ಸಲ್ಮಾನ್ ಖಾನ್ ಪರ ನಿಂತ ನಟಿ ಜಯಾಬಚ್ಚನ್
ನಟಿ ಹಾಗೂ ರಾಜ್ಯಸಭೆ ಸದಸ್ಯೆ ಜಯಾ ಬಚ್ಚನ್ ಅವರು ಜೋಧ್ ಪುರ ನ್ಯಾಯಾಲಯದ ತೀರ್ಪಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಲುಗೆ ಶಿಕ್ಷೆಯಾಗಿರುವುದರ ಬಗ್ಗೆ ಖಂಡನೆ ವ್ಯಕ್ತಪಡಿಸಿರುವ ಅಮಿತಾಬ್ ಬಚ್ಚನ್ ಮಡದಿ ''ಸಲ್ಮಾನ್ ಗೆ ರಿಲೀಫ್ ನೀಡಬೇಕಾಗಿತ್ತು'' ಎಂದಿದ್ದಾರೆ.
ಗುರುವಾರ ಜೋಧ್ ಪುರ ನ್ಯಾಯಾಲಯ ನಟ ಸಲ್ಮಾನ್ ಖಾನ್ ಗೆ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ದೋಷಿ ಎಂದು ನಿರ್ಧರಿಸಿ 5 ವರ್ಷ ಜೈಲು ಶಿಕ್ಷೆ ನೀಡಿತ್ತು. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಜಯಾಬಚ್ಚನ್ ''ನನಗೆ ಬೇಸರವಾಗಿದೆ. ಅವರಿಗೂ ಕೂಡ ರಿಲೀಫ್ ನೀಡಬೇಕಾಗಿತ್ತು. ಯಾಕಂದ್ರೆ, ಅವರು ಬಹಳಷ್ಟು ಮಾನವೀಯ ಕೆಲಸ ಮಾಡಿದ್ದಾರೆ'' ಎಂದಿದ್ದಾರೆ.
ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಜೊತೆಯಲ್ಲಿ ಆರೋಪಿಗಳಾಗಿದ್ದ ನಟ ಸೈಫ್ ಅಲಿ ಖಾನ್, ನಟಿ ಅಬು, ಸೋನಾಲಿ ಬೇಂದ್ರೆ, ನೀಲಂ ಅವರಿಗೆ ಸಾಕ್ಷ್ಯಾಧಾರವಿಲ್ಲದ ಕಾರಣ ನ್ಯಾಯಾಲಯ ರಿಲೀಫ್ ನೀಡಿದೆ.

ಸೆಪ್ಟೆಂಬರ್ 26, 1998 ರಲ್ಲಿ 'ಹಮ್ ಸಾಥ್ ಸಾಥ್ ಹೇ' ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿ, ಜೋಧ್ ಪುರ ಬಳಿಯ ಮಥಾನಿಯಾದಲ್ಲಿರುವ ಭವಾದ್ ನಲ್ಲಿ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ್ದ ಆರೋಪ ಸಲ್ಮಾನ್ ಖಾನ್ ವಿರುದ್ಧ ಕೇಳಿ ಬಂದಿತ್ತು. ಗೋಢಾದಲ್ಲಿ ಎರಡು ಚಿಂಕಾರಗಳನ್ನು ಸಲ್ಮಾನ್ ಖಾನ್ ಬೇಟೆಯಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಈ ಪ್ರರಣದಲ್ಲಿ ಈಗ ಜೈಲು ಶಿಕ್ಷೆಯಾಗಿದೆ.

ಕೇವಲ ಜಯಾ ಬಚ್ಚನ್ ಮಾತ್ರವಲ್ಲ, ಬಾಲಿವುಡ್ ನ ಹಲವರು ಈ ಬಗ್ಗೆ ಬೇಸರಗೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ನಿರ್ದೇಶಕ ಸುಭಾಶ್ ಗಾಯ್ ''ಜೋಧ್ ಪುರ್ ನ್ಯಾಯಾಲಯ ನೀಡಿರುವ ತೀರ್ಪು ಅಚ್ಚರಿ ಉಂಟು ಮಾಡಿದೆ. ಇದನ್ನ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಸಲ್ಮಾನ್ ಖಾನ್ ಅವರನ್ನ ವಿವಿಧ ಕ್ಷೇತ್ರದ ಹಲವು ಜನರು ಇಷ್ಟಪಡ್ತಾರೆ'' ಎಂದಿದ್ದಾರೆ.


Click it and Unblock the Notifications











