ಮುಂಬೈನಿಂದ ಬಂದೇ ಬಿಡ್ತು ಬಿಗ್ ಅಪ್ಡೇಟ್; ಯಶ್ ಫ್ಯಾನ್ಸ್ ದಿಲ್ಖುಷ್
ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. 'KGF- 2' ಸಿನಿಮಾ ಬಂದೋಗಿ 3 ವರ್ಷವಾಯಿತು. ಆ ಬಳಿಕ ಅವರ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಅದಕ್ಕಿಂತ ದೊಡ್ಡದಾಗಿಯೇ ಏನಾದರೂ ಮಾಡಬೇಕು ಎಂದು ಯಶ್ ಹಠಕ್ಕೆ ಬಿದ್ದಿದ್ದಾರೆ. 'ಟಾಕ್ಸಿಕ್' ಚಿತ್ರವನ್ನು ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ತೆರೆಗೆ ತರುವ ಪ್ರಯತ್ನ ಮಾಡ್ತಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಸೆಟ್ ಹಾಕಿ 'ಟಾಕ್ಸಿಕ್' ಚಿತ್ರದ ಬಹುಮುಖ್ಯ ಸನ್ನಿವೇಶಗಳನ್ನು ಸೆರೆಹಿಡಿಯಲಾಗಿತ್ತು. ನಯನತಾರಾ ಸೇರಿದಂತೆ ಪ್ರಮುಖ ಕಲಾವಿದರು ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು ಎನ್ನಲಾಗಿತ್ತು. ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಯಶ್ ಹೀರೊ ಆಗಿ ನಟಿಸುವುದರ ಜೊತೆಗೆ ತಾವೇ ನಿರ್ಮಾಪಕರಾಗಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ದೊಡ್ಡಮಟ್ಟದಲ್ಲಿ 'ಟಾಕ್ಸಿಕ್' ಚಿತ್ರವನ್ನು ತೆರೆಗೆ ತರುವ ಪ್ರಯತ್ನ ಮಾಡ್ತಿದ್ದಾರೆ. ಚಿತ್ರದ ಸ್ಟಾರ್ಕಾಸ್ಟ್, ಕಥೆ ಯಾವುದರ ಬಗ್ಗೆಯೂ ಚಿತ್ರತಂಡ ಮಾಹಿತಿ ಬಿಟ್ಟುಕೊಡುತ್ತಿಲ್ಲ. ಡಿಸೆಂಬರ್ನಲ್ಲಿ ಸಿನಿಮಾ ತೆರೆಗೆ ಬರಬಹುದು ಎನ್ನುವ ಲೆಕ್ಕಾಚಾರ ನಡೀತಿದೆ. ಇನ್ನು 'ಟಾಕ್ಸಿಕ್' ಜೊತೆಗೆ ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಚಿತ್ರದಲ್ಲಿ ಯಶ್ ರಾವಣನ ಪಾತ್ರ ಮಾಡುತ್ತಿದ್ದಾರೆ.
ಬಹಳ ದೊಡ್ಡಮಟ್ಟದಲ್ಲಿ 'ರಾಮಾಯಣ' ಕಾವ್ಯವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ. ಶ್ರೀರಾಮನಾಗಿ ರಣ್ಬೀರ್ ಕಪೂರ್, ಸೀತಾಮಾತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಇನ್ನು ಲಕ್ಷ್ಮಣನಾಗಿ ರವಿ ದುಬೆ, ಹನುಮಂತನಾಗಿ ಸನ್ನಿ ಡಿಯೋಲ್ ಬಣ್ಣ ಹಚ್ಚಿದ್ದಾರೆ. ಇದೀಗ ಸದ್ದಿಲ್ಲದೇ ರಾವಣನ ಅವತಾರದಲ್ಲಿ ಯಶ್ ಚಿತ್ರೀಕರಣಕ್ಕೆ ಹಾಜರ್ ಆಗಿದ್ದಾರೆ.
ಹೌದು ನಟ ಯಶ್ 'ರಾಮಾಯಣ' ಚಿತ್ರದ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಎರಡು ದಿನಗಳ ಕಾಲ ಕಾಸ್ಟ್ಯೂಮ್ ಧರಿಸಿ ರಿಹರ್ಸಲ್ ಮಾಡಿದ ಬಳಿಕ ಇದೀಗ ಶೂಟಿಂಗ್ ಶುರುವಾಗಿದೆ ಎಂದು ಹೇಳಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಸಿಕ್ಕಿಲ್ಲ. ಬಹಳ ದೊಡ್ಡಮಟ್ಟದಲ್ಲೇ ಸಿನಿಮಾ ಚಿತ್ರೀಕರಣ ನಡೀತಿದೆ ಎನ್ನುವ ಮಾತುಗಳು ಕೇಳಿಬರ್ತಿದೆ.

ಈಗಾಗಲೇ ರಾವಣನ ಅವತಾರದಲ್ಲಿ ಯಶ್ AI ಫೋಟೊಗಳು ವೈರಲ್ ಆಗಿದೆ. ರಾವಣನಾಗಿ ರಾಕಿಂಗ್ ಸ್ಟಾರ್ ಆರ್ಭಟ ಹೇಗಿರುತ್ತದೆ ಎಂದು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡು ಭಾಗಗಳಾಗಿ ಸಿನಿಮಾ ನಿರ್ಮಾಣವಾಗುತ್ತಿದೆ. ಮುಂದಿನ ವರ್ಷ ದೀಪಾವಳಿ ಸಂಭ್ರಮದಲ್ಲಿ ಮೊದಲ ಭಾಗ ಪ್ರೇಕ್ಷಕರ ಮುಂದೆ ಬರಲಿದೆ. ಇವತ್ತಿನ ತಂತ್ರಜ್ಞಾನ ಬಳಸಿಕೊಂಡು ಬಹಳ ರೋಚಕವಾಗಿ ದೃಶ್ಯಕಾವ್ಯ ಕಟ್ಟಿಕೊಡುವ ಪ್ರಯತ್ನ ನಡೀತಿದೆ.
ಈ ಹಿಂದೆ ಮುಂಬೈನಲ್ಲೇ ಸೆಟ್ ಹಾಕಿ ರಾಮ- ಶ್ರೀತೆಯಾಗಿ ರಣ್ಬೀರ್ ಕಪೂರ್, ಸಾಯಿ ಪಲ್ಲವಿ ಭಾಗದ ದೃಶ್ಯಗಳನ್ನು ಸೆರೆಹಿಡಿಯಲಾಗಿತ್ತು. ಇದೀಗ ರಾವಣನಾಗಿ ಯಶ್ ಯುದ್ಧದ ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳುವ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ. ಮುಂಬೈನ ಅಕ್ಸಾ ಬೀಚ್ನಲ್ಲಿ ಯುದ್ಧ ಸನ್ನಿವೇಶ ಸೆರೆಹಿಡಿದ ಬಳಿಕ ತಂಡ ದಹಿಸರ್ನಲ್ಲಿರುವ ಸ್ಟುಡಿಯೋದಲ್ಲಿ ಚಿತ್ರೀಕರಣ ಮುಂದುವರೆಸುತ್ತಾರೆ ಎನ್ನಲಾಗ್ತಿದೆ.
ಗ್ರೀನ್ ಮ್ಯಾಟ್ನಲ್ಲಿ ಒಂದಷ್ಟು ಸನ್ನಿವೇಶಗಳನ್ನು ಸೆರೆಹಿಡಿದು ಅದಕ್ಕೆ ಗ್ರಾಫಿಕ್ಸ್ ಅಳವಡಿಸುವ ಪ್ರಯತ್ನ ನಡೀತಿದೆ. ರಾವಣನಾಗಿ ನಟಿಸುವುದರ ಜೊತೆಗೆ ಯಶ್ ನಿರ್ಮಾಪಕರಾಗಿಯೂ ಕೈಜೋಡಿಸಿದ್ದಾರೆ ಎನ್ನಲಾಗ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ 'ರಾಮಾಯಣ' ಸಿನಿಮಾ ಮೂಡಿ ಬರಲಿದೆ.
ಜಟಾಯು ಪಾತ್ರಕ್ಕೆ ಅಮಿತಾಬ್ ಬಚ್ಚನ್ ವಾಯ್ಸ್ ಕೊಡಲಿದ್ದಾರೆ. ಇನ್ನು ಕೈಕೇಯಿ ಆಗಿ ಲಾರಾ ದತ್ತಾ, ದಶರಥನಾಗಿ ಅರುಣ್ ಗೋವಿಲ್, ಶೂರ್ಪನಖಿಯಾಗಿ ರಕುಲ್ಪ್ರೀತ್ ಸಿಂಗ್ ಹೀಗೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಎ. ಆರ್. ರೆಹಮಾನ್ ಹಾಗೂ ಹ್ಯಾನ್ಸ್ ಜಿಮ್ಮರ್ ಸಂಗೀತ ಚಿತ್ರಕ್ಕಿದೆ. 800 ಕೋಟಿ ರೂ. ಬಜೆಟ್ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ ಎನ್ನುವ ಊಹಾಪೋಹ ಇದೆ.


Click it and Unblock the Notifications











