ಹೊಸ ಸಿನಿಮಾ ಘೋಷಿಸಿದ ಸಲ್ಮಾನ್ ಖಾನ್; ನಿರ್ದೇಶಕ, ನಿರ್ಮಾಪಕರು ಯಾರು?
ಸಾಲು ಸಾಲು ಸೋಲುಗಳಿಂದ ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಕ್ರೇಜ್ ಕಮ್ಮಿ ಆಗಿದೆ. ವಿಕ್ಕಿ ಕೌಶಲ್, ರಣ್ಬೀರ್ ಕಪೂರ್, ರಣ್ವೀರ್ ಸಿಂಗ್ ಆರ್ಭಟವೇ ಜೋರಾಗಿದೆ. ಅಂತೂ ಇಂತೂ ಸಕ್ಸಸ್ ಟ್ರ್ಯಾಕ್ ತಪ್ಪಿದ್ದ ಶಾರುಖ್ ಖಾನ್ ಈಗ ವಾಪಸ್ ಆಗಿದ್ದಾರೆ. ಗೆಲುವಿಗಾಗಿ ಮತ್ತೆ ದಕ್ಷಿಣದ ನಿರ್ದೇಶಕನ ಜೊತೆ ಸಲ್ಲು ಕೈ ಜೋಡಿಸಿದ್ದಾರೆ.
ಕಳೆದ ವರ್ಷ ತೆರೆಗೆ ಬಂದಿದ್ದ 'ಸಿಕಂದರ್' ಸಿನಿಮಾ ಹೀನಾಯವಾಗಿ ಸೋತಿತ್ತು. ಸಿನಿಮಾ ಬಿಡುಗಡೆಗೂ ಒಂದು ದಿನ ಮುನ್ನ ಪೈರಸಿಯಾಗಿತ್ತು. ಮುರಗದಾಸ್ ನಿರ್ದೇಶನದ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದರು. ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿದ್ದ ಸಿನಿಮಾ ಭಾರೀ ನಷ್ಟ ತಂದೊಡ್ಡಿತ್ತು. ಸದ್ಯ 'ಮಾತೃಭೂಮಿ' ಎಂಬ ಚಿತ್ರದಲ್ಲಿ ಸಲ್ಲು ನಟಿಸುತ್ತಿದ್ದಾರೆ.

ಸದ್ಯ ತಮ್ಮ ಮುಂದಿನ ಸಿನಿಮಾವನ್ನು ಸಲ್ಮಾನ್ ಖಾನ್ ಘೋಷಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ತೆಲುಗು ನಿರ್ಮಾಪಕರ ದಿಲ್ ರಾಜು ಹಾಗೂ ನಿರ್ದೇಶಕ ವಂಶಿ ಪೈಡಿಪಲ್ಲಿ ಜೊತೆ ಸಲ್ಲು ಕೈ ಜೋಡಿಸಿದ್ದಾರೆ. ಫೋಟೊ ಸಮೇತ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಕುಲದೀಪ್ ರಾಥೋಡ್ ಮತ್ತು ರಫಿ ಕಾಜಿ ಕೂಡ ಕೈ ಜೋಡಿಸಲಿದ್ದಾರೆ.
"ಹೃದಯ, ಮನಸ್ಸಿನಿಂದ ವಂಶಿ ಹಾಗೂ ದಿಲ್ ರಾಜು ಜೊತೆ ಇದೇ ಏಪ್ರಿಲ್ನಿಂದ" ಎಂದು ಬರೆದು ನಿರ್ದೇಶಕ ವಂಶಿ ಜೊತೆಗಿನ ಫೋಟೊವನ್ನು ಸಲ್ಮಾನ್ ಖಾನ್ ಹಂಚಿಕೊಂಡಿದ್ದಾರೆ. ಇದೇ ಚಿತ್ರದಲ್ಲಿ ಸಲ್ಲು ಜೋಡಿಯಾಗಿ ನಯನತಾರಾ ನಟಿಸೋ ಬಗ್ಗೆ ಗುಸುಗುಸು ಶುರುವಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ.
ಈ ಹಿಂದೆ ಕೂಡ ಕೆಲ ತಮಿಳು ನಿರ್ದೇಶಕರ ಸಿನಿಮಾಗಳಲ್ಲಿ ಸಲ್ಮಾನ್ ಖಾನ್ ನಟಿಸಿದ್ದರು. ದಕ್ಷಿಣದ ನಿರ್ದೇಶಕರ ಜೊತೆ ಒಂದಲ್ಲ ಎರಡಲ್ಲ 10 ಸಿನಿಮಾಗಳನ್ನು ಮಾಡಿದ್ದಾರೆ ಸಲ್ಮಾನ್ ಖಾನ್. ಅದರಲ್ಲಿ 6 ಸಿನಿಮಾಗಳು ಸೋತಿದ್ದರೆ 4 ಸಿನಿಮಾಗಳು ಹಿಟ್ ಲಿಸ್ಟ್ ಸೇರಿದೆ. ಮುಖ್ಯವಾಗಿ ಸೋಲಿನ ಸುಳಿಗೆ ಸಿಲುಕಿದ್ದಾಗ ಪ್ರಭುದೇವ ನಿರ್ದೇಶನದ 'ವಾಟೆಂಡ್' ಸಿನಿಮಾ ಮೂಲಕ ಕಂಬ್ಯಾಕ್ ಮಾಡಿದ್ದರು. 90ರ ದಶಕದ ಆರಂಭದಲ್ಲೇ ತಮಿಳು ನಿರ್ದೇಶಕ ಸುರೇಶ್ ಕೃಷ್ಣ ಸಾರಥ್ಯದ 'ಲವ್' ಎಂಬ ಚಿತ್ರದಲ್ಲಿ ಸಲ್ಲು ನಟಿಸಿದ್ದರು. 'ಜಾಗೃತಿ' ಎಂಬ ಮತ್ತೊಂದು ಚಿತ್ರಕ್ಕೂ ಸುರೇಶ್ ಕೃಷ್ಣ ಆಕ್ಷನ್ ಕಟ್ ಹೇಳಿದ್ದರು.
ಮುಂದೆ 'ಬಂಧನ್'(1998), 'ಹಮ್ ತುಮ್ಹಾರೆ ಹೈ ಸನಮ್'(2002), 'ಕ್ಯೋಂ ಕಿ'(2005), 'ಶಾದಿ ಕರ್ಕೆ ಫಸ್ ಗಯಾ ಯಾರ್'(2006), 'ವಾಂಟೆಡ್'(2009), 'ಬಾಡಿಗಾರ್ಡ್'(2011), 'ದಬಾಂಗ್- 3'(2019) ಹೀಗೆ ದಕ್ಷಿಣದ ಫಿಲ್ಮ್ ಮೇಕರ್ಸ್ ಜೊತೆ ಕೈ ಜೋಡಿಸಿ ಸಲ್ಮಾನ್ ಖಾನ್ ಸಿನಿಮಾಗಳಲ್ಲಿ ನಟಿಸಿದ್ದರು. ಇದೇ ಮೊದಲ ಬಾರಿಗೆ ತೆಲುಗು ನಿರ್ದೇಶಕನ ಜೊತೆ ಕೆಲಸ ಮಾಡುತ್ತಿದ್ದಾರೆ.
ದಕ್ಷಿಣದ ನಿರ್ದೇಶಕರು ಮಾತ್ರವಲ್ಲ ದಕ್ಷಿಣದ ನಿರ್ಮಾಪಕರು ಕೂಡ ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡಿದ ಉದಾಹರಣೆಗಳಿವೆ. 'ಭಜರಂಗಿ ಭಾಯಿಜಾನ್' ಚಿತ್ರಕ್ಕೆ ರಾಕ್ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದು ಗೊತ್ತೆಯಿದೆ. ಫ್ಯಾಮಿಲಿ ಓರಿಯಂಟೆಡ್ ಸಿನಿಮಾಗಳ ಮೂಲಕ ವಂಶಿ ಪ್ರೇಕ್ಷಕರ ಗಮನ ಸೆಳೆಯುತ್ತಾ ಬರ್ತಿದ್ದಾರೆ. 'ಬೃಂದಾವನಂ', 'ಎವಡು', 'ಊಪಿರಿ', 'ಮಹರ್ಷಿ' ಹೀಗೆ ತೆಲುಗಿನಲ್ಲಿ ಸದಭಿರುಚಿ ಸಿನಿಮಾಗಳನ್ನು ಕೊಟ್ಟಿದ್ದಾರೆ. ಆದರೆ ತಮಿಳಿನಲ್ಲಿ ದಳಪತಿ ವಿಜಯ್ ಜೊತೆ 'ವಾರಿಸು' ಸಿನಿಮಾ ಮಾಡಿ ಸೋತಿದ್ದರು. ಇದೇ ಚಿತ್ರವನ್ನು ಸಲ್ಮಾನ್ ಖಾನ್ ಹೀರೊ ಆಗಿ ಹಿಂದಿಯಲ್ಲಿ ರೀಮೆಕ್ ಮಾಡ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ.


Click it and Unblock the Notifications











