ಕೆಜಿಎಫ್ನ ರಮಿಕಾ ಸೇನ್ ಮನೆಯಲ್ಲಿ 25 ಲಕ್ಷ ಕಳ್ಳತನ, ಬಾಯಿ ಬಿಟ್ರೆ ಡ್ರಗ್ಸ್ ಇಡುವುದಾಗಿ ರವೀನಾ ಟಂಡನ್ಗೆ ಬ್ಲ್ಯಾಕ್ಮೇಲ್
ಕಳ್ಳತನ, ವಂಚನೆ ಪ್ರಕರಣಗಳು ಈಗೀಗ ಹೆಚ್ಚಾಗುತ್ತಲೇ ಇವೆ. ಶಾಕಿಂಗ್ ಸಮಾಚಾರ ಅಂದರೆ ದೊಡ್ಡ ದೊಡ್ಡವರ ಮನೆಗಳಿಗೆ ಕೂಡ ಕಳ್ಳಕಾಕರು ಯಾವ ಭಯ ಇಲ್ಲದೇ ನುಗ್ಗುತ್ತಿದ್ದಾರೆ. ಮನೆ ಕೆಲಸ ಮಾಡುವ ನೆಪದಲ್ಲಿ ಬಂದು ಭದ್ರತೆಯ ನಡುವೆಯೇ ಸೆಲೆಬ್ರಿಟಿಗಳ ಐಶಾರಾಮಿ ಮನೆಯಲ್ಲಿರುವ ಇರೋ ಬರೋ ವಸ್ತುಗಳನ್ನೆಲ್ಲ ದೋಚಿಕೊಂಡು ಪರಾರಿಯಾಗುತ್ತಿದ್ದಾರೆ. ನಂಬಿಸಿ ಸರಿಯಾದ ಸಮಯ ನೋಡಿಕೊಂಡು ಬೆನ್ನಿಗೆ ಚೂರಿ ಹಾಕುತ್ತಿದ್ಧಾರೆ. ಇದಕ್ಕೆ ರವೀನಾ ಟಂಡನ್ ಅವರ ತಾಯಿಯ ಮನೆಯಲ್ಲಿ ನಡೆದ ಕಳ್ಳತನ ಸದ್ಯದ ಉದಾಹರಣೆ.
ಹೌದು, ರವೀನಾ ಟಂಡನ್ ಅವರ ತಾಯಿ ವೀಣಾ ಟಂಡನ್ ಅವರ ಆರೈಕೆಯನ್ನು 47 ವರ್ಷದ ರಾಶಿ ಛಾಬ್ರಿಯಾ ಮಾಡುತ್ತಿದ್ದರು. ಕಳೆದ 5-6 ವರ್ಷಗಳಿಂದ ರವೀನಾ ಅವರ ಸಹೋದರ ಮತ್ತು ನಿರ್ಮಾಪಕ ರಾಜೀವ್ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಸಂಪೂರ್ಣವಾಗಿ ನಂಬಿಕೆಯನ್ನು ಗಳಿಸಿದ್ದರು.

ರವೀನಾ ಟಂಡನ್ ತಾಯಿಯ ಆರೈಕೆ ನೆಪದಲ್ಲಿ, ನಿರಂತರವಾಗಿ ಮನೆಗೆ ಬರುತ್ತಿದ್ದ ರಾಶಿ ಇಡೀ ಮನೆಯಲ್ಲಿ ಎಲ್ಲೆಲ್ಲಿ ಬೆಲೆಬಾಳುವ ಆಭರಣಗಳಿವೆ ಎಂಬುದನ್ನು ಅತ್ಯಂತ ವ್ಯವಸ್ಥಿತವಾಗಿ ಗಮನಿಸಿ, ದರೋಡೆಗೆ ಮಾಸ್ಟರ್ ಪ್ಲಾನ್ ರೂಪಿಸಿದ್ದರು.
ಅದರಂತೆ ತನ್ನ ಯೋಜನೆಯನ್ನು ಕಾರ್ಯರೂಪಕ್ಕೂ ತಂದ ರಾಶಿ ಛಾಬ್ರಿಯಾ, ಆಭರಣಗಳಿದ್ದ ಸುರಕ್ಷಿತ ಲಾಕರ್ ಅನ್ನು ಒಡೆದು, ರವೀನಾ ತಾಯಿ ವೀಣಾ ಟಂಡನ್ ಅವರ 25 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ರಾಜೀವ್ ಟಂಡನ್ ಅವರ ಎರಡು ದುಬಾರಿ ಕೈಗಡಿಯಾರಗಳನ್ನು ಕದ್ದಿದ್ದಾರೆ.
ಸದ್ಯ ರಾಜೀವ್ ಟಂಡನ್ ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ರಾಶಿ ಛಾಬ್ರಿಯಾ ಅವರನ್ನು ಬಂಧಿಸಿದ್ದಾರೆ. ಇನ್ನು ''ಇಂಡಿಯನ್ ಎಕ್ಸ್ಪ್ರೆಸ್'' ವರದಿಯ ಪ್ರಕಾರ ಮನೆಯ ಸದಸ್ಯರಂತೆ ವರ್ತಿಸಿ ವಿಶ್ವಾಸವನ್ನು ಸಂಪಾದಿಸಿದ್ದ ರಾಶಿ, ಮನೆಯಲ್ಲಿದ್ದ ತಿಜೋರಿ ಒಡೆದು ಕಳ್ಳತನ ಮಾಡಿದ್ದಾರೆ. ಈ ಕೃತ್ಯದಲ್ಲಿ ಚಿನ್ನ-ವಜ್ರದ ಆಭರಣಗಳು ಮತ್ತು ಎರಡು ದುಬಾರಿ ವಾಚ್ ಕಳ್ಳತನವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳ್ಳತನದ ವಿವರ
2025ರ ಆಗಸ್ಟ್ನಲ್ಲಿ ರವೀನಾ ಸಹೋದರ ರಾಜೀವ್ ತಮ್ಮ ಮನೆಯನ್ನು ರಿನೋವೇಟ್ ಮಾಡಲು ಮುಂದಾಗಿದ್ದರು. ಈ ಸಮಯದಲ್ಲಿ ಮನೆಯಲ್ಲಿದ್ದ ಅತ್ಯಮೂಲ್ಯ ವಸ್ತುಗಳನ್ನೆಲ್ಲಾ ಸೋದರಿ ರವೀನಾ ಮನೆಗೆ ಕಳಿಸಿದ್ದ ರಾಜೀವ್, ತಾಯಿ ವೀಣಾ ಅವರ ಆಭರಣಗಳನ್ನು ಮಾತ್ರ ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದರು. ಎರಡನೇ ಮಹಡಿಯಲ್ಲಿರುವ ಮಲಗುವ ಕೋಣೆಗೆ ಹೊಂದಿಕೊಂಡಿರುವ ಲಾಕರ್ ನಲ್ಲಿ ಇಟ್ಟಿದ್ದರು.
2025ರ ಅಕ್ಟೋಬರ್ 2ರಂದು ವಿಜಯದಶಮಿ ಹಬ್ಬದ ವೇಳೆ, ಆಭರಣ ಪರಿಶೀಲನೆ ಮಾಡಲು ರಾಜೀವ್ ಟಂಡನ್ ಮುಂದಾದಾಗ, ಕಳ್ಳತನವಾಗಿರುವ ವಿಚಾರ ಗೊತ್ತಾಗಿದ್ದು ಎರಡು ದುಬಾರಿ ಕೈಗಡಿಯಾರ, ಬಂಗಾರದ ಬಳೆ, ಬ್ರೇಸ್ಲೆಟ್, ಹಾರ, ಲಾಕೆಟ್, ಉಂಗುರ, ಕಿವಿಯೋಲೆ, ವಜ್ರದ ತಾಳಿ ಮತ್ತು ಇತರ ವಜ್ರದ ಆಭರಣಗಳು ಸೇರಿ ಒಟ್ಟು ₹25 ಲಕ್ಷ ಮೌಲ್ಯದ ಆಭರಣ ಕಳ್ಳತನವಾಗಿದೆ ಎಂದು ರಾಜೀವ್ ಟಂಡನ್ ತಮ್ಮ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ಇನ್ನು ಕುಟುಂಬದ ಸದಸ್ಯರನ್ನು ಹೊರತು ಪಡಿಸಿದರೆ ಎರಡನೇ ಮಹಡಿಗೆ ಪ್ರವೇಶ ಇದ್ದಿದ್ದು ರಾಶಿ ಛಾಬ್ರಿಯಾಗೆ ಮಾತ್ರ. ಈ ಹಿನ್ನೆಲೆ ಅನುಮಾನಗೊಂಡು ರಾಶಿಯನ್ನು ರಾಜೀವ್ ವಿಚಾರಿಸಿದ್ದಾರೆ. ಆರಂಭದಲ್ಲಿ ತಪ್ಪು ಒಪ್ಪದ ರಾಶಿ ಆ ನಂತರ ಆಭರಣ ಮತ್ತು ಕೈಗಡಿಯಾರಗಳನ್ನು ಕದ್ದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಇಷ್ಟೇ ಅಲ್ಲ ಕದ್ದಿದ್ದ ಕೈಗಡಿಯಾರಗಳನ್ನು ಕೂಡ ಮರಳಿ ನೀಡಿದ ರಾಶಿ, ಆಭರಣ ಜಗದೀಶ್ ಎಂಬ ವ್ಯಕ್ತಿಯ ಬಳಿ ಇದ್ದು ಮರಳಿ ತಂದು ಕೊಡುವ ಭರವಸೆ ನೀಡಿದ್ದಾರೆ. ಆದರೆ, ಹಲವು ಬಾರಿ ವಿಚಾರಿಸಿದರು ಕೂಡ ಆಭರಣ ಮರಳಿ ಬರಲೇ ಇಲ್ಲ.
ಬದಲಿಗೆ ಆಭರಣ ಹಿಂದಿರುಗಿಸುವಂತೆ ರಾಜೀವ್ ಟಂಡನ್ ಒತ್ತಡ ಹೇರಲು ಶುರು ಮಾಡಿದ ನಂತರ ನೀವೇನಾದರೂ ಕಳ್ಳತನದ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಅಥವಾ ಒಡವೆಗಳನ್ನು ಮರಳಿ ಕೇಳಿದರೆ, ನಿಮ್ಮ ಮನೆಯಲ್ಲಿ ಡ್ರಗ್ಸ್ ಇಟ್ಟು ನಿಮ್ಮ ಇಡೀ ಕುಟುಂಬವನ್ನು ನಾರ್ಕೋಟಿಕ್ಸ್ ಕೇಸ್ನಲ್ಲಿ ಸಿಲುಕಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಫೆಡರಲ್ ಏಜೆನ್ಸಿಗಳಿಗೆ ಸುಳ್ಳು ಮಾಹಿತಿ ನೀಡಿ ಇಡೀ ಕುಟುಂಬವನ್ನು ಜೈಲಿಗೆ ಕಳುಹಿಸುವುದಾಗಿ ಬ್ಲ್ಯಾಕ್ಮೇಲ್ ಮಾಡಿದ್ದಾರೆ.
ಆದರೆ ಈ ಬೆದರಿಕೆಗೆ ಬಗ್ಗದ ರಾಜೀವ್ ಟಂಡನ್, ಕಾದು ಕಾದು ಕೊನೆಗೆ ಸುಸ್ತಾಗಿ ಮೇ 19 ರಂದು ಜುಹು ಪೊಲೀಸರನ್ನು ಸಂಪರ್ಕಿಸಿದ್ದಾರೆ. ಮನೆ ಕೆಲಸದಾಕೆಯಾದ ರಾಶಿ ವಿರುದ್ದ ದೂರು ದಾಖಲಿಸಿದ್ಧಾರೆ. ಮೇ 21ರಂದು ಜುಹು ಪೊಲೀಸರು ರಾಶಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮೇ 29 ರವರೆಗೆ ಅವರು ಪೊಲೀಸ್ ಕಸ್ಟಡಿಯಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳ್ಳತನವಾದ ಚಿನ್ನ ಮತ್ತು ವಜ್ರಾಭರಣ ಪತ್ತೆಹಚ್ಚುತ್ತಿರುವುದಾಗಿ ಹೇಳಿದ್ದಾರೆ.


Click it and Unblock the Notifications