ತನಗೆ ಉಗ್ಗು ಸಮಸ್ಯೆ ಇದೆ ಎಂದು ಬಹಿರಂಗಪಡಿಸಿದ 'ವರದನಾಯಕ' ಸಿನಿಮಾ ನಟಿ
ಸಿನಿಮಾ ತಾರೆಯರು ಕೂಡ ಮನುಷ್ಯರೇ.. ಅವರು ದೇವಲೋಕದಿಂದ ಇಳಿದು ಬಂದವರಲ್ಲ. ಬಣ್ಣದ ಲೋಕದಲ್ಲಿ ಅವರಿಗೆ ಒಂದು ಇಮೇಜ್ ಸೃಷ್ಟಿಯಾಗಿರುತ್ತದೆ ಅಷ್ಟೆ. ಸಾಮಾನ್ಯರಂತೆಯೇ ನಟ, ನಟಿಯರು ಹಲವು ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಅದನ್ನೆಲ್ಲಾ ಮರೆಮಾಚಿ ತೆರೆಮೇಲೆ ನಾಯಕ, ನಾಯಕಿಯಾಗಿ ಮಿಂಚುತ್ತಾರೆ. ಸಾಕಷ್ಟು ತಾರೆಯರಿಗೆ ವಿಭಿನ್ನ ಆರೋಗ್ಯ ಸಮಸ್ಯೆಗಳಿವೆ. ಕೆಲವೊಮ್ಮೆ ಅದು ಬಹಿರಂಗವಾಗಿರುವುದು ಇದೆ.
ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿರುವ ಕೆಲ ಸ್ಟಾರ್ ನಟ, ನಟಿಯರು ಇದ್ದಾರೆ. ಕೆಲವರು ಮಾರಕ ಕ್ಯಾನರ್ ವಿರುದ್ಧ ಹೋರಾಡಿ ಗೆದ್ದಿದ್ದಾರೆ. ತಮಿಳು ನಟಿ ಅಭಿನಯ ಅವರಿಗೆ ಕಿವಿ ಕೇಳಲ್ಲ.. ಮಾತು ಬರಲ್ಲ.. ಇದೇ ರೀತಿ ಹೇಳ್ತಾ ಹೋದರೆ ನಟ-ನಟಿಯರು ಕೆಲ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ನಟಿ ಸಮೀರಾ ರೆಡ್ಡಿ ತನಗೆ ಉಗ್ಗು ಸಮಸ್ಯೆಯಿದೆ ಎಂದು ಬಹಿರಂಗಪಡಿಸಿದ್ದಾರೆ. ಇದರಿಂದ ಇವತ್ತಿಗೂ ಸಾಕಷ್ಟು ನೋವು ಅನುಭವಿಸುತ್ತಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ಸಂದರ್ಶನದಲ್ಲಿ ಹೇಳಿದ್ದಾರೆ.

ಉಗ್ಗು ಸಮಸ್ಯೆಯಿಂದ ಮಾತನಾಡಲು ಕಷ್ಟಪಡುವವರನ್ನು ನಮ್ಮ ಸುತ್ತಾಮುತ್ತ ನೋಡಿರುತ್ತೇವೆ. ಇದು ಮಾತಿನ ತೊಡಕು. ಈ ಸಮಸ್ಯೆಯಿಂದ ಬಳಲುವವರು ಸ್ಪಷ್ಟವಾಗಿ ಮಾತನಾಡಲು ಕಷ್ಟಪಡುತ್ತಾರೆ. ಮಾತನಾಡುವಾಗ ಶಬ್ಧಗಳು, ಪದಗಳನ್ನು ಪುನರಾವರ್ತಿಸುತ್ತಾರೆ. ಎಳೆದು ಎಳೆದು ಮಾತನಾಡುತ್ತಾರೆ. ಹಾಗಂತ ಇದು ದೊಡ್ಡ ರೋಗವಲ್ಲ.. ಕೆಲವೊಮ್ಮೆ ಇದು ಅನುವಂಶಕ ಸಮಸ್ಯೆ ಆಗಿರಬಹುದು. ನರಮಂಡಲದ ಬೆಳವಣಿಗೆಯಲ್ಲಿ ಆಗುವ ವ್ಯತ್ಯಾಸದಿಂದಲೂ ಹೀಗೆ ಆಗಬಹುದು. ಚಿಕ್ಕಂದಿನಲ್ಲಿ ಮಾನಸಿಕ ಒತ್ತಡದಿಂದ ಹೀಗೆ ಮಾತನಾಡುವ ಅಭ್ಯಾಸ ರೂಢಿಯಾಗಿಬಿಡಬಹುದು.
ಕನ್ನಡದ 'ರಾಬರ್ಟ್' ಚಿತ್ರದಲ್ಲಿ ಉಗ್ಗು ಸಮಸ್ಯೆಯಿಂದ ಬಳಲುವ ರಾಘವ ಎಂಬ ಪಾತ್ರದಲ್ಲಿ ದರ್ಶನ್ ನಟಿಸಿದ್ದರು. ಉಗ್ಗು ಸಮಸ್ಯೆಯಿಂದ ಬಳಲುವವರು ಮಾತನಾಡುವಾಗ ಮಾತು ಪದೇ ಪದೆ ನಿಲ್ಲುವುದು, ಹೇಳಿದ ಪದಗಳನ್ನು ಪುನರಾವರ್ತಿಸುವುದು ಮಾಡುತ್ತಾರೆ. ಮಾತನಾಡುವಾಗ ಮುಖ ಹಾಗೂ ದೇಹದಲ್ಲಿ ಒತ್ತಡ ಕಾಣಬಹುದು. ಉಗ್ಗು ಸಮಸ್ಯೆ ಕಾರಣಕ್ಕೆ ಚಿಕ್ಕಂದಿನಿಂದ ಬಹಳ ಅವಮಾನ ನೋವು ಅನುಭವಿಸಿದ್ದಾಗೆ ಸಮೀರಾ ರೆಡ್ಡಿ ಹೇಳಿದ್ದಾರೆ.
ಸಮೀರಾ ಮಾತನಾಡಿ "ನಾನು ಈ ಸಮಸ್ಯೆಯಿಂದ ಬಹಳ ನೋವು ಅನುಭವಿಸಿದ್ದೀನಿ. ಇದೇ ಕಾರಣಕ್ಕೆ ಅವಮಾನ ಎದುರಿಸಿದ್ದೀನಿ. ಆತ್ಮವಿಶ್ವಾಸ ಬೆಳೆಸಿಕೊಳ್ಳಲು ವರ್ಷಗಳ ಚಿಕಿತ್ಸೆ ಬೇಕಾಯಿತು. ಇವತ್ತಿಗೂ ನಾನು ಮಾತನಾಡುಲು ತೊದಲಿದಾಗ ಅದಕ್ಕೆ ಯಾರಾದರೂ ರಿಯಾಕ್ಟ್ ಮಾಡಿದ್ರೆ, ನನ್ನ ಮೇಲೆ ಪರಿಣಾಮ ಬೀರುತ್ತದೆ. ಬಾಲ್ಯದಲ್ಲಿ ನಿಮಗೆ ಆಗಿರುವ ಅವಮಾನ ಅಷ್ಟು ಆಳವಾಗಿ ಉಳಿಯುತ್ತವೆ" ಎಂದಿದ್ದಾರೆ.
ಚಿಕ್ಕಂದಿನಲ್ಲಿ ಅವಳು ಬಹಳ ಸ್ಲೋ, ವೀಕ್ ಎಂದು ಹೇಳಿಬಿಟ್ಟರೆ ಮುಗೀತು. ನಮ್ಮ ಮೇಲೆ ನಮಗೆ ಅನುಮಾನ ಮೂಡುತ್ತದೆ. ಮಕ್ಕಳು ಮುಂದೆ ಏನಾದರೂ ಸಾಧನೆ ಮಾಡಲು ಹಿಂದುಮುಂದು ನೋಡ್ತಾರೆ ಎಂದು ಸಮೀರಾ ತಿಳಿಸಿದ್ದಾರೆ. "ಮಕ್ಕಳನ್ನು ಪದೇ ಪದೆ ಬುದ್ಧಿಹೀನ, ಬಲಹೀನ, ಎಂದು ಕರೆದರೆ ಅದೇ ನಿಜ ಎಂದುಕೊಳ್ಳುತ್ತಾರೆ. ಹಾಗಾಗಿ ಎಲ್ಲರಂತೆ ಉತ್ಸಾಹದಿಂದ ಇರಲ್ಲ. ಯಾವುದೇ ಪ್ರಯತ್ನ ಮಾಡದೇ ಇರ್ತಾರೆ. ನನ್ನ ಮಕ್ಕಳಿಗೆ ಯಾವುದೇ ಸಮಸ್ಯೆ ಇದ್ರು ನನ್ನ ಬಳಿ ಹೇಳಿ ಅಂತೀನಿ. ಯಾರಿಗೆ ಅವಮಾನ ಮಾಡ್ಬೇಡಿ ಅಂತ ಹೇಳ್ತೀನಿ. ಮಕ್ಕಳಿಗೆ ಸರಿಯಾದ ಪ್ರೋತ್ಸಾಹ, ಮಾರ್ಗದರ್ಶನ ಸಿಕ್ಕರೆ ಬಹಳ ಆತ್ಮವಿಶ್ವಾಸದಿಂದ ಬೆಳೆಯುತ್ತಾರೆ ಎಂದು ಸಮೀರಾ ವಿವರಿಸಿದ್ದಾರೆ.
ಆಪ್ತಬಳಗದಲ್ಲಿ ಮುಖ್ಯವಾಗಿ ಪೋಷಕರು, ಶಿಕ್ಷಕರು ಹಾಗೂ ಸ್ನೇಹಿತರು ಬೆಂಬಲವಾಗಿ ನಿಂತರೆ ಮಕ್ಕಳು ಯಾವುದೇ ಸಮಸ್ಯೆಯನ್ನು ಎದುರಿಸಿ ಮುಂದೆ ಸಾಗುತ್ತಾರೆ ಎಂದು ಸಮೀರಾ ಹೇಳಿದ್ದಾರೆ. ಮುಂಬೈ ಬೆಡಗಿ ಸಮೀರಾ ದಕ್ಷಿಣದ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಕನ್ನಡದ 'ವರದನಾಯಕ' ಚಿತ್ರದಲ್ಲಿ ಸುದೀಪ್ ಜೋಡಿಯಾಗಿ ಮಿಂಚಿದ್ದರು. ಅದೇ ಆಕೆ ನಟಿಸಿದ ಕೊನೆಯ ಸಿನಿಮಾ.. ಬಳಿಕ ಮದುವೆ, ಮಕ್ಕಳು ಎಂದು ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿಬಿಟ್ಟರು.


Click it and Unblock the Notifications











