ಮತ್ತೆ ಬಂದ್ ಆಗಲಿವೆಯೇ ಚಿತ್ರಮಂದಿರಗಳು? ಯಾವ ಸಿನಿಮಾಗಳಿಗೆ ಸಂಕಷ್ಟ?
ದೇಶದಲ್ಲಿ ಮತ್ತೆ ಕೋವಿಡ್ ಭೀತಿ ಆರಂಭಗೊಂಡಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ದಿನೇ-ದಿನೇ ಹೆಚ್ಚಾಗುತ್ತಿದೆ.
ಮಹಾರಾಷ್ಟ್ರದಲ್ಲಿ ವಿಶೇಷವಾಗಿ ಮುಂಬೈನಲ್ಲಿ ಕೋವಿಡ್ ಪ್ರಕರಣದಲ್ಲಿ ತೀವ್ರಗತಿಯಾಗಿ ಏರಿಕೆಯಾಗುತ್ತಿದೆ. ಶಾರುಖ್ ಖಾನ್, ಕತ್ರಿನಾ ಕೈಫ್ ಸೇರಿದಂತೆ ಹಲವು ಬಾಲಿವುಡ್ ಸ್ಟಾರ್ ನಟ-ನಟಿಯರಿಗೆ ಕೋವಿಡ್ ಆಗಿದ್ದು ಆತಂಕವನ್ನು ಇನ್ನಷ್ಟು ಹೆಚ್ಚು ಮಾಡಿದೆ.
ಹಿಂದಿ ಸಿನಿಮಾಗಳ ಕೇಂದ್ರ ಎನ್ನಲಾಗುವ ಮುಂಬೈನಲ್ಲಿ ತೀವ್ರಗತಿಯಲ್ಲಿ ಕೋವಿಡ್ ಏರಿಕೆಯಾಗುತ್ತಿರುವುದು ಆತಂಕಕ್ಕೆ ಈಡು ಮಾಡಿದ್ದು, ಮುಂಬೈನಲ್ಲಿ ಮತ್ತೆ ಚಿತ್ರಮಂದಿರಗಳನ್ನು ಬಂದ್ ಮಾಡುವ ಬಗ್ಗೆ ಚರ್ಚೆಗಳು ಎದ್ದಿವೆ.
ನಿನ್ನೆ ಮುಂಬೈ ಒಂದರಲ್ಲಿಯೇ ಭಾನುವಾರ ಕೋವಿಡ್ ಪ್ರಕರಣಗಳು 1000 ದಾಟಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 5000 ದಾಟಿದೆ. ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಮಂದಿ ಕೋವಿಡ್ಗೆ ತುತ್ತಾಗುವ ಬಗ್ಗೆ ಆತಂಕ ವ್ಯಕ್ತಪಡಿಸಲಾಗಿದೆ.
ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾದಾಗ ಮೊದಲು ಮಾಡುವ ಕಾರ್ಯವೇ ಚಿತ್ರಮಂದಿರಗಳನ್ನು ಬಂದ್ ಮಾಡುವುದು ಹಾಗಾಗಿ ಈಗ ಮುಂಬೈನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದಂತೆಯೇ ಮತ್ತೆ ಚಿತ್ರಮಂದಿರಗಳನ್ನು ಬಂದ್ ಮಾಡುವ ಬಗ್ಗೆ ಚರ್ಚೆ ಆರಂಭವಾಗಿದೆ.

ಸ್ಟುಡಿಯೋಗಳಿಗೆ ಎಚ್ಚರಿಕೆ ನೀಡಿರುವ ಬಿಎಂಸಿ
ಬಿಎಂಸಿಯು ಈಗಾಗಲೇ ಸಿನಿಮಾ ಸ್ಟುಡಿಯೋಗಳಿಗೆ ಸೂಚನೆಗಳನ್ನು ರವಾನಿಸಿದ್ದು ಕೋವಿಡ್ ಬಗ್ಗೆ ಎಚ್ಚರಿಕೆವಹಿಸುವಂತೆ ಹೇಳಿದೆ. ಕರಣ್ ಜೋಹರ್ ಹುಟ್ಟುಹಬ್ಬದ ಪಾರ್ಟಿಯಿಂದಾಗಿ ಶಾರುಖ್ ಖಾನ್, ಕತ್ರಿನಾ ಕೈಫ್ ಸೇರಿದಂತೆ ಹಲವು ಬಾಲಿವುಡ್ ಸ್ಟಾರ್ಗಳಿಗೆ ಕೋವಿಡ್ ಬಂದಿರುವ ಕಾರಣ ಯಾವುದೇ ಪಾರ್ಟಿಗಳನ್ನು ಅರೇಂಜ್ ಮಾಡದಂತೆಯೂ ಸೂಚನೆ ನೀಡಿದೆ.

ಮುಂಬೈನಲ್ಲಿ ಚಿತ್ರಮಂದಿರಗಳು ಬಂದ್?
ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಗೆ ಕಡಿವಾಣ ಹಾಕಲು ಮಹಾರಾಷ್ಟ್ರ ಆರೋಗ್ಯ ಸಚಿವರು ಸಭೆ ನಡೆಸಿದ್ದು, ಮುಂಬೈನಲ್ಲಿ ವಿಮಾನ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆ ತೀವ್ರಗೊಳಿಸಲಿದ್ದಾರೆ ಹಾಗೂ ಚಿತ್ರಮಂದಿರಗಳನ್ನು ಮತ್ತೆ ಬಂದ್ ಮಾಡುವ ಬಗ್ಗೆಯೂ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಚಿತ್ರಮಂದಿರಗಳನ್ನು ಬಂದ್ ಮಾಡುವ ಅಥವಾ 50% ಆಕ್ಯುಪೇಷನ್ನಲ್ಲಿ ಕಾರ್ಯನಿರ್ವಹಿಸುವ ಆದೇಶ ಶೀಘ್ರವೇ ಹೊರಬೀಳುವ ಸಾಧ್ಯತೆ ಇದೆ.

ಪ್ರಮುಖ ಸಿನಿಮಾ ಮಾರುಕಟ್ಟೆ ಮುಂಬೈ
ಕನ್ನಡದ ಕೆಲವು ಪ್ಯಾನ್ ಇಂಡಿಯಾ ಸಿನಿಮಾಗಳು ಸೇರಿದಂತೆ ವಿವಿಧ ಭಾಷೆಯ ಹಲವು ಸ್ಟಾರ್ ನಟರ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿದ್ದು, ಈ ಸಂದರ್ಭದಲ್ಲಿ ಪ್ರಮುಖ ಸಿನಿಮಾ ಮಾರುಕಟ್ಟೆಯಾದ ಮುಂಬೈನಲ್ಲಿ ಚಿತ್ರಮಂದಿರಗಳು ಬಂದ್ ಆದರೆ ಅದರ ಪರಿಣಾಮ ಇತರೆ ಚಿತ್ರರಂಗಗಳ ಮೇಲೆಯೂ ಬೀಳಲಿದೆ. ಹಾಗಾಗಿ ಹಿಂದಿ ಸಿನಿಮಾ ನಿರ್ಮಾಪಕರು ಮಾತ್ರವೇ ಅಲ್ಲದೆ ಬೇರೆ ಭಾಷೆಯ ಸಿನಿಮಾ ನಿರ್ಮಾಪಕರುಗಳು ಸಹ ಆತಂಕಕ್ಕೆ ಒಳಗಾಗಿದ್ದಾರೆ.

ಕನ್ನಡದ ಎರಡು ಪ್ಯಾನ್ ಇಂಡಿಯಾ ಸಿನಿಮಾ ಇದೆ
ಕನ್ನಡದ ಎರಡು ಪ್ಯಾನ್ ಇಂಡಿಯಾ ಸಿನಿಮಾಗಳು ಸಾಲಿನಲ್ಲಿವೆ. ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಸಿನಿಮಾ ಕನ್ನಡ ಸೇರಿದಂತೆ ಇತರೆ ಕೆಲವು ಭಾಷೆಗಳಲ್ಲಿಯೂ ಬಿಡುಗಡೆ ಆಗಲಿದೆ. ಮುಂಬೈ ಮಾತ್ರವೇ ಅಲ್ಲದೆ ಹಿಂದಿ ಬೆಲ್ಟ್ ಮೇಲೆ ರಕ್ಷಿತ್ ಶೆಟ್ಟಿ ಕಣ್ಣಿಟ್ಟಿದ್ದಾರೆ. ಒಂದೊಮ್ಮೆ ಮುಂಬೈನಲ್ಲಿ ಲಾಕ್ಡೌನ್ ಆದರೆ '777 ಚಾರ್ಲಿ' ಸಿನಿಮಾಕ್ಕೆ ನಷ್ಟವಾಗಲಿದೆ. ಇನ್ನು ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾ ಮುಂದಿನ ತಿಂಗಳು 28 ಕ್ಕೆ ಬಿಡುಗಡೆ ಆಗಲಿದ್ದು, ಮುಂಬೈನಲ್ಲಿ ಲಾಕ್ಡೌನ್ ಆದರೆ ಆ ಸಿನಿಮಾಕ್ಕೂ ದೊಡ್ಡ ನಷ್ಟವೇ ಆಗಲಿದೆ. ಹಾಗಾಗದಿರಲೆಂಬುದು ಸಿನಿಮಾ ಪ್ರೇಮಿಗಳ ಹಾರೈಕೆ.


Click it and Unblock the Notifications











