ಪವರ್ ಸ್ಟಾರ್ ಪವನ್ ಮೇಲೆ ಕಲ್ಲಿನ ದಾಳಿ: ಧೈರ್ಯ ಇದ್ರೆ ಮುಂದೆ ಬನ್ನಿ ಎಂದ ನಟ
ಭೋಜ್ಪುರಿ ಚಿತ್ರರಂಗದ ಖ್ಯಾತ ನಟ ಪವನ್ ಸಿಂಗ್ಗೆ ಲೈವ್ ಶೋನಲ್ಲಿ ಕಹಿ ಅನುಭವ ಆಗಿದೆ. ವೇದಿಕೆಯಲ್ಲಿ ನಟ ಹಾಡುತ್ತಿದ್ದಾಗ ಯಾರೋ ಕಿಡಿಗೇಡಿಗಳು ಕಲ್ಲಿನಿಂದ ಹೊಡೆದಿದ್ದಾರೆ. ನಟನಾಗಿ ಮಾತ್ರವಲ್ಲದೇ ಪವನ್ ಸಿಂಗ್ ಗಾಯಕರಾಗಿಯೂ ಗಮನ ಸೆಳೆದಿದ್ದಾರೆ. ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ಹೋಳಿ ಹಬ್ಬದ ವಿಶೇಷವಾಗಿ ನಡೆದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.
ಹೋಳಿ ಹಬ್ಬದ ವಿಶೇಷವಾಗಿ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಪವನ್ ಸಿಂಗ್ ಹಾಜರಾಗಿದ್ದರು. ಹಾಡು ಹಾಡಿ ನೆರೆದಿದ್ದವರನ್ನು ರಂಜಿಸುತ್ತಿದ್ದರು. ಈ ವೇಳೆ ವೇದಿಕೆಯ ಮುಂದೆ ನೆರೆದ ಜನರ ಗುಂಪಿನಿಂದ ಯಾರೋ ಪವನ್ ಸಿಂಗ್ ಮೇಲೆ ಕಲ್ಲು ಎಸೆದಿದ್ದಾರೆ. ಏನಾಯಿತು ಎಂದು ನೋಡುವಷ್ಟರಲ್ಲಿ ಮತ್ತಷ್ಟು ಜನ ಕಲ್ಲುಗಳಿಂದ ದಾಳಿ ಮಾಡಿದ್ದಾರೆ. ಪವನ್ ಸಿಂಗ್ ಭೋಜ್ಪುರಿ ಚಿತ್ರರಂಗದಲ್ಲಿ ಪವರ್ ಸ್ಟಾರ್ ಎಂದೇ ಖ್ಯಾತರಾಗಿದ್ದಾರೆ.

ಈ ಘಟನೆ ಬಗ್ಗೆ ನಟ ಪವನ್ ಸಿಂಗ್ ಸೀರಿಯಸ್ ಆಗಿದ್ದು ಗುಂಪಿನಲ್ಲಿ ನಿಂತು ಕಲ್ಲು ಎಸೆಯೋದಲ್ಲ. ಧೈರ್ಯ ಇದ್ದರೆ ನನ್ನ ಮುಂದೆ ಬನ್ನಿ ಎಂದು ಸವಾಲು ಹಾಕಿದ್ದಾರೆ. ಈ ಹಠಾತ್ ಘಟನೆ ಹಿನ್ನೆಲೆಯಲ್ಲಿ ಆಯೋಜಕರು ಕೂಡಲೇ ಕಾರ್ಯಕ್ರಮ ನಿಲ್ಲಿಸಿದ್ದಾರೆ. ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಪವನ್ ಮುಖಕ್ಕೆ ಕೊಂಚ ಪೆಟ್ಟಾಗಿರುವಂತೆ ಕಾಣುತ್ತಿದೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಒಂದು ನಿರ್ದಿಷ್ಟ ಸಮುದಾಯದ ಕುರಿತ ಹಾಡೊಂದನ್ನು ಹಾಡುವಂತೆ ಕೇಳಲಾಗಿತ್ತಂತೆ. ಇದಕ್ಕೆ ಪವನ್ ಸಿಂಗ್ ಒಪ್ಪದ ಕಾರಣಕ್ಕೆ ಈ ರೀತಿ ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗ್ತಿದೆ. ಪವನ್ ಸಿಂಗ್ ಗಾಯಕಿ ಶಿಲ್ಪಿ ರಾಜ್ ಜೊತೆ ವೇದಿಕೆಯಲ್ಲಿ ಹಾಡುತ್ತಿದ್ದರು. ಘಟನೆಯ ನಂತರ ಬೌನ್ಸರ್ ಸಹಾಯದಿಂದ ನಟ ಪವನ್ ಅಲ್ಲಿಂದ ತೆರಳಿದ್ದಾರೆ. ಸದ್ಯ ನಟನ ಮೇಲೆ ಕಲ್ಲು ಎಸೆದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬಿಹಾರ ಮೂಲದ ನಟ ಪವನ್ ಸಿಂಗ್ ಹಲವು ಭೋಜ್ಪುರಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಿರ್ಮಾಪಕನಾಗಿ, ಸಂಗೀತ ನಿರ್ದೇಶಕನಾಗಿ, ಸ್ಟೇಜ್ ಪರ್ಫಾರ್ಮರ್ ಆಗಿ ಗುರ್ತಿಸಿಕೊಂಡಿದ್ದಾರೆ. 2 ವರ್ಷಗಳ ಹಿಂದೆ ಪವನ್ ನಟಿಸಿದ 'ಹಂ ಹೈ ರಾಹಿ ಪ್ಯಾರ್ ಕೆ' ಚಿತ್ರದಲ್ಲಿ ಕನ್ನಡದ ನಟಿ ಹರ್ಷಿಕಾ ಪೂಣಚ್ಚ ನಾಯಕಿಯಾಗಿ ನಟಿಸಿದ್ದರು.


Click it and Unblock the Notifications











