ದ್ವೇಷದ ಜ್ವಾಲೆ-ಪ್ರತೀಕಾರದ ಕಿಚ್ಚು ; ಶಾರುಖ್ ಖಾನ್ ಮಗನ ವಿರುದ್ಧ ಮತ್ತೆ ಕೇಸ್ ಹಾಕಿದ ಸಮೀರ್ ವಾಂಖೆಡೆ
ತಂದೆ ತಾಯಿಯ ಜಾಡು ಹಿಡಿದು ಹಲವು ಸೂಪರ್ ಸ್ಟಾರ್ಗಳ ಮಕ್ಕಳು ಚಿತ್ರರಂಗಕ್ಕೆ ಬರುತ್ತಾರೆ. ಹೆತ್ತವರಂತೆ ಸ್ಟಾರ್ ಆಗುವ ಕನಸು ಕಾಣುತ್ತಾರೆ. ಆದರೆ ಇಲ್ಲಿ ಎಲ್ಲರಿಗೆ ಗೆಲುವು ಸಿಗಲ್ಲ. ಅಲ್ಲೊಬ್ಬರು.. ಇಲ್ಲೊಬ್ಬರು ಮಾತ್ರ ಇಲ್ಲಿ ಗೆಲುವು ಕಾಣುತ್ತಾರೆ. ಮಿಕ್ಕಂತೆ ಬಹುತೇಕರು ಬಂದ ದಾರಿಗೆ ಸುಂಕ ಇಲ್ಲವೆನ್ನುವಂತೆ ಮರಳುತ್ತಾರೆ. ಆದರೆ.. ಶಾರುಖ್ ಖಾನ್ ಮಗ ಆರ್ಯನ್ ಈ ಎರಡನೇ ಸಾಲಿನಲ್ಲಿ ಇಲ್ಲ.
ಬದಲಿಗೆ ತಮ್ಮ ಮೊದಲ ಪ್ರಯತ್ನದಲ್ಲಿಯೇ ಯಶಸ್ವಿಯಾಗಿದ್ದಾರೆ. ಭರವಸೆ ಮೂಡಿಸಿದ್ದಾರೆ. ನಿಜಾ.. ತಂದೆಯಂತೆ ಆರ್ಯನ್ ಆಕ್ಟಿಂಗ್ನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡಿಲ್ಲ. ಆದರೆ.. ನಿರ್ದೇಶಕರಾಗಿ ಆರ್ಯನ್ ಗೆದ್ದಿದ್ದಾರೆ. ಇವರ ನಿರ್ದೇಶನದ ಚೊಚ್ಚಲ ಸರಣಿ ''ದಿ ಬ್ಯಾಡ್ಸ್ ಆಫ್ ಬಾಲಿವುಡ್''ಗೆ ಇಡೀ ಬಾಲಿವುಡ್ ಫಿದಾ ಆಗಿದೆ. ಪ್ರೇಕ್ಷಕರು ಕೂಡ ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಆರ್ಯನ್ಗೆ ಸಿನಿಮಾ ಮೇಲಿರುವ ಶ್ರದ್ಧೆ-ಭಕ್ತಿಯನ್ನು ಕೊಂಡಾಡುತ್ತಿದ್ದಾರೆ.

ಹೀಗಿರುವಾಗ ಇದೀಗ ದ್ವೇಷದ ಬೆಂಕಿ ಕಿಡಿ ಮತ್ತೆ ಹೊತ್ತುಕೊಂಡಿದೆ. ಹೌದು, ಅನೇಕರಿಗೆ ಗೊತ್ತಿರುವಂತೆ ಆರ್ಯನ್ ಖಾನ್ ಅಕ್ಟೋಬರ್ 3 - 2021ರಂದು ಬಂಧನಕ್ಕೊಳಗಾಗಿದ್ದರು. ಮಾದಕ ವಸ್ತು ದಳದ ಅಧಿಕಾರಿಯಾಗಿದ್ದ ಸಮೀರ್ ವಾಂಖೆಡೆ ಡ್ರಗ್ಸ್ ಪಾರ್ಟಿಯಲ್ಲಿ ಆರ್ಯನ್ ಖಾನ್ ಇದ್ದರು ಎನ್ನುವ ಆರೋಪದಡಿ ಅರೆಸ್ಟ್ ಮಾಡಿದ್ದರು.
ಶಾರುಖ್ ಖಾನ್ ಮತ್ತು ಅವರ ಅಭಿಮಾನಿಗಳಿಗೆ ಈ ಸುದ್ದಿ ಬರಸಿಡಿಲಿನಂತೆ ಬಡಿದಿತ್ತು. ತಮ್ಮ ಮುದ್ದಿನ ಮಗನನ್ನು ಹೊರ ತರಲು ಶಾರುಖ್ ಖಾನ್ ಸಾಕಷ್ಟು ಪ್ರಯತ್ನ ಮಾಡಿದರು ಕೂಡ ಆರ್ಯನ್ ಖಾನ್ ಹೆಚ್ಚು ಕಡಿಮೆ ಸೆರೆವಾಸ ಅನುಭವಿಸಬೇಕಾಯ್ತು.
ತಮ್ಮ ಬದುಕಿನ ಈ ಕರಾಳ ಅಧ್ಯಾಯವನ್ನು ಈಗ ಆರ್ಯನ್ ಖಾನ್ ತಮ್ಮ ''ದಿ ಬ್ಯಾಡ್ಸ್ ಆಫ್ ಬಾಲಿವುಡ್''ನಲ್ಲಿ ತಿರುವಿ ಹಾಕಿದ್ದಾರೆ. ಇದರಿಂದ ಸಹಜವಾಗಿ ಕೆರಳಿರುವ ಸಮೀರ್ ವಾಂಖೆಡೆ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಎರಡು ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ತಮ್ಮ ಮತ್ತು ತಮ್ಮ ಇಲಾಖೆಯನ್ನು ಅವಹೇಳನ ಮಾಡುವ ಉದ್ದೇಶದಿಂದಲೇ ಚಿತ್ರದಲ್ಲಿ ಕೆಲ ದೃಶ್ಯಗಳನ್ನು ಹೆಣೆಯಲಾಗಿದೆ ಎಂದು ಹೇಳಿರುವ ಸಮೀರ್ ವಾಂಖೆಡೆ ವೆಬ್ ಸೀರಿಸ್ನ ಮೊದಲ ಎಪಿಸೋಡ್ನಲ್ಲಿ ಮಾದಕ ವಸ್ತು ನಿಗ್ರಹ ದಳದ ಅಧಿಕಾರಿಗಳು ಪಾರ್ಟಿಯೊಂದಕ್ಕೆ ನುಗ್ಗಿ ಅಲ್ಲಿ ಡ್ರಗ್ಸ್ ಸೇವಿಸಿರುವ ಬಾಲಿವುಡ್ ಮಂದಿಗಾಗಿ ಹುಡುಕುತ್ತಿರುವ ದೃಶ್ಯಗಳಿವೆ. ಈ ಪಾತ್ರ ತಮ್ಮನ್ನು ಹೋಲುತ್ತದೆ ಎಂದು ಹೇಳಿದ್ದಾರೆ. ಆರ್ಯನ್ ಖಾನ್ ಪ್ರಕರಣ ಇನ್ನೂ ಮುಂಬೈ ಹೈಕೋರ್ಟ್ ಮತ್ತು ಮುಂಬೈ ಎನ್ಡಿಪಿಎಸ್ ವಿಶೇಷ ಕೋರ್ಟ್ನಲ್ಲಿ ಬಾಕಿಯಿದ್ದು, ಈ ಸಂದರ್ಭದಲ್ಲಿ ಸೀರೀಸ್ನ ಚಿತ್ರಣ ತಪ್ಪು ಎಂದು ಸಮೀರ್ ವಾಂಖೆಡೆ ತಮ್ಮ ದೂರಿನಲ್ಲಿ ಹೇಳಿದ್ದಾರೆ. ಶಾರುಖ್ ಒಡೆತನದ ರೆಡ್ ಚಿಲೀಸ್ ಎಂಟರ್ಟೈನ್ಮೆಂಟ್, ಗೌರಿ ಖಾನ್, ನೆಟ್ಫ್ಲಿಕ್ಸ್ ಮತ್ತಿತರರನ್ನು ಆರೋಪಿಗಳೆಂದು ಉಲ್ಲೇಖಿಸಿದ್ದಾರೆ.

ಇದು ಮಾತ್ರವಲ್ಲದೇ '' ದಿ ಬ್ಯಾಡ್ಸ್ ಆಫ್ ಬಾಲಿವುಡ್'' ಸರಣಿಯಲ್ಲಿ ''ಸತ್ಯಮೇವ ಜಯತೇ'' ಘೋಷಣೆಯ ದೃಶ್ಯ ಇದೆ. ಇದರ ಬೆನ್ನಲ್ಲಿಯೇ ಮಧ್ಯದ ಬೆರಳು ತೋರಿಸುತ್ತಾ ಅಶ್ಲೀಲ ಸನ್ನೆ ಮಾಡುವ ದೃಶ್ಯ ಇದೆ. ಇದು 1971ರ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆಯುವ ಕಾಯ್ದೆಯ ಉಲ್ಲಂಘನೆಯಾಗಿದ್ದು ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ನೀಡಬೇಕೆಂದು ಕೂಡ ಸಮೀರ್ ವಾಂಖೆಡೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಸರಣಿಗೆ ತಡೆಯಾಜ್ಞೆ ನೀಡಬೇಕು. ಮಾನಹಾನಿ ರೂಪದಲ್ಲಿ ಕೋರಿರುವ ಎರಡು ಕೋಟಿ ರೂಪಾಯಿಯ ಪರಿಹಾರವನ್ನು ''ಟಾಟಾ ಮೆಮೋರಿಯಲ್ ಕ್ಯಾನ್ಸರ್'' ಆಸ್ಪತ್ರೆಗೆ ದಾನವಾಗಿ ನೀಡಬೇಕೆಂದು ಕೂಡ ಸಮೀರ್ ಕೇಳಿಕೊಂಡಿದ್ದಾರೆ.


Click it and Unblock the Notifications











