'ಸರ್ಸೆ ಸರ್ಸೆ' ಹಾಡಿನ ವಿವಾದಕ್ಕೆ ಕ್ಷಮೆ ಕೇಳಿದ ಸಂಜಯ್ ದತ್; 50 ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ನೆರವು
'ಕೆಡಿ' ಚಿತ್ರದ 'ಸರ್ಸೆ ಸರ್ಸೆ' ಹಾಡಿನ ವಿವಾದ ಇನ್ನು ತಣ್ಣಗಾಗಿಲ್ಲ. ಸಿನಿಮಾ ಬಿಡುಗಡೆಗೆ ಇನ್ನೆರಡು ದಿನ ಬಾಕಿಯಿದೆ. ತಿಂಗಳ ಹಿಂದೆ ಬಿಡುಗಡೆ ಆಗಿದ್ದ ಚಿತ್ರದ ಸ್ಪೆಷಲ್ ಸಾಂಗ್ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಹಾಡಿನ ಸಾಹಿತ್ಯದ ಬಗ್ಗೆ ಆಕ್ರೋಶ ವ್ಯಕ್ತವಾಗಿ ಮಹಿಳಾ ಆಯೋಗಕ್ಕೆ ದೂರು ದಾಖಲಾಗಿತ್ತು. ಈ ಹಾಡಿನಲ್ಲಿ ಹೆಜ್ಜೆ ಹಾಕಿದ ತಪ್ಪಿಗೆ ನಟ ಸಂಜಯ್ ದತ್ ಕ್ಷಮೆ ಕೇಳುವಂತಾಗಿದೆ.
ಪ್ರೇಮ್ ನಿರ್ದೇಶನದ 'ಕೆಡಿ' ಚಿತ್ರದ ಧ್ರುವ ಸರ್ಜಾ ಹೀರೊ ಆಗಿ ನಟಿಸಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ಸಂಜುಬಾಬ ಅಬ್ಬರಿಸಿದ್ದಾರೆ. ಸ್ಪೆಷಲ್ ಸಾಂಗ್ನಲ್ಲಿ ನೋರಾ ಫತೇಹಿ ಕುಣಿದಿದ್ದಾರೆ. ಪ್ರೇಮ್ ಸಾಹಿತ್ಯ ಬರೆದಿದ್ದ 'ಸರ್ಸೆ ಸರ್ಸೆ' ಹಾಡು ಚರ್ಚೆ ಹುಟ್ಟಾಕ್ಕಿತ್ತು. ಕನ್ನಡ ಸೇರಿ 5 ಭಾಷೆಗಳಲ್ಲಿ ಹಾಡು ಬಿಡುಗಡೆ ಆಗಿತ್ತು. ಕನ್ನಡದ ಸಾಹಿತ್ಯಕ್ಕೆ ತಕ್ಕಂತೆ ಆಯಾ ಭಾಷೆಯಲ್ಲಿ ಹಾಡಿಗೆ ಸಾಹಿತ್ಯ ಹೆಣೆಯಲಾಗಿತ್ತು. ಆದರೆ ಹಿಂದಿಯಲ್ಲಿ 'ಸರ್ಕೆ ಚುನರ್ ತೇರಿ ಸರ್ಕೆ' ಎಂದು ಶುರುವಾಗುವ ಹಾಡಿನ ಸಾಹಿತ್ಯದ ಕೆಲ ಸಾಲುಗಳು ವಿವಾದಕ್ಕೆ ನಾಂದಿ ಹಾಡಿತ್ತು.

ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆ ಯೂಟ್ಯೂಬ್ನಿಂದ ಸಾಂಗ್ ವೀಡಿಯೋ ಡಿಲೀಟ್ ಮಾಡಲಾಗಿತ್ತು. ಆದರೂ ಚಿತ್ರತಂಡದ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ(ಏಪ್ರಿಲ್ 27) ಸಂಜಯ್ ದರ್ ರಾಷ್ಟ್ರೀಯ ಮಹಿಳಾ ಆಯೋಗದ (ಎನ್ಸಿಡಬ್ಲ್ಯೂ) ಮುಂದೆ ಹಾಜರಾಗಿದ್ದರು. ಈ ವೇಳೆ ಅವರು ಕ್ಷಮೆ ಯಾಚಿಸಿದ್ದು ಹಾಡಿನ ಸಾಹಿತ್ಯ ಅಥವಾ ಸೃಜನಶೀಲ ವಿಚಾರದಲ್ಲಿ ನನ್ನ ಪಾತ್ರ ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ತಮ್ಮ ಕಾನೂನು ತಂಡದೊಂದಿಗೆ ಸಂಜಯ್ ದತ್ ಮಹಿಳಾ ಆಯೋಗದ ಮುಂದೆ ಹಾಜರಾಗಿ ಮಹಿಳೆಯರ ಘನತೆ ಮತ್ತು ಸಾಮಾಜಿಕ ಮೌಲ್ಯಗಳ ಬಗ್ಗೆ ತಮಗೆ ಅಪಾರವಾದ ಗೌರವ ಇದೆ ಎಂದಿದ್ದಾರೆ. ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಬುಡಕಟ್ಟು ಸಮುದಾಯಗಳ 50 ವಿದ್ಯಾರ್ಥಿನಿಯರ ವಿದ್ಯಾಭ್ಯಾಸದ ಜವಾಬ್ದಾರಿ ವಹಿಸಿಕೊಳ್ಳುವುದಾಗಿ ಅವರು ಹೇಳಿದ್ದಾರೆ.

ವಿಚಾರಣೆ ಬಳಿಕ ಮಾಧ್ಯಮಗಳ ಜೊತೆ ನಟ ಸಂಜಯ್ ದತ್ ಪದ ವಕೀಲ ಹೇಮಂತ್ ಶಾ ಮಾತನಾಡಿದ್ದಾರೆ. "ಸಂಜಯ್ ದತ್ ಇಂದು ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಹಾಜರಾದರು. ಹಾಡಿನ ಸಾಹಿತ್ಯದ ಬಗ್ಗೆ ನನಗೆ ಗೊತ್ತಿಲ್ಲ. ಆದರೂ ಪೂರ್ವಾಗ್ರಹವಿಲ್ಲದೆ, ಅವರು ಕ್ಷಮೆಯಾಚಿಸಿದ್ದಾರೆ. ಬುಡಕಟ್ಟು ಸಮುದಾಯದ 50 ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ವಹಿಸಿಕೊಳ್ಳಲು ಅವರು ಸ್ವಯಂಪ್ರೇರಣೆಯಿಂದ ಮುಂದಾಗಿದ್ದಾರೆ" ಎಂದು ತಿಳಿಸಿದ್ದಾರೆ. ಇನ್ನು ಪ್ರಕರಣದಲ್ಲಿ ನಟಿ ನೋರಾ ಫತೇಹಿ ಅವರಿಗೂ ಸಮನ್ಸ್ ಜಾರಿಯಾಗಿದೆ. ಸದ್ಯ ಆಕೆ ಬೇರೆ ದೇಶದಲ್ಲಿ ಇರುವುದರಿಂದ ವಿಚಾರಣೆಗೆ ಹಾಜರಾಗಿಲ್ಲ. ವಿಚಾರಣೆಗೆ ಬೇರೆ ದಿನಾಂಕವನ್ನು ಕೋರಿದ್ದಾರೆ ಎಂದು ವರದಿಯಾಗಿದೆ.
ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದ 'ಕೆಡಿ' ಚಿತ್ರ 5 ಭಾಷೆಗಳಲ್ಲಿ ಈ ವಾರ ಬಿಡುಗಡೆ ಆಗ್ತಿದೆ. ಚಿತ್ರದ ಹೊಸ ವಿಡಿಯೋ ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಚಿತ್ರದಲ್ಲಿ 70ರ ದಶಕದ ಬೆಂಗಳೂರು ಭೂಗತ ಲೋಕದ ಕಥೆಯನ್ನು ಪ್ರೇಮ್ ಹೇಳುತ್ತಿದ್ದಾರೆ. ಕಾಳಿದಾಸ ಎಂಬ ರಗಡ್ ಪಾತ್ರದಲ್ಲಿ ಧ್ರುವ ಸರ್ಜಾ ಅಬ್ಬರಿಸಿದ್ದಾರೆ. ಧಕ್ ದೇವ ಆಗಿ ಸಂಜಯ್ ದತ್ ಕಾಣಿಸಿಕೊಂಡಿದ್ದಾರೆ.
ರವಿಚಂದ್ರನ್, ಶಿಲ್ಪಾ ಶೆಟ್ಟಿ, ರಮೇಶ್ ಅರವಿಂದ್ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ಅಂದಾಜು 100 ಕೋಟಿ ರೂ. ಬಜೆಟ್ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಕೆವಿಎನ್ ಸಂಸ್ಥೆಯ ಸಿನಿಮಾಗಳೆಲ್ಲಾ ಒಂದಿಲ್ಲೊಂದು ಸಮಸ್ಯೆಯಿಂದ ಸಂಕಷ್ಟ ಎದುರಿಸುವಂತಾಗಿದೆ. 'ಕೆಡಿ' ಸಿನಿಮಾ ತೆರೆಗೆ ಬಂದು ಚಿತ್ರತಂಡಕ್ಕೆ ಸಂತಸ ತಂದುಕೊಡಬೇಕಿದೆ.


Click it and Unblock the Notifications