'ಲಾಲ್ ಸಿಂಗ್ ಚಡ್ಡ' ವಿರುದ್ಧ ಪ್ರತಿಭಟನೆ: ಪ್ರದರ್ಶನಕ್ಕೆ ಅವಕಾಶ ನೀಡಲ್ಲವೆಂದ ಸನಾತನ ಸೇನೆ
ಆಮಿರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡ' ಸಿನಿಮಾ ಇಂದು ತೆರೆಗೆ ಬಂದಿದೆ. ನಾಲ್ಕು ವರ್ಷಗಳ ಬಳಿಕ ಆಮಿರ್ ಖಾನ್ರ ಸಿನಿಮಾ ಒಂದು ತೆರೆಗೆ ಬಂದಿದೆ.
ಆದರೆ ಈ ಸಿನಿಮಾ ಆರಂಭಿಸಿದಾಗಿನಿಂದಲೂ ಸಿನಿಮಾಕ್ಕೆ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ. ಆರಂಭದಲ್ಲಿ ಚಿತ್ರಕತೆ ಹಕ್ಕು ಇನ್ನಿತರೆ ವಿಷಯಗಳಿಗೆ ಸಮಸ್ಯೆಯಾದರೆ ಆ ನಂತರ ಕೊರೊನಾ, ಆ ಬಳಿಕ ನಟಿ ಕರೀನಾ ತಾಯ್ತನದ ಕಾರಣದಿಂದ ಚಿತ್ರೀಕರಣ ವಿಳಂಬ ಇನ್ನಿತರೆ ಸಮಸ್ಯೆಗಳಾಯಿತು.
ಇದೀಗ ಸಿನಿಮಾ ಬಿಡುಗಡೆಯೇನೋ ಆಗಿದೆ ಆದರೆ ಸಮಸ್ಯೆಗಳು ಇನ್ನಷ್ಟು ಉಲ್ಬಣಗೊಂಡಿವೆ. ಸಿನಿಮಾದ ಟ್ರೈಲರ್ ಬಿಡುಗಡೆ ಆದಾಗಿನಿಂದಲೂ ಈ ಸಿನಿಮಾವನ್ನು ಬಹಿಷ್ಕರಿಸುವ ಅಭಿಯಾನ ಆರಂಭವಾಗಿತ್ತು. ಅದೀಗ ಇನ್ನೂ ಹೆಚ್ಚಿನ ವೇಗ ಪಡೆದುಕೊಂಡಿದೆ. ಸಿನಿಮಾ ಇಂದು ಬಿಡುಗಡೆ ಆಗಿದ್ದು, ಕೆಲವು ಹಿಂದು ಪರ ಸಂಘಟನೆಗಳು ಸಿನಿಮಾದ ವಿರುದ್ಧ ಪ್ರತಿಭಟನೆ ನಡೆಸಿವೆ.

ಉತ್ತರ ಪ್ರದೇಶ ರಾಜ್ಯದ ಭೇಲುಪುರ್ನ ಐಪಿ ಮಾಲ್ ಎದುರು 'ಲಾಲ್ ಸಿಂಗ್ ಚಡ್ಡ' ಸಿನಿಮಾದ ವಿರುದ್ಧ ಪ್ರತಿಭಟನೆ ನಡೆಸಿರುವ ಸತಾತನ ರಕ್ಷಕ್ ಸೇನ 'ಲಾಲ್ ಸಿಂಗ್ ಚಡ್ಡ' ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲು ಅವಕಾಶ ನೀಡುವುದಿಲ್ಲ ಎಂದಿದೆ. ಅಲ್ಲದೆ ಸಿನಿಮಾವನ್ನು ಸರ್ಕಾರವೇ ನಿಷೇಧಿಸಬೇಕು ಎಂದು ಸಹ ಒತ್ತಾಯಿಸಿದೆ.
ಸಿನಿಮಾದ ನಿರ್ಮಾಪಕ ಹಾಗೂ ನಾಯಕ ಆಮಿರ್ ಖಾನ್, ಹಿಂದುಗಳನ್ನು ಹಾಗೂ ಹಿಂದು ಸಂಸ್ಕೃತಿಯನ್ನು ಅವಹೇಳನ ಮಾಡಿದ್ದಾರೆ ಹಾಗಾಗಿ ಅವರ ಸಿನಿಮಾಗಳನ್ನು ಭಾರತದಲ್ಲಿ ನಿಷೇಧಿಸಬೇಕು. ಭಾರತದಲ್ಲಿ ಅವರ ಸಿನಿಮಾಗಳನ್ನು ಪ್ರದರ್ಶಿಸಲು ಅವಕಾಶ ನೀಡಬಾರದು ಎಂದಿದ್ದಾರೆ ಸನಾತನಿ ರಕ್ಷಕ್ ಸೇನದ ಯುವ ಘಟಕದ ಅಧ್ಯಕ್ಷ ಚಂದ್ರ ಪ್ರಕಾಶ್ ಸಿಂಗ್.
''ನಾವು ಸನಾತನಿಗಳು, ನಮ್ಮ ಧರ್ಮದ ಅವಹೇಳನವನ್ನು ನಾವು ಸಹಿಸುವುದಿಲ್ಲ. ಅವಹೇಳನ ಮಾಡಿದವರಿಗೆ ತಕ್ಕ ಶಾಸ್ತಿ ಮಾಡುತ್ತೇವೆ ಎಂದಿರುವ ಅವರು, ''ಬಾಲಿವುಡ್ನ ಖಾನ್ಗಳೆಲ್ಲರೂ ಸನಾತನ ಧರ್ಮದ ವಿರೋಧಿಗಳಾಗಿದ್ದಾರೆ'' ಎಂದಿದ್ದಾರೆ.
''ನಾವು ಮನೆ ಮನೆಗೆ ಹೋಗಿ ಆಮಿರ್ ಖಾನ್ ಸಿನಿಮಾ ವಿರುದ್ಧ ಪ್ರಚಾರ ಮಾಡುತ್ತೇವೆ. 'ಲಾಲ್ ಸಿಂಗ್ ಚಡ್ಡ' ಸಿನಿಮಾ ನೋಡದಂತೆ ಮನವಿ ಮಾಡುತ್ತೇವೆ. ಆಮಿರ್ ಖಾನ್, ನಮ್ಮ ಹಿಂದು ಧರ್ಮಕ್ಕೆ ಮಾಡಿರುವ ಅಪಮಾನದ ಬಗ್ಗೆ ತಿಳಿಸಿಕೊಡುತ್ತೇವೆ'' ಎಂದಿದ್ದಾರೆ.
ಆಮಿರ್ ಖಾನ್ ಹಿಂದೊಮ್ಮೆ ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ನನ್ನ ಪತ್ನಿ ದೇಶ ಬಿಟ್ಟು ಹೋಗುವ ಬಗ್ಗೆ ಕೇಳಿದ್ದರು ಆದರೆ ಆಗ ನಾನೇ ಆಕೆಯನ್ನು ತಡೆದಿದ್ದೆ ಎಂದಿದ್ದರು. ಮತ್ತೊಂದು ಕಾರ್ಯಕ್ರಮದಲ್ಲಿ ದೇವರಿಗೆ ಹಾಲು, ಮೊಸರು, ತುಪ್ಪಗಳನ್ನು ಅಭಿಷೇಕ ಮಾಡುವುದು ವ್ಯರ್ಥ ಅದರ ಬದಲಿಗೆ ಅದನ್ನು ಬೇರಯವರಿಗೆ ದಾನ ಮಾಡಿ ಎಂದಿದ್ದರು. ಆಮಿರ್ ಖಾನ್ ನಟಿಸಿದ್ದ ಪಿಕೆ ಸಿನಿಮಾದ ವಿರುದ್ಧವೂ ಹಿಂದು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.


Click it and Unblock the Notifications










