ಜೈಲು ವಾಸ, 7 ವರ್ಷ ವನವಾಸ ; ಹಿರಿಯ ನಟ ಅನಂತ್ ನಾಗ್ ಜೊತೆ ಚಿತ್ರರಂಗಕ್ಕೆ ಮರಳಿದ ಸುಶಾಂತ್ ಸಿಂಗ್ ಪ್ರೇಯಸಿ ರಿಯಾ
ಕೆಲವರ ನಸೀಬೇ ಹಾಗೆ..! ಅದೆಷ್ಟೇ ಅಲೆದಾಡಿದರೂ ಅದೃಷ್ಟ ಎಂಬ ಮಾಯೆ ಒಲಿಯುವುದೇ ಇಲ್ಲ. ಎಷ್ಟೇ ಪ್ರಯತ್ನ ಮಾಡಿದರು ಕೂಡ ಗೆಲುವು ಸಿಗುವುದೇ ಇಲ್ಲ. ಹಾಗಂಥ.. ಇವರಲ್ಲಿ ಪ್ರತಿಭೆ ಇರಲ್ಲ ಅಂತಾನೂ ಅಲ್ಲ. ಬದಲಿಗೆ ತಮಗೆ ವಹಿಸಿದ ಕೆಲಸವನ್ನು ಪ್ರಾಮಾಣಿಕವಾಗಿ ಇವರು ಮಾಡುತ್ತಾರೆ. ಪಾತ್ರಕ್ಕೆ ನ್ಯಾಯ ಸಲ್ಲಿಸುವ ಪ್ರಯತ್ನವನ್ನು ಕೂಡ ಮಾಡುತ್ತಾರೆ.
ಆದರೂ ಕೂಡ ಗೆಲುವು ಇವರ ಪಾಲಿಗೆ. ಮರಿಚೀಕೆಯಾಗಿಯೇ ಉಳಿದು ಬಿಡುತ್ತೆ. ಗೆಲುವು ಸಿಗುವುದು ಇರಲಿ.. ಕೆಲ ಒಮ್ಮೆ ಅವಕಾಶ ಕೂಡ ಇವರಿಗೆ ಸಿಗುವುದಿಲ್ಲ. ಇನ್ನೂ ಕೆಲ ಒಮ್ಮೆ ಇನ್ನೇನು ಭಾಗ್ಯದ ಬಾಗಿಲು ತೆರೆಯಿತು ಎಂದುಕೊಳ್ಳುವಷ್ಟರಲ್ಲಿ ವಿಧಿ ಹೊಂಚು ಹಾಕಿರುತ್ತೆ. ಬದುಕನ್ನು ನರಕದ ಕೂಪಕ್ಕೆ ತಳ್ಳುತ್ತೆ. ಉದಾಹರಣೆಗೆ ರಿಯಾ ಚಕ್ರವರ್ತಿ.

ಹೌದು. ಬದುಕಿ ಬಾಳಬೇಕಿದ್ದ ಸುಶಾಂತ್ ಸಿಂಗ್ ರಜಪೂತ್ ನೇಣಿಗೆ ಕೊರಳೊಡ್ಡಿದ ನಂತರ ಮುನ್ನೆಲೆಗೆ ಬಂದವರು ರಿಯಾ ಚಕ್ರವರ್ತಿ. ಸುಶಾಂತ್ ಸಿಂಗ್ ರಜಪೂತ್ ಹಣದಲ್ಲಿ ಮೋಜು ಮಸ್ತಿ ಮಾಡುವುದಲ್ಲದೇ ಯುವ ನಾಯಕನನ್ನು ಮಾದಕ ವ್ಯಸನಿಯನ್ನಾಗಿಸಿದ ಅಪವಾದ ಹೊತ್ತು ಜೈಲು ಪಾಲಾದ ರಿಯಾ 28 ದಿನ ಬೈಕುಲ್ಲಾ ಜೈಲಿನಲ್ಲಿ ನರಕಯಾತನೆಯನ್ನು ಅನುಭವಿಸಿದರು.
ಇನ್ನೂ ಈ ಪ್ರಕರಣದಿಂದ ಮಾನಸಿಕ ಆಘಾತಕ್ಕೊಳಗಾಗಿದ್ದ ರಿಹಾ, ಕೆಲ ದಿನ ಖಿನ್ನತೆಗೆ ಜಾರಿದ್ದರು. ಇದರ ನಡುವೆ ಚಿತ್ರರಂಗ ಕೂಡ ಇವರನ್ನು ದೂರ ತಳ್ಳಿತ್ತು. ಮರೆತು ಹೋಗಿತ್ತು. ಇಂಥಾ ರಿಯಾ ಚಕ್ರವರ್ತಿ ಇದೀಗ 7 ವರ್ಷಗಳ ನಂತರ ಮರಳಿ ಬಣ್ಣದ ಲೋಕಕ್ಕೆ ಬಂದಿದ್ದಾರೆ. ಮುಖಕ್ಕೆ ಮೇಕಪ್ ಹಚ್ಚಿಕೊಂಡಿದ್ದಾರೆ. ಇವರ ಕಂಬ್ಯಾಕ್ಗೆ ಸಾಕ್ಷಿಯಾಗುತ್ತಿರುವ ಚಿತ್ರದ ಹೆಸರು ''ಫ್ಯಾಮಿಲಿ ಬಿಸಿನೆಸ್''.
ಇನ್ನೂ ಈ ಬಾರಿ ಇವರ ಅದೃಷ್ಟ ಖುಲಾಯಿಸುವ ಎಲ್ಲ ಲಕ್ಷಣಗಳಿವೆ. ಯಾಕೆಂದರೆ.. ಈ ಚಿತ್ರದ ನಿರ್ದೇಶಕ ಬೇರೆ ಯಾರು ಅಲ್ಲ. ಬದಲಿಗೆ ಹನ್ಸಲ್ ಮೆಹ್ತಾ. ಈ ಹಿಂದೆ ''ಶಾಹೀದ್''.. ''ಸ್ಕ್ಯಾಮ್ 1992''.. ''ಸ್ಕ್ಯಾಮ್ 2003''.. ''ಸ್ಕೂಪ್''.. ಅಂತಹ ಚಿತ್ರ ಮತ್ತು ವೆಬ್ ಸರಣಿಗಳನ್ನು ಮಾಡಿದವರು ಇವರು. ಇನ್ನು ಈ ವರ್ಷದ ನೆಟ್ಫ್ಲಿಕ್ಸ್ನ ಅತೀ ನಿರೀಕ್ಷಿತ ಚಿತ್ರಗಳಲ್ಲಿ ಇದು ಕೂಡ ಒಂದು. ಈ ಹಿನ್ನೆಲೆ ರಿಯಾ ಮುಂಬರುವ ದಿನಗಳಲ್ಲಿ ಬಾಲಿವುಡ್ನಲ್ಲಿ ನೆಲೆಯೂರುತ್ತಾರೆ ಎನ್ನುವ ನಂಬಿಕೆ ಸದ್ಯ ಹಲವರಲ್ಲಿದೆ.
ಇನ್ನೂ ರಿಯಾ ಪಾಲಿಗೆ ''ಫ್ಯಾಮಿಲಿ ಬಿಸಿನೆಸ್'' ಕೇವಲ ಸಿನಿಮಾ ಅಲ್ಲ. ಬದಲಿಗೆ ಮಾನಸಿಕ ತೊಳಲಾಟದಿಂದ ಬಿಡುಗಡೆಯ ಭಾಗ್ಯ. ಹಳೆಯದನ್ನೆಲ್ಲ ಮರೆತು ಮುನ್ನಡೆಯಲು ಸಿಕ್ಕ ಅವಕಾಶ. ಈ ಹಿನ್ನೆಲೆ ಭಾವುಕಗೊಂಡಿರುವ ರಿಯಾ ತಮ್ಮ ಬದುಕಿನ 6-7 ವರ್ಷವನ್ನೊಮ್ಮೆ ತಿರುಗಿ ನೋಡಿದ್ದಾರೆ. ಬಿಕ್ಕಿದ್ದಾರೆ.

''ಹಿಂದೂಸ್ತಾನ್ ಟೈಮ್ಸ್''ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ರಿಯಾ ನಟಿಯಾಗಬೇಕೆಂಬ ನನ್ನ ಕನಸಿಗೆ ಕೊಳ್ಳಿ ಬಿದ್ದಿತ್ತು ಎಂದು ಹೇಳಿದ್ದಾರೆ. ಅವಕಾಶಗಳಿಲ್ಲದೆ ನಾನು ನನ್ನ ಕನಸನ್ನು ಮರೆತು ಹೋಗಿದ್ದೇ, ಯೋಚನೆ ಮಾಡುವುದನ್ನು ಕೂಡ ನಿಲ್ಲಿಸಿದ್ದೇ ಎಂದು ಹೇಳಿರುವ ರಿಯಾ ಸಂಪೂರ್ಣವಾಗಿ ಕುಗ್ಗಿ ಹೋದ ನನ್ನನ್ನೂ ಮತ್ತೆ ಕೈ ಹಿಡಿದು ಈ ಪ್ರಪಂಚಕ್ಕೆ ಎಳೆದು ತಂದಿದ್ದು ಹನ್ಸಲ್ ಮೆಹ್ತಾ ಅವರೇ ಎಂದು ಹೇಳಿದ್ದಾರೆ.
ಆರಂಭದಲ್ಲಿ ನಾನು ಹಿಂದೇಟು ಹಾಕುತ್ತಿದ್ದೆ ಆಗ ಯಾವ ವಿಷಯ ನಿನ್ನನ್ನೂ ತಡೆಯುತ್ತಿದೆ, ಅಡ್ಡಿಯಾಗುತ್ತಿದೆ ಎಂದು ಹನ್ಸಲ್ ಸರ್ ಕೇಳಿದರು ಎಂದು ಹೇಳಿರುವ ರಿಯಾ ಆಗ ನಾನು ಆಕ್ಟಿಂಗ್ ಮಾಡುವುದನ್ನು ನಿಲ್ಲಿಸಿದ್ದೇನೆ ಎಂದು ಹೇಳಿದೆ, ಆಗ ಇದೇ ಕಾರಣಕ್ಕೆ ನೀನು ಈ ಪಾತ್ರ ಮಾಡಬೇಕು ಎಂದು ಹೇಳಿದರು ಎಂದು ಭಾವುಕರಾಗಿದ್ದಾರೆ.
7 ವರ್ಷಗಳ ನಂತರ ಮರಳಿ ಮತ್ತೆ ಚಿತ್ರೀಕರಣದ ಸ್ಥಳಕ್ಕೆ ಬರುವ ಅನುಭವ ತುಂಬಾನೇ ವಿಭಿನ್ನವಾಗಿತ್ತು ಎಂದು ಹೇಳಿರುವ ರಿಯಾ ಯಾರು ಕೆಲಸ ನೀಡದಿದ್ದಾಗ ನನಗೆ ತುಂಬಾ ನೋವಾಗುತ್ತಿತ್ತು ಎಂದು ಹೇಳಿದ್ದಾರೆ. ಕಡು ಕಷ್ಟ ಕಾಲದಲ್ಲಿ ತಮ್ಮ ಜೊತೆ ನಿಂತ ಸ್ನೇಹಿತರಿಗೆ ಧನ್ಯವಾದ ಹೇಳಿದ್ದಾರೆ.
ಅಂದ್ಹಾಗೇ ಈ ಚಿತ್ರದಲ್ಲಿ ಅನಿಲ್ ಕಪೂರ್ ಮತ್ತು ವಿಜಯ್ ವರ್ಮಾ ಇದ್ದಾರೆ. ಇನ್ನೂ ವಿಶೇಷ ಅಂದರೆ ನಮ್ಮ ಕನ್ನಡದ ದಂತಕತೆ ಪದ್ಮಭೂಷಣ ಅನಂತ್ ನಾಗ್ ಈ ಚಿತ್ರದಲ್ಲಿ ಬಹುಮುಖ್ಯವಾದ ಪಾತ್ರವನ್ನು ನಿರ್ವಹಿಸಿದ್ದಾರೆ. ಇನ್ನುಳಿದಂತೆ ರಿಯಾ ಕೊನೆಯದಾಗಿ ''ಜಿಲೇಬಿ'' ಚಿತ್ರದಲ್ಲಿ ಅಭಿನಯಿಸಿದ್ದರು. 2018ರಲ್ಲಿ ಈ ಚಿತ್ರ ತೆರೆಗೆ ಬಂದಿತ್ತು. ಈಗ 7 ವರ್ಷದ ನಂತರ ಮತ್ತೆ ಮರಳಿ ಬಂದಿದ್ದಾರೆ. ಈ ಹಿನ್ನೆಲೆ ಸೋಶಿಯಲ್ ಮೀಡಿಯಾದಲ್ಲಿ ಹಲವರು ಇವರಿಗೆ ಸುಸ್ವಾಗತವನ್ನು ಕೋರುತ್ತಿದ್ದಾರೆ.


Click it and Unblock the Notifications











