"ಇನ್ನು ಎಲ್ಲಾ ಮುಗೀತು" ಎಂದು ಜೆನಿಲಿಯಾಗೆ ರಿತೇಶ್ ಬ್ರೇಕಪ್ ಮೆಸೇಜ್!
ಬಹುಭಾಷಾ ನಟಿ ಜೆನಿಲಿಯಾ ಡಿಸೋಜಾ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ. ಮುಂಬೈ ಬೆಡಗಿ ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದಾರೆ. 'ಸತ್ಯ ಈಸ್ ಇನ್ ಲವ್' ಕನ್ನಡ ಚಿತ್ರದಲ್ಲಿ ಶಿವಣ್ಣನಿಗೆ ಜೋಡಿಯಾಗಿ ಮಿಂಚಿದ್ದರು. ಸದ್ಯ ಪತಿ ರಿತೇಶ್ ಬಗ್ಗೆ ಇಂಟ್ರೆಸ್ಟಿಂಗ್ ಸಂಗತಿಯನ್ನು ಜೆನಿಲಿಯಾ ಬಿಚ್ಚಿಟ್ಟಿದ್ದಾರೆ.
2003ರಲ್ಲಿ 'ತುಜೆ ಮೆರಿ ಕಸಂ' ಚಿತ್ರದಲ್ಲಿ ಜೆನಿಲಿಯಾ ಡಿಸೋಜಾ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಆ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದ ಸ್ವತಃ ರಿತೇಶ್ ದೇಶ್ಮುಖ್. ಹೀಗೆ ಮೊದಲ ಚಿತ್ರದಲ್ಲೇ ಇಬ್ಬರ ಪರಿಚಯವಾಗಿತ್ತು. ಬಳಿಕ ಇಬ್ಬರೂ ಪ್ರೀತಿಸಿ 9 ವರ್ಷಗಳ ಬಳಿಕ ಹಸೆಮಣೆ ಏರಿದರು. ತಮಿಳಿನ 'ಬಾಯ್ಸ್' ಚಿತ್ರದಲ್ಲಿ ನಟಿಸಿ ಜೆನಿಲಿಯಾ ಸೌತ್ ಸಿನಿಇಂಡಸ್ಟ್ರಿಗೆ ಬಂದರು.

ಶಂಕರ್ ನಿರ್ದೇಶನದ 'ಬಾಯ್ಸ್' ಸಿನಿಮಾ ಹಿಟ್ ಆಗಿತ್ತು. ಚಿತ್ರದಲ್ಲಿ ಸಿದ್ದಾರ್ಥ್ ಜೋಡಿಯಾಗಿ ಮಿಂಚಿದರು. ತೆಲುಗಿನ 'ಸೈ', 'ಹ್ಯಾಪಿ', 'ಢೀ' ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡಿದ್ದರು. ಅದೇ ಸಮಯದಲ್ಲಿ ಕನ್ನಡ ಸಿನಿಮಾ ಅವಕಾಶ ಸಿಕ್ಕಿತ್ತು. 'ಸಖತ್ ಫೇರ್ ಅಂಡ್ ಲವ್ಲಿ' ಎಂದು ಕಂಗೊಳಿಸಿದರು.
'ಬೊಮ್ಮರಿಲ್ಲು' ಸಿನಿಮಾ ಮುಂಬೈ ಬ್ಯೂಟಿಗೆ ತೆಲುಗು ಚಿತ್ರರಂಗದಲ್ಲಿ ದೊಡ್ಡ ಬ್ರೇಕ್ ಕೊಟ್ಟಿತ್ತು. ತೆಲುಗು, ತಮಿಳು ಜೊತೆ ಜೊತೆಗೆ ಹಿಂದಿ ಸಿನಿಮಾಗಳಲ್ಲಿ ಕೂಡ ಆಕೆ ನಟಿಸುತ್ತಾ ಬಂದಿದ್ದರು. ಮದುವೆ ಬಳಿಕ ಕೂಡ ಜೆನಿಲಿಯಾ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ 'ಸಿತಾರೆ ಝಮೀನ್ ಫರ್' ಹಾಗೂ 'ಜ್ಯೂನಿಯರ್' ಎನ್ನುವ ಮತ್ತೆರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮಾಜಿ ಸಚಿತ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ನಟನೆಯ ಚಿತ್ರ 'ಜ್ಯೂನಿಯರ್' ಕಾರಣಾಂತರಗಳಿಂದ ತಡವಾಗ್ತಿದೆ.

ರಿತೇಶ್ ಜೊತೆಗಿನ ಲವ್, ಮ್ಯಾರೇಜ್ ಬಗ್ಗೆ ಶ್ರೇಯಾ ಗೋಧಾವತ್ ಯೂಟ್ಯೂಬ್ ಚಾನಲ್ ಸಂದರ್ಶನಲ್ಲಿ ಜೆನಿಲಿಯಾ ಮಾತನಾಡಿದ್ದಾರೆ. ನಾವಿಬ್ಬರು ಪ್ರೀತಿಯಲ್ಲಿದ್ದಾಗ ರಿತೇಶ್ ಬ್ರೇಕಅಪ್ ಎಂದು ಮಧ್ಯರಾತ್ರಿ ಮೆಸೇಜ್ ಮಾಡಿದ್ದರು. ಅದನ್ನು ಓದಿ ಶಾಕ್ ಆಗಿದ್ದೆ ಎಂದು ನೆನಪಿಸಿಕೊಂಡಿದ್ದಾರೆ. ರಿತೇಶ್ ತುಂಟತನದ ಬಗ್ಗೆ ಮಾತನಾಡಿ ನಕ್ಕಿದ್ದಾರೆ. ಜೆನಿಲಿಯಾ ಹೇಳಿಕೆ ವೈರಲ್ ಆಗುತ್ತಿದೆ.
ತಮ್ಮಿಬ್ಬರ ಡೇಟಿಂಗ್ ದಿನಗಳ ಬಗ್ಗೆ ಜೆನಿಲಿಯಾ ಮಾತನಾಡಿದ್ದಾರೆ. ಪತಿಯ ಬಗ್ಗೆ ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ. ರಿತೇಶ್ ಬಹಳ ಸಿಂಪಲ್ ಹಾಗೂ ಲವ್ಲಿ ಪರ್ಸನ್, ಆತನನ್ನು ಮದುವೆ ಆಗಿದ್ದು ನನ್ನ ಜೀವನದ ಒಳ್ಳೆ ನಿರ್ಧಾರ. ಡೇಟಿಂಗ್ ಸಮಯದಲ್ಲಿ ಊಹಿಸದ ಘಟನೆಯಿಂದ ಶಾಕ್ ಆಗಿದ್ದೆ. ಬಳಿಕ ಅಸಲಿ ಸಂಗತಿ ಗೊತ್ತಾಗಿತ್ತು ಎಂದಿದ್ದಾರೆ.
"ನಮ್ಮಿಬ್ಬರ ಡೇಟಿಂಗ್ ಸಮಯದಲ್ಲಿ ನಡೆದ ಅದೊಂದು ಘಟನೆಯನ್ನು ನಾನು ಎಂದಿಗೂ ಮರೆಯುವುದಿಲ್ಲ. ರಿತೇಶ್ಗೆ ತಡವಾಗಿ ನಿದ್ರೆ ಮಾಡುವ ಅಭ್ಯಾಸವಿದೆ. ಆದರೆ ನಾನು ಆ ರೀತಿ ಅಲ್ಲ. ಬಹಳ ಬೇಗ ಮಲಗಿಬಿಡ್ತೀನಿ. ಒಮ್ಮೆ ಏನಾಯ್ಯು ಎಂದು ಗೊತ್ತಿಲ್ಲ. ಮಧ್ಯರಾತ್ರಿ ಒಂದು ಗಂಟೆಗೆ ಒಂದು ಟೆಕ್ಸ್ಟ್ ಮೆಸೇಜ್ ಬಂದಿತ್ತು. ಇನ್ನು "ಎಲ್ಲಾ ಮುಗೀತು" ಎಂದು ಒಂದು ಬ್ರೇಕಪ್ ಮೆಸೇಜ್ ಕಳುಹಿಸಿದ್ದರು.
ರಿತೇಶ್ ಕಳುಹಿಸಿದ್ದ ಮೆಸೇಜ್ ಅನ್ನು ನಾನು ಬೆಳಗ್ಗೆ ಎದ್ದು ಓದಿದ್ದೆ. ಬಹಳ ಆಘಾತವಾಗಿತ್ತು. ಮನಸ್ಸಿಗೆ ಬಹಳ ನೋವಾಯಿತು. ಏನಾಯ್ತೋ ಏನೋ ಅಂತೆಲ್ಲಾ ತಲೆಕೆಡಿಸಿಕೊಂಡಿದ್ದೆ. ಬೆಳಗ್ಗೆ 9 ಗಂಟೆಗೆ ರಿತೇಶ್ ಏಳುವವರಿಗೂ ನನಗೆ ಬೇಸರವಾಗಿತ್ತು. ನಾನು ಬಹಳ ಗೊಂದಲದಲ್ಲಿದ್ದೆ. ಆದರೆ ರಿತೇಶ್ ಆ ಮೆಸೇಜ್ ಕಳುಹಿಸಿದ್ದನ್ನು ಮರೆತುಬಿಟ್ಟಿದ್ದರು. ಬೆಳಗ್ಗೆ ಎದ್ದು ಎಂದಿನಂತೆ "ಏನ್ ಮಾಡ್ತಿದ್ದೀಯಾ?" ಎಂದು ಫೋನ್ ಮಾಡಿ ಕೇಳಿದ್ದರು.
ನನಗೆ ಬಹಳ ಕೋಪ ಬಂದಿತ್ತು. ಇನ್ನು ಮುಂದೆ ನಾವಿಬ್ಬರು ಮಾತನಾಡದೇ ಇರುವುದೇ ಒಳ್ಳೆಯದು, ನಿನಗೆ ಏನು ಅನ್ನಿಸುತ್ತಿದೆ? ಏನು ಆಗೇ ಇಲ್ಲ ಎನ್ನುವಂತೆ ಮಾತನಾಡುತ್ತೀರಲ್ಲಾ? ಎಂದು ಕಿರುಚಾಡಿದೆ. ಬಳಿಕ ರಾತ್ರಿ ಮೆಸೇಜ್ ಮಾಡಿದ್ದು ನೆನಪಿಸಿಕೊಂಡು ಅಯ್ಯೋ ಅದು ತಮಾಷೆಯಾಗಿ ಕಳುಹಿಸಿದ ಮೆಸೇಜ್ ಎಂದು ಹೇಳಿದರು. ಏಪ್ರಿಲ್ ಫಸ್ಟ್ ಆಗಿದ್ದರಿಂದ ಫೂಲ್ ಮಾಡಿದ್ದಾಗಿ ಹೇಳಿದರು. ಬಳಿಕ ಎಲ್ಲಾ ಅರ್ಥ ಆಯ್ತು ಎಂದು ಜೆನಿಲಿಯಾ ದೇಶ್ಮುಖ್ ವಿವರಿಸಿದ್ದಾರೆ.


Click it and Unblock the Notifications











