ಅಯೋಧ್ಯೆ ತೀರ್ಪು: ಸಲ್ಮಾನ್ ಖಾನ್ ತಂದೆಯ ಈ ಯೋಚನೆಗೆ ಒಂದು ಸಲಾಂ.!
ಶತ-ಶತಮಾನಗಳ ವಿವಾದಕ್ಕೆ ಅಂತೂ ತೆರೆಬಿದ್ದಿದೆ. ಅಯೋಧ್ಯೆಯ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಆ ಮೂಲಕ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಹಾದಿ ಸುಗಮವಾಗಿದೆ. ಇನ್ನೂ ಅಯೋಧ್ಯೆಯಲ್ಲೇ ಮುಸ್ಲಿಮರಿಗೆ ಐದು ಎಕರೆ ಪರ್ಯಾಯ ಭೂಮಿ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಸುಪ್ರೀಂ ಕೋರ್ಟ್ ನೀಡಿರುವ ಈ ತೀರ್ಪನ್ನು ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಸ್ವಾಗತಿಸಿದ್ದಾರೆ. ಐಎಎನ್ಎಸ್ ಸುದ್ದಿ ಸಂಸ್ಥೆ ಜೊತೆಗೆ ಮಾತನಾಡಿರುವ ಸಲೀಂ ಖಾನ್, ''ಮುಸ್ಲಿಮರಿಗೆ ಸಿಗುವ ಐದು ಎಕರೆ ಭೂಮಿಯಲ್ಲಿ ಶಾಲೆ ಅಥವಾ ಕಾಲೇಜು ನಿರ್ಮಿಸಿ'' ಎಂದಿದ್ದಾರೆ.
''ಇಸ್ಲಾಂ ಧರ್ಮದಲ್ಲಿ ಪ್ರೀತಿ ಮತ್ತು ಕ್ಷಮೆ ಎಂಬ ಎರಡು ಸದ್ಗುಣಗಳ ಕುರಿತು ಪ್ರವಾದಿಗಳು ಪ್ರತಿಪಾದಿಸಿದ್ದಾರೆ. ಮುಸ್ಲಿಮರು ಈ ಎರಡು ಸದ್ಗುಣಗಳಿಗೆ ಬದ್ಧರಾಗಬೇಕು. ಪ್ರೀತಿ ತೋರಿಸಿ ಮತ್ತು ಕ್ಷಮೆ ಮಾಡಿ'' ಎಂದು ತನ್ನೆಲ್ಲ ಮುಸ್ಲಿಂ ಬಾಂಧವರಿಗೆ ಸಲೀಂ ಖಾನ್ ಹೇಳಿದ್ದಾರೆ.

''ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ನಿಜಕ್ಕೂ ಶ್ಲಾಘನೀಯ. ಶತಮಾನದ ಸಮಸ್ಯೆ ಬಗೆಹರಿದಿದೆ. ಈ ತೀರ್ಪನ್ನು ನಾನು ಒಪ್ಪುತ್ತೇನೆ. ಇದರ ಬಗ್ಗೆ ಇನ್ನೂ ಚರ್ಚೆ ಬೇಡ. ಮೂಲಭೂತ ಸಮಸ್ಯೆಗಳ ಬಗ್ಗೆ ಗಮನ ಹರಿಸಿ, ಅದಕ್ಕೆ ಪರಿಹಾರ ಹುಡುಕಬೇಕು. ಮುಸ್ಲಿಮರಿಗೆ ಈಗ ಸಿಗುವ ಐದು ಎಕರೆ ಭೂಮಿಯಲ್ಲಿ ಶಾಲೆ ಅಥವಾ ಕಾಲೇಜು ನಿರ್ಮಿಸಿದರೆ ಒಳ್ಳೆಯದು. ನಾವು ಎಲ್ಲಿ ಬೇಕಾದರೂ ನಮಾಜ್ ಮಾಡಬಹುದು. ಆದರೆ ದೇಶದ ಸಮಸ್ಯೆಗಳು ಬಗೆಹರಿಯಬೇಕು ಅಂದ್ರೆ ಉತ್ತಮ ಶಾಲೆಗಳು ಬೇಕು'' ಎಂದಿದ್ದಾರೆ ಸಲೀಂ ಖಾನ್.
''ಉತ್ತಮ ಶಿಕ್ಷಣ ಪಡೆದವರಿಂದ ಉತ್ತಮ ಭವಿಷ್ಯ ನಿರ್ಮಾಣ ಸಾಧ್ಯ'' ಅಂತ ಸಲೀಂ ಖಾನ್ ಹೇಳಿದ್ದಾರೆ. ಸಲೀಂ ಖಾನ್ ರವರ ಈ ಯೋಚನೆಗೆ ಒಂದು ಸಲಾಂ ಹೇಳಲೇಬೇಕು ಅಲ್ಲವೇ.?!


Click it and Unblock the Notifications











