ತನ್ನ ಮೇಲೆ ಹಲ್ಲೆ ಮಾಡಿದವನ ಬಗ್ಗೆ ಸೈಫ್ ಅಲಿಖಾನ್ ಸಹಾನುಭೂತಿ
ಬಾಲಿವುಡ್ ನಟ ಸೈಫ್ ಅಲಿಖಾನ್ ಮೇಲೆ ಕಳ್ಳನೊಬ್ಬ ಹಲ್ಲೆ ನಡೆಸಿದ್ದ ಘಟನೆ ಭಾರೀ ಚರ್ಚೆ ಹುಟ್ಟುಹಾಕಿತ್ತು. ಮುಂಬೈನಲ್ಲಿ ಸೈಫ್ ವಾಸವಿದ್ದ ಅಪಾರ್ಟ್ಮೆಂಟ್ ಫ್ಲಾಟ್ಗೆ ನುಗ್ಗಿದ್ದ ಕಳ್ಳನೊಬ್ಬ ಚಾಕುವಿನಿಂದ ಇರಿದಿದ್ದ. ನಟನ ಬೆನ್ನು, ಕುತ್ತಿಗೆಯ 6 ಭಾಗಗಳಲ್ಲಿ ಗಂಭೀರವಾಗಿ ಹಲ್ಲೆ ನಡೆದಿತ್ತು. ಈಗಾಗಲೇ ಪೊಲೀಸರು ಹಲ್ಲೆ ಆರೋಪಿಯನ್ನು ಬಂಧಿಸಿದ್ದಾರೆ.
ಮಧ್ಯರಾತ್ರಿಯಲ್ಲಿ ಸೈಫ್ ಅಲಿಖಾನ್ ಮೇಲೆ ನಡೆದ ಹಲ್ಲೆ ಕುಟುಂಬಸ್ಥರಿಗೆ ಶಾಕ್ ತಂದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಸೈಫ್ ಆಟೋ ಏರಿ ಲೀಲಾವತಿ ಆಸ್ಪತ್ರೆಗೆ ತೆರಳಿ ದಾಖಲಾಗಿದ್ದರು. ವೈದ್ಯರು ಸೂಕ್ತ ಚಿಕಿತ್ಸೆ ನೀಡಿ ನಟನನ್ನು ಪ್ರಾಣಪಾಯದಿಂದ ಪಾರು ಮಾಡಿದ್ದರು. ಕಳ್ಳ ಚುಚ್ಚಿದ್ದ ಚಾರು ಮುರಿದು ನಟನ ಬೆನ್ನಿನ ಭಾಗದಲ್ಲಿ ಉಳಿದುಬಿಟ್ಟಿತ್ತು. ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಅದನ್ನು ಹೊರ ತೆಗೆದಿದ್ದರು.

ಎಲ್ಲಾ ಭದ್ರತೆ ಮೀರಿ ಕಳ್ಳನೊಬ್ಬ ಖ್ಯಾತ ನಟನ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದ ಘಟನೆ ಬಾಲಿವುಡ್ ಮಂದಿ ಆತಂಕಕ್ಕೆ ಕಾರಣವಾಗಿತ್ತು. ಸಿನಿಮಿಯ ರೀತಿಯಲ್ಲಿ ಪೊಲೀಸರು ಹಲ್ಲೆ ಮಾಡಿದ್ದ ಆರೋಪಿಯನ್ನು ಬಂಧಿಸಿದ್ದರು. ಸದ್ಯ ವಿಚಾರಣೆ ಮುಂದುವರೆದಿದೆ. ಘಟನೆ ಈವರೆಗೆ ಸೈಫ್ ಕುಟುಂಬ ಸದಸ್ಯರು ಮಾತನಾಡಿರಲಿಲ್ಲ. ಇದೀಗ ಸ್ವತಃ ಬಾಲಿವುಡ್ ನವಾಬ್ ಘಟನೆಯ ಬಗ್ಗೆ 'ಡೈಲಿ ಟೈಮ್ಸ್' ಸಂದರ್ಶನದಲ್ಲಿ ವಿವರಿಸಿದ್ದಾರೆ.
ಸಹಜವಾಗಿ ಇಂತಹ ದಾಳಿ, ಹಲ್ಲೆ ಘಟನೆಗಳು ನಡೆದಾಗ ಭದ್ರತೆ ಹೆಚ್ಚಿಸುವ ಬಗ್ಗೆ ಎಲ್ಲರೂ ಚಿಂತಿಸುತ್ತಾರೆ. ಆಪ್ತರು ಈ ಬಗ್ಗೆ ಸಲಹೆ ನೀಡುತ್ತಾರೆ. ಈ ಕುರಿತು ಸೈಫ್ ಮಾತನಾಡಿದ್ದಾರೆ. "ಏನೂ ಬದಲಾಗಲ್ಲ. ನನಗೆ ಅಪಾಯವಿದೆ ಎಂದು ನನಗೆ ಅನ್ನಿಸುತ್ತಿಲ್ಲ. ಅದು ಪೂರ್ವ ನಿಯೋಜಿತ ದಾಳಿ ಅಲ್ಲ. ಕಳ್ಳತನದ ಪ್ರಯತ್ನ, ಕೊಂಚ ಬೇರೆ ತಿರುವು ಪಡೆದಿದೆ. ಆತ(ಕಳ್ಳ) ಕೂಡ ಬಡಪಾಯಿ. ನನಗಿಂತಲೂ ಅವನ ಜೀವನ ಹಾಳಾಗಿದೆ" ಎಂದು ಸೈಪ್ ಅಲಿಖಾನ್ ತಿಳಿಸಿದ್ದಾರೆ.
ಕಳ್ಳನಿಂದ ಗಾಯಗೊಂಡಾಗ ಮಗ ತೈಮೂರ್ ಆಡಿದ ಮಾತನ್ನು ಸೈಫ್ ನೆನಪಿಸಿಕೊಂಡಿದ್ದಾರೆ. "ದಾಳಿ ನಡೆದ ಬಳಿಕ ನನಗೆ ಬೆನ್ನಿನಲ್ಲಿ ತೀವ್ರವಾಗಿ ನೋವಾಗುತ್ತಿತ್ತು. ನೋಡಿದಾಗ ಚಾಕುವಿನಿಂದ ಇರಿದಿದ್ದು ಗೊತ್ತಾಗಿತ್ತು. ಅದನ್ನು ನೋಡಿ ಕರೀನಾ ಕಂಗಾಲಾಗಿದ್ದಳು. ಯಾರ್ಯಾರಿಗೋ ಕರೆ ಮಾಡಿದ್ದಳು, ಯಾರು ಕರೆ ಸ್ವೀಕರಿಸಲಿಲ್ಲ. ನಾನು ಏನು ಆಗಲ್ಲ ಎಂದು ಆಕೆಗೆ ಧೈರ್ಯ ತುಂಬಿದೆ. ಆಗ ತೈಮೂರ್ ಹತ್ತಿರ ಬಂದು "ಅಪ್ಪ ನೀನು ಸತ್ತು ಹೋಗ್ತೀಯಾ? ಎಂದು ಕೇಳಿದ್ದ. ನಾನು ಏನು ಆಗಲ್ಲ" ಎಂದು ಹೇಳಿದ್ದಾಗಿ ಸೈಫ್ ಹೇಳಿದ್ದಾರೆ.
ಅಂದಹಾಗೆ ರಾತ್ರಿ ಸೈಫ್ ಅಲಿಖಾನ್ ಮಗ ತೈಮೂರ್ ಜೊತೆ ಆಟೋ ಏರಿ ಆಸ್ಪತ್ರೆಗೆ ಹೋಗಿ ದಾಖಲಾಗಿದ್ದರು. ಎಲ್ಲರನ್ನು ಬಿಟ್ಟು 8 ವರ್ಷದ ಮಗನನ್ನು ಯಾಕೆ ಕರೆದುಕೊಂಡು ಹೋದರು ಎನ್ನುವ ಪ್ರಶ್ನೆ ಎದ್ದಿತ್ತು. ಈ ಬಗ್ಗೆ ಸೈಫ್ ಪ್ರತಿಕ್ರಿಯಿಸಿದ್ದಾರೆ. "ಹಲ್ಲೆ ಬಳಿಕ ಮಗ ಕೂಲ್ ಆಗಿ ಆಲೋಚಿಸಿದ. ನಾನು ನಿಮ್ಮೊಟ್ಟಿಗೆ ಆಸ್ಪತ್ರೆಗೆ ಬರ್ತೀನಿ ಎಂದ. ನಾನು ಒಬ್ಬೊಂಟಿಯಾಗಿ ಹೋಗುವುದು ಬೇಡ ಎಂದು ತೈಮೂರ್ನ ಕರೆದೊಯ್ದೆ. ಒಂದು ವೇಳೆ ನನಗೇನಾದರೂ ಆದರೆ ಮಗ ಜೊತೆಗಿರಬೇಕು ಎಂದು ಬಯಸಿದ್ದೆ" ಎಂದಿದ್ದಾರೆ.
ಸೈಫ್ ಅಲಿಖಾನ್ ಮೇಲಿನ ಹಲ್ಲೆ ಸಂಬಂಧ ಸದ್ಯ ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್ ಎಂಬಾತನ ಪೊಲೀಸರ ವಶದಲ್ಲಿದ್ದಾನೆ. ಬಾಂಗ್ಲಾ ಮೂಲದ ಆತ ಮುಂಬೈನಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಬಾಂಗ್ಲಾದಿಂದ ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿತ್ತು.


Click it and Unblock the Notifications











