'ಗ್ರೀನ್ ಇಂಡಿಯಾ ಚಾಲೆಂಜ್' ಸ್ವೀಕರಿಸಿದ ಕೆಜಿಎಫ್ ಅಧೀರ ಸಂಜಯ್ ದತ್
ಬಾಲಿವುಡ್ ನಟ ಸಂಜಯ್ ದತ್ ಸದ್ಯ ಹೈದರಾಬಾದ್ನಲ್ಲಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಗಮನ ಸೆಳೆದಿದ್ದ ಗ್ರೀನ್ ಇಂಡಿಯಾ ಚಾಲೆಂಜ್ನಲ್ಲಿ ಭಾಗವಹಿಸಿದ್ದಾರೆ.
ಬಹುನಿರೀಕ್ಷೆಯ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಮಾಡ್ತಿರುವ ಸಂಜಯ್ ದತ್, ಚಿತ್ರದ ಸೆಟ್ನಲ್ಲಿ ಗಿಡಗಳನ್ನು ನೆಡುವ ಮೂಲಕ ಗ್ರೀನ್ ಇಂಡಿಯಾ ಚಾಲೆಂಜ್ ಪೂರ್ಣಗೊಳಿಸಿದ್ದಾರೆ. ಸಂಜಯ್ ದತ್ ಗಿಡಗಳನ್ನು ನೆಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಿಳಿ ಬಣ್ಣದ ಖುರ್ತಾ ಮತ್ತು ಪೈಜಾಮ ತೊಟ್ಟಿದ್ದ ಸಂಜಯ್ ದತ್ ಗ್ರೀನ್ ಇಂಡಿಯಾ ಚಾಲೆಂಜ್ ಪೂರ್ಣಗೊಳಿಸಿದ ನಂತರ ಅದನ್ನು ತಮ್ಮ ಅಭಿಮಾನಿಗಳಿಗೆ ಮುಂದುವರಿಸಲು ವಿನಂತಿಸಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಪ್ರಸ್ತುತ ರಾಕಿ ಭಾಯ್ ಯಶ್ ಮತ್ತು ಅಧೀರ ಸಂಜಯ್ ದತ್ ನಡುವಿನ ಫೈಟ್ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿದೆ.
ಕೆಜಿಎಫ್ ಚಾಪ್ಟರ್ 2 ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದ್ದು, ಸಂಜಯ್ ದತ್ ಭಾಗ ಮಾತ್ರ ಬಾಕಿ ಉಳಿದುಕೊಂಡಿತ್ತು. ಡಿಸೆಂಬರ್ ತಿಂಗಳಲ್ಲಿ ಕೆಜಿಎಫ್ ಪೂರ್ತಿ ಚಿತ್ರೀಕರಣ ಮುಗಿಯಲಿದ್ದು, 2021ರ ಮೊದಲಾರ್ಧದಲ್ಲಿ ತೆರೆಗೆ ಬರಬಹುದು.
ಅಂದ್ಹಾಗೆ, ಸಂಜಯ್ ದತ್ ಅವರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರು. ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುವ ಸಲುವಾಗಿ ಶೂಟಿಂಗ್ಗೆ ಬ್ರೇಕ್ ಹಾಕಿದ್ದರು. ದತ್ ಅವರ ಚೇತರಿಕೆಯ ನಂತರ ಶೂಟಿಂಗ್ ಮಾಡಲು ಕೆಜಿಎಫ್ ಚಿತ್ರತಂಡ ಸಹ ನಿರ್ಧರಿಸಿತ್ತು. ನಿರೀಕ್ಷೆಯಂತೆ ಸಂಜಯ್ ದತ್ ಪೂರ್ಣವಾಗಿ ಗುಣಮುಖರಾದ ಮೇಲೆ ಶೂಟಿಂಗ್ ಮಾಡುತ್ತಿದೆ.
ಇನ್ನುಳಿದಂತೆ ಯಶ್ ನಾಯಕರಾಗಿರುವ ಈ ಸಿನಿಮಾವನ್ನು ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರ್ ನಿರ್ಮಾಣ ಮಾಡುತ್ತಿದ್ದಾರೆ. ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್ ಭಾಗ ಎರಡರಲ್ಲಿ ಸೇರ್ಪಡೆಯಾಗಿದ್ದು, ಮೊದಲ ಭಾಗದಲ್ಲಿದ್ದ ಶ್ರೀನಿಧಿ ಶೆಟ್ಟಿ, ಮಾಳವಿಕಾ ಅವಿನಾಶ್, ಅಚ್ಯುತ್ ಕುಮಾರ್ ಮುಂದುವರಿದಿದ್ದಾರೆ.


Click it and Unblock the Notifications











