ಮನೆಹಾಳಿ ಎಂದಿದ್ದಕ್ಕೆ ಮನನೊಂದ ಆರ್ಜೆ ಮಹ್ವಾಶ್ ; ಯುಜುವೇಂದ್ರ ಚಹಲ್ಗೆ ಗುಡ್ ಬೈ ಹೇಳಿದ ನಟಿ ?
ಪ್ರೀತಿ ಎಂಬ ಈ ಎರಡಕ್ಷರ ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿದೆ. ಅನೇಕರಿಗೆ ಜೀವನ ನೀಡಿದೆ. ಇನ್ನೂ ಹಲವರ ಜೀವನ ಕಸಿದುಕೊಂಡಿದೆ. ಖುಷಿ, ನೋವು, ಸ್ವಾರ್ಥ, ಜಗಳ, ನಗು, ಮಾತು, ಮೌನ, ಆಸೆ, ಅಭಿಲಾಸೆ, ವಿರಹ, ಹೀಗೆ ಎಲ್ಲವೂ ಕೂಡ ಪ್ರೀತಿ ಹುಟ್ಟಿದ ದಿನವೇ ಚಿಗುರೊಡೆದು ಮರವಾಗಿ ಬೆಳೆಯುತ್ತದೆ. ಕೆಲವೊಮ್ಮೆ ಅಷ್ಟೇ ಬೇಗ ಉಸಿರನ್ನು ಚೆಲ್ಲುತ್ತದೆ.
ಬದಲಾದ ಈ ಕಾಲದಲ್ಲಿ ಕೇವಲ ಆಕರ್ಷಣೆಯಾಗದೆ ನಿಜವಾದ ಪ್ರೀತಿ ಆಗಿದ್ದರೆ ಮಾತ್ರ ಅದು ಕೊನೆವರೆಗೆ ಉಳಿಯುತ್ತದೆ. ಇಲ್ಲದಿದ್ದರೆ ಹುಟ್ಟಿದಷ್ಟೇ ಶರವೇಗದಲ್ಲಿ ಗುಡ್ ಬೈ ಹೇಳುತ್ತದೆ. ಯಜುವೇಂದ್ರ ಚಹಾಲ್ ಮತ್ತು ಆರ್ಜೆ ಮಹ್ವಾಶ್ ಅವರ ಪ್ರೇಮ ಕತೆ ಇದಕ್ಕೆ ಸದ್ಯದ ಉದಾಹರಣೆ ಎನ್ನುವುದೇ ಸದ್ಯದ ಬ್ರೇಕಿಂಗ್ ನ್ಯೂಸ್.

ಹೌದು, ಎಲ್ಲರಿಗೆ ಗೊತ್ತಿರುವಂತೆ ಧನಶ್ರೀ ವರ್ಮಾಗೆ ವಿಚ್ಛೇದನ ನೀಡಿದ ನಂತರ ಚಹಾಲ್ ಏಕಾಂಗಿ ಆಗಿದ್ದರು. ಆದರೆ.. ಅಷ್ಟರಲ್ಲಿ ಇವರ ಬದುಕಿನಲ್ಲಿ ಆರ್ಜೆ ಮಹ್ವಾಶ್ ಪ್ರವೇಶವಾಯ್ತು. 2025ರಲ್ಲಿ ದುಬೈನಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯ ಸಮಯದಲ್ಲಿ ಇಬ್ಬರು ಗ್ಯಾಲರಿಯಲ್ಲಿ ಕುಂತು ಮ್ಯಾಚ್ ಕಣ್ತುಂಬಿಕೊಂಡಿದ್ದರು.
ಆದರೆ, ಇದೇ ಸಮಯದಲ್ಲಿ ಇಬ್ಬರನ್ನು ಜೊತೆಯಲ್ಲಿ ಕಣ್ತುಂಬಿಕೊಂಡ ಹಲವರು ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ಎನ್ನುವ ಸುದ್ದಿಯನ್ನು ಹಬ್ಬಿಸಿದರು. ಇದಕ್ಕೆ ಪೂರಕವಾಗಿ ಹಲವು ಬಾರಿ ಆ ನಂತರ ಚಹಾಲ್ ಮತ್ತು ಮಹ್ವಾಶ್ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗುತ್ತಲೇ ಬಂದರು. ಹೀಗಾಗಿ ಹಬ್ಬಿರುವ ಈ ಸುದ್ದಿಯನ್ನು ಹಲವರು ನಿಜಾ ಎಂದುಕೊಂಡಿದ್ದರು. ಅಧಿಕೃತವಾಗಿ ಇಂದಲ್ಲ.. ನಾಳೆ.. ಇಬ್ಬರು ಘೋಷಣೆ ಮಾಡಬಹುದು, ಮದುವೆಯಾಗಬಹುದು ಎಂದು ಕಾಯುತ್ತಿದ್ದರು.
ಆದರೆ ಈಗ ಪ್ರೇಮ ಮತ್ತು ಸ್ನೇಹ ಸಂಬಂಧ ಮುರಿದು ಬಿದ್ದಂತೆ ಇದೆ. ಇದಕ್ಕೆ ಪುರಾವೆ ಎಂಬಂತೆ ಇನ್ಸ್ಟಾಗ್ರಾಮ್ನಲ್ಲಿ ಇಬ್ಬರು ಒಬ್ಬರನ್ನೊಬ್ಬರು ಅನ್ಫಾಲೋ ಮಾಡಿದ್ದಾರೆ. ವರಿಂದರ್ ಚಾವ್ಲಾ ಎಂಬ ಸೆಲೆಬ್ರಿಟಿ ಪಾಪರಾಜಿ ಮೂಲಕ ಈ ವಿಚಾರ ಜಗಜ್ಜಾಹೀರಾಗಿದ್ದು ಹಲವರು ಇಬ್ಬರ ಇನ್ಸ್ಟಾಗ್ರಾಮ್ ಖಾತೆಯನ್ನು ಈಗ ಇಣುಕಿ ನೋಡುತ್ತಿದ್ದಾರೆ. ಇಬ್ಬರು ಒಬ್ಬರನ್ನೊಬ್ಬರು ಫಾಲೋ ಮಾಡದಿರುವುದನ್ನು ಕಂಡು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಸಂಬಂಧ ಮುರಿದು ಬೀಳಲು ಕಾರಣವೇನಿರಬಹುದು ಎಂಬ ತನಿಖೆಯನ್ನು ಕೂಡ ಮಾಡುತ್ತಿದ್ದಾರೆ.
ಇದರ ನಡುವೆ ಕೆಲವರು ಮೊದಲಿಂದ ಚಹಾಲ್ ಮತ್ತು ಮಹ್ವಾಶ್ ಪರಸ್ಪರ ಫಾಲೋ ಮಾಡುತ್ತಿರಲಿಲ್ಲ ಎಂಬ ವಾದವನ್ನು ಕೂಡ ಕೆಲವರು ಇದೆಲ್ಲ ಊಹಾಪೋಹ ಆಗಿರಬಹುದು ಎನ್ನುತ್ತಿದ್ದಾರೆ. ಮತ್ತೂ ಕೆಲವರು ಈ ಸೆಲೆಬ್ರೆಟಿಗಳ ಡ್ರಾಮಾ ಇಲ್ಲಿಗೆ ಮುಗಿಯಲ್ಲ ಎಂದು ಕಿಡಿ ಕಾರುತ್ತಿದ್ದಾರೆ. ಇನ್ನೂ ಮನೆಹಾಳಿ ಎಂಬ ಪದ ಕೇಳಿ ಮನನೊಂದು ಯುಜುವೇಂದ್ರ ಚಹಾಲ್ ಅವರಿಂದ ಮಹ್ವಾಶ್ ದೂರ ಆದರಾ ಎನ್ನುವ ಅನುಮಾನವನ್ನು ಕೂಡ ಕೆಲವರು ವ್ಯಕ್ತಪಡಿಸುತ್ತಿದ್ದಾರೆ.

ಹೌದು, ಅಸಲಿಗೆ ಕೆಲ ತಿಂಗಳ ಹಿಂದೆ ಯುಜುವೇಂದ್ರ ಚಹಾಲ್, ''ರಾಜ್ ಶಮಾನಿ'' ಅವರಿಗೆ ಸಂದರ್ಶನವನ್ನು ನೀಡಿದ್ದರು. ಈ ಸಂದರ್ಶನದಲ್ಲಿ ಸಮಾಜದ ಮಾತುಗಳು ತಮ್ಮ ವ್ಯೆಯಕ್ತಿಕ ಬದುಕಿನ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತಿವೆ ಎಂದು ಹೇಳಿದ್ದರು.
ವಿಚ್ಚೇದನದ ನಂತರ ನಾನು ಮೊದಲ ಬಾರಿ ಒಬ್ಬರ ಕೊತೆ ಕಾಣಿಸಿಕೊಂಡೆ, ಅಷ್ಟೇ ಸಾಕಿತ್ತು. ಜನ ಬಾಯಿಗೆ ಬಂದಂತೆ ಮಾತನಾಡಲು ಶುರು ಮಾಡಿದರು ಎಂದು ಹೇಳಿದ್ದ ಚಹಾಲ್ ನಮ್ಮ ನಡುವೆ ಸಂಬಂಧ ಕಲ್ಪಿಸಿದರೆ ನಾನು ಕಣ್ಣೀರು ಹಾಕುತ್ತಾ ಕೂರಲು ಸಾಧ್ಯ ಇಲ್ಲ ಎಂದು ಹೇಳಿದ್ದರು.
ತಮ್ಮ ಸುತ್ತ ಮುತ್ತ ಕೇಳಿ ಬರುವ ಈ ಮಾತುಗಳ ಮಹ್ವಾಶ್ ಅವರ ಮೇಲೆ ಕೂಡ ಪರಿಣಾಮ ಬೀರಿವೆ ಎಂದು ಹೇಳಿದ್ದ ಯುಜುವೇಂದ್ರ ಚಹಾಲ್, ಆಕೆಯನ್ನು ಮನೆಹಾಳಿ ಅಂದರು, ಸಂಸಾರ ಮುರಿದು ಬಿದ್ದಿದ್ದಕ್ಕೆ ಆಕೆಯನ್ನೇ ಹೊಣೆಯಾಗಿಸಿದರು, ತುಂಬಾ ಅಶ್ಲೀಲ ಅಸಹ್ಯ ಅಸಭ್ಯ ಪದಗಳನ್ನೆಲ್ಲ ಬಳಸಿದರು ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದರು. ನನ್ನ ಕಷ್ಟದ ಸಮಯದಲ್ಲಿ ನನ್ನ ಜೊತೆ ನಿಂತ ನನ್ನ ಸ್ನೇಹಿತೆಯ ಬಗ್ಗೆ ಹೀಗೆಲ್ಲ ಮಾತನಾಡಿದಾಗ ನನಗೆ ತುಂಬಾ ಬೇಸರವಾಗುತ್ತಿತ್ತು ಎಂದು ಹೇಳಿದ್ದರು.
ನಾವು ಸ್ನೇಹಿತರ ಜೊತೆ ಹೊರಗಡೆ ಹೋದರೂ ಕೂಡ ನಮ್ಮ ಫೋಟೊ ಮಾತ್ರ ಕಟ್ ಮಾಡಿ ಬಳಸಲು ಶುರು ಮಾಡಿದರು ಎಂದು ಹೇಳಿದ್ದ ಚಹಾಲ್, ಇದೆಲ್ಲದರಿಂದ ಬೇಸತ್ತು ಬೇರೊಂದು ಕಥೆ ಹೆಣೆಯುತ್ತಾರೆ ಎಂದುಕೊಂಡು ನಾವು ಇಬ್ಬರು ಹೊರಗಡೆ ಹೋಗುವುದನ್ನೇ ನಿಲ್ಲಿಸಿದೆವು ಎಂದು ಹೇಳಿದ್ದರು.

ಮತ್ತೊಂದು ಕಡೆ ಆರ್ಜೆ ಮಹ್ವಾಶ್ ಕೂಡ ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ನಾವು ಕೇವಲ ಸ್ನೇಹಿತರಷ್ಟೇ ಎಂಬ ಸಂದೇಶವನ್ನು ಕಾಲ ಕಾಲಕ್ಕೆ ನೀಡುವ ಪ್ರಯತ್ನವನ್ನು ಕೂಡ ಮಾಡಿದ್ದರು. ನಮ್ಮ ನಡುವೆ ಪ್ರೇಮ ಸಂಬಂಧ ಇದೆ ಎನ್ನುವ ಸುದ್ದಿ ಆಧಾರ ರಹಿತ ಎಂದು ಹೇಳಿದ್ದರು. ಮತ್ತೊಬ್ಬರ ಮಾನ ಕಾಪಾಡಲು ನನ್ನ ಮಾನವನ್ನು ಹರಾಜು ಮಾಡಲಾಗುತ್ತಿದೆ ಎಂದು ಕಿಡಿ ಕಾರಿದ್ದರು. ಈಗ ನೋಡಿದರೆ ಇಬ್ಬರು ಪರಸ್ಪರ ಅನ್ಫಾಲೋ ಮಾಡಿದ್ದಾರೆ.
ಅಂದ್ಹಾಗೇ ಆರ್ಜೆ ಮಹ್ವಾಶ್ ಸದ್ಯ ಚಿತ್ರರಂಗವನ್ನು ಪ್ರವೇಶ ಮಾಡಿದ್ದಾರೆ. ಈಗಾಗಲೇ ನಿರ್ಮಾಪಕಿಯಾಗಿ ''ಸೆಕ್ಷನ್ 108'' ಚಿತ್ರವನ್ನು ನಿರ್ಮಾಣ ಮಾಡಿರುವ ಮಹ್ವಾಶ್ ''ಥೇಡಿ ಹೈ ಪರ್ ಮೇರಿ ಹೈ'' ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ.''ಪ್ಯಾರ್, ಪೈಸಾ, ಪ್ರಾಪಿಟ್'' ಎಂಬ ವೆಬ್ ಸರಣಿಯಲ್ಲಿ ಕೂಡ ಅಭಿನಯಿಸಿದ್ದಾರೆ. ಸದ್ಯ ಇಬ್ಬರ ಸಂಬಂಧದ ಬಗ್ಗೆ ಮತ್ತೆ ಚರ್ಚೆ ಶುರುವಾಗಿದ್ದು ಚಹಾಲ್ ಅವರಾಗಲಿ ಮಹ್ವಾಶ್ ಅವರಾಗಲಿ ಪ್ರತಿಕ್ರಿಯೆಯನ್ನು ನೀಡಿಲ್ಲ.


Click it and Unblock the Notifications











