ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಗೆ ಖುಷಿ ಸುದ್ದಿ ನೀಡಿದ ಕೋರ್ಟ್
'ಕೃಷ್ಣಮೃಗ ಬೇಟೆ ಪ್ರಕರಣ'ದಲ್ಲಿ ಆರೋಪಿಯಾಗಿದ್ದ ಸಲ್ಮಾನ್ ಖಾನ್ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದರು. ದೇಶ ಬಿಟ್ಟು ಹೋಗಬಾರದು ಎಂಬ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದ್ದ ಜೋಧ್ ಪುರ್ ನ್ಯಾಯಾಲಯ ಈಗ ಸಲ್ಲುಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ.
ಮೇ 25 ರಿಂದ 10 ಜುಲೈ ವರೆಗೆ ಕೆನಡಾ, ನೇಪಾಳ ಮತ್ತು ಯುಎಸ್ಎ ಸೇರಿದಂತೆ ವಿದೇಶಕ್ಕೆ ತೆರಳಲು ಅನುಮತಿ ಕೋರಿ ನಟ ಸಲ್ಮಾನ್ ಖಾನ್ ಜೋಧಪುರ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಸಲ್ಲು ಮನವಿಯನ್ನ ಪುರಸ್ಕರಿಸಿದ ಕೋರ್ಟ್ ವಿದೇಶಕ್ಕೆ ಹೋಗಲು ಗ್ರೀನ್ ಸಿಗ್ನಲ್ ಕೊಟ್ಟಿದೆ.
1998 ರಲ್ಲಿ 'ಹಮ್ ಸಾಥ್ ಸಾಥ್ ಹೈ' ಚಿತ್ರೀಕರಣದಲ್ಲಿ ತೊಡಗಿದ್ದ ವೇಳೆ ನಟ ಸಲ್ಮಾನ್ ಖಾನ್ ಜೋಧಪುರ್ ದಲ್ಲಿ ಎರಡು ಕೃಷ್ಣಮೃಗಗಳನ್ನು ಕಾನೂನು ಬಾಹಿರವಾಗಿ ಬೇಟೆಯಾಡಿದ್ದರು ಎಂಬ ಆರೋಪದಡಿ ಸಲ್ಮಾನ್ ಗೆ 5 ವರ್ಷಗಳ ಜೈಲು ಶಿಕ್ಷೆಯಾಗಿತ್ತು. ಶಿಕ್ಷೆಯಾದ ಬಳಿಕ ಎರಡು ದಿನಗಳ ಕಾಲ ಜೋಧಪುರ್ ಜೈಲಿನಲ್ಲಿ ಕಳೆದಿದ್ದ ನಟ ಜಾಮೀನಿನ ಮೇಲೆ ಹೊರಬಂದಿದ್ದರು.

ಸದ್ಯ, 'ರೇಸ್-3' ಚಿತ್ರದ ಚಿತ್ರೀಕರಣ ಮುಗಿಸಿರುವ ಸಲ್ಮಾನ್ ಖಾನ್ ಈಗ 'ಭಾರತ್' ಚಿತ್ರವನ್ನ ಆರಂಭಿಸಿದ್ದಾರೆ. ಅಲಿ ಅಬ್ಬಾಸ್ ಖಾನ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ಸಲ್ಮಾನ್ ಗೆ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.


Click it and Unblock the Notifications











