವದಲ್ಲಿ ಈ ಸುದ್ದಿ ಸತ್ಯಕ್ಕೆ ದೂರವಾದದ್ದು.
ಹೌದು, ಅಸಲಿಗೆ ಸದ್ಯ ಅಲ್ಲು ಅರ್ಜುನ್ ಅವರ ಜೊತೆ ಆಟ್ಲೀ ಚಿತ್ರವನ್ನು ಮಾಡುತ್ತಿದ್ದಾರೆ. ದೀಪಿಕಾ ಪಡುಕೋಣೆ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದು ಚಿತ್ರ ಈಗಾಗಲೇ ಹಲವರ ಕುತೂಹಲ ಕೆರಳಿಸಿದೆ. ಅಲ್ಲು ಅರ್ಜುನ್ ಅವರ ಪಾತ್ರದ ಕುರಿತು ನಾನಾ ಸುದ್ದಿಗಳು ಕೂಡ ಕೇಳಿ ಬರುತ್ತಿವೆ.
ಇನ್ನು ಇದೇ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಖಳನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎನ್ನುವ ಸುದ್ದಿ ಕೂಡ ಇದೆ. ಹೀಗಿರುವಾಗ ಆಟ್ಲೀ ಜೊತೆ ಶ್ರೀಲೀಲಾ ಕೈ ಜೋಡಿಸಿದ್ದಾರೆ. ಆದರೆ ಅದು ಕೇವಲ ಜಾಹೀರಾತುಗಾಗಿ ಮಾತ್ರ ಎನ್ನುವುದೇ ಸದ್ಯದ ಟ್ವಿಸ್ಟು.

ಹೌದು, ಆಟ್ಲೀ ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ ಕೂಡ ಜಾಹೀರಾತು ನಿರ್ದೇಶನ ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ಧಾರೆ. ಈ ಜಾಹೀರಾತಿನಲ್ಲಿ ರಣ್ವೀರ್ ಸಿಂಗ್ ಜೊತೆ ಶ್ರೀಲೀಲಾ ಕಾಣಿಸಿಕೊಳ್ಳಲಿದ್ದಾರೆ ಎಂದು ತೆಲುಗಿನ ಖ್ಯಾತ ವೆಬ್ ಸೈಟ್ www.123telugu.com ವರದಿಯನ್ನು ಮಾಡಿದೆ.
ಆ ಪ್ರಕಾರ ಈ ಜಾಹೀರಾತನ್ನು ಆಟ್ಲೀ ಸಿನಿಮಾ ಶೈಲಿಯಲ್ಲಿ ಚಿತ್ರೀಕರಿಸಲು ಮುಂದಾಗಿದ್ದು, ಶ್ರೀಲೀಲಾಗೆ ಇದೇ ಜಾಹೀರಾತುಗೆ ಭರ್ಜರಿ ಸಂಭಾವನೆಯನ್ನು ಕೂಡ ನೀಡಲಾಗಿದೆ ಎಂದು ಸುದ್ದಿ ಸದ್ಯ ಕೇಳಿ ಬರುತ್ತಿದೆ. ಇನ್ನೂ ಎಂದಿನಂತೆ ಒಂದು ವರ್ಗ ಈ ಸುದ್ದಿ ಕೇಳಿ ಖುಷಿಯಾಗಿದ್ದು ರಣ್ವೀರ್ ಸಿಂಗ್ ಮತ್ತು ಶ್ರೀಲೀಲಾ ಜೊತೆಯಾಗಿ ಒಂದು ಚಿತ್ರ ಮಾಡಿದರೆ ಚೆಂದ ಇರುತ್ತೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದೆ. ಮತ್ತೊಂದು ವರ್ಗ ಇಬ್ಬರ ನಡುವೆ ವಯಸ್ಸಿನ ಅಂತರ ಹೆಚ್ಚಿದೆ ಎನ್ನುವ ವಾದ ಮಾಡುತ್ತಿದ್ದು ಸದ್ಯ ಜಾಹೀರಾತು ಬಿಡುಗಡೆಯಾದ ಬೆನ್ನಲ್ಲೇ ಕ್ಯಾತೆ ತೆಗೆಯಲು ಮುಂದಾಗಿದೆ.
ಅಂದ್ಹಾಗೇ ಕೆಲ ವರ್ಷಗಳ ಹಿಂದೆ ಗಾಲಿ ಜನಾರ್ಧನಾ ರೆಡ್ಡಿ ಪುತ್ರ ಕಿರೀಟಿ 'ಜೂನಿಯರ್' ಎಂಬ ಚಿತ್ರವನ್ನು ಮಾಡಿದ್ದರು. ಆಗಿನ್ನೂ ಶ್ರೀಲೀಲಾ ಸ್ಯಾಂಡಲ್ವುಡ್ನಲ್ಲಿಯೇ ಇದ್ದರು. ಸದ್ಯ ಈ ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು ರಶ್ಮಿಕಾ ಅವರಂತೆ ಬೆಳೆದು ಬಂದ ದಾರಿಯನ್ನು ಮರೆಯದೇ ಶ್ರೀಲೀಲಾ ಈ ಚಿತ್ರದ ಪ್ರಚಾರ ಮಾಡುತ್ತಿದ್ಧಾರೆ.


Click it and Unblock the Notifications











