ಕೆಂಪು ಕೋಟೆ ಧ್ವಜ ವಿವಾದ: ನಟ ದೀಪ್ ಸಿಧು ಬಂಧನ
ಜನವರಿ 26 ರಂದು ನಡೆದ ರೈತ ಹೋರಾಟದಂದು ಕಂಪು ಕೋಟೆ ಮುಂದೆ ಧ್ವಜ ಹಾರಿಸಿದ ಹಾಗೂ ಹಿಂಸೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ನಟ ದೀಪ್ ಸಿಧು ಅನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
Recommended Video
ಜನವರಿ 26 ರ ಗಣರಾಜ್ಯೋತ್ಸವ ದಿನದಂದು ಕೃಷಿ ಕಾಯ್ದೆ ವಿರೋಧಿಸಿ ಹಲವು ತಿಂಗಳಿಂದ ದೆಹಲಿಯ ಹೊರವಲಯದಲ್ಲಿ ಪ್ರತಿಭಟನೆ ಮಾಡುತ್ತಿದ್ದ ರೈತರು ದೆಹಲಿ ಛಲೋ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಆ ದಿನ ರೈತರು ಹಾಗೂ ಪೊಲೀಸರ ನಡುವೆ ಚಕಮಕಿ ಉಂಟಾಗಿ ಕೆಲವೆಡೆ ಹಿಂಸಾಚಾರ ಸಹ ನಡೆಯಿತು. ಅದೇ ದಿನ ದೆಹಲಿಯ ಐತಿಹಾಸಿಕ ಕೆಂಪು ಕೋಟೆ ಮುಂದೆ ರೈತ ಧ್ವಜ ಹಾಗೂ ಸಿಖ್ಖರ ಪವಿತ್ರ ಧ್ವಜ ಹಾರಿಸಲಾಯಿತು.

ಧ್ವಜ ಹಾರಿಸಿದಕ್ಕೆ ಪಂಜಾಬಿ ನಟ ದೀಪ್ ಸಿಧು ಕಾರಣ ಎನ್ನಲಾಗಿತ್ತು. ಅದಕ್ಕೆ ತಕ್ಕಂತೆ ಧ್ವಜ ಹಾರಿದ ಮರುಕ್ಷಣವೇ ದೀಪ್ ಸಿಧು ಸ್ಥಳದಿಂದ ಬೈಕ್ ಹತ್ತಿ ಪರಾರಿಯಾಗುತ್ತಿರುವ ವಿಡಿಯೋಗಳು ವೈರಲ್ ಆಗಿದ್ದವು. ಘಟನೆ ನಂತರ ನಟ ದೀಪ್ ಸಿಧು ವಿರುದ್ಧ ಪ್ರಕರಣ ದಾಖಲಾಗಿತ್ತು. ಇಷ್ಟು ದಿನ ನಾಪತ್ತೆ ಆಗಿದ್ದ ದೀಪ್ ಸಿಧು ಅನ್ನು ಇದೀಗ ಬಂಧಿಸಲಾಗಿದೆ.
ಚಂಡೀಘಡ ಮತ್ತು ಅಂಬಾಲ ಬಳಿಯ ಜೀರಕ್ಪುರ ಎಂಬಲ್ಲಿ ಅಡಗಿದ್ದ ದೀಪ್ ಸಿಧುವನ್ನು ದೆಹಲಿ ಪೊಲೀಸರ ವಿಶೇಷ ಘಟಕ ಇಂದು ಬಂಧಿಸಿದೆ. ಜನವರಿ 26 ರಿಂದಲೂ ದೀಪ್ ಸಿಧುಗಾಗಿ ಹುಡುಕಾಟ ನಡೆಸಲಾಗುತ್ತಿತ್ತು.
ದೀಪ್ ಸಿಧು ಜೊತೆಗೆ ರೌಡಿ ಶೀಟರ್ ಆಗಿರುವ ಲಖನ್ ಸದ್ದಾ ಎಂಬಾತನನ್ನೂ ಪೊಲೀಸರು ಬಂಧಿಸಿದ್ದರು. ಕೆಂಪು ಕೋಟೆ ಬಳಿ ನಡೆದ ಹಿಂಸಾಚಾರಕ್ಕೆ ಈ ಇಬ್ಬರೂ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ನಾಪತ್ತೆಯಾಗಿದ್ದ ದೀಪ್ ಸಿಧು ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ಪ್ರಕಟಿಸುತ್ತಿದ್ದ. ಆ ವಿಡಿಯೋಗಳನ್ನು ತನ್ನ ವಿದೇಶಿ ಗೆಳತಿಯ ಸಹಾಯದಿಂದ ಪ್ರಕಟಿಸುತ್ತಿದ್ದನಂತೆ ದೀಪ್ ಸಿಧು. ವಿಡಿಯೋ ಚಿತ್ರೀಕರಿಸಿ ಕ್ಯಾಲಿಫೋರ್ನಿಯಾದಲ್ಲಿದ್ದ ಗೆಳತಿಗೆ ವಿಡಿಯೋ ಕಳಿಸುತ್ತಿದ್ದ ಅದನ್ನು ಆಕೆ ದೀಪ್ ಸಿಧು ಖಾತೆಯಿಂದ ಕ್ಯಾಲಿಫೋರ್ನಿಯಾದಲ್ಲಿ ಕೂತು ಅಪ್ ಲೋಡ್ ಮಾಡುತ್ತಿದ್ದಳು.
ನಾಪತ್ತೆಯಾಗಿದ್ದ ದೀಪ್ ಸಿಧು ಬಗ್ಗೆ ಸುಳಿವು ಕೊಟ್ಟವರಿಗೆ 1 ಲಕ್ಷ ರೂಪಾಯಿ ಹಣ ಬಹುಮಾನವಾಗಿ ನೀಡುವುದಾಗಿ ದೆಹಲಿ ಪೊಲೀಸರು ಘೋಷಿಸಿದ್ದರು.
ದೀಪ್ ಸಿಧು ಗೆ ಬಿಜೆಪಿ ಸಂಸದ ಸನ್ನಿ ಡಿಯೋಲ್ ಜೊತೆ ಬಾಂಧವ್ಯವಿದೆ. ದೀಪ್ ಸಿಧು, ಸನ್ನಿ ಡಿಯೋಲ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಒಟ್ಟಿಗಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಕಳೆದ ಲೋಕಸಭೆ ಚುನಾವಣೆಯಲ್ಲಿ ಸನ್ನಿ ಡಿಯೋಲ್ ಗೆ ಏಜೆಂಟ್ ಆಗಿ ಸಹ ದೀಪ್ ಸಿಧು ಕೆಲಸ ಮಾಡಿದ್ದ. ಆದರೆ ಸನ್ನಿ ಡಿಯೋಲ್, 'ನನಗೆ ದೀಪ್ ಸಿಧುಗೆ ಗೆಳೆತನ ಇಲ್ಲ' ಎಂದು ಹೇಳಿಕೆ ನೀಡಿದ್ದಾರೆ.


Click it and Unblock the Notifications











