ಸಲ್ಮಾನ್ ಖಾನ್ ನಿವಾಸದ ಬಳಿ ಗುಂಡಿನ ದಾಳಿ ಪ್ರಕರಣ; ಇಬ್ಬರು ಶಂಕಿತರ ಬಂಧನ
ಭಾನುವಾರ(ಏಪ್ರಿಲ್ 14) ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸದ ಬಳಿ ಗುಂಡಿನ ದಾಳಿ ನಡೆದಿತ್ತು. ಬೈಕ್ನಲ್ಲಿ ಬಂದಿದ್ದ ಇಬ್ಬರು ಅಪರಿಚಿತರು ಈ ಕೃತ್ಯ ಎಸಗಿದ್ದರು. ಇದು ಬಿಟೌನ್ಗೆ ಶಾಕ್ ತಂದಿತ್ತು. ಪ್ರಕರಣ ಸಂಬಂಧ ಇಬ್ಬರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ.
ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಈ ದಾಳಿಯಲ್ಲಿ ತಮ್ಮ ಕೈವಾಡವಿದೆ ಎಂದು ಕೇಳಿಕೊಂಡಿದ್ದನು. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾಗಿ ವರದಿಯಾಗಿತ್ತು. ಗುಜರಾತ್ನ ಭುಜ್ನಲ್ಲಿ ಸೋಮವಾರ ಮಧ್ಯರಾತ್ರಿ ಇಬ್ಬರನ್ನೂ ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ವಶಕ್ಕೆ ಪಡೆಯಲಾಗಿದೆ. ಗುಂಡಿನ ದಾಳಿ ಬಳಿಕ ಇಬ್ಬರು ಮುಂಬೈನಿಂದ ಗುಜರಾತ್ಗೆ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ. ಅವರನ್ನು ಮುಂಬೈಗೆ ಕರೆತಂದು ತನಿಖೆ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಹೆಲ್ಮೆಟ್ ಧರಿಸಿ ಬಂದಿದ್ದ ದುಷ್ಕರ್ಮಿಗಳು ತಮ್ಮ ಪ್ಲ್ಯಾನ್ನಂತೆ 4 ಸುತ್ತಿನ ಗುಂಡಿನ ದಾಳಿ ನಡೆಸಿದ್ದರು. ಘಟನೆ ಕುರಿತು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಪ್ರತಿಕ್ರಿಯಿಸಿದ್ದರು. ಸಲ್ಮಾನ್ ಖಾನ್ ಜೊತೆ ಫೋನ್ ಮಾಡಿ ಮಾತನಾಡಿದ್ದರು. ಸಲ್ಮಾನ್ ಖಾನ್ ಅವರಿಗೆ ಭದ್ರತೆ ಹೆಚ್ಚಿಸುವಂತೆ ಮುಂಬೈ ಪೊಲೀಸ್ ಆಯುಕ್ತರಿಗೆ ಸಲಹೆ ನೀಡಿದ್ದರು. ಸಲ್ಮಾನ್ ಖಾನ್ಗೆ ಬಹಳ ಹಿಂದೆಯೇ ಜೈಲಿನಲ್ಲಿರುವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಬೆದರಿಕೆ ಹಾಕಿದ್ದ. ಈ ಸಂಬಂಧ ಬೆದರಿಕೆ ಮೇಲ್ಗಳು ಬಂದಿದ್ದವು.
ಜೀವ ಬೆದರಿಕೆ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ಗೆ ನೀಡಿದ್ದ ಭದ್ರತೆ ಹೆಚ್ಚಿಸಲಾಗಿತ್ತು. ಸಲ್ಮಾನ್ ಖಾನ್ ರಕ್ಷಣೆಗಾಗಿ ಬಂದೂಕು ಪರವಾನಗಿ ನೀಡಲಾಗಿದೆ. ಇನ್ನು ಸಲ್ಲು ಬುಲೆಟ್ ಫ್ರೂಪ್ ಕಾರು ಕೂಡ ಖರೀದಿಸಿದ್ದಾರೆ. ಭಾನುವಾರ ಬೆಳಗ್ಗೆ ಮುಂಬೈ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ಗ್ಯಾಲಾಕ್ಸಿ ಅಪಾರ್ಟ್ಮೆಂಟ್ ಬಳಿ ಗುಂಡಿನ ದಾಳಿ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದರು.
ದಾಳಿಯ ಹೊಣೆ ಹೊತ್ತಿದ್ದ ಲಾರೆನ್ಸ್ ಸಹೋದರ ಬಿಷ್ಣೋಯ್ ಅನ್ಮೋಲ್, "ಇದು ಜಸ್ಟ್ ಟ್ರೇಲರ್ ಅಷ್ಟೆ. ಇದು ನಿಮಗೆ ಮೊದಲ ಹಾಗೂ ಕೊನೆಯ ಎಚ್ಚರಿಕೆ" ಎಂದು ಹೇಳಿಕೊಂಡಿರುವುದಾಗಿ ವರದಿಯಾಗಿತ್ತು. ಸದ್ಯ ಬಂಧಿಸಿಲಾಗಿರುವ ಇಬ್ಬರು ಆರೋಪಿಗಳು 2 ತಿಂಗಳಿಂದ ಮುಂಬೈನಲ್ಲೇ ನೆಲೆಸಿದ್ದರು ಎನ್ನುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಸಲ್ಮಾನ್ ಖಾನ್ ಪ್ರತಿ ಕದಲಿಕೆಯನ್ನು ಗಮನಿಸಲು, ಈ ರೀತಿ ದಾಳಿ ನಡೆಸಿ ಬೆದರಿಸಲು ಸಂಚು ರೂಪಿಸಿದ್ದರು. ಅದರಂತೆ ಭಾನುವಾರ ಬೆಳಗ್ಗೆ ಬೈಕ್ನಲ್ಲಿ ಬಂದು 4 ಸುತ್ತು ಗುಂಡು ಹಾರಿಸಿ ಪರಾರಿ ಆಗಿದ್ದರು. ದುಷ್ಕರ್ಮಿಗಳು ಬೈಕ್ನಲ್ಲಿ ಬಂದು ಗುಂಡು ಹಾರಿಸಿ ಹೋಗಿದ್ದು ಸಿಸಿಟಿವಿಗಳಲ್ಲಿ ದಾಖಲಾಗಿದೆ. ಆ ದೃಶ್ಯಗಳನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದರು.
ನಿವಾಸದ ಬಳಿ ಗುಂಡಿನ ದಾಳಿ ಬಳಿಕ ಕೂಡ ಸಲ್ಮಾನ್ ಖಾನ್ ಅಲ್ಲೇ ಇದ್ದಾರೆ. ಸಾರ್ವಜನಿಕವಾಗಿಯೂ ಕಾಣಿಸಿಕೊಂಡಿದ್ದು ಭದ್ರತೆ ಹೆಚ್ಚಿಸಲಾಗಿದೆ. ಸದ್ಯ ಸಲ್ಲು ನಟನೆಯ 'ಸಿಕಂದರ್' ಸಿನಿಮಾ ಘೋಷಣೆ ಆಗಿದೆ. ಮುಂದಿನ ವರ್ಷ ರಂಜಾನ್ ಸಂಭ್ರಮದಲ್ಲಿ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿದೆ. ತಮಿಳು ನಿರ್ದೇಶಕ ಎ. ಆರ್ ಮುರುಗದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

ಸಲ್ಮಾನ್ ಖಾನ್ಗೆ ಬೆದರಿಕೆ ಬರುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಸಾಕಷ್ಟು ಬಾರಿ ಬೆದರಿಕೆ ಮೇಲ್ಗಳು ಬಂದಿದ್ದವು. ಇದೀಗ ಅವರ ನಿವಾಸದ ಬಳಿಯೇ ಗುಂಡಿನ ದಾಳಿ ನಡೆಸಿರುವುದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಸಲ್ಲುಗೆ Y+ ಭದ್ರತೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಲಿದೆ.


Click it and Unblock the Notifications











