ಯಶ್ ಮೂಗು ರಾವಣನ ಪಾತ್ರಕ್ಕೆ ಸರಿ ಹೊಂದಲ್ಲ ಅಂದುಬಿಟ್ರಾ ಸದ್ಗುರು?
ನಿತೇಶ್ ತಿವಾರಿ ನಿರ್ದೇಶನದಲ್ಲಿ 'ರಾಮಾಯಾಣ' ಸಿನಿಮಾ 2 ಭಾಗಗಳಾಗಿ ತೆರೆಗೆ ಬರ್ತಿದೆ. ಶ್ರೀರಾಮನಾಗಿ ರಣ್ಬೀರ್ ಕಪೂರ್, ಸೀತೆಯಾಗಿ ಸಾಯಿಪಲ್ಲವಿ ಹಾಗೂ ರಾವಣನಾಗಿ ಯಶ್ ನಟಿಸುತ್ತಿದ್ದಾರೆ. 4000 ಕೋಟಿ ರೂ. ಬಜೆಟ್ನಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಮುಂದಿನ ದೀಪಾವಳಿಗೆ ಮೊದಲ ಭಾಗ ತೆರೆಗೆ ಬರಲಿದೆ.
ನಿಮಿತ್ ಮಲ್ಹೋತ್ರಾ 'ರಾಮಾಯಣ' ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಹಾಲಿವುಡ್ ಸಂಸ್ಥೆಗಳು ಜೊತೆ ಕೈ ಜೋಡಿಸಿ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ರಾವಣನಾಗಿ ಯಶ್ ನಟಿಸುವುದು ಮಾತ್ರವಲ್ಲ ಚಿತ್ರ ನಿರ್ಮಾಣಕ್ಕೂ ಕೈಜೋಡಿಸಿದ್ದಾರೆ. ಈಗಾಗಲೇ ಮೊದಲ ಭಾಗದ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ವರ್ಕ್ ಶುರು ಆರಂಭಿಸಲಾಗಿದೆ. ಘಟಾನುಘಟಿ ಕಲಾವಿದರು ಈ ಮಹತ್ವಾಕಾಂಕ್ಷೆಯ ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ.

ರಾಮಾಯಣ ಕಾವ್ಯ ಹಾಗೂ ಅದನ್ನು ಸಿನಿಮಾ ಮಾಡುತ್ತಿರುವ ಬಗ್ಗೆ ಸದ್ಗುರು ಜೊತೆ ನಿರ್ಮಾಪಕ ನಿಮಿತ್ ಮಲ್ಹೋತ್ರಾ ಚರ್ಚಿಸಿದ್ದಾರೆ. ಈ ವೇಳೆ ಸಾಕಷ್ಟು ಸಂಗತಿಗಳನ್ನು ಇಬ್ಬರೂ ಮಾತನಾಡಿದ್ದಾರೆ. ರಾವಣನ ಪಾತ್ರದಲ್ಲಿ ಯಶ್ ನಟಿಸುತ್ತಿರುವ ಬಗ್ಗೆಯೂ ಚರ್ಚಿಸಿದ್ದಾರೆ. ಈ ವೇಳೆ ರಾಕಿಂಗ್ ಸ್ಟಾರ್ ಯಶ್ ಮೂಗಿನ ಬಗ್ಗೆ ಸದ್ಗುರು ಕಾಮೆಂಟ್ ವೈರಲ್ ಆಗ್ತಿದೆ.
ಸದ್ಗುರು ಮಾತನಾಡಿ "ಯಶ್ ಹೇಗೆ ರಾವಣನ ಪಾತ್ರಕ್ಕೆ ಆಯ್ಕೆ ಆದ್ರು ಗೊತ್ತಿಲ್ಲ. ನನಗೆ ಅವ್ರು ಬಹಳ ಚೆನ್ನಾಗಿ ಗೊತ್ತು" ಎಂದಿದ್ದಾರೆ. "ನಮಗೆ ಒಬ್ಬ ಸೂಪರ್ ಸ್ಟಾರ್ ಆ ಪಾತ್ರ ಮಾಡಬೇಕು ಎನಿಸಿತ್ತು" ಎಂದು ನಿಮಿತ್ ಹೇಳಿದ್ದಾರೆ. ಮಾತು ಮುಂದುವರೆಸಿದ ಸದ್ಗುರು "ವಿಲನ್ ಅಂದ್ರೆ ಮೊಂಡು ಮೂಗು ಇರಬೇಕು. ದೊಡ್ಡ ದೇಹಾಕೃತಿ ಇರಬೇಕು. ಆದರೆ ಯಶ್ ಬಹಳ ಹ್ಯಾಂಡ್ಸಮ್" ಎಂದು ನಕ್ಕಿದ್ದಾರೆ.
ನಿಮಿತ್ ಮಾತನಾಡಿ "ಯಶ್ ಬಹಳ ಹ್ಯಾಂಡ್ಸಮ್. ದೇಶದಲ್ಲಿ ಬಹಳ ಟ್ಯಾಲೆಂಟೆಡ್ ಸ್ಟಾರ್" ಎಂದಿದ್ದಾರೆ. ಬಳಿಕ ಸದ್ಗುರು ಮಾತು ಮುಂದುವರೆಸಿ "ನೀವು ಗಮನಿಸಿದ್ದೀರಾ? ಸಾಮಾನ್ಯವಾಗಿ ವಿಲನ್ಸ್ ಮೂಗು ಮೊಂಡಾಗಿ ಇರುತ್ತದೆ. ಚೂಪಾದ ಮೂಗು ಇರಲ್ಲ" ಎಂದು ನಸು ನಕ್ಕಿದ್ದಾರೆ. ಖಂಡಿತ ನನಗೆ ಇದು ಗೊತ್ತಿರಲಿಲ್ಲ. ಈ ಬಗ್ಗೆ ಗಮನ ಹರಿಸುತ್ತೇವೆ ಎಂದು ನಿಮಿತ್ ಹೇಳಿದ್ದಾರೆ. ಬಳಿಕ ರಾವಣನ ಹಿನ್ನೆಲೆ ಬಗ್ಗೆ ಸದ್ಗುರು ಸಾಕಷ್ಟು ಸಂಗತಿಗಳನ್ನು ಮಾತನಾಡಿದ್ದಾರೆ.
ನಾವು ಕಥೆಗಳಲ್ಲಿ ಕೇಳಿರುವಂತೆ "ರಾವಣ ಮಹಾನ್ ವಿದ್ವಾಂಸ. ಒಳ್ಳೆ ಆಡಳಿತಗಾರ. ಅವತ್ತಿನ ಕಾಲಕ್ಕೆ ಲಂಕಾ ಎನ್ನುವ ಅದ್ಭುತ ನಗರವನ್ನು ಕಟ್ಟಿಸಿದ್ದ. ಮಹಾನ್ ಭಕ್ತ. ಹೀಗೆ ಸಾಕಷ್ಟು ವಿಚಾರಗಳಿವೆ. ಅವನ ಹೆಸರು ರಾವಣ, ಅಂದ್ರೆ ಜೋರಾಗಿ ಘರ್ಜಿಸುವವನು, ಅಥವಾ ಜೋರಾಗಿ ಕಿರುಚುವವನು. ಶಿವನನ್ನು ಪೂಜಿಸಿ ಅವರ ಕೃಪೆಗೆ ಪಾತ್ರನಾಗಿ ಪಾರ್ವತಿಯನ್ನು ಕೇಳುತ್ತಾನೆ. ಅವನು ಎಷ್ಟೇ ದೊಡ್ಡ ವಿದ್ವಾಂಸ, ಭಕ್ತನೇ ಆಗಿದ್ದರೂ ವಿವೇಕ ಇರಲಿಲ್ಲ" ಎಂದು ಸದ್ಗುರು ವಿವರಿಸಿದ್ದಾರೆ.
'ರಾಮಾಯಣ' ಚಿತ್ರದಲ್ಲಿ ಶ್ರೀರಾಮನಾಗಿ ರಣ್ಬೀರ್ ಕಪೂರ್ ನಟಿಸಿರುವ ಬಗ್ಗೆ ಕೆಲವರು ಚಕಾರ ಎತ್ತಿದ್ದಾರೆ. 'ಅನಿಮಲ್' ಚಿತ್ರದಲ್ಲಿ ಅಂತಹ ಪಾತ್ರದಲ್ಲಿ ನಟಿಸಿ ಈಗ ಶ್ರೀರಾಮನಾಗಿ ನಟಿಸುವುದನ್ನು ಒಪ್ಪಿಕೊಳ್ಳುವುದು ಕಷ್ಟ ಎಂದಿದ್ದಾರೆ. ಈ ಬಗ್ಗೆ ಸದ್ಗುರು ಬಳಿ ನಿಮಿತ್ ಮಲ್ಹೋತ್ರಾ ಚರ್ಚಿಸಿದ್ದಾರೆ/ ಸದ್ಗುರು ಪ್ರತಿಕ್ರಿಯಿಸಿ "ಅಂತಹ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಜಡ್ಜ್ ಮಾಡುವುದು ಸರಿಯಲ್ಲ. ರಾಮನ ಪಾತ್ರ ಮಾಡಿದಾಕ್ಷಣ ಸಂಪೂರ್ಣವಾಗಿ ರಾಮನಾಗಿ ಬದಲಾಗಿಬಿಡಬೇಕು ಎನ್ನಲು ಸಾಧ್ಯವಿಲ್ಲ. ನಾಳೆ ಮತ್ತೊಂದು ಚಿತ್ರದಲ್ಲಿ ರಾವಣನಾಗಿ ಕೂಡ ಅವರು ನಟಿಸಬಹುದು. ಅದು ಅವರ ವೃತ್ತಿ" ಎಂದಿದ್ದಾರೆ.
'ರಾಮಾಯಣ' ಚಿತ್ರರಂಗಕ್ಕೆ ಸದ್ಗುರು ಒಂದು ಕಿವಿಮಾತು ಸಹ ಹೇಳಿದ್ದಾರೆ. ಇತ್ತೀಚೆಗೆ ಸಿನಿಮಾಗಳನ್ನು ವೈಭವಿಕರಿಸಿ ತೋರಿಸಲಾಗ್ತಿದೆ. 'ಬಾಹುಬಲಿ' ರೀತಿಯ ಸಿನಿಮಾಗಳಲ್ಲಿ ಆಕ್ಷನ್, ಎಲಿವೇಷನ್ ಎಲ್ಲಾ ಇತ್ತು ಎಲ್ಲವೂ ಚೆನ್ನಾಗಿತ್ತು. ಅದಕ್ಕಾಗಿ ಸೂಪರ್ ಮ್ಯಾನ್ ರೀತಿ ತೋರಿಸಲಾಗಿತ್ತು. ಇದೆಲ್ಲದರ ನಡುವೆ ಶ್ರೀ ರಾಮನ ಸದ್ಗುಣಗಳನ್ನು ತೋರಿಸಲು ಮರೆಯಬೇಡಿ. ಸ್ವಾತಂತ್ರ್ಯ, ಸಮತೋಲನ, ಒಳಗೊಳ್ಳುವಿಕೆ. ಇವು ಭವಿಷ್ಯದ ಮೌಲ್ಯಗಳು, ಇದನ್ನು ಹೇಳಬೇಕು" ಎಂದು ಮನವಿ ಮಾಡಿದ್ದಾರೆ.


Click it and Unblock the Notifications











