ಧುರಂಧರ್ ಬಗ್ಗೆ ಹೊಟ್ಟೆ ಕಿಚ್ಚು, ರಣವೀರ್ ಸಿಂಗ್ ಕಂಡರೆ ಅಸೂಯೆ ; ಅಕ್ಷಯ್ ಕುಮಾರ್ ಮನದಲ್ಲೇನಿದೆ?
ಒಂದು ಚಿತ್ರ ಗೆದ್ದಾಗ, ಸಾಮಾನ್ಯವಾಗಿ ಛೇ ನಾನು ಆ ಚಿತ್ರದಲ್ಲಿ ಇರಬೇಕಿತ್ತು ಎಂಬ ಭಾವನೆ ಹಲವು ಸ್ಟಾರ್ ಮತ್ತು ನಾಯಕಿಯರಲ್ಲಿ ಬರುತ್ತೆ. ಇನ್ನೂ ಕೆಲ ಒಮ್ಮೆ ಇತಿಹಾಸದ ಪುಟಗಳಲ್ಲಿ ದಾಖಲಾದ ಚಿತ್ರದ ಪಾತ್ರ ಅರಸಿಕೊಂಡು ಕೂಡ ಬಂದಿರುತ್ತೆ. ಆದರೆ, ಕಾರಣಾಂತರಗಳಿಂದ ಅವಕಾಶ ಕೈ ತಪ್ಪಿರುತ್ತೆ.ಮತ್ತೊಮ್ಮೆ ಈಗೋ ನಡುವೆ ಬರುತ್ತೆ.
ಒಬ್ಬರು ಕೈ ಚೆಲ್ಲುವ ಅವಕಾಶಗಳಿಂದ ಮತ್ಯಾರದ್ದೋ ಭಾಗ್ಯದ ಬಾಗಿಲು ತೆರೆದಿರುತ್ತೆ. ಹೀಗಾದಾಗ ಹಲವರು ಕೈ ಕೈ ಹಿಸುಕಿಕೊಳ್ಳುತ್ತಾರೆ. ಇನ್ನೂ ಕೆಲವರು ಹೊಟ್ಟೆ ಕಿಚ್ಚು ಪಡುತ್ತಾರೆ. ದ್ವೇಷ, ಅಸೂಯೆ, ಹಗೆತನದಿಂದ, ಕಾಲೆಳೆಯಲು, ಸೇಡು ತೀರಿಸಿಕೊಳ್ಳಲು ಹಾತೊರೆಯುತ್ತಿರುತ್ತಾರೆ. ಈ ಸಾಲಿನಲ್ಲಿ ಅಕ್ಷಯ್ ಕುಮಾರ್ ಇದ್ಧಾರೆ ಎನ್ನುವ ಗುಮಾನಿ ಹಲವರಲ್ಲಿದೆ. ಈ ಅನುಮಾನವನ್ನು ಖುದ್ದು ಬಾಲಿವುಡ್ನ ಖಿಲಾಡಿ ಈಗ ದೂರ ಮಾಡಿದ್ಧಾರೆ.

ಹೌದು, ಎಲ್ಲರಿಗೆ ಗೊತ್ತಿರುವಂತೆ ''ಧುರಂಧರ್'' ಮೊದಲ ಭಾಗ ಬಾಲಿವುಡ್ನಲ್ಲಿ ಐತಿಹಾಸಿಕ ದಾಖಲೆ ಬರೆದಿದೆ. ಎರಡನೇ ಭಾಗಕ್ಕೆ ಬಹುದೊಡ್ಡ ವರ್ಗ ಜಾತಕ ಪಕ್ಷಿಯಂತೆ ಕಾಯುತ್ತಿದೆ. ಇನ್ನೂ ''ಧುರಂಧರ್'' ಚಿತ್ರದಲ್ಲಿ ಕೇವಲ ರಣವೀರ್ ಸಿಂಗ್ ಮಾತ್ರ ಇಲ್ಲ. ಅಕ್ಷಯ್ ಖನ್ನಾ.. ಸಂಜಯ್ ದತ್.. ಆರ್. ಮಾಧವನ್ .. ಮತ್ತು ಅರ್ಜುನ್ ರಾಂಪಾಲ್ ಅಂತಹ ಅತಿರಥ ಮಹಾರಥರು ಇದ್ಧಾರೆ.
ಆದರೆ, ಅಕ್ಷಯ್ ಕುಮಾರ್ ಈ ಚಿತ್ರದಲ್ಲಿ ಇಲ್ಲ. ಈ ವಿಚಾರ ಹಲವರಿಗೆ ನಿರಾಸೆಯನ್ನುಂಟು ಮಾಡಿತ್ತು. ಯಾಕೆಂದರೆ ''ಧುರಂಧರ್'' ಗೂಢಾಚಾರಿಯ ಕಥೆ. ಇಂತಹ ಚಿತ್ರ ಮತ್ತು ಪಾತ್ರಕ್ಕೆ ಅಕ್ಷಯ್ ಕುಮಾರ್ ಹೇಳಿ ಮಾಡಿಸಿದ ವ್ಯಕ್ತಿ. ಇದಕ್ಕೆ ಅವರ ಹಿಂದಿನ ''ಬೇಬಿ''.. ''ಸ್ಪೆಷಲ್ 26''.. ಸೇರಿ ಹಲವು ಉದಾಹರಣೆಗಳಿವೆ.
ಹೀಗಾಗಿಯೇ ಹಲವರು ''ಧುರಂಧರ್'' ಚಿತ್ರದಲ್ಲಿ ಅಕ್ಷಯ್ ಕುಮಾರ್ ಕೂಡ ಇರಬೇಕಿತ್ತು ಎಂಬ ಚರ್ಚೆಯನ್ನು ಕೆಲ ದಿನಗಳಿಂದ ಮಾಡುತ್ತಿದ್ಧಾರೆ. ಇನ್ನೂ ಕೆಲವರು ರಣವೀರ್ ಸಿಂಗ್ ಬದಲು ಅಕ್ಷಯ್ ಕುಮಾರ್ ಅವರೇ ಹಮ್ಜಾ ಅಲಿ ಪಾತ್ರವನ್ನು ಮಾಡಬೇಕಿತ್ತು ಎಂಬ ತಮ್ಮ ಮನದಾಸೆಯನ್ನು ಕೂಡ ಹೊರ ಹಾಕುತ್ತಿದ್ಧಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅಕ್ಷಯ್ ಕುಮಾರ್ ಈಗ ಪ್ರತಿಕ್ರಿಯೆ ನೀಡಿದ್ಧಾರೆ. ಈ ಕುರಿತು ''ಇಂಡಿಯಾ ಟುಡೇ ಕಾನ್ಕ್ಲೇವ್ 2026''ರಲ್ಲಿ ಮಾತನಾಡಿರುವ ಅಕ್ಷಯ್ ಕುಮಾರ್ ಕಾಲ ಕಾಲಕ್ಕೆ ಪ್ರೇಕ್ಷಕರ ಅಭಿರುಚಿಗಳು ಬದಲಾಗುತ್ತಿರುತ್ತಾವೆ ಎಂದು ಹೇಳಿದ್ದಾರೆ. ''ಧುರಂಧರ್'' ಚಿತ್ರವನ್ನೇ ಉದಾಹರಣೆಯನ್ನಾಗಿ ನೀಡಿದ್ಧಾರೆ.

''ಧುರಂಧರ್'' ಸಂಪೂರ್ಣವಾದ ಸಾಹಸ ಪ್ರಧಾನ ಸಿನಿಮಾ. ಇಡೀ ಚಿತ್ರದಲ್ಲಿ ರಕ್ತಪಾತ ಇದೆ. ಆದರೂ ಕೂಡ ಜನ ಆ ಚಿತ್ರವನ್ನು ಮೆಚ್ಚಿಕೊಂಡಿದ್ಧಾರೆ ಎಂದು ಹೇಳಿರುವ ಅಕ್ಷಯ್ ಕುಮಾರ್ ಆಂಗ್ರಿ ಯಂಗ್ ಮ್ಯಾನ್ ಅಂತಹ ಆ ಪಾತ್ರಕ್ಕೆ ರಣವೀರ್ ಸಿಂಗ್ ತುಂಬಾನೇ ಸೂಕ್ತ ವ್ಯಕ್ತಿ ಎಂದು ಹೇಳಿದ್ಧಾರೆ.
ಇನ್ನೂ ಇದೇ ವೇಳೆ ''ಧುರಂಧರ್'' ಚಿತ್ರದ ಅವಕಾಶ ನಿಮಗೆ ಬಂದಿತ್ತಾ ಎಂದು ಕೇಳಲಾದ ಪ್ರಶ್ನೆಗೆ ಕೂಡ ಉತ್ತರ ನೀಡಿರುವ ಅಕ್ಷಯ್ ಕುಮಾರ್, ಆದಿತ್ಯ ಧರ್ ಗೆ ನಾನು ನೆನಪಾಗಲಿಲ್ಲ, ಹೀಗಾಗಿ ಅವಕಾಶ ನನಗೆ ಸಿಗಲಿಲ್ಲ ಎಂದು ಹೇಳಿದ್ಧಾರೆ.
ಇದೇ ಸಮಯದಲ್ಲಿ ನನಗೆ ಯಾರಿಂದಲೂ ನಾನು ಅಸುರಕ್ಷಿತ ಎನ್ನುವ ಭಾವನೆ ನನ್ನಲ್ಲಿ ಬರುವುದಿಲ್ಲ ಎಂದು ಹೇಳಿರುವ ಅಕ್ಷಯ್ ಕುಮಾರ್, ನಮ್ಮಲ್ಲಿ ವರ್ಷಕ್ಕೆ 180 ರಿಂದ 200 ಸಿನಿಮಾ ಬರುತ್ತವೆ, ಇನ್ನೂ ನಾವು ಇರುವುದೇ 15-20 ನಟರು, ಎಲ್ಲರಿಗೂ ಕೂಡ ಇಲ್ಲಿ ಕೆಲಸ ಸಿಗುತ್ತೆ ಎಂದು ಹೇಳಿದ್ದಾರೆ.
ಆ ಚಿತ್ರ ನಾನು ಮಾಡಬೇಕಿತ್ತು ಎನ್ನುವ ವಿಷಾದ ನಮ್ಮಲ್ಲಿರುತ್ತೆ ಹೊರತು ಅಸೂಯೆ ಇರುವುದಿಲ್ಲ ಎಂದು ಹೇಳಿದ್ದಾರೆ. ನನಗೆ ಹಲವು ಬಾರಿ ರಣವೀರ್ ಸಿಂಗ್ ಸಿಕ್ಕಾಗ ನಿಮ್ಮ ಆ ಸಿನಿಮಾ ನಾನು ಮಾಡಬೇಕಿತ್ತು ಎನ್ನುತ್ತಾನೆ. ನಾನು ಅವನನ್ನು ಭೇಟಿಯಾದಾಗ ನಾನು ಕೂಡ ಇದೇ ಮಾತನ್ನು ಹೇಳುತ್ತೇನೆ, ಅದು ಸಾಮಾನ್ಯ ಎಂದು ಹೇಳಿದ್ಧಾರೆ. ನನಗೆ ಯಾರ ಮೇಲೂ ಹೊಟ್ಟೆ ಕಿಚ್ಚಿಲ್ಲ ಎಂದು ಪುನರುಚ್ಚಿಸಿದ್ಧಾರೆ.
ಅಂದ್ಹಾಗೇ ''ಧುರಂಧರ್ 2: ದಿ ರಿವೆಂಜ್'' ಚಿತ್ರ ಮಾರ್ಚ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದರ ಮೂರು ವಾರಗಳ ನಂತರ, ಅಕ್ಷಯ್ ಕುಮಾರ್ ಮತ್ತು ಪ್ರಿಯದರ್ಶನ್ ಅವರ ''ಭೂತ್ ಬಂಗ್ಲಾ'' ಚಿತ್ರವು ತೆರೆಗೆ ಬರಲಿದೆ. ತಮ್ಮ ಇದೇ ''ಭೂತ್ ಬಂಗ್ಲಾ'' ಚಿತ್ರದ ಪ್ರಚಾರದ ಸಮಯದಲ್ಲಿ ಅಕ್ಷಯ್ ಕುಮಾರ್ ಈ ಮಾತುಗಳನ್ನಾಡಿದ್ಧಾರೆ.


Click it and Unblock the Notifications











