'ಹಮ್ಜಾ ಅಲಿ' ಪ್ರಾಣಕ್ಕೆ 'ಯಲೀನಾ'ಯಿಂದಲೇ ಸಂಚಕಾರ ; ಧುರಂಧರ್ 2 ಟ್ರೇಲರ್- ಒಬ್ಬೊಬ್ಬರದ್ದು ಒಂದೊಂದು ಲೆಕ್ಕಾಚಾರ
ಸಿನಿಮಾ ಕಲ್ಪನೆಯ ಸಾಗರ. ಆದರೂ ಕೂಡ ಹಲವು ಪ್ರೇಕ್ಷಕರು ಈ ಕಾಲ್ಪನಿಕ ಪ್ರಪಂಚದಲ್ಲಿ ಕಳೆದು ಹೋಗುತ್ತಾರೆ.ತಮ್ಮನ್ನು ತಾವು ಮರೆತು ಚಿತ್ರ ನೋಡುತ್ತಾ ಚಿತ್ರದಲ್ಲಿನ ಪಾತ್ರವೇ ತಾವಾಗುತ್ತಾರೆ. ತಮ್ಮ ಇಷ್ಟದ ಪಾತ್ರದ ಎರಡು, ಎರಡೂವರೆ ಅಥವಾ ಮೂರು ಗಂಟೆ ಪ್ರಯಾಣ ಮಾಡುತ್ತಾರೆ. ಆ ಪಾತ್ರಧಾರಿಗಳ ನೋವು, ನಗು, ದ್ವೇಷ, ಪ್ರೀತಿ ಎಲ್ಲವೂ ಪ್ರೇಕ್ಷಕರ ಮನ ಗೆದ್ದಿರುತ್ತೆ. ಹೀಗಾಗಿ ಚಿತ್ರದಲ್ಲಿ ಪಾತ್ರಕ್ಕೇನಾದರೂ ಆದರೆ ಹಲವರು ತಮಗೆ ನೋವಾದಂತೆ ಚಡಪಡಿಸುತ್ತಾರೆ.
ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಈಗ ಭಾಗ 1, ಭಾಗ 2, ಭಾಗ 3ರ ಕಾಲ. ಈ ಕಾಲದಲ್ಲಿ ಚಿತ್ರದಲ್ಲಿನ ಪಾತ್ರಗಳು ಹೃದಯಕ್ಕೆ ಇನ್ನೂ ಹತ್ತಿರವಾಗಿರುತ್ತಾವೆ. ಇದಕ್ಕೆ ಪುರಾವೆ ಎನ್ನುವಂತೆ ಪ್ರತಿಯೊಂದು ಭಾಗ ಬರುವ ಮುನ್ನ ಪ್ರೇಕ್ಷಕರು ತಮ್ಮದೇ ಆದ ಕಥೆ ಹೆಣೆಯಲು ಶುರು ಮಾಡುತ್ತಾರೆ. ಟ್ರೇಲರ್ ಬಿಡುಗಡೆಯಾದಾಗ ಅಲ್ಲಿನ ದೃಶ್ಯಗಳನ್ನು ಕಂಡು ಹೀಗಾಗಬಹುದು.. ಹಾಗಾಗಬಹುದು..ಎಂದು ಲೆಕ್ಕಾಚಾರ ಹಾಕುತ್ತಾರೆ. ಉದಾಹರಣೆಗೆ ''ಧುರಂಧರ್ 2'' ಚಿತ್ರವನ್ನೇ ತೆಗೆದುಕೊಳ್ಳಿ.

ಹೌದು, ಎಲ್ಲರಿಗೆ ಗೊತ್ತಿರುವಂತೆ ಇಂದು (ಮಾರ್ಚ್ 7 ) ''ಧುರಂಧರ್ 2'' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಯೂಟ್ಯೂಬ್ನಲ್ಲಿ ದಾಖಲೆಯ ಮೇಲೆ ದಾಖಲೆ ಬರೆಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ನಲ್ಲಿದೆ. ಆದರೆ, ಇದೇ ಸಮಯದಲ್ಲಿ ಪ್ರೇಕ್ಷಕರ ವಲಯದಲ್ಲಿ ಈ ಟ್ರೇಲರ್ ಕೆಲ ಪ್ರಶ್ನೆಗಳನ್ನು ಮೂಡಿಸಿದೆ. ಆ ಪೈಕಿ ಯಲೀನಾ ಮತ್ತು ಹಮ್ಜಾನ ಪ್ರೇಮ ಕಥೆ ಮತ್ತು ವ್ಯಥೆ ದುರಂತ ಅಂತ್ಯ ಕಾಣುತ್ತಾ ಅನ್ನುವುದು ಕೂಡ ಒಂದು.
ಯಾಕೆಂದರೆ.. ಪಾಕಿಸ್ತಾನದಲ್ಲಿ ಬಿಡಾರ ಹೂಡಿರುವ ಹಮ್ಜಾ ಅಲಿ ಮಜಾರಿಯನ್ನು ಯಲೀನಾ ಲೋಕಲ್ ಗ್ಯಾಂಗ್ಸ್ಟರ್ ಎಂದುಕೊಂಡಿದ್ದಾಳೆ. ಆದರೆ, ವಾಸ್ತವದಲ್ಲಿ ಹಮ್ಜಾ ಅಲಿ ಮಜಾರಿ ಗ್ಯಾಂಗ್ಸ್ಟರ್ ಅಲ್ಲ ಬದಲಿಗೆ ಭಾರತದ ಹೆಮ್ಮೆಯ ಕುವರ. ಜಸ್ಕಿರತ್ ಸಿಂಗ್ ರಂಗಿ. ಈ ಸತ್ಯ ಯಲೀನಾಗೆ ಈಗ ಗೊತ್ತಾಗುವ ಕಾಲ ಬಂದಂತಿದೆ. ಎರಡನೇ ಭಾಗದಲ್ಲಿ ಗೊತ್ತಾದಂತೆ ಇದೆ. ಹೀಗಾಗಿಯೇ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲಿಯೇ ತಮ್ಮದೇ ಆದ ಥಿಯರಿಗಳನ್ನು ಹಲವು ಪ್ರೇಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಮಂಡಿಸುತ್ತಿದ್ದಾರೆ.
ಯಲೀನಾ ಕೈಯಲ್ಲಿ ಗನ್ ಹಿಡಿದ ದೃಶ್ಯ ಮತ್ತು ಹಮ್ಜಾ ಕಣ್ಣೀರು ಹಾಕುತ್ತಿರುವ ದೃಶ್ಯವನ್ನು ಒಂದಕ್ಕೊಂದು ತಾಳೆ ಹಾಕಿ ನೋಡುತ್ತಿರುವ ಪ್ರೇಕ್ಷಕರು, ತನ್ನದೇ ದೇಶಕ್ಕೆ ತನ್ನ ಪ್ರಿಯಕರ ಹಮ್ಜಾದಿಂದ ಅಪಾಯ ಇದೆ ಎನ್ನುವ ವಿಚಾರ ಯಲೀನಾಗೆ ಗೊತ್ತಾಗಿ ಹಮ್ಜಾನ ಕೊಲ್ಲಲು ಮುಂದಾಗಿದ್ದಾಳೆ ಎಂದು ಹಲವರು ಸದ್ಯ ವಾದ ಮಾಡುತ್ತಿದ್ದಾರೆ.
ಇನ್ನು ಮೊದಲ ಭಾಗದಲ್ಲಿ ಇಬ್ಬರ ಪ್ರೇಮಕಥೆ ಕೂಡ ಚಿತ್ರದ ಕಳೆ ಹೆಚ್ಚಿಸಿತ್ತು. ಈ ಬಾರಿ ತನ್ನ ಪ್ರೀತಿಗೆ ಯಲೀನಾ ಬೆಲೆ ತೆರಬೇಕಾಗುತ್ತೆ ಎಂದು ಊಹಿಸುತ್ತಿರುವ ಹಲವರು ಸಾರಾ ಅರ್ಜುನ್ ಅವರ ಕಣ್ಣುಗಳಲ್ಲಿ ಮೊದಲಿನ ಪ್ರೀತಿ ಕಾಣುತ್ತಿಲ್ಲ, ಬದಲಾಗಿ ಕ್ರೌರ್ಯ ಮತ್ತು ದ್ವೇಷ ಅವರ ಕಣ್ಣಲ್ಲಿದೆ. ತನ್ನ ದೇಶಕ್ಕೆ ಮತ್ತು ತನ್ನ ಜನರಿಗೆ ದ್ರೋಹ ಬಗೆದವನನ್ನು ಯಲೀನಾ ಸುಮ್ಮನೆ ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ.

ಸದ್ಯ ಧುರಂಧರ್ ಮತ್ತು ಮಹಾದ್ರೋಹ ಎಂಬ ಶೀರ್ಷಿಕೆಯಡಿ ಹಲವರು ತಮ್ಮ ತಮ್ಮ ಕಲ್ಪನೆಗೆ ಅನುಸಾರವಾಗಿ ಕಥೆ ಹೀಗೆ ಇರಬಹುದು ಎಂದು ಊಹಿಸುತ್ತಿದ್ದಾರೆ. ಹಮ್ಜಾ ಅಂತ್ಯ ಬೇರೆ ಯಾರಿಂದಲೂ ಅಲ್ಲ ಬದಲಿಗೆ ಯಲೀನಾ ಕೈಯಿಂದಲೇ ಆಗುತ್ತೆ ಎನ್ನುತ್ತಿದ್ದಾರೆ.
ಇನ್ನೂ ಕೆಲವರು ಯಲೀನಾ ಗನ್ ಹಮ್ಜಾ ಕಡೆಗಿಲ್ಲ, ಬದಲಾಗಿ ಅವನ ಹಿಂದಿರುವ ಶತ್ರುಗಳ ಕಡೆಗಿದೆ ಎಂಬ ವಾದವನ್ನೂ ಕೂಡ ಮಾಡುತ್ತಿದ್ದಾರೆ. ಯಲೀನಾ ತನ್ನ ಪ್ರೀತಿಗಾಗಿ ತನ್ನ ದೇಶ ತನ್ನ ಸಮುದಾಯಕ್ಕೆ ಸೆಡ್ಡು ಹೊಡೆದು ಹಮ್ಜಾನನ್ನು ರಕ್ಷಿಸುತ್ತಾಳೆ ಎಂದು ಕೂಡ ಚರ್ಚೆ ಮಾಡುತ್ತಿದ್ದಾರೆ. ಹಮ್ಜಾ ನಿಜಕ್ಕೂ ಯಲೀನಾ ಕೈಯಿಂದ ಕೊಲೆಯಾಗ್ತಾನಾ..? ಅಥವಾ ಯಲೀನಾ ಕಥೆಯನ್ನು ಹಮ್ಜಾನೇ ಮುಗಿಸುತ್ತಾನಾ..? ಎನ್ನುವುದನ್ನು ಕಾದು ನೋಡಬೇಕಿದೆ. ನಿಮ್ಮ ಪ್ರಕಾರ ಏನಾಗುತ್ತೆ..? ಯಲೀನಾ ಹಮ್ಜಾನನ್ನು ರಕ್ಷಿಸುತ್ತಾಳಾ ಅಥವಾ ಕೊಲ್ಲುತ್ತಾಳಾ? ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ.


Click it and Unblock the Notifications











