ಆದಿಪುರುಷ್ ಬಿಡುಗಡೆಗೆ ಬಗ್ಗೆ ಸುಳಿವು ನೀಡಿದ ಸೈಫ್ ಅಲಿ ಖಾನ್
'ಬಾಹುಬಲಿ' ಸಿನಿಮಾ ಬಳಿಕ ಅದನ್ನು ಮೀರಿಸುವಂತಹ ಬಜೆಟ್ನಲ್ಲಿ ತಯಾರಾಗುತ್ತಿರುವ ಚಿತ್ರ ಆದಿಪುರುಷ್. ಪೌರಾಣಿಕ ಕಥೆಯಾಧರಿತ ಈ ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನಾಗಿ ನಟಿಸುತ್ತಿದ್ದಾರೆ. ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ಅಭಿನಯಿಸುತ್ತಿದ್ದರೆ, ಕೃತಿ ಸನೂನ್ ಸೀತೆಯಾಗಿ ಬಣ್ಣ ಹಚ್ಚುತ್ತಿದ್ದಾರೆ.
ಇಂತಹ ಚಿತ್ರದ ಬಗ್ಗೆ ಪ್ರತಿಯೊಂದು ಬೆಳವಣಿಗೆ ತಿಳಿದುಕೊಳ್ಳಬೇಕು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಆದಿಪುರುಷ್ ಚಿತ್ರೀಕರಣ ಶುರುವಾಗಿದೆ. ಈಗಾಗಲೇ ಬಿಡುಗಡೆ ದಿನಾಂಕ ಘೋಷಿಸಿರುವ ಚಿತ್ರತಂಡ, ಆಗಸ್ಟ್ 11, 2022ಕ್ಕೆ ತೆರೆಗೆ ಬರಲಿದೆ. ಆದರೆ ಕೋವಿಡ್ ಕಾರಣದಿಂದ ನಿಗದಿತ ಯೋಜನೆಗಳು ಬದಲಾಗಿದೆ. ಈ ಹಿಂದಿನ ಸಿನಿಮಾಗಳ ರಿಲೀಸ್ ಹಾಗೂ ಚಿತ್ರೀಕರಣದ ಯೋಜನೆಗಳು ತಲೆಕೆಳಗಾಗಿದೆ. ಹಾಗಾಗಿ, ಈ ಹಿಂದೆ ನಿರ್ಧರಿಸಿದಂತೆ ಬಿಡುಗಡೆ ಮಾಡುವುದು ಸವಾಲಿನ ಕೆಲಸ ಎನ್ನಲಾಗಿದೆ.
ಆದಿಪುರುಷ್ ಚಿತ್ರದ ಬಗ್ಗೆ ಸೈಫ್ ಅಲಿ ಖಾನ್ ಪ್ರತಿಕ್ರಿಯಿಸಿದ್ದು, ರಿಲೀಸ್ ಬಗ್ಗೆಯೂ ಸುಳಿವು ನೀಡಿದ್ದಾರೆ. ಮುಂದೆ ಓದಿ...

ಚಿತ್ರಮಂದಿರ ಬಿಟ್ಟು ಬೇರೆಲ್ಲಿಯೂ ನೋಡಲಾಗದು
''ಚಿತ್ರವು ತುಂಬಾ ವಿಶಿಷ್ಟ ಮತ್ತು ವಿಭಿನ್ನವಾಗಿದೆ. ಹಿಂದೆಂದೂ ಕಂಡಿರದ ವಿಶ್ಯೂಲ್ ಎಫೆಕ್ಟ್ಸ್ ಒಳಗೊಂಡಿರುವ ಅತಿ ದೊಡ್ಡ ಚಿತ್ರ. ಇದು ಚಿತ್ರಮಂದಿರಗಳಲ್ಲಿ ಹೊರತುಪಡಿಸಿ ಎಲ್ಲಿಯೂ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಓಂ ರಾವುತ್ ಪ್ರೇಕ್ಷಕರಿಗೆ ಯಾರೂ ನಿರೀಕ್ಷೆ ಮಾಡಿರದ ಅನುಭವ ನೀಡುತ್ತಿದ್ದಾರೆ'' ಎಂದು ಸೈಫ್ ಅಲಿ ಖಾನ್ ಆದಿಪುರುಷ್ ಚಿತ್ರದ ಬಗ್ಗೆ ಹೇಳಿದ್ದಾರೆ. ಈ ಮೂಲಕ ಚಿತ್ರಮಂದಿರದಲ್ಲೇ ಈ ಸಿನಿಮಾ ಬರುವುದು ಖಚಿತ.

ಬಜೆಟ್ ಅರ್ಧದಷ್ಟು ವಿಎಫ್ಎಕ್ಸ್ ಕೆಲಸ
ಆದಿಪುರುಷ್ ಚಿತ್ರಕ್ಕೆ ಒಟ್ಟು 400-450 ಕೋಟಿ ಬಜೆಟ್ ಆಗಲಿದೆ ಎಂದು ಅಂದಾಜಿಸಲಾಗಿದೆ. ಒಟ್ಟು ಬಂಡವಾಳದ ಅರ್ಧದಷ್ಟು ಹಣ ಸಂಭಾವನೆಯಿಂದ ಕೂಡಿದೆ. ವಿಎಫ್ಎಕ್ಸ್ಗಾಗಿ ಹೆಚ್ಚು ಖರ್ಚು ಮಾಡಲಾಗುತ್ತಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಆದಿಪುರುಷ್ ಶೂಟಿಂಗ್ ಪ್ರಾರಂಭವಾಗಿತ್ತು. ಕೋವಿಡ್ ಎರಡನೇ ಅಲೆ ಹಿನ್ನೆಲೆ ಅನಿರೀಕ್ಷಿತವಾಗಿ ಚಿತ್ರೀಕರಣ ನಿಲ್ಲಿಸಬೇಕಾಯಿತು.

ಬಾಹುಬಲಿ ಮೀರಿಸುವ ಯೋಜನೆ?
ಈ ಹಿಂದೆ ತೆರೆಕಂಡ ಬಾಹುಬಲಿ ಸರಣಿ ಚಿತ್ರದ ಪ್ರಮುಖ ಆಕರ್ಷಣೆ ವಿಶ್ಯೂಲ್ಸ್. ಅದ್ಧೂರಿ ಮತ್ತು ಅನಿರೀಕ್ಷಿತ ದೃಶ್ಯವೈಭವ ಈ ಚಿತ್ರದಲ್ಲಿ ನೋಡಲು ಸಿಕ್ಕಿತ್ತು. ಅದನ್ನು ಮೀರಿಸುವಂತಹ ಮೇಕಿಂಗ್ ಆದಿಪುರುಷ್ ಚಿತ್ರದಲ್ಲಿರಲಿದೆಯಂತೆ. ರಾಮಾಯಣ ಆಗಿರುವುದರಿಂದ ಭರ್ಜರಿ ಸೆಟ್, ಅದ್ಧೂರಿ ಕಾಸ್ಟ್ಯೂಮ್ಸ್ ಪೌರಾಣಿಕ ಅನುಭವ ಕೊಡಲು ನಿರ್ಮಾಪಕರು ಎಲ್ಲಾ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ.

ವಿವಾದ ಸೃಷ್ಟಿಸಿದ್ದ ಸೈಫ್ ಹೇಳಿಕೆ
ಈ ಹಿಂದೆ ರಾವಣನ ಪಾತ್ರದ ಬಗ್ಗೆ ಮಾತನಾಡಿದ ಸಂದರ್ಭದಲ್ಲಿ ಸೈಫ್ ಅಲಿ ಖಾನ್ ಹೇಳಿದ ಮಾತು ವಿವಾದಕ್ಕೆ ಕಾರಣವಾಗಿತ್ತು. 'ರಾವಣನಾಗಿ ನಟಿಸಲು ಉತ್ಸುಕನಾಗಿದ್ದೇನೆ. ಆ ಪಾತ್ರ ನಿರ್ವಹಣೆಯಲ್ಲಿ ಯಾವುದೇ ನಿರ್ಬಂಧವಿಲ್ಲ. ಮನರಂಜನೆ ದೃಷ್ಟಿಯಿಂದ ಆ ಪಾತ್ರಕ್ಕೆ ನಾವು ಮಾನವೀಯ ಗುಣಗಳನ್ನು ಅಳವಡಿಸುತ್ತಿದ್ದೇವೆ. ಲಕ್ಷ್ಮಣನು ಶೂರ್ಪನಕಿಯ ಮೂಗು ಕತ್ತರಿಸಿದಕ್ಕಾಗಿ ಪ್ರತಿಕಾರ ತೀರಿಸಿಕೊಳ್ಳುವ ಕಾರಣಕ್ಕಾಗಿಯೇ ರಾವಣನು ಸೀತೆಯನ್ನು ಅಪರಿಸಿದ್ದ ಮತ್ತು ರಾಮನ ವಿರುದ್ಧ ಯುದ್ಧ ಮಾಡಿದ್ದ ಎಂಬುದನ್ನು ಈ ಸಿನಿಮಾ ಸಮರ್ಥಿಸುತ್ತಿದೆ' ಎಂದು ಸೈಫ್ ಅಲಿ ಖಾನ್ ಹೇಳಿದ್ದರು.

ಕ್ಷಮೆಯಾಚಿಸಿ ವಿವಾದಕ್ಕೆ ತೆರೆ ಎಳೆದ ನಟ
ಸೈಫ್ ಅಲಿ ಖಾನ್ ಹೇಳಿಕೆಗೆ ವಿರೋಧ ವ್ಯಕ್ತವಾದ ಹಿನ್ನೆಲೆ ನಂತರ ಕ್ಷಮೆಯಾಚಿಸಿದರು. 'ಸಂದರ್ಶವೊಂದರಲ್ಲಿ ನನ್ನ ಒಂದು ಹೇಳಿಕೆಯು ವಿವಾದವನ್ನು ಉಂಟುಮಾಡಿದೆ. ಜನರು ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ನನಗೆ ತಿಳಿದಿದೆ. ಆದರೆ ಇದು ನನ್ನ ಉದ್ದೇಶವಾಗಿರಲಿಲ್ಲ. ಇದರಿಂದ ನೋವಾಗಿದ್ದರೆ ನಾನು ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇನೆ ಮತ್ತು ನನ್ನ ಹೇಳಿಕೆಯನ್ನು ಹಿಂಪಡೆಯುತ್ತೇನೆ. ರಾಮ ಯಾವಾಗಲು ವೀರತೆಯ ಸಂಕೇತ. ಆದಿಪುರುಷ್ ದುಷ್ಟರ ವಿರುದ್ಧ ಒಳ್ಳೆತನದ ಗೆಲುವಿನ ಬಗ್ಗೆ ಇದೆ. ಈ ಸಿನಿಮಾದಲ್ಲಿ ಯಾವುದೇ ವಿರೂಪಗಳಿಲ್ಲದೆ ಮಹಾಕಾವ್ಯವನ್ನು ಪ್ರಸ್ತುತಪಡಿಸಲು ಇಡೀ ತಂಡವು ಒಟ್ಟಾಗಿ ಕೆಲಸಮಾಡುತ್ತಿದೆ' ಎಂದು ಸಮರ್ಥನೆ ನೀಡಿದ್ದರು.


Click it and Unblock the Notifications











