ಸಲ್ಮಾನ್ ಖಾನ್ ರ 'ಸಂಗೊಳ್ಳಿ ರಾಯಣ್ಣ' ಕಥೆ ಅಷ್ಟೇನಾ?
ನಟ ಸಲ್ಮಾನ್ ಖಾನ್ ಅವರಿಗೆ 2002 ಗುದ್ದೋಡು ಪ್ರಕರಣದಲ್ಲಿ 5 ವರ್ಷಗಳ ಜೈಲು ಶಿಕ್ಷೆ ಜಾರಿಯಾಗಿದೆ. ಅವರ ವೃತ್ತಿ ಬದುಕು ತೂಗುಯ್ಯಾಲೆಯಲ್ಲಿದ್ದು ಅವರ ಮುಂದಿನ ಚಿತ್ರಗಳ ಭವಿಷ್ಯದ ಕಥೆಯೂ ಶೋಚನೀಯವಾಗಿದೆ. ಇದೀಗ ಬಂದ ಸುದ್ದಿಯ ಪ್ರಕಾರ ಸಲ್ಲುಗೆ ಮುಂಬೈ ಹೈಕೋರ್ಟ್ ಜಾಮೀನು ನೀಡಿದೆ. ಆದರೆ ಅವರ ಮೇಲೆ ಬಂಡವಾಳ ಹೂಡಿರುವ ನಿರ್ಮಾಪಕರ ಪರಿಸ್ಥಿತಿ ಕೇಳುವಂತಿಲ್ಲ.
ಕೆಲ ದಿನಗಳ ಹಿಂದೆ ಸ್ಯಾಂಡಲ್ ವುಡ್ ನಿರ್ಮಾಪಕರಾದ ಆನಂದ್ ಅಪ್ಪುಗೋಳ್ ಅವರು ಸಲ್ಲು ಜೊತೆ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರ ನಿರ್ಮಿಸುತ್ತಿರುವುದಾಗಿ ಹೇಳಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದಿತ್ತು. [ಸಂಗೊಳ್ಳಿ ರಾಯಣ್ಣನ್ನಾಗಿ ಕ್ರಾಂತಿ ಕಿಡಿ ಹಚ್ಚಲಿರುವ ಸಲ್ಲು]

ಸಲ್ಮಾನ್ ಖಾನ್ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿದ ವೀರನಾಗಿ ಕಾಣಿಸುವುದನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದರು. ಆದರೆ ಈಗವರು ಗುದ್ದೋಡು ಪ್ರಕರಣದಲ್ಲಿ ತಪ್ಪಿತಸ್ಥ ಎಂದು ತೀರ್ಪು ಹೊರಬಿದ್ದ ಬಳಿಕ ಈ ಚಿತ್ರ ಸೆಟ್ಟೇರುತ್ತದೋ ಇಲ್ಲವೋ ಎಂಬ ಅನುಮಾನ ಮೂಡಿದೆ.
ಈ ಚಿತ್ರಕ್ಕಾಗಿ 80 ದಿನಗಳ ಕಾಲ್ ಶೀಟ್ ಕೇಳಲಾಗಿತ್ತು. ಆದರೆ ಸಲ್ಲು 40 ದಿನಗಳ ಕಾಲ್ ಶೀಟ್ ಕೊಡಲು ಒಪ್ಪಿದ್ದರು. ಕನ್ನಡ ಚಿತ್ರವನ್ನು ಸಲ್ಲು ನೋಡಲು ಮುಂದಾಗಿದ್ದರು ಆದರೆ ಅಷ್ಟರಲ್ಲಾಗಲೇ ಕೋರ್ಟ್ ತೀರ್ಪು ಹೊರಬಿದ್ದು ಎಲ್ಲವೂ ಉಲ್ಟಾಪಲ್ಟಾ ಆಗಿದೆ.
ಈ ಚಿತ್ರದ ಮೂಲಕ ರಾಯಣ್ಣನ ಹೋರಾಟದ ವೈಖರಿಯನ್ನು ಇಡೀ ದೇಶಕ್ಕೆ ಮುಟ್ಟಿಸುವ ಪ್ರಯತ್ನ ಮಾಡಲು ಅಪ್ಪುಗೋಳ್ ಮುಂದಾಗಿದ್ದರು. ರಾಜ್ಯ ಪ್ರಶಸ್ತಿ ಪಡೆದ ಈ ಚಿತ್ರ ಬಾಲಿವುಡ್ ನಲ್ಲೂ ಸದ್ದು ಮಾಡುವ ಎಲ್ಲ ಸೂಚನೆಗಳೂ ಇದ್ದವು. ಈಗಿರುವ ಪರಿಸ್ಥಿತಿಯಲ್ಲಿ ಚಿತ್ರ ಸೆಟ್ಟೇರುವುದು ಅನುಮಾನ ಎನ್ನುತ್ತವೆ ಮೂಲಗಳು. (ಏಜೆನ್ಸೀಸ್)


Click it and Unblock the Notifications











