ರಾಜು ಶ್ರೀವಾಸ್ತವ್ ನಿಧನದ ಬಗ್ಗೆ ಕೆಟ್ಟ ಕಮೆಂಟ್ ಮಾಡಿದ ಕಮಿಡಿಯನ್!
ಹಾಸ್ಯನಟ, ಕಮಿಡಿಯನ್ ರಾಜು ಶ್ರೀವಾಸ್ತವ್ ನಿನ್ನೆಯಷ್ಟೆ ನಿಧನ ಹೊಂದಿದ್ದು ಪ್ರಧಾನಿ ಮೋದಿ ಅವರಿಂದ ಹಿಡಿದು ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಆದರೆ ಕೆಲವು ಹೊಸ ತಲೆಮಾರಿದ ಸ್ಟಾಂಡ್ಅಪ್ ಕಮಿಡಿಯನ್ಗಳು ರಾಜು ಶ್ರೀವಾಸ್ತವ್ ಬಗ್ಗೆ ಕೆಟ್ಟದಾಗಿಯೂ ಕಮೆಂಟ್ ಮಾಡಿದ್ದರು.
ಆದರೆ ಹೊಸ ತಲೆಮಾರಿನ ಸ್ಟಾಂಡಪ್ ಕಮಿಡಿಯನ್ ಎಂದೇ ಹೆಸರಾಗಿರುವ ರೋಹನ್ ಜೋಶಿ, ರಾಜು ಶ್ರೀವಾಸ್ತವ್ ಬಗ್ಗೆ ಮಾಡಿರುವ ಕಮೆಂಟ್ ನೆಟ್ಟಿಗರ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ನಿಧನ ಹೊಂದಿದ ವ್ಯಕ್ತಿಯ ಬಗ್ಗೆ ಕೀಳು ಭಾಷೆ ಬಳಸಿ ಕಮೆಂಟ್ ಮಾಡಿದ್ದರು ರೋಹನ್ ಜೋಶಿ.
ರೋಹನ್ ಜೋಶಿ ಸಹವರ್ತಿ ಸ್ಟಾಂಡಪ್ ಕಮಿಡಿಯನ್ ಆಗಿರುವ ಅತುಲ್ ಖತ್ರಿ, ರಾಜು ಶ್ರೀವಾಸ್ತವ್ ಅಗಲಿಕೆ ಬಗ್ಗೆ ಭಾರವಾದ ಹೃದಯದಿಂದ ಸಂತಾಪ ಸೂಚಿಸಿದ್ದರು. ನಿಮ್ಮನ್ನು ನಾವು ಬಹಳ ಮಿಸ್ ಮಾಡಿಕೊಳ್ಳುತ್ತೇವೆ ಎಂದಿದ್ದರು ಅತುಲ್ ಖತ್ರಿ. ಅವರ ಪೋಸ್ಟ್ ಅಡಿಯಲ್ಲಿ ಕಮೆಂಟ್ ಮಾಡಿದ್ದ ರೋಹನ್ ಜೋಶಿ ಕೀಳು ಭಾಷೆ ಬಳಸಿ ರಾಜು ಶ್ರೀವಾಸ್ತವ್ ಅನ್ನು ನಿಂದಿಸಿದ್ದರು.

''ರಾಜು ಶ್ರೀವಾಸ್ತವ್ ಅಗಲಿಕೆಯಿಂದ ಏನನ್ನೂ ನಾವು ಕಳೆದುಕೊಂಡಿಲ್ಲ. ಕುನಾಲ್ ಕಾಮ್ರಾ ಬಗ್ಗೆ ಅಥವಾ ಕಾಮಿಡಿ ರೋಸ್ಟ್ ಬಗ್ಗೆ ಅಥವಾ ಇನ್ನಾವುದೇ ಹೊಸ ತಲೆಮಾರಿನ ಕಮಿಡಿಯನ್ ಬಗ್ಗೆ ಯಾವುದೇ ವಿಷಯವಿದ್ದರೂ ಎಲ್ಲ ನ್ಯೂಸ್ ಚಾನೆಲ್ಗಳಿಗೂ ಹೋಗಿ ಬಾಯಿಗೆ ಬಂದಂತೆ ರಾಜು ಶ್ರೀವಾಸ್ತವ್ ಮಾತನಾಡುತ್ತಿದ್ದರು. ಆತ ಒಬ್ಬ ಅವಕಾಶವಾದಿ. ಅದರಲ್ಲಿಯೂ ಹೊಸ ತಲೆಮಾರಿನ ಕಮಿಡಿಯನ್ಗಳ ಬಗ್ಗೆ ಬಹಳ ಕೆಟ್ಟದಾಗಿ ಆತ ಮಾತನಾಡುತ್ತಿದ್ದ. ಎಲ್ಲಾ ನ್ಯೂಸ್ ಚಾನೆಲ್ಗಳಿಗೂ ಹೋಗಿ ಹೊಸ ಅಲೆಯ ಸ್ಟಾಂಡಪ್ ಕಮಿಡಿ ಸರಿಯಿಲ್ಲ ಅದು ಕೆಟ್ಟದು, ಅದು ಇನ್ನೊಬ್ಬರ ಮನ ನೋಯಿಸುವ ರೀತಿಯಲ್ಲಿರುತ್ತದೆ ಎಂದೆಲ್ಲ ಹೇಳುತ್ತಿದ್ದ. ಆತನಿಗೆ ಹೊಸ ತಲೆಮಾರಿನ ಹಾಸ್ಯ ಇಷ್ಟವಾಗುತ್ತಿರಲಿಲ್ಲ ಎಂದು ಆತ ಹೀಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದ. ಹಾಗೂ ಕಾಮಿಡಿ ಕ್ಷೇತ್ರದಲ್ಲಿ ಹೊಸ ತಾರೆಗಳ ಉಗಮ ಆತನಿಗೆ ಸಹಿಸಲಾರದಾಗಿತ್ತು, ಕೆಲವು ಒಳ್ಳೆಯ ಜೋಕ್ಗಳನ್ನು ಆತ ಈ ಹಿಂದೆ ಹೇಳಿರಬಹುದು ಆದರೆ ಹಾಸ್ಯದ ನಿಜವಾದ ಸ್ಪೂರ್ತಿ ಆತನಿಗೆ ಇರಲಿಲ್ಲ. ಆತನನ್ನು ಬಿಟ್ಟಾಕಿ, ಆತ ಹೋಗಿದ್ದು ಒಳ್ಳೆಯದಾಯಿತು'' ಎಂದು ಕಮೆಂಟ್ ಮಾಡಿದ್ದರು ರೋಹನ್ ಜೋಶಿ.
ರೋಹನ್ ಜೋಶಿಯ ಈ ದ್ವೇಷಪೂರಿತ ಕಮೆಂಟ್ಗೆ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ರೋಹನ್ ಜೋಶಿ ತಮ್ಮ ಕಮೆಂಟ್ ಅನ್ನು ಡಿಲೀಟ್ ಮಾಡಿದ್ದು, ಸ್ಪಷ್ಟನೆಯ ಪೋಸ್ಟ್ ಒಂದನ್ನು ಹಂಚಿಕೊಂಡು, ''ಆ ಕ್ಷಣಿಕ ಸಮಯದ ಸಿಟ್ಟಿನ ಬಳಿಕ ಮನದಟ್ಟಾಯಿತು, ನನ್ನ ವೈಯಕ್ತಿಕ ಭಾವನೆಯನ್ನು ಹಂಚಿಕೊಳ್ಳಲು ಸಮಯ ಇದಲ್ಲ ಎಂದೆನಿಸಿತು. ಹಾಗಾಗಿ ನನ್ನ ಕಮೆಂಟ್ ಅನ್ನು ಡಿಲೀಟ್ ಮಾಡಿದ್ದೇನೆ. ನಿಮಗೆ ಬೇಸರವಾಗಿದ್ದರೆ ಕ್ಷಮಿಸಿ'' ಎಂದಿದ್ದಾರೆ.
ಎಐಬಿನಲ್ಲಿದ್ದ ರೋಹನ್ ಜೋಶಿ, ತನ್ಮಯ್ ಭಟ್, ಅಭಿಷ್ ಮ್ಯಾಥ್ಯೂ, ಕಂಭಾ ಜೊತೆ ಸೇರಿ ರಣ್ವೀರ್ ಸಿಂಗ್ ಹಾಗೂ ಅರ್ಜುನ್ ಕಪೂರ್ ಅವರನ್ನು ರೋಸ್ಟ್ ಮಾಡಿದ್ದರು. ಕೀಳು ಅಭಿರುಚಿಯ ಜೋಕ್ ಮಾಡಿದ್ದ ಎಐಬಿ ಬಗ್ಗೆ ರಾಷ್ಟ್ರದೆಲ್ಲೆಡೆ ವಿರೋಧ ವ್ಯಕ್ತವಾಗಿತ್ತು. ಆಗ ರಾಜು ಶ್ರೀವಾಸ್ತವ್ ಸೇರಿದಂತೆ ಹಲವು ಹಿರಿಯ ಕಮಿಡಿಯನ್ಗಳು ಈ ಹೊಸ ತಲೆಮಾರಿನ ಕಮಿಡಿಯನ್ಗಳನ್ನು ತೀವ್ರವಾಗಿ ವಿರೋಧಿಸಿದ್ದರು. ಆ ಬಳಿಕವೂ ಸ್ಟಾಂಡಪ್ ಕಮಿಡಿಯನ್ ಕುನಾಲ್ ಕಾಮ್ರಾ ವಿವಾದವಾದಾಗಲೂ ರಾಜು ಶ್ರೀವಾಸ್ತವ್ ಕೆಲವು ಸುದ್ದಿ ಮಾಧ್ಯಮಗಳ ಚರ್ಚೆಯಲ್ಲಿ ಭಾಗವಹಿಸಿ ಸ್ಟಾಂಡಪ್ ಕಮಿಡಿಯನ್ಗಳನ್ನು ತೀವ್ರವಾಗಿ ಟೀಕಿಸಿದ್ದರು. ಹಾಗಾಗಿ ರೋಹನ್ ಜೋಶಿ ಸೇರಿದಂತೆ ಹಲವು ಹೊಸ ತಲೆಮಾರಿನ ಸ್ಟಾಂಡಪ್ ಕಮಿಡಿಯನ್ಗಳಿಗೆ ರಾಜು ಶ್ರೀವಾಸ್ತವ್ ಮೇಲೆ ಅಸಮಾಧಾನವಿದೆ.


Click it and Unblock the Notifications











