ಕನ್ನಡದಲ್ಲಿ ರಾಜವರ್ಧನ್ ಜೊತೆ ರೊಮ್ಯಾನ್ಸ್ ಮಾಡಿದ್ದ ನಾಯಕಿಗೆ ಚಿತ್ರಹಿಂಸೆ ನೀಡಿದ ಬಾಯ್ಫ್ರೆಂಡ್, ಕಣ್ಣೀರಾದ ನಟಿ
ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತ ಸುದ್ದಿಗಳನ್ನು ನಾವು ಓದುತ್ತಲೇ ಇದ್ದೇವೆ, ಕೇಳುತ್ತಲೇ ಇದ್ದೇವೆ. ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರು, ಹುಡುಗಿಯರು, ದೈಹಿಕ, ಲೈಂಗಿಕ ಹಿಂಸೆ ಅನುಭವಿಸುತ್ತಾರೆ. ಚಿತ್ರರಂಗದಲ್ಲಿರುವ ನಾಯಕಿಯರು.. ಗಾಯಕಿಯರು ಕೂಡ ಇದರಿಂದ ಹೊರತಾಗಿಲ್ಲ. ಮದುವೆಯಾದ ನಂತರ ಹಲವು ನಾಯಕಿಯರು ತಮ್ಮ ಗಂಡನಿಂದ ದೌರ್ಜನ್ಯಕ್ಕೊಳಗಾಗಿದ್ದಾರೆ. ನರಕಯಾತನೆ ಅನುಭವಿಸಿದ್ದಾರೆ. ಸಂಬಂಧ ಮುರಿದುಕೊಂಡು ಡಿವೋರ್ಸ್ ನೀಡಿ ಹೊರ ಬಂದಿದ್ದಾರೆ.
ಮತ್ತೂ ಕೆಲವರು ಪ್ರೀತಿ-ಪ್ರೇಮದ ಹೆಸರಿನಲ್ಲಿ ಮಾನಸಿಕವಾಗಿ.. ದೈಹಿಕವಾಗಿ ನೊಂದು ಬೆಂದಿದ್ದಾರೆ. ಉದಾಹರಣೆಗೆ ನೈನಾ ಗಂಗೂಲಿ. ಹೌದು, ನೈನಾ ಗಂಗೂಲಿ.. ಬೆಂಗಾಲಿ ಚೆಲುವೆ. ರಾಮ್ ಗೋಪಾಲ್ ವರ್ಮಾ ಕಣ್ಣಿಗೆ ಬಿದ್ದ ನೈನಾ 2016ರಲ್ಲಿ ಆರ್ಜಿವಿ ನಿರ್ದೇಶನದ ''ವಂಗವೀಟಿ'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದರು.

ಆ ನಂತರ ಇದೇ ರಾಮ್ ಗೋಪಾಲ್ ವರ್ಮಾ ಜೊತೆ ''ಮೇರಿ ಬೇಟಿ ಸನ್ನಿ ಲಿಯೋನ್ ಬನನಾ ಚಾಹ್ತಿ ಹೈ'' ಎಂಬ ಶಾರ್ಟ್ ಫಿಲ್ಮ್ ಕೂಡ ಮಾಡಿದ ನೈನಾ ಆ ನಂತರ ರಾಮು ಜೊತೆ ಮತ್ತೆ ''ಡಿ ಕಂಪನಿ'' ಮತ್ತು ''ಡೇಂಜರಸ್'' ಚಿತ್ರಗಳಲ್ಲಿ ಕೆಲಸ ಮಾಡಿದರು.
2022ರ ಆಸು ಪಾಸು ''ಕನ್ನಡ ಚಿತ್ರರಂಗ''ಕ್ಕೆ ವಲಸೆ ಬಂದ ನೈನಾ ಗಂಗೂಲಿ, ರಾಜವರ್ಧನ್ ಅಭಿನಯದ ''ಪ್ರಣಯಂ'' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇಂಥಾ ನೈನಾ ಗಂಗೂಲಿ ಅವರ ಮೇಲೆ ಬಾಯ್ಫ್ರೆಂಡ್ ಹಲ್ಲೆ ಮಾಡಿದ್ದಾನೆ. ಪ್ರೀತಿಯ ಹೆಸರಿನಲ್ಲಿ ಚಿತ್ರ ಹಿಂಸೆಯನ್ನು ನೀಡಿದ್ದಾನೆ. ತಾವು ಅನುಭವಿಸಿದ ನರಕಯಾತನೆಯನ್ನು ಸೋಶಿಯಲ್ ಮೀಡಿಯಾ ಮೂಲಕ ನೈನಾ ಸದ್ಯ ಹಂಚಿಕೊಂಡಿದ್ದಾರೆ. ಭಾವುಕರಾಗಿದ್ದಾರೆ.

ಈ ಕುರಿತು ಬರೆದುಕೊಂಡಿರುವ ನೈನಾ ''ಕಳೆದ ಮೂರು ವರ್ಷಗಳಿಂದ ನನ್ನ ವ್ಯೆಯಕ್ತಿಕ ಕಾರಣಗಳಿಂದ ನಾನು ಚಿತ್ರರಂಗದಿಂದ ದೂರ ಇದ್ದೇನೆ. ಆದರೆ ಈಗ ಮಾತನಾಡಲೇಬೇಕಿದೆ. ಕಳೆದ ಕೆಲ ವರ್ಷಗಳಿಂದ ನಾನು ಕೋಲ್ಕತ್ತಾದ ಒಬ್ಬ ನೃತ್ಯ ನಿರ್ದೇಶಕನ ಜೊತೆ ಸಂಬಂಧದದಲ್ಲಿದ್ದೆ. ಆದರೆ.. ಆರಂಭದಲ್ಲಿ ಚೆನ್ನಾಗಿಯೇ ಇದ್ದ ಈ ಪ್ರೀತಿ ಆ ನಂತರ ಹಿಂಸೆಯ ಸ್ವರೂಪವನ್ನು ಪಡೆಯಿತು. ನಾನು ದೈಹಿಕ ಮತ್ತು ಮಾನಸಿಕ ಕಿರುಕುಳದಿಂದ ನರಳಿದ್ದೇನೆ. ಭಾವನಾತ್ಮಕವಾಗಿ ಸಂಪೂರ್ಣವಾಗಿ ಕುಸಿದು ಹೋಗಿದ್ದೇನೆ. ಆರ್ಥಿಕವಾಗಿ ಕೂಡ ನನಗೆ ನಷ್ಟವಾಗಿದೆ'' ಎಂದು ಹೇಳಿದ್ದಾರೆ. ನನಗೆ ಹಿಂಸೆ ನೀಡಿದ ವ್ಯಕ್ತಿಯ ಹೆಸರನ್ನು ನಿಮ್ಮೆಲ್ಲರ ಮುಂದೆ ಶ್ರೀಘ್ರದಲ್ಲಿಯೇ ಹೇಳುತ್ತೇನೆ ಎಂದು ಕೂಡ ಹೇಳಿದ್ದಾರೆ.
ನೈನಾ ಅವರ ಈ ಮನದ ನೋವು ಸದ್ಯ ಇವರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ. ಹಲವರು ನೈನಾ ಅವರಿಗೆ ಧೈರ್ಯವನ್ನು ತುಂಬುತ್ತಿದ್ದಾರೆ.
ಇನ್ನೂ ನೈನಾ ತಮಗೆ ನರಕ ದರ್ಶನ ಮಾಡಿಸಿದ ತಮ್ಮ ಬಾಯ್ಫ್ರೆಂಡ್ ಯಾರು..? ಅವರ ಹೆಸರೇನು..? ಎಂದು ಸೋಶೀಯಲ್ ಮೀಡಿಯಾ ಮೂಲಕ ಹೇಳಿಲ್ಲವಾದರೂ ಬೆಂಗಾಲಿನ ವೆಬ್ ಸೈಟ್ ''ಆನಂದ ಬಜಾರ್'' ಈ ಕುರಿತು ವರದಿಯನ್ನು ಮಾಡಿದೆ. ಅದರ ಪ್ರಕಾರ ನೈನಾ ಗಂಗೂಲಿ ನೀಡಿದ ದೂರಿನ ಆಧಾರದ ಮೇಲೆ ಕೋಲ್ಕತ್ತಾದ ಪಾಟುಲಿಯ ಪೊಲೀಸರು ನೈನಾ ಅವರ ಬಾಯ್ಫ್ರೆಂಡ್ ಮತ್ತು ನೃತ್ಯ ನಿರ್ದೇಶಕ ತುಬನ್ ಅವರನ್ನು ಬಂಧಿಸಿದ್ದಾರೆ. ಅಲಿಪುರ್ ನ್ಯಾಯಾಲಯಕ್ಕೆ ಕೂಡ ಹಾಜರು ಪಡಿಸಿದ್ದಾರೆ.
ಈ ಕುರಿತು ನೈನಾ ಗಂಗೂಲಿ ತಮ್ಮ ಜೊತೆ ಮಾತನಾಡಿದ್ದಾರೆ ಎಂದು ''ಆನಂದಬಜಾರ್'' ಪ್ರತಿಪಾದಿಸಿದ್ದು ತುಬನ್ ತಮ್ಮನ್ನು ಚಿತ್ರರಂಗದಿಂದ ದೂರ ಇರಿಸಿದ್ದರು ಎಂದು ನೈನಾ ಹೇಳಿದ್ದಾರೆ. ಮುಂದುವರೆದು ನೃತ್ಯ ಕಲಿಯಲು ಬರುವ ಹಲವು ವಿದ್ಯಾರ್ಥಿನಿಯರ ಜೊತೆ ತುಬನ್ಗೆ ದೈಹಿಕ ಸಂರ್ಪಕ ಇತ್ತು ಎಂದು ನೈನಾ ಹೇಳಿದ್ದು ತುಬನ್ ತನ್ನ ಮ್ಯಾನೇಜರ್ ಜೊತೆ ಎರಡು ವರ್ಷಗಳ ಕಾಲ ಲಿವ್ ಇನ್ ಸಂಬಂಧದಲ್ಲಿದ್ದ ಎಂದು ಕೂಡ ಹೇಳಿದ್ದಾರೆ. ಈ ಎಲ್ಲಾ ವಿಚಾರ ನನಗೆ ಗೊತ್ತೇ ಇರಲಿಲ್ಲ ಈ ಹಿನ್ನೆಲೆ ನಂಬಿ ನಾನು ಮೋಸ ಹೋದೆ ಎಂದು ಹೇಳಿದ್ದಾರೆ.
ಮುಂಬೈಗೆ ಹೋಗದಂತೆ ನನ್ನನ್ನೂ ತಡೆದ, ಯಾವುದಾದರೂ ಕಾರ್ಯಕ್ರಮಕ್ಕೆ ಹೋದರೆ ಪೂರ್ತಿ ಮೈ ಮುಚ್ಚುವಂತಹ ಬಟ್ಟೆಯನ್ನೇ ಹಾಕಿಕೊಂಡು ಹೋಗಬೇಕೆಂದು ಒತ್ತಾಯ ಮಾಡಿದ, ಕುಡಿದು ಬಂದು ಗಲಾಟೆ ಮಾಡುತ್ತಿದ್ದ, ಬಾಗಿಲಿಗೆ ಒದೆಯುತ್ತಿದ್ದ, ಹೊಡೆಯುತ್ತಿದ್ದ, ನನ್ನ ಮೇಲೆ ಹಲ್ಲೆ ಮಾಡುತ್ತಿದ್ದ ಎಂದು ಕೂಡ ನೈನಾ ''ಆನಂದ ಬಜಾರ್''ಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.


Click it and Unblock the Notifications











