ಆ ಸಿನಿಮಾ ಹಿಂದಿಗೆ ರೀಮೆಕ್ ಮಾಡಲು ಬಿಗ್ಬಿ ಕಾಲ್ಶೀಟ್ ಕೇಳಲು ಹೋಗಿದ್ದ ರಿಷಬ್ ಶೆಟ್ಟಿ
ನಟ, ನಿರ್ದೇಶಕ ರಿಷಬ್ ಶೆಟ್ಟಿ ಈಗ ಭಾರತೀಯ ಚಿತ್ರರಂಗದ ನಂಬರ್ 1 ನಟ ಎನಿಸಿಕೊಂಡಿದ್ದಾರೆ. ಈ ವರ್ಷದ ಬಹುಜನಪ್ರಿಯ ನಟನಾಗಿ ಹೊರಹೊಮ್ಮಿದ್ದಾರೆ. 'ಕಾಂತಾರ- 1' ಸಿನಿಮಾ ತೆರೆಕಂಡು 15 ದಿನ ಕಳೆದರೂ ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ. ಕೌನ್ ಬನೇಗಾ ಕರೋಡ್ಪತಿ ಶೋನಲ್ಲಿ ಕೂಡ ರಿಷಬ್ ಶೆಟ್ಟಿ ಪಾಲ್ಗೊಂಡಿದ್ದರು.
ಕಿರುತೆರೆಯ ಅತಿ ಜನಪ್ರಿಯ ಕಾರ್ಯಕ್ರಮ ಕೌನ್ ಬನೇಗಾ ಕರೋಡ್ಪತಿ. ಇದೀಗ 17ನೇ ಸೀಸನ್ ನಡೀತಿದ್ದು ಹಿರಿಯ ನಟ ಅಮಿತಾಬ್ ಬಚ್ಚನ್ ನಿರೂಪಕರಾಗಿ ಸಾರಥ್ಯ ವಹಿಸಿದ್ದಾರೆ. 'ಕಾಂತಾರ- 1' ಪ್ರಚಾರದ ಭಾಗವಾಗಿ ರಿಷಬ್ ಶೆಟ್ಟಿ ದೇಶಾದ್ಯಂತ ಸುತ್ತಾಡುತ್ತಿದ್ದಾರೆ. ದೆಹಲಿ, ಮುಂಬೈಗೆ ಹೋಗಿ ಬಂದ ಡಿವೈನ್ ಸ್ಟಾರ್ ಈಗ ರಾಜ್ಯದ್ಯಂತ ವಿಜಯಯಾತ್ರೆ ಹಮ್ಮಿಕೊಂಡಿದ್ದಾರೆ.

ಇನ್ನು ಕೌನ್ ಬನೇಗಾ ಕರೋಡ್ಪತಿ 17 ಶೋನಲ್ಲಿ ಭಾಗಿ ಆಗಿ ರಿಷಬ್ ಕಮಾಲ್ ಮಾಡಿದ್ದಾರೆ. ರಜನಿಕಾಂತ್, ಮೋಹನ್ ಲಾಲ್ ಸ್ಟೈಲ್ ಪ್ರದರ್ಶಿಸಿ ಗಮನ ಸೆಳೆದಿದ್ದಾರೆ. ಬಿಗ್ ಬಿ ಎದುರು ಹಾಟ್ ಸೀಟ್ನಲ್ಲಿ ಕೂತು ಕೋಟಿ ಗೆಲ್ಲುವ ಆಟ ಆಡಿದ್ದಾರೆ. 12 ಪ್ರಶ್ನೆಗಳಿಗೆ ಉತ್ತರಿಸಿ 12.50 ಲಕ್ಷ ರೂ. ಬಹುಮಾನ ಗೆದ್ದಿದ್ದಾರೆ. ಈ ವೇಳೆ ಡಾ. ರಾಜ್ಕುಮಾರ್ ಬಗ್ಗೆ ಕೂಡ ಇಬ್ಬರೂ ಮಾತನಾಡಿದ್ದಾರೆ. ಇನ್ನು ನಾನು ನಿಮ್ಮ ದೊಡ್ಡ ಅಭಿಮಾನಿ ಎಂದು ಬಿಗ್ಬಿಗೆ ರಿಷಬ್ ಶೆಟ್ಟಿ ಹೇಳಿದ್ದಾರೆ.
ಕನ್ನಡದ ಒಂದು ಸೂಪರ್ ಹಿಟ್ ಚಿತ್ರವನ್ನು ಹಿಂದಿಗೆ ರೀಮೆಕ್ ಮಾಡಲು ರಿಷಬ್ ಶೆಟ್ಟಿ ಬಯಸಿದ್ದರು. ಅದಕ್ಕಾಗಿ ಬಿಗ್ಬಿ ಕಾಲ್ಶೀಟ್ ಕೇಳಿ ಮುಂಬೈನಲ್ಲಿದ್ದ ಅವರ ಮನೆಗೂ ಭೇಟಿ ನೀಡಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಅರೇ, ನನ್ನನ್ನು ಭೇಟಿ ಮಾಡಲು ನೀವು ಬಂದಿದ್ರಾ? ಎಂದು ಬಿಗ್ಬಿ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ರಿಷಬ್ ಶೆಟ್ಟಿ ಮಾತನಾಡಿ "ನಾನು ಒಮ್ಮೆ ಒಂದು ಸಿನಿಮಾ ಬಗ್ಗೆ ಚರ್ಚೆ ನಡೆಸಲು ನಿಮ್ಮ ಮನೆಗೆ ಬಂದಿದ್ದೆ. ಜಯಾ ಬಚ್ಚನ್ ಅವರನ್ನು ನೋಡಿದೆ. ನಿಮ್ಮನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಆದರೆ ನಿಮಗೆ ಸಿಕ್ಕಿರುವ ಪ್ರಶಸ್ತಿಗಳನ್ನೆಲ್ಲಾ ನಿಮ್ಮ ಮನೆಯಲ್ಲಿ ನೋಡಿದೆ" ಎಂದಿದ್ದಾರೆ. ಅಯ್ಯೋ ಆ ಪ್ರಶಸ್ತಿಗಳು ನನ್ನದು ಮಾತ್ರವಲ್ಲ ಅಭಿಷೇಕ್, ಐಶ್ವರ್ಯ ಎಲ್ಲರದ್ದೂ ಅಲ್ಲಿದೆ" ಎಂದು ತಿಳಿಸಿದ್ದಾರೆ.
ಕನ್ನಡ ಸರ್ಕಾರಿ ಶಾಲೆಗಳ ಉಳಿವಿನ ಬಗ್ಗೆ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ- ಕಾಸರಗೋಡು' ಸಿನಿಮಾ ಮಾಡಿದ್ದೆ. ಅತ್ಯುತ್ತಮ ಮಕ್ಕಳ ಸಿನಿಮಾ ರಾಷ್ಟ್ರಪ್ರಶಸ್ತಿ ಕೂಡ ಸಿಕ್ಕಿತ್ತು. ಅನಂತ್ ನಾಗ್ ಸರ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದೇ ಚಿತ್ರವನ್ನು ಹಿಂದಿಗೆ ರೀಮೆಕ್ ಮಾಡಲು ನಿಮ್ಮ ಬಳಿ ಚರ್ಚಿಸಲು ಬಂದಿದ್ದೆ ಎಂದು ರಿಷಬ್ ಶೆಟ್ಟಿ ವಿವರಿಸಿದ್ದಾರೆ.
2018ರಲ್ಲಿ ತೆರೆಗೆ ಬಂದಿದ್ದ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ- ಕಾಸರಗೋಡು' ಸಿನಿಮಾ ಹಿಟ್ ಆಗಿತ್ತು. ರಿಷಬ್ ಶೆಟ್ಟಿ ತಮ್ಮ ಜೀವನದಲ್ಲಿ ನೋಡಿದ ಘಟನೆಗಳು, ಸರ್ಕಾರಿ ಶಾಲೆಗಳ ಉಳಿವಿನ ವಿಚಾರ ಇಟ್ಟುಕೊಂಡು ಮಾಡಿದ್ದ ಸಿನಿಮಾ ಇದು. ಸಣ್ಣದೊಂದು ಪಾತ್ರದಲ್ಲಿ ಅವರು ಬಣ್ಣ ಹಚ್ಚಿದ್ದರು. ಕಥೆ ಚಿತ್ರಕಥೆ ಬರೆದು ನಿರ್ಮಿಸಿ ನಿರ್ದೇಶನ ಮಾಡಿದ್ದರು.
ಹಿರಿಯ ನಟ ಅನಂತ್ ನಾಗ್ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡ್, ರಮೇಶ್ ಭಟ್ ಜೊತೆಗೆ ಸಾಕಷ್ಟು ಪುಟಾಣಿ ಮಕ್ಕಳು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಅಜನೀಶ್ ಹಿನ್ನೆಲೆ ಸಂಗೀತ, ವಾಸುಕಿ ವೈಭವ್ ಸಂಗೀತ ಹಾಡುಗಳು ಚಿತ್ರದ ಜೀವಾಳ. ಅಮಿತಾಬ್ ಈ ಚಿತ್ರದ ರೀಮೆಕ್ನಲ್ಲಿ ನಟಿಸಿದ್ದರೆ ಸೊಗಸಾಗಿ ಇರುತ್ತಿತ್ತು.


Click it and Unblock the Notifications











