ಸಂಗೊಳ್ಳಿ ರಾಯಣ್ಣನ್ನಾಗಿ ಕ್ರಾಂತಿ ಕಿಡಿ ಹಚ್ಚಲಿರುವ ಸಲ್ಲು
ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ಚಿತ್ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ. ಈ ಚಿತ್ರದಲ್ಲಿ ರಾಯಣ್ಣನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಿಂಚಿದ್ದಾರೆ. ದರ್ಶನ್ ಅವರ ಎತ್ತರದ ನಿಲುವು ರಾಯಣ್ಣ ಪಾತ್ರಕ್ಕೆ ಹೇಳಿ ಮಾಡಿಸಿದಂತಿತ್ತು.
ಇದೀಗ ಇದೇ ಚಿತ್ರವನ್ನು ಹಿಂದಿಯಲ್ಲಿ ಮಾಡಲು ಹೊರಟಿದ್ದಾರೆ ನಿರ್ಮಾಪಕ ಆನಂದ್ ಅಪ್ಪುಗೋಳ್. ಇದಕ್ಕಾಗಿ ಬಾಲಿವುಡ್ ನಟ ಸಲ್ಮಾನ್ ಖಾನ್ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿದ ವೀರನಾಗಿ ಕಾಣಿಸಲಿದ್ದಾರೆ.

ಚಿತ್ರಕ್ಕಾಗಿ 80 ದಿನಗಳ ಕಾಲ್ ಶೀಟ್ ಕೇಳಲಾಗಿದೆ. ಆದರೆ ಅವರು 40 ದಿನಗಳ ಕಾಲ್ ಶೀಟ್ ಕೊಡಲು ಒಪ್ಪಿದ್ದಾರೆ. ಮುಂದಿನ ತಿಂಗಳು ಸಲ್ಲು ಚಿತ್ರವನ್ನು ನೋಡಲಿದ್ದಾರಂತೆ. ಆ ಬಳಿಕಷ್ಟೇ ಮುಂದಿನ ಹಂತದ ಕೆಲಸಗಳು ನಡೆಯಲಿವೆ ಎನ್ನುತ್ತವೆ ಮೂಲಗಳು. [ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರ ವಿಮರ್ಶೆ]
ಈ ಚಿತ್ರದ ಮೂಲಕ ರಾಯಣ್ಣನ ಹೋರಾಟದ ವೈಖರಿಯನ್ನು ಇಡೀ ದೇಶಕ್ಕೆ ಮುಟ್ಟಿಸುವ ಪ್ರಯತ್ನ ಮಾಡಲಿದ್ದಾರೆ ಅಪ್ಪುಗೋಳ್. ರಾಜ್ಯ ಪ್ರಶಸ್ತಿ ಪಡೆದ ಈ ಚಿತ್ರ ಬಾಲಿವುಡ್ ನಲ್ಲೂ ಸದ್ದು ಮಾಡುವ ದಿನಗಳು ದೂರದಲ್ಲಿಲ್ಲ.
ಪಾತ್ರವರ್ಗದಲ್ಲಿ ಯಾರೆಲ್ಲಾ ಇರುತ್ತಾರೆ, ಮೂಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ನಾಗಣ್ಣ ಅವರೇ ನಿರ್ದೇಶನ ಮಾಡುತ್ತಾರಾ, ರಾಯಣ್ಣನ ತಾಯಿ ಕೆಂಚವ್ವಳಾಗಿ ಅಭಿನಯಿಸಿದ್ದ ಉಮಾಶ್ರೀ ಚಿತ್ರದಲ್ಲಿರುತ್ತಾರಾ ಎಂಬ ಪ್ರಶ್ನೆಗಳಿಗೆ ಉತ್ತರ ಇನ್ನಷ್ಟೇ ಸಿಗಲಿದೆ.


Click it and Unblock the Notifications











