ಕಷ್ಟದ ದಿನಗಳಲ್ಲಿ ಸಹಾಯ ಮಾಡಿದವರ ನೆನದು ಸಲ್ಮಾನ್ ಖಾನ್ ಭಾವುಕ
ಸಲ್ಮಾನ್ ಖಾನ್, ಬಾಕ್ಸ್ ಆಫೀಸ್ನ ಕಿಂಗ್ ಎಂದೇ ಕರೆಯಲಾಗುತ್ತದೆ. ಸಲ್ಮಾನ್ ಖಾನ್ರ ಸೋತ ಸಿನಿಮಾಗಳೂ ಸಹ ಕನಿಷ್ಟ 100 ಕೋಟಿ ಗಳಿಕೆ ಮಾಡಿರುತ್ತವೆ! ಗೆದ್ದ ಸಿನಿಮಾಗಳ ಗಳಿಕೆ ಲೆಕ್ಕ ಸಾವಿರ ಕೊಟಿಗಳಲ್ಲಿ.
ಅವರೊಟ್ಟಿಗೆ ಸಿನಿಮಾ ಮಾಡಲು ದೇಶದಾದ್ಯಂತ ಸಿನಿಮಾ ನಿರ್ಮಾಪಕರು ಸಾಲು-ಗಟ್ಟಿ ನಿಂತಿದ್ದಾರೆ. ವಯಸ್ಸು 60 ರ ಸನಿಹಕ್ಕೆ ಬಂದಿದ್ದರೂ ಈಗಲೂ ಸಲ್ಮಾನ್ ಖಾನ್ಗೆ ಇರುವ ಬೇಡಿಕೆ ಬಾಲಿವುಡ್ನ ಇನ್ನಾವ ನಟರಿಗೂ ಇಲ್ಲ.
ಹಲವು ದಶಕಗಳಿಂದ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಸಲ್ಮಾನ್ ಖಾನ್ ಆರಂಭದಲ್ಲಿ ದೊಡ್ಡ ಮಟ್ಟದ ಹಿನ್ನಡೆ ಅನುಭವಿಸಿದ್ದರು. ಸೂಪರ್-ಡೂಪರ್ ಹಿಟ್ ಸಿನಿಮಾ ಕೊಟ್ಟರೂ ಸಹ ಸಲ್ಮಾನ್ ಖಾನ್ಗೆ ಯಾರೂ ಸಿನಿಮಾ ಕೊಟ್ಟಿರಲಿಲ್ಲ. ಆ ಸಮಯದಲ್ಲಿ ಅವರಿಗೆ ಸಹಾಯ ಮಾಡಿದ ವ್ಯಕ್ತಿಗಳನ್ನು ಸಲ್ಮಾನ್ ಖಾನ್ ನೆನಪಿಸಿಕೊಂಡು ಭಾವುಕರಾಗಿದ್ದಾರೆ. ಅವರಲ್ಲಿ ಒಬ್ಬರು, ಕರ್ನಾಟಕ ಮೂಲದ ನಟ ಸುನಿಲ್ ಶೆಟ್ಟಿ.
ಸಲ್ಮಾನ್ ಖಾನ್, ಈ ಭಾರಿಯ ಐಫಾ ಅವಾರ್ಡ್ ಹೋಸ್ಟ್ ಮಾಡಿದ್ದು, ಕಾರ್ಯಕ್ರಮದಲ್ಲಿ ರಿತೇಶ್ ದೇಶ್ಮುಖ್ ಹಾಗೂ ಮನೀಶ್ ಪೌಲ್ ತಮಾಷೆಯಾಗಿ ಸಲ್ಮಾನ್ ಖಾನ್ ಬಗೆಗೆ ಇತರ ನಟ-ನಟಿಯರಿಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ಈ ಸಮಯದಲ್ಲಿ ಸಲ್ಮಾನ್ ಖಾನ್ ತಮ್ಮ ಕೆಟ್ಟ ದಿನಗಳಲ್ಲಿ ಏನು ಮಾಡುತ್ತಾರೆ? ಎಂಬ ಪ್ರಶ್ನೆ ಎದುರಾಯಿತು. ಆಗ ಸುನಿಲ್ ಶೆಟ್ಟಿ ಮಗ ಅಹಾನ್ ಶೆಟ್ಟಿಯನ್ನು ಪ್ರಶ್ನೆ ಕೇಳಲಾಯಿತು. ಅವರು ತಮಾಷೆಯ ಉತ್ತರ ನೀಡಿದರು.

ಸುನಿಲ್ ಶೆಟ್ಟಿ ಮಾಡಿದ ಸಹಾಯ ನೆನದ ಸಲ್ಲು
ಬಳಿಕ ಮಾತನಾಡಿದ ಸಲ್ಮಾನ್ ಖಾನ್, ನನ್ನ ಕೆಟ್ಟ ದಿನಗಳಲ್ಲಿ ಸಹಾಯ ಮಾಡಿದ ವ್ಯಕ್ತಿಗಳಲ್ಲಿ ಒಬ್ಬರು ಸುನಿಲ್ ಶೆಟ್ಟಿ. ''ನಾನಾಗ ಕಷ್ಟದ ದಿನಗಳಲ್ಲಿ ಇದ್ದೆ. ಆಗ ಅಂಗಡಿಯೊಂದರಲ್ಲಿ ಒಂದು ಶರ್ಟ್ ಹಾಗೂ ಪರ್ಸ್ ನೋಡಿದೆ. ಕೊಂಡುಕೊಳ್ಳಲು ನನ್ನ ಬಳಿ ಹಣ ಇರಲಿಲ್ಲ. ಆಗ ಸುನಿಲ್ ಶೆಟ್ಟಿ ಆ ಶರ್ಟ್ ಹಾಗೂ ಪರ್ಸ್ ಖರೀದಿಸಿ ಕೊಟ್ಟರು. ನನ್ನ ಕಷ್ಟದ ದಿನಗಳಲ್ಲಿ ನನ್ನ ಬೆನ್ನಿಗೆ ನಿಂತವರಲ್ಲಿ ಸುನಿಲ್ ಶೆಟ್ಟಿ ಸಹ ಒಬ್ಬರು ಎಂದು ಭಾವುಕರಾಗಿ ಹೇಳಿದರು ಸಲ್ಮಾನ್ ಖಾನ್.

ಕಷ್ಟದ ದಿನಗಳ ನೆನಪು ಮಾಡಿಕೊಂಡ ಸಲ್ಮಾನ್ ಖಾನ್
ತಮ್ಮ ಜೀವನದ ಕಷ್ಟದ ಸಮಯ ನೆನಪು ಮಾಡಿಕೊಂಡ ಸಲ್ಮಾನ್ ಖಾನ್, ''ಮೈನೆ ಪ್ಯಾರ್ ಕಿಯಾ' ಸಿನಿಮಾ ಸೂಪರ್ ಹಿಟ್ ಆದ ಬಳಿಕ ನಾಯಕಿ ಭಾಗ್ಯಶ್ರೀ ಸಿನಿಮಾರಂಗ ಬಿಟ್ಟು ಮದುವೆಯಾಗಲು ಹೊರಟು ಹೋದರು. 'ಮೈನೆ ಪ್ಯಾರ್ ಕಿಯಾ' ಸಿನಿಮಾದ ಎಲ್ಲ ಕ್ರೆಡಿಟ್ ಅವರೇ ತೆಗೆದುಕೊಂಡು ಹೋದರು. ಸೂಪರ್ ಹಿಟ್ ಸಿನಿಮಾ ಕೊಟ್ಟರು ಸತತ ಆರು ತಿಂಗಳು ನನಗೆ ಇನ್ಯಾವ ಸಿನಿಮಾ ಸಹ ಸಿಕ್ಕಿರಲಿಲ್ಲ'' ಎಂದು ನೆನಪು ಮಾಡಿಕೊಂಡರು ಸಲ್ಮಾನ್ ಖಾನ್.

ನನ್ನ ಜೀವನಕ್ಕೆ ದೇವರಂಥಹಾ ಮನುಷ್ಯನ ಪ್ರವೇಶವಾಯಿತು: ಸಲ್ಲು
''ಆಗ ನನ್ನ ಜೀವನಕ್ಕೆ ದೇವರಂಥಹಾ ಮನುಷ್ಯ ರಮೇಶ್ ತೌರಾನಿ ಪ್ರವೇಶವಾಯಿತು. ಸಿನಿಮಾ ಇಲ್ಲದೇ ಇದ್ದ ಸಂದರ್ಭದಲ್ಲಿ ನಮ್ಮ ತಂದೆ ಸಲೀಂ ಸಾಬ್, ನಿರ್ಮಾಪಕ ಜಿಪಿ ಸಿಪ್ಪಿ ಅವರಿಗೆ ಎರಡು ಸಾವಿರ ರುಪಾಯಿ ಹಣ ಕೊಟ್ಟು, ತಮ್ಮ ನಿರ್ಮಾಣ ಸಂಸ್ಥೆಯ ಹೊಸ ಸಿನಿಮಾಕ್ಕೆ ಸಲ್ಮಾನ್ ಖಾನ್ ನಾಯಕ ಎಂದು ಘೋಷಿಸಿ ಜಾಹೀರಾತುಕೊಡುವಂತೆ ಮನವಿ ಮಾಡಿದರು. ಜಿಪಿ ಸಿಪ್ಪಿ ಸಾಹೇಬರು ಸಹ ಸಿನಿಮಾ ಇಲ್ಲದೇ ಇದ್ದರು ಒಂದು ಜಾಹೀರಾತು ಕೊಟ್ಟುಬಿಟ್ಟರು. ಆ ಜಾಹೀರಾತು ನೋಡಿ ರಮೇಶ್ ತನುರಾಯಿ ಬಂದು ಆ ಸಿನಿಮಾದ ಸಂಗೀತಕ್ಕೆ ಐದು ಲಕ್ಷ ಹಣ ಕೊಟ್ಟರು'' ಎಂದು ನೆನಪು ಮಾಡಿಕೊಂಡರು ಸಲ್ಮಾನ್ ಖಾನ್.

ಬೋನಿ ಕಪೂರ್ಗೂ ಧನ್ಯವಾದ ಹೇಳಿದ ಸಲ್ಮಾನ್ ಖಾನ್
ರಮೇಶ್ ತನುರಾಯಿ ಕೊಟ್ಟ ಐದು ಲಕ್ಷದಿಂದ ನನಗೆ ಒಂದು ಸಿನಿಮಾ ಎಂದು ಸಿಕ್ಕಿತು. ಅದುವೇ 'ಪತ್ತರ್ ಕೇ ಫೂಲ್' ಟಿಪ್ಸ್ನ ರಮೇಶ್ ತನುರಾಯಿ ಹಣ ಕೊಟ್ಟಿದ್ದರಿಂದ ನನಗೆ ಒಂದು ಸಿನಿಮಾ ಸಿಕ್ಕಿದಂತಾಯಿತು'' ಎಂದರು ಸಲ್ಮಾನ್ ಖಾನ್. ಮುಂದುವರೆದು, ತಮ್ಮ ಸಿನಿಮಾ ವೃತ್ತಿಗೆ 'ವಾಂಟೆಡ್' ಸಿನಿಮಾ ಮೂಲಕ ಪುನಶ್ಚೇತನ ನೀಡಿದ್ದು ಬೋನಿ ಕಪೂರ್ ಎಂದು ಅವರಿಗೂ ಧನ್ಯವಾದ ಹೇಳಿದರು.


Click it and Unblock the Notifications











