'ನಾಚಿಕೆಗೇಡಿನ ರಾಜಕೀಯ...' ಆರ್ಯನ್ ಬಂಧನದಕ್ಕೆ 'ಕೆಜಿಎಫ್' ನಟಿ ರವೀನಾ ಟಂಡನ್ ಆಕ್ರೋಶ
ಡ್ರಗ್ಸ್ ಪ್ರಕರಣ ಸಂಬಂಧ ಜೈಲು ಸೇರಿರುವ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ಖಾನ್ಗೆ ಬಾಲಿವುಡ್ ಅನೇಕ ಸೆಲೆಬ್ರಿಟಿಗಳು ಬೆಂಬಲ ಸೂಚಿಸುತ್ತಿದ್ದಾರೆ. ಈಗಾಗಲೇ ಸ್ಟಾರ್ ಕಲಾವಿದರಾದ ಸಲ್ಮಾನ್ ಖಾನ್, ಹೃತಿಕ್ ರೋಷನ್, ಸುನೀಲ್ ಶೆಟ್ಟಿ, ಸುಜೇನ್ ಖಾನ್ ಹೀಗೆ ಅನೇಕರು ಪ್ರತಿಕ್ರಿಯೆ ನೀಡಿ, ಆರ್ಯನ್ ಗೆ ಬೆಂಬಲ ನೀಡಿದ್ದಾರೆ. ಇದೀಗ ಬಾಲಿವುಡ್ನ ಮತ್ತೋರ್ವ ಖ್ಯಾತ ನಟಿ, ಕೆಜಿಎಫ್2 ಸಿನಿಮಾದಲ್ಲಿ ನಟಿಸಿರುವ ರವೀನಾ ಟಂಡನ್ ಪ್ರತಿಕ್ರಿಯೆ ನೀಡಿದ್ದಾರೆ.
ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡುವಾಗ ಶಾರುಖ್ ಖಾನ್ ಪುತ್ರ ಆರ್ಯನ್ ಮತ್ತು ಗೆಳೆಯರಾದ ಅರ್ಬಾಜ್ ಮರ್ಚಂಟ್, ಮೂನ್ ಮುನ್ ಧಾಮೇಚಾ ಸೇರಿದಂತೆ ಇನ್ನು ಅನೇಕರನ್ನು ಎನ್ ಸಿ ಬಿ ಬಂಧಿಸಿದೆ. ಅಕ್ಟೋಬರ್ 7ರ ವರೆಗೆ ಆರ್ಯನ್ ಖಾನ್ ಸೇರಿದಂತೆ ಎಲ್ಲಾ ಆರೋಪಿಗಳನ್ನು ಎನ್ ಸಿ ಬಿ ವಶಕ್ಕೆ ನೀಡಲಾಗಿತ್ತು. ನಿನ್ನೆ (ಅಕ್ಟೋಬರ್ 7) ವಿಚಾರಣೆ ನಡೆಸಿದ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಅಕ್ಟೋಬರ್ 3ರಿಂದ ಶಾರುಖ್ ಪುತ್ರ ಆರ್ಯನ್ ಖಾನ್ ಬಂಧನದಲ್ಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ರವೀನಾ ಟಂಡನ್ ಇದು ನಾಚಿಕೆಗೇಡಿನ ರಾಜಕೀಯ ಎಂದು ಕಿಡಿ ಕಾರಿದ್ದಾರೆ. ಇಂದು (ಅಕ್ಟೋಬರ್ 8) ಈ ಬಗ್ಗೆ ಟ್ವೀಟ್ ಮಾಡಿರುವ ರವೀನಾ, "ನಾಚಿಕೆಗೇಡಿನ ರಾಜಕೀಯ ಮಾಡಲಾಗುತ್ತಿದೆ. ಒಬ್ಬ ಯುವಕನ ಜೀವನ ಮತ್ತು ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆ. ಹೃದಯವಿದ್ರಾವಕ ಇದು" ಎಂದು ರವೀನಾ ಟಂಡನ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಟ್ವೀಟ್ ನಲ್ಲಿ ರವೀನಾ ಆರ್ಯನ್ ಅಥವಾ ಶಾರುಖ್ ಹೆಸರನ್ನು ಎಲ್ಲಿಯೂ ಬಳಸಿಲ್ಲ. ಆದರೆ ಈ ಟ್ವೀಟ್ ಆರ್ಯನ್ ಖಾನ್ ಪುತ್ರನ ಬಗ್ಗೆ ಮಾಡಿರುವುದು ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತಿದೆ.

ಅಂದಹಾಗೆ ನಟ ಹೃತಿಕ್ ರೋಷನ್ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪೋಸ್ಟ್ ಶೇರ್ ಮಾಡಿದ್ದಾರೆ. ಆರ್ಯನ್ಖಾನ್ಗೆ ಹೃದಯಸ್ಪರ್ಶಿ ಪತ್ರದ ಮೂಲಕ ಹೃತಿಕ್ ಧೈರ್ಯ ತುಂಬಿದ್ದಾರೆ. "ಮೈ ಡಿಯರ್ ಆರ್ಯನ್....ಬದುಕು ಒಂದು ವಿಚಿತ್ರ ಸವಾರಿ. ಇದು ಅದ್ಭುತವಾಗಿದೆ ಏಕೆಂದರೆ ಇದು ಅನಿಶ್ಚಿತ. ಆದರೆ ದೇವರು ಕರುಣಾಮಯಿ. ದೇವರು ನಿಮಗೆ ದಯೆ ತೋರುತ್ತಾನೆ. ಆ ದೇವರು ಕಠಿಣವಾದ ಆಟವನ್ನು ಆಡಲು ಮಾತ್ರ ಕಠಿಣವಾದ ಚೆಂಡು ನೀಡುತ್ತಾನೆ. ಕೋಪ, ಗೊಂದಲ, ಅಸಹಾಯಕತೆ. ಆಹಾ.. ಈ ಎಲ್ಲಾ ಅಂಶಗಳು ಸುಟ್ಟು ನಿಮ್ಮೊಳಗಿನ ನಾಯಕ ಹೊರಬರುತ್ತಾನೆ. ಆದರೆ ಹುಷಾರು, ಇದೆ ಅಂಶಗಳು ನಿಮ್ಮಲ್ಲಿನ ಒಳ್ಳೆತನ ದಯೆ, ಸಹಾನುಭೂತಿ, ಪ್ರೀತಿಯನ್ನು ಸುಟ್ಟುಹಾಕಬಹುದು" ಎಂದು ದೀರ್ಘವಾಗಿ ಬರೆದಿದ್ದರು.
ಬಾಲಿವುಡ್ನ ಅನೇಕ ಮಂದಿ ಆರ್ಯನ್ ಖಾನ್ ಬೆಂಬಲಕ್ಕೆ ನಿಂಚಿರುವ ಬಗ್ಗೆ ನಟಿ ಕಂಗನಾ ರಣಾವತ್ ಕಿಡಿಕಾರಿದ್ದರು. "ಎಲ್ಲಾ ಮಾಫಿಯಾ ಪಪ್ಪುಗಳು ಆರ್ಯನ್ಖಾನ್ಅವರ ರಕ್ಷಣೆಗೆ ಬಂದಿದ್ದಾರೆ. ನಾವು ತಪ್ಪುಗಳನ್ನು ಮಾಡುತ್ತೇವೆ, ಆದರೆ ಅದನ್ನು ವೈಭವೀಕರಿಸಬಾರದು. ಈ ಘಟನೆ ಆರ್ಯನ್ಗೆ ಹೊಸ ದೃಷ್ಟಿಕೋನ ನೀಡಲಿದೆ ಮತ್ತು ಇದರ ಪರಿಣಾಮಗಳ ಬಗ್ಗೆ ಅರಿವಾಗುವಂತೆ ಮಾಡುತ್ತದೆ ಎನ್ನುವ ನಂಬಿಕೆ ಇದೆ. ಈ ಘಟನೆ ಆರ್ಯನ್ಅವರನ್ನು ಮತ್ತಷ್ಟು ವಿಕಸನಗೊಳಿಸಲಿದೆ. ಯಾರಾದರೂ ದುರ್ಬಲರಾದಾಗ ಅವರ ಬಗ್ಗೆ ಗಾಸಿಪ್ ಮಾಡಬಾರದು. ಆದರೆ ಅವರು ತಪ್ಪೇ ಮಾಡಿಲ್ಲ ಎಂದು ಭಾವಿಸುವುದು ಅಪರಾಧ" ಎಂದು ಕಂಗನಾ ಕುಟುಕಿದ್ದಾರೆ.


Click it and Unblock the Notifications











