ಆರ್ಯನ್ ಖಾನ್ ಅನ್ನು ಉಳಿಸಲು ಶಾರುಖ್ ಮ್ಯಾನೇಜರ್ 50 ಲಕ್ಷ ಹಣ ನೀಡಿದ್ದು ನಿಜ
ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಆದರೆ ಪ್ರಕರಣ ಮತ್ತೊಂದು ತಿರುವು ಪಡೆದಿದ್ದು, ಆರ್ಯನ್ ಅನ್ನು ಬಂಧಿಸಿದ ಉದ್ದೇಶವೇ ಹಣ ವಸೂಲಿಯೇ ಎಂಬ ಅನುಮಾನ ವ್ಯಕ್ತವಾಗಿದೆ.
ಆರ್ಯನ್ ಖಾನ್ ಪ್ರಕರಣದಲ್ಲಿ ಆರಂಭದಿಂದಲೂ ಕೆಪಿ ಗೋಸಾಯಿ ಹೆಸರು ಜೋರಾಗಿ ಕೇಳಿ ಬರುತ್ತಿದೆ. ಆರ್ಯನ್ ಅನ್ನು ಎನ್ಸಿಬಿ ವಶಕ್ಕೆ ಪಡೆದ ದಿನ ಗೋಸಾಯಿ, ಎನ್ಸಿಬಿ ಕಚೇರಿಯಲ್ಲಿ ಆರ್ಯನ್ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ. ಈ ವಿಷಯದ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡುತ್ತಿದ್ದಂತೆ ಎನ್ಸಿಬಿಯು, ಆ ವ್ಯಕ್ತಿ ಎನ್ಸಿಬಿಯ ಅಧಿಕಾರಿ ಅಥವಾ ಸಿಬ್ಬಂದಿ ಅಲ್ಲ ಎಂದಿತ್ತು.
ಹಾಗಿದ್ದರೆ ಗೋಸಾವಿ ಯಾರು ಎಂದು ಮಾಧ್ಯಮಗಳು ತನಿಖೆ ಮಾಡಿದಾಗ ಆತನ ವಿರುದ್ಧ ಕೆಲವು ವಂಚನೆ ಪ್ರಕರಣಗಳು ಇರುವುದು ಗೊತ್ತಾಗಿತ್ತು. ಆತ ಸೆಟಲ್ಮೆಂಟ್ ಕೆಲಸಗಳು, ಲಂಚ ನೀಡಿ ಉದ್ಯೋಗ ಕೊಡಿಸುವ ಕೆಲಸಗಳಲ್ಲಿ ಭಾಗಿಯಾಗಿದ್ದಾನೆ ಎಂಬುದು ಬೆಳಕಿಗೆ ಬಂತು. ತನ್ನ ಕುರಿತು ಸುದ್ದಿ ಬಹಿರಂಗಗೊಳ್ಳುತ್ತಿದ್ದಂತೆ ಗೋಸಾವಿ ನಾಪತ್ತೆಯಾದ.

ಆ ನಂತರ ಆರ್ಯನ್ ಖಾನ್ ಪ್ರಕರಣ ಮುಂದುವರೆದಂತೆ ಗೋಸಾವಿಯ ಕಾರ್ ಡ್ರೈವರ್ ಮತ್ತು ಬಾಡಿಗಾರ್ಡ್ ಎಂದು ಹೇಳಿಕೊಂಡಿರುವ ಪ್ರಭಾಕರ್ ಸಾಯಿಲ್ ಎಂಬಾತ ಆರ್ಯನ್ ಖಾನ್ ಪ್ರಕರಣದಲ್ಲಿ ಗೋಸಾವಿಯು 25 ಕೋಟಿಗೆ ಬೇಡಿಕೆ ಇಟ್ಟಿದ್ದಾಗಿಯೂ ಅಕ್ಟೋಬರ್ 03 ರಂದು ಸ್ಯಾಮ್ ಡಿಸೋಜಾ ಹಾಗೂ ಗೋಸಾವಿ ಸೇರಿ ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದದ್ಲಾನಿಯನ್ನು ಭೇಟಿಯಾಗಿದ್ದಾಗಿಯೂ ಹೇಳಿದ. ಪ್ರಭಾಕರ್ನ ಹೇಳಿಕೆಯಿಂದ ಪ್ರಕರಣದ ದಿಕ್ಕೇ ಬದಲಾಯಿತು. ಆರ್ಯನ್ ಖಾನ್ ಅನ್ನು ಬಂಧಿಸಿದ್ದ ಸಮೀರ್ ವಾಂಖೆಡೆಗೂ ಎಂಟು ಕೋಟಿ ಹಣ ಹೋಗುವುದಿತ್ತು ಎಂದು ಪ್ರಭಾಕರ್ ಹೇಳಿದ್ದ.
ಪ್ರಭಾಕರ್ ಹೇಳಿಕೆ ಬಳಿಕ ಸ್ಯಾಮ್ ಡಿಸೋಜಾ ಬಗ್ಗೆ ಮಹಾರಾಷ್ಟ್ರದ ಕೆಲವು ಪ್ರಮುಖ ರಾಜಕಾರಣಿಗಳೇ ಆರೋಪ ಮಾಡಿ, ''ಆತ ಒಬ್ಬ ಮಧ್ಯವರ್ತಿ, ಅಕ್ರಮ ಹಣಕಾಸು ದಂಧೆ ಮಾಡುತ್ತಾನೆ'' ಎಂದಿದ್ದರು. ಆ ಬಳಿಕ ಎನ್ಸಿಬಿಯ ಕೇಂದ್ರ ಕಚೇರಿಯು ಆರ್ಯನ್ ಖಾನ್ ಪ್ರಕರಣದ ರೂವಾರಿ ಸಮೀರ್ ವಾಂಖೆಡೆ, ಪ್ರಕರಣದ ಸ್ವತಂತ್ರ್ಯ ಸಾಕ್ಷಿಗಳಾಗಿದ್ದ ಕೆಪಿ ಗೋಸಾವಿ, ಸ್ಯಾಮ್ ಡಿಸೋಜಾ, ಪ್ರಭಾಕರ್ ಸಾಯಿಲ್, ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದದ್ಲಾನಿ ಅವರನ್ನು ವಿಚಾರಣೆ ನಡೆಸಿತು.
ಆದರೆ ಇದೀಗ ಮಾಧ್ಯಮವೊಂದರ ಜೊತೆ ಮಾತನಾಡಿರುವ ಸ್ಯಾಮ್ ಡಿಸೋಜಾ, ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದದ್ಲಾನಿ 50 ಲಕ್ಷ ಹಣ ನೀಡಿದ್ದು ನಿಜ ಎಂದು ಹೇಳಿದ್ದಾರೆ. ಆ ಮೂಲಕ ಪ್ರಕರಣ ಹೊಸದೊಂದು ತಿರುವು ಪಡೆದುಕೊಂಡಿದೆ.
''ಪೂಜಾ ದದ್ಲಾನಿ 50 ಲಕ್ಷ ಹಣ ನೀಡಿದ್ದು ನಿಜ. ಆದರೆ ಯಾವಾಗ ನನಗೆ ಗೋಸಾವಿ ಮೋಸಗಾರ ಎಂಬುದು ಗೊತ್ತಾಯಿತೋ ಹಾಗೂ ಆರ್ಯನ್ ಖಾನ್ ಅನ್ನು ಈ ಪ್ರಕರಣದಲ್ಲಿ ಬಚಾವ್ ಮಾಡಲು ಆಗುವುದಿಲ್ಲ ಎಂದು ಅರಿವಾಯಿತೋ ಆಗ ಹಣವನ್ನು ಪೂಜಾಗೆ ವಾಪಸ್ ನೀಡುವಂತೆ ಗೋಸಾವಿಗೆ ಹೇಳಿದೆ. ಐವತ್ತು ಲಕ್ಷದಲ್ಲಿ ಗೋಸಾವಿ 38 ಲಕ್ಷ ಹಣವನ್ನಷ್ಟೆ ವಾಪಸ್ ನೀಡಿದ. ಉಳಿದ ಹಣವನ್ನು ನಾವೇ ಹೊಂದಿಸಿ ಪೂಜಾಗೆ ಮರಳಿಸಿದೆವು. ಗೋಸಾವಿ ಮೇಲೆ ಎಷ್ಟೇ ಒತ್ತಡ ಹಾಕಿದರು ಆತ ಉಳಿದ ಹಣ ನೀಡಲಿಲ್ಲ'' ಎಂದಿದ್ದಾನೆ ಸ್ಯಾಮ್ ಡಿ ಸೋಜಾ.


Click it and Unblock the Notifications











